ಯಾರು ಈ ದೇಶವನ್ನು ಕಟ್ಟುತ್ತಾರೋ, ಒಗ್ಗೂಡಿಸುತ್ತಾರೊ ಅವರು ದೇಶಪ್ರೇಮಿಗಳು. ಹಿಂದೂ – ಮುಸ್ಲಿಂ, ಹಿಂದೂ – ಸಿಖ್ಖರ ನಡುವೆ ಜಗಳ ತರುವವರು ದೇಶದ್ರೋಹಿಗಳು ಎಂದು ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಮಾತನಾಡಿದ ಅವರು, “ಕೆಲವರು ಇಲ್ಲಿಯೇ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ನಾವು ಇಲ್ಲಿಯೇ ಸಾಮರಸ್ಯ ಮೂಡಿಸುತ್ತೇವೆ, ಸ್ನೇಹ ಬೆಳೆಸುತ್ತೇವೆ ಎನ್ನುತ್ತೇವೆ. ಅವರು ಒಡೆಯುತ್ತಾರೆ, ನಾವು ಕೂಡಿಸುತ್ತೇವೆ. ಅದು ದೆಹಲಿ ತನಕ ಕೇಳಿಸಲಿ. ಇದು ನನ್ನೊಬ್ಬನ ಹೃದಯದ ಮಾತಲ್ಲ, ನಿಮ್ಮೆಲ್ಲರ ಹೃದಯದ ಮಾತಾಗಿದೆ” ಎಂದರು.
ಈ ಸಮಾವೇಶಕ್ಕೆ ಉಡುಪಿಯನ್ನು ಆಯ್ದುಕೊಂಡಿದ್ದಕ್ಕೆ ಧನ್ಯವಾದಗಳು. ಏಕೆಂದರೆ ಇತ್ತೀಚಿನ ದ್ವೇಷದ ಅಲೆಗೆ ಉಡುಪಿಯನ್ನು ಆಯ್ದುಕೊಳ್ಳಲಾಗಿತ್ತು. ಉಡುಪಿಯ ಹೆಸರು ದೇಶದ ಎಲ್ಲಾ ಟಿವಿ ಚಾನೆಲ್ಗಳಲ್ಲಿ ಹರಡಿತು. ಕರಾವಳಿ ಕರ್ನಾಟಕ ಒಂದು ಸುಂದರ ತಾಣ. ಇಲ್ಲಿ ಎಲ್ಲವೂ ಬೆಳೆಯುತ್ತದೆ, ಇದು ಫಲವತ್ತಾದ ಸ್ಥಳವಾಗಿದೆ. ಹೀಗಾಗಿ ಇಲ್ಲೂ ಒಂದಿಷ್ಟು ದ್ವೇಷ ಬಿತ್ತೋಣ ಎಂದುಕೊಂಡಿದ್ದಾರೆ. ಆದರೆ ಅದರ ಫಸಲು ಬೆಳೆಯಲು ನಾವು ಬಿಡುವುದಿಲ್ಲ ಎಂದರು.
ಅವರು ಎರಡು ದರ್ಜೆಯ ಜನರನ್ನಾಗಿ ವಿಂಗಡಿಸಲು ಯತ್ನಿಸುತ್ತಾರೆ. ಪ್ರಥಮೆ, ಎರಡನೇ ದರ್ಜೆಯ ನಾಗರಿಕರನ್ನಾಗಿ ವಿಭಜಿಸಲು ಅವರು ಯತ್ನಿಸುತ್ತಾರೆ. ಮನೆಯ ಮಾಲಿಕ ಮತ್ತು ಮನೆಯ ಬಾಡಿಗೆದಾರ ಎಂಬ ವರ್ಗಗಳನ್ನು ಸೃಷ್ಟಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಕೆಲವರು ಹೇಳುತ್ತಾರೆ. ಹಿಂದಿ ಇನ್ನೂರು ವರ್ಷ ಹಳೆಯದು. ಆದರೆ ಕನ್ನಡ ಎರಡೂವರೆ ಸಾವಿರ ವರ್ಷ ಹಳೆಯದು. ಹೀಗಿರುವಾಗ ಹಿಂದಿ ಮಾತನಾಡುವ ಜನರು ಮನೆಯ ಮಾಲೀಕರು ಮತ್ತು ಕನ್ನಡ ಮಾತನಾಡುವ ಜನರು ಹೇಗೆ ಬಾಡಿಗೆದಾರರಾಗಲು ಸಾಧ್ಯ? ಅವರು ಒಂದು ಧರ್ಮದ ಜನರು ಮಾಲೀಕರಾಗಲು ಮತ್ತು ಉಳಿದ ಧರ್ಮದ ಜನರು ಬಾಡಿಗೆದಾರರಾಗುವಂತೆ ಮಾಡುತ್ತಿದ್ದಾರೆ. ನಾವು ಉಡುಪಿಯಲ್ಲಿ ಘೋಷಿಸುತ್ತೇವೆ. ಯಾರ್ಯಾರ ಪೂರ್ವಿಕರ ರಕ್ತ ಇಲ್ಲಿದೆಯೋ ಅವರೆಲ್ಲರೂ ಈ ದೇಶದ ಮಾಲೀಕರು. ನಾವು ಯಾರ ಗುಲಾಮರಲ್ಲ ಎಂದು ಯಾದವ್ ತಿಳಿಸಿದರು.
ಸೆಕ್ಯುಲರಿಸಂ ಎಂಬ ಪದ ಇಂದಿರಾಗಾಂಧಿ ಸಂವಿಧಾನದಲ್ಲಿ ಸೇರಿಸುವ ಮೊದಲು ಇರಲಿಲ್ಲ ಎಂದು ಅವರು ಹೇಳುತ್ತಾರೆ. ಸಮಾನತೆಯ ಹಕ್ಕು, ಸಾಂಸ್ಕೃತಿಕ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು 1950 ರ ಸಂವಿಧಾನದಲ್ಲಿಯೇ ಇತ್ತು. ಅದೇ ಸೆಕ್ಯುಲರಿಸಂ. ಸಂವಿಧಾನದ ಕರಡು ರಚನೆ ಸಂದರ್ಭದಲ್ಲಿಯೇ ಈ ಆಶಯಗಳನ್ನು ಸೇರಿಸಲಾಗಿತ್ತು, ಅವು ಸ್ವಾತಂತ್ರ್ಯ ಹೋರಾಟದ ಫಲಗಳು ಎಂದು ಯಾದವ್ ಹೇಳಿದರು.
ಗೌತಮ ಬುದ್ಧ ಮೈತ್ರಿ ಬಗ್ಗೆ ಹೇಳುತ್ತಾರೆ. ಅಶೋಕ ಮತ್ತು ಅಕ್ಬರ್ ಕೂಡ ಮೈತ್ರಿ ಬಗ್ಗೆ ಮಾತನಾಡುತ್ತಾರೆ. ಇದು ಭಾರತದ ಪರಂಪರೆ. ಸೆಕ್ಯುಲರಿಸಂ ಬ್ರಿಟಿಷರ ಕೊಡುಗೆ ಅಲ್ಲ. ಐದು ಸಾವಿರ ವರ್ಷಗಳಿಂದ ಈ ದೇಶ ಹೀಗೆಯೇ ನಡೆಯುತ್ತಿದೆ. ಸಿಂಹಾಸನದ ಮೇಲೆ ಕುಳಿತಿರುವವರು ತಾವೇ ದೇವರು ಎಂದು ನಂಬಿದ್ದಾರೆ. ಅವರ ಮುಂಚೆಯೂ ಈ ದೇಶ ಇತ್ತು, ಅವರ ನಂತರವೂ ಈ ದೇಶ ಇರುತ್ತದೆ. ಎಲ್ಲರನ್ನೂ ಗೌರವಿಸುವ, ಒಟ್ಟಿಗೆ ಕರೆದೊಯ್ಯುವುದು ಈ ದೇಶದ ಧರ್ಮ ಎಂಬುದನ್ನು ಅವರು ಮರೆಯಬಾರದು ಎಂದರು.
ಇಂದು ದೇಶದಲ್ಲಿ ಬುಲ್ಡೋಜರ್ ಚಲಾಯಿಸಲಾಗುತ್ತಿದೆ. ಕೇವಲ ಕಟ್ಟಡಗಳ ಮೇಲೆ ಅಲ್ಲ ಹಿಂದೂಸ್ಥಾನದ ಮೇಲೆ, ಸಂವಿಧಾನದ ಮೇಲೆ ಬುಲ್ಡೋಜರ್ ಚಲಾಯಿಸಲಾಗುತ್ತಿದೆ. ಮೀಡಿಯಾ ಪ್ರಾಮಾಣಿಕವಾಗಿದ್ದರೆ ಈ ಉಡುಪಿ ಸಮಾವೇಶ ನಾಳೆ ಮುಖಪುಟದ ಹೆಡ್ಲೈನ್ ಆಗುತ್ತದೆ. ನಾನು ಪತ್ರಕರ್ತರನ್ನು ದೂರುವುದಿಲ್ಲ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರ ಬಳಿ ಹಣ ಮತ್ತು ಅಧಿಕಾರವಿದೆಯೇ ಅವರು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದರು.
ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್ರವರ ಸಂವಿಧಾನವಿದೆ. ಪ್ರಶ್ನೆ ಇರುವುದು ನಾವು ಗೆದಿಲ್ಲ ಎನ್ನುವುದಲ್ಲ, ಹೇಗೆ ಮತ್ತು ಯಾವಾಗ ಗೆಲ್ಲುತ್ತೇವೆ ಎನ್ನುವುದಾಗಿದೆ. ದೊಡ್ಡ ಪರಂಪರೆ ನಮಗಿರುವುದರಿಂದ ಹೋರಾಡುತ್ತೇವೆ ಮತ್ತು ನಾವು ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ; ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ
ಕಮ್ಯೂನಿಸ್ಟ್ ಉಗ್ರರು ಯಾವಾಗಲೂ ಮಾಡಿರುವ ದಾಖಲೆ ದೇಶ ಒಡೆಯುವ ಕೆಲಸವೇ ಅಲ್ಲವೇ ಪ್ರಪಂಚದ ಇತಿಹಾಸದಲ್ಲಿ
ದ್ವೇಷದ ಹೋರಾಟ ಹೇಗೆ ಇಡೀ ಪ್ರಪಂಚಕ್ಕೆ ಸುದ್ದಿ ಮಾದ್ಯಮಗಳಲ್ಲಿ ಬಿತ್ತರವಾಯಿತೋ ಹಾಗೆಯೆ ಸಾಮರಸ್ಯದ ಹೋರಾಟವೂ ಪ್ರಪಂಚದೆಲ್ಲೆಡೆ ಪ್ರಸಾರವಾಗಲಿ ಎಂದು ಆಶಿಸುತ್ತೇನೆ. ಪ್ರಜಾಪ್ರಭಹತ್ವ=ಜಾತ್ಯಾತೀತತೆ, ಇದಕ್ಕೆ ಮತ್ತೊಂದು ವಿವರಣೆಯ ಅವಶ್ಯಕತೆ ಇಲ್ಲ. ಪ್ರಜೆ ಎಂದರೆ ಜಾತಿ, ಧರ್ಮ, ಭಾಷೆ, ಪ್ರದೇಶ, ಇತರೆ ಎಲ್ಲವನ್ನೂ ಮೀರಿದ ಭಾರತೀಯ. ಆನಂತರ ಅವೆಲ್ಲವನ್ನೂ ಪರಿಗಣಿಸ ಬಹುದು. ಈ ವಿಚಾರದಲ್ಲಿ ವಿದ್ಯಾವಂತರನ್ನೂ ತಪ್ಪು ದಾರಿಗೆಳೆಯಲಾಗುತ್ತಿದೆ. ಇದರಿಂದ ದೇಶ ಸರ್ವನಾಶದ ಕಡೆಗೆ ಹೆಜ್ಜೆ ಇಡುತ್ತಿದೆ. ಈ ಸಾಮರಸ್ಯದ ಸಮಾವೇಷ ಸಹಬಾಳ್ವಗೆ ಮತ್ತು ದೇಶದ ಏಳಿಗೆಯ ಆರಂಬ. ಇದನ್ನು ಆಯೋಜಿಸಿದವರೆಲ್ಲರಿಗೂ ವಂದನೆಗಳು.