Homeಕರ್ನಾಟಕವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

- Advertisement -
- Advertisement -

ಹಣ್ಣೆಲೆ ಉದುರುವುದು, ಹೊಸ ಚಿಗುರು ಮೂಡುವುದು ಜೀವಂತ ಮರದ ಲಕ್ಷಣ. ಅಂತೆಯೇ ಒಂದು ರಾಷ್ಟ್ರದ ಸಂಸ್ಕೃತಿಯೂ ಸಹ. ಕಾಲಕಾಲಕ್ಕೆ ಹಳತು ಉದುರಿ ಹೊಸ ಚಿಗುರು ಹಸುರಾಗಬೇಕು. ಹಳೆಯ ಕೊಳೆಯೆಲ್ಲ ಕೊಚ್ಚಿ ಹೋಗಬೇಕು. ಹೊಸ ನೀರು ಹರಿಯಬೇಕು. ಅದಕ್ಕಾಗಿ ರಾಷ್ಟ್ರಕವಿ ಕುವೆಂಪು ದಶಕಗಳ ಹಿಂದೆಯೇ ತರುಣರಿಗೆ ಕೊಟ್ಟ ಕರೆ:

ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ ಮರು ಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ
ತರುಣರಿರ ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ! -ತರುಣರಿರ ಎದ್ದೇಳಿ

ಇದು ತರುಣರಿಗೆ ಕುವೆಂಪು ನೀಡಿದ ಸ್ವಾತಂತ್ರ್ಯ ದೀಕ್ಷಾಮಂತ್ರ. ವಿಚಾರಶೀಲತೆಗೆ ಅಡ್ಡಗೋಡೆಯಾಗಿರುವ ವೈಜ್ಞಾನಿಕ ಪ್ರಜ್ಞೆಗೆ ಗಂಟಲಗಾಳವಾಗಿರುವ ಉಸಿರುಗಟ್ಟಿಸುವ ಮತ ಮೌಢ್ಯದ ಮುಗ್ಗುಲು ವಾಸನೆ ತುಂಬಿರುವ ಗುಡಿ ಚರ್ಚು ಮಸೀದಿಗಳ ಗರ್ಭ ಗುಡಿಗಳನ್ನು ತೊರೆದು ಬರದಿದ್ದರೆ ನಮ್ಮ ತರುಣರಿಗೆ ಉದ್ಧಾರವಿಲ್ಲ ಎಂಬುದು ಈ ಪ್ರವಾದಿ ಕವಿಯ ಕರೆ. ಮತ ಮೌಢ್ಯಕ್ಕೂ ಬಡತನಕ್ಕೂ ಬಿಡಿಸಲಾರದ ನಂಟು. ಅದರ ನಿವಾರಣೆಗೆ ಮೊದಲು ಮೌಢ್ಯದ ಮಾರಿಯನು ಗೆಲ್ಲಬೇಕು. ಅಲ್ಲಿ ವಿಜ್ಞಾನ ದೀವಿಗೆಯ ಬೆಳಗಬೇಕು ಎಂದು ಒತ್ತಾಯಿಸುತ್ತಾರೆ.

ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ!

ಹಳೆಯ ಮತಗಳನ್ನು ಬಿಟ್ಟು ವಿಜ್ಞಾನವೆಂಬ ಹೊಸಮತಕ್ಕೆ ಸೇರಿದಾಗ ಮಾತ್ರ ವಿಶ್ವಶಾಂತಿ. ನಾಡಿನ ಅಶಾಂತಿಗೆ, ಅನಭಿವೃದ್ಧಿಗೆ, ರಕ್ತಪಾತಕ್ಕೆ ಮುಖ್ಯಕಾರಣ ಮತೀಯ ಗಲಭೆಗಳೇ, ಕೋಮು ಕಲಹಗಳೇ. ಉದಾಹರಣೆಗೆ ಆ ತೊಂಭತ್ತರ ದಶಕದಲ್ಲಿ ಅಯೋಧ್ಯೆಯ ಹಳೆ ಮಸೀದಿಯನ್ನು ಕೋಮುವಾದಿಗಳು ಕೆಡುವುದರೊಂದಿಗೆ ಮುರಿದುಬಿದ್ದ ಹಿಂದೂ-ಮುಸ್ಲಿಂ ಸೌಹಾರ್ದದ ಸೇತುವೆ ಇನ್ನೂ ದುರಸ್ತಿ ಕಾಣದೆ ನೇತಾಡುತ್ತಿದೆ. ಆದ್ದರಿಂದ ಕವಿವಾಣಿ ಎಚ್ಚರಿಸುತ್ತಿದೆ:

ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ, ಬನ್ನಿ ಸೋದರರೆ ವಿಶ್ವಪಥಕೆ!

ಎಂದು ಪ್ರಾರ್ಥಿಸುತ್ತದೆ. ಆದರೀಗ ಆಗುತ್ತಿರುವುದೇನು? ಕೇಂದ್ರ ಸರ್ಕಾರ ಕೊಟ್ಟ, ಕರ್ನಾಟಕ ರಾಜ್ಯ ಜಾರಿಗೆ ತಂದಿರುವ ’ರಾಷ್ಟ್ರೀಯ ಶಿಕ್ಷಣ ನೀತಿ 2020’ರ ಕಾಯಿದೆಯು ಕುವೆಂಪು ಕೊಟ್ಟ ಪ್ರಗತಿ ಕರೆಗೆ ತದ್ವಿರುದ್ಧವಾಗಿ ಬ್ರಾಹ್ಮಣ್ಯದ ಬೇರುಗಳು ಬಸವಯುಗದ ಪೂರ್ವಕ್ಕೂ ಇಳಿಯುವಂತಿದೆ. ಸಂಗ್ರಹವಾಗಿ ಹೇಳುವುದಾದರೆ: ಈ ಕಾಯಿದೆಯು ಸಂಪೂರ್ಣವಾಗಿ ಕಾರ್ಯಗತವಾದರೆ ವರ್ತಮಾನ ಭಾರತವು ’ಅರಿವೆ ಗುರು’ ಎಂದ ಬಸವಣ್ಣನವರ ಪೂರ್ವಯುಗಕ್ಕೆ ಜಾರುವ ಅಪಾಯ ತಪ್ಪಿದ್ದಲ್ಲ. ಸದ್ಯದ ಪಠ್ಯಪುಸ್ತಕ ಪರಿಷ್ಕರಣೆಯು ಅದರ ಪೂರ್ವಭಾವಿ ತಾಲೀಮು ಅಷ್ಟೆ. ಜಾತೀಯತೆ, ಪಿತೃಪ್ರಧಾನತೆ, ಮೂಲಭೂತವಾದವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಸಲಿಕ್ಕೆ ಬಿಜೆಪಿಯು ಹಾಕಿರುವ ಭದ್ರ ಬುನಾದಿ ಇದಾಗಿದೆ. ವರ್ಗ, ವರ್ಣ, ಜಾತಿ, ಲಿಂಗ ತಾರತಮ್ಯಗಳನ್ನು ಕಳೆದು ಇಲ್ಲಿ ಸಮಬಾಳು ಸಮಪಾಲು ಎಂಬ ಸಮಸಮಾಜಕ್ಕೆ ನಾಂದಿ ಹಾಡಿದ್ದು ಶರಣ ಚಳವಳಿ. ಆದರೀಗ ಮೊದಲಿನ ಪಠ್ಯಗಳನ್ನು ಕಮ್ಯೂನಿಸ್ಟ್ ಪ್ರಣಾಳಿಕೆ ಎಂದು ದೂರಿ, ಮನುಧರ್ಮ ಶಾಸ್ತ್ರ ಪ್ರಣೀತ ಸಮಾಜವನ್ನು ಪುನಃ ಸಂಸ್ಥಾಪಿಸಲು ಅಡಿಪಾಯ ಹಾಕುತ್ತಿರುವ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯು ಇತಿಹಾಸವನ್ನು ಸರಿಪಡಿಸುವ ಸೋಗಿನಲ್ಲಿ ರಾಷ್ಟ್ರೀಯತೆ, ಭಾರತೀಯ ಸಂಸ್ಕೃತಿ, ದೇವಭಾಷೆ ಸಂಸ್ಕೃತ ಎಂದು ಸ್ಥಳೀಯ ಆಡು ನುಡಿಗಳನ್ನು ನಿರ್ಲಕ್ಷಿಸಿ, ಹಿಂದಿಗೆ ಮಣೆ ಹಾಕುತ್ತಾ ಬುದ್ಧ, ಬಸವ, ಸೂಫಿ ಸಂತರ, ಪೆರಿಯಾರ್, ನಾರಾಯಣ ಗುರು, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಭಗತ್‌ಸಿಂಗ್, ಗಾಂಧಿ, ಕುವೆಂಪು, ಅಂಬೇಡ್ಕರ್ ಮತ್ತಿತರ ಪ್ರಗತಿಪರರ ಜೀವನಗಾಥೆಗಳ ಪಠ್ಯಗಳನ್ನು ನೇಪಥ್ಯಕ್ಕೆ ಸರಿಸಿ ಸಂಘಪರಿವಾರದ ಅಜೆಂಡಾಕ್ಕನುಗುಣವಾಗಿ ಹೆಡಗೆವಾರ್, ಸಾವರ್ಕರ್ ಮುಂತಾದವರ ಪಠ್ಯಗಳನ್ನು ಮುನ್ನೆಲೆಗೆ ತರುತ್ತಿರುವುದು ಎದ್ದು ಕಾಣುತ್ತದೆ.

ಇದರಲ್ಲಿ ಮುಚ್ಚುಮರೆಯೇನಿಲ್ಲ. ಈ ಪಠ್ಯ ಪರಿಷ್ಕರಣೆಯ ಮೂಲವಿರುವುದು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ. ಈ ಸತ್ಯವನ್ನು ಮನಗಂಡ ರಾಜ್ಯದ ನ್ಯಾಯವಾದಿಗಳು, ಸಾಹಿತಿ ಕಲಾವಿದರು, ಪ್ರಗತಿಪರ ಚಿಂತಕರು, ಮಠದ ಸ್ವಾಮಿಗಳು, ವಿವಿಧ ಸಂಘಟನೆಗಳು ’ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ ನೇತೃತ್ವದಲ್ಲಿ, ಕಳೆದ ಜೂನ್ 19, 2022ರಂದು ಫ್ರೀಡಂ ಪಾರ್ಕಿನಲ್ಲಿ ಸಭೆ ಸೇರಿ ಪರಿಷ್ಕೃತ ಪಠ್ಯಪುಸ್ತಕವನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ, 10 ದಿನಗಳ ಗಡುವು ಕೊಟ್ಟಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇವರ ಮನವಿಯನ್ನು ಸ್ವೀಕರಿಸುವ ಸೌಜನ್ಯವನ್ನೂ ತೋರಲಿಲ್ಲ. ಮತ್ತು ಪಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ’ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಪ್ರತಿಭಟನೆ ಮಾಡುವವರಿಗೆ ಸ್ವಾತಂತ್ರ್ಯವಿದೆ’ ಎಂದು ತಮ್ಮ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶಿಸಿದ್ದಾರೆ.

ನಿಜ. ಬಹುಮತವಿರುವ ಯಾವುದೇ ಸರ್ಕಾರ ಇಂಥ ಮೆರವಣಿಗೆ, ಪ್ರತಿಭಟನೆಗಳಿಗೆ ಜಗ್ಗುವುದುಂಟೆ? ಎಲ್ಲೀವರೆಗೆ ಶೋಷಿತ ವರ್ಗಕ್ಕೆ ಸೇರಿದ ಶಾಸಕರು, ಮಂತ್ರಿಗಳು, ಸಂಸದರು, ಅಧಿಕಾರ ಆಮಿಷಗಳಿಗೆ ಮಾರುಹೋಗಿ ಬಿಜೆಪಿಗೆ ತಲೆಯಾಡಿಸುತ್ತಾ ಬೆಂಬಲ ನೀಡುತ್ತಾರೋ, ಎಲ್ಲೀವರಗೆ ದನಿಯಿಲ್ಲದವರಿಗೆ ದನಿಯಾಗಿ ತಮ್ಮ ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸುವುದಿಲ್ಲವೋ, ಅಲ್ಲೀವರೆಗೆ ಆಳುವ ಸರ್ಕಾರ ಬಂಡೆಗಲ್ಲಿನಂತೆ ಭದ್ರವಾಗಿರುತ್ತದೆಯಲ್ಲವೆ?

ಇನ್ನೂ ಪರಮಾಶ್ಚರ್ಯವೆಂದರೆ, ಯಾವ ಬ್ರಾಹ್ಮಣ್ಯವನ್ನು ವಿರೋಧಿಸಿ ಬಸವಾದಿ ಶರಣರು ಧರ್ಮ ನಿರಪೇಕ್ಷ ಸಮಸಮಾಜದ, ಕಲ್ಯಾಣದ ಕನಸು ಕಂಡು ಕ್ರಾಂತಿ ಕಹಳೆ ಊದಿದರೂ ಅದೇ ಬಸವ ಧರ್ಮಾವಲಂಬಿ ವೀರಶೈವ ಲಿಂಗಾಯಿತ ರಾಜಕಾರಣಿಗಳು ತೀರ ಅಲ್ಪಸಂಖ್ಯಾತರಾದ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯೊಂದಿಗೆ ಕೈ ಜೋಡಿಸಿ ಸಹಭಾಗಿಗಳಾಗಿ ಕನ್ನಡನಾಡನ್ನು ಬಸವಪೂರ್ವ ಯುಗಕ್ಕೆ ಕೊಂಡೊಯ್ಯಲು ಉತ್ಸುಕರಾಗಿ ಟೊಂಕಕಟ್ಟಿ ನಿಂತಿರುವುದು. ಹೀಗಿರುತ್ತ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಪಠ್ಯಗಳನ್ನು ಕಿತ್ತು ಹಾಕುವುದು ಅಥವಾ ಅವರ ಚಿಂತನೆಗಳನ್ನು ತಿರುಚುವುದು ಇವರಿಗೆ ಯಾವ ಲೆಕ್ಕ? ಇಂಥ ಒಂದು ಅವಕಾಶಕ್ಕಾಗಿ ಸಂಘಪರಿವಾರವು ಶತಮಾನ ಪರ್ಯಂತ ಕಾದಿದೆ. ಹಿಂದೂ ರಾಷ್ಟ್ರವನ್ನಾಗಿ ಮಾಡಿ, ಧರ್ಮನಿರಪೇಕ್ಷ ಸೆಕ್ಯುಲರ್ ಸಂವಿಧಾನವನ್ನು ತಿದ್ದುವ ಯಾವ ಅವಕಾಶವನ್ನು ಅದು ಕಳೆದುಕೊಳ್ಳಲಾರದು.
ಆದ್ದರಿಂದ ಕುವೆಂಪು ಕೈವಾರಿಸಿದ ನಾಡಗೀತೆಯನ್ನು ತಿರುಚುವುದೂ ದಶದಿಕ್ಕುಗಳಿಂದಲೂ ಸಂವಿಧಾನದ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೇಲೆ ಆಕ್ರಮಣ ಮಾಡುವುದೂ ನಡೆದೇ ತೀರುತ್ತದೆ. ’ನೂಲ ಎಳೆಯಲಿ ಕೊರಳ ಕೊಯ್ಯುವ, ಭೇದದಲಿ ಹೊಕ್ಕಿರುವ ಚಾತುರ್ಯ ಬ್ರಾಹ್ಮಣ್ಯದ ಹುಟ್ಟುಗುಣ’ ಎಂದು ವಿದುರ ನೀತಿಯಲ್ಲಿ ಕವಿ ಕುಮಾರವ್ಯಾಸ ಹೇಳಿರುವುದು ನೂರಕ್ಕೆ ನೂರು ಸತ್ಯ. ಬುದ್ಧ ಬಸವರು ಕಂಡ, ಕುವೆಂಪು ದರ್ಶಿಸಿದ, ಅಂಬೇಡ್ಕರ್ ಕಲ್ಪಿಸಿದ ಕಲ್ಯಾಣಕರ್ನಾಟಕ ಕುಸಿಯುತ್ತಿದೆ. ಇಂಥ ಕಲ್ಯಾಣ ಪ್ರಭುತ್ವವನ್ನು ಕಿತ್ತೆಸೆದು ಕಾರ್ಪೊರೆಟ್ ಪ್ರಭುತ್ವವನ್ನೂ, ಸಂವಿಧಾನದ ಜಾಗದಲ್ಲಿ ಮನುವಾದವನ್ನೂ, ಪ್ರಜಾತಂತ್ರ ಜಾಗದಲ್ಲಿ ಸರ್ವಾಧಿಕಾರವನ್ನೂ ನೆಲೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದುವರೆಗೆ ಕುಂಟುತ್ತಲೆ ಹೇಗೋ ಮುಂದೆ ಸಾಗುತ್ತಿದ್ದ ದೇಶ ಈಗ ನಾಗಾಲೋಟದಲ್ಲಿ ಹಿಂದಕ್ಕೆ ಜಾರುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ, ಆರ್ಥಿಕತೆ ಕುಸಿಯುತ್ತಿದೆ, ಬೆಲೆ ಏರುತ್ತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟುತ್ತಿದೆ. ಅರಾಜಕತೆ ಬೆಳೆಯುತ್ತಿದೆ.

’ಅಗ್ನಿಪಥ’ದಂತ ಘನ ಗಂಭೀರ ಯೋಜನೆಯ ಅನುಷ್ಠಾನವು ಸರಿಯಲ್ಲವೆಂದೂ, ಸೇನೆ ಸೇರಿ ನಾಲ್ಕು ವರ್ಷಗಳ ನಂತರ ಬಿಡಬೇಕಾಗಿ ಬಂದಾಗ ನಾವೇನು ಮಾಡಬೇಕೆಂದೂ ಸೇನಾಕಾಂಕ್ಷಿ ’ಅಗ್ನಿವೀರರು’ ಕೆಲಸಕ್ಕೆ ಮೊದಲೇ ದಂಗೆಯೆದ್ದು ಬೀದಿಗಿಳಿದು ಹೋರಾಡುತ್ತಿದ್ದಾರೆ. ಇದೆಲ್ಲಾ ನೋಡಿದರೆ ಶ್ರೀಲಂಕಾ, ಆಫ್ಘಾನಿಸ್ಥಾನಗಳು ತಲುಪಿರುವ ದುಃಸ್ಥಿತಿಗೆ ಭಾರತವೂ ತಲುಪಬಹುದೇ ಎಂಬ ಆತಂಕ ಕಾಡುತ್ತದೆ.

ಆದರೆ ನಿರಾಶೆಗಿದು ಹೊತ್ತಲ್ಲ; ಚಿಂತಿಸುತ್ತಾ ಕೂರಲು ಸಮಯ ಇಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಮೌಲ್ಯಗಳ ಅಧಃಪತನ; ಪ್ರಾಮಾಣಿಕತೆ ನೆಲಕಚ್ಚುತ್ತಿದೆ; ದೊಡ್ಡ ದೇಶದ ದೊಡ್ಡ ಜನ ಎತ್ತ ಸಾಗುತ್ತಿದ್ದಾರೋ ಗೊತ್ತಿಲ್ಲ? ಮನುಕುಲದ ನಡಿಗೆಯಲ್ಲಿ ಈ ಏರುಪೇರು ಹೊಸದೇನೂ ಅಲ್ಲ. ಪ್ರತಿಗಾಮಿ ಹಾಗೂ ಪ್ರಗತಿಗಾಮಿ ಶಕ್ತಿಗಳ ನಡುವೆ ಸಂಘರ್ಷ ಎಲ್ಲಾ ಕಾಲಕ್ಕೂ ಇದ್ದದ್ದೇ. ’ಚಕ್ರಾರಪಂಕ್ತಿ’ಯಂತೆ ಕಾಲ ಸುತ್ತುತ್ತಿರುತ್ತದೆ-ಮುಂದೆ ಮುಂದೆ. ಎಷ್ಟೆಷ್ಟೋ ಚಳವಳಿಗಳು, ಆಂದೋಲನಗಳು, ದನಿಯಿಲ್ಲದವರಿಗೆ ದನಿಗೊಡುವ ಹೋರಾಟಗಳು ಮುಂತಾಗಿ ನಡೆದೇ ಇವೆ; ನಡೆಯುತ್ತವೆ. ’ಚಲಿಸಲ್ ಸೃಷ್ಟಿ; ನಿಲ್ಲಲ್ ಪ್ರಳಯ’ ಪ್ರಜಾತಂತ್ರದಲ್ಲಿ ಇರುವುದೊಂದೇ ಮಾರ್ಗ. ಅದು ಗಾಂಧೀ ನೀಡಿದ ಅಹಿಂಸಾತ್ಮಕ ಮಾರ್ಗ. ಅದೇ ಸ್ವಾಭಿಮಾನ ಮತದಾರರ ಒಂದು ಓಟಿನ ಕ್ರಾಂತಿ ಮಾರ್ಗ. ಈ ಕುರಿತು ರಾಷ್ಟ್ರಕವಿ ಕುವೆಂಪು ತಮ್ಮ ವಿಚಾರಕ್ರಾಂತಿಗೆ ಆಹ್ವಾನ ಎಂಬ ಭಾಷಣದಲ್ಲಿ ಎಂದೋ ಗುಡುಗಿದ್ದಾರೆ. ಆಲಿಸಿ:

’ಚುನಾವಣೆಯ ರೀತಿಯನ್ನೇ ಬದಲಿಸದಿದ್ದರೆ, ಮಾನ-ಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ವ್ಯಕ್ತಿಯಾಗಲೀ, ಯಾವ ಪಕ್ಷವಾಗಲೀ ಭ್ರಷ್ಟಾಚಾರಕ್ಕೆ ಬಲಿಯಾಗದಿರಲು ಸಾಧ್ಯವಿಲ್ಲ. ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯ ಸಾಧಕರು, ಗೂಂಡಾಗಳು, ಕಾಳಸಂತೆಕೋರರು, ಕಳ್ಳಸಾಗಾಣಿಕೆ ಖದೀಮರು, ಚಾರಿತ್ರ್ಯಹೀನರು ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ’.

ಆದ್ದರಿಂದ ’ಮಾತನೆ ಉಣಕೊಟ್ಟು ಮಾತನೆ ಉಡಕೊಟ್ಟು ಮಾತಿನಾ ಮುತ್ತ ಸೂರೆಗೊಟ್ಟು ಹೋದಾತನೇ ಜಾಣ’ ಎಂಬಂತಿರುವ ರಾಜಕಾರಣಿಯನ್ನು, ಅಂತಹವನ ರಾಜಕಾರಣವನ್ನು ದೂರವಿಟ್ಟು ನಿಜವಾದ ಅಂತಃಕರಣವುಳ್ಳ ಮುತ್ಸದ್ಧಿ ರಾಜಕಾರಣಿಯನ್ನು, ಎಲ್ಲ ಜನರನ್ನೂ ಒಟ್ಟಿಗೆ ಕರೆದೊಯ್ಯಬಹುದಾದ ಪಕ್ಷವನ್ನು ಚುನಾಯಿಸುವುದು ಮತದಾರನ ಕರ್ತವ್ಯ. ಅದಕ್ಕಾಗಿ ವಿಜ್ಞಾನದೀವಿಗೆ ಹಿಡಿದ ಯುವಜನರು ಮುಂದೆ ಬರಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...