ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವಾಗಿ ತ್ರಿವರ್ಣ ಧ್ವಜವನ್ನು ಏಕೆ ಹಾಕಿಕೊಂಡಿಲ್ಲ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಆರ್ಎಸ್ಎಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತ್ರಿವರ್ಣ ಧ್ವಜದ ಚಿತ್ರವನ್ನು ಅಪ್ಲೋಡ್ ಮಾಡಿಕೊಂಡಿದೆ.
ಆರ್ಎಸ್ಎಸ್ ಸರಸಂಚಾಲಕ ಮೋಹನ್ ಭಾಗವತ್ ಸೇರಿದಂತೆ ಆರ್ಎಸ್ಎಸ್ನ ಅಧಿಕೃತ ಖಾತೆಗಳಲ್ಲಿ ಭಾವುಟವನ್ನು ಹಾಕಿಕೊಳ್ಳಲಾಗಿದೆ.
ತ್ರಿವರ್ಣ ಧ್ವಜದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ನಲ್ಲಿ ಹಾಕಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ ನಂತರವೂ ಆರ್ಎಸ್ಎಸ್ ಮುಖಂಡರು ತಮ್ಮ ಖಾತೆಗಳಲ್ಲಿ ಏಕೆ ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿಕೊಂಡಿಲ್ಲ ಎಂಬ ವಿವಾದ ಮುನ್ನೆಲೆಗೆ ಬಂದಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಆರ್ಎಸ್ಎಸ್ ಎಂದಿಗೂ ಭಗವಾಧ್ವಜವನ್ನು ಒಪ್ಪುತ್ತದೆಯೇ ಹೊರತು, ತ್ರಿವರ್ಣ ಧ್ವಜವನ್ನಲ್ಲ” ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದವು. ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಕಾಲದಿಂದಲೂ ಸ್ವಾತಂತ್ರ್ಯ ನಂತರದಲ್ಲೂ ಆರ್ಎಸ್ಎಸ್ ತ್ರಿವರ್ಣ ಧ್ವಜವನ್ನು ಒಪ್ಪಿಲ್ಲ. ರಾಜಕೀಯ ಕಾರಣಗಳಿಗಷ್ಟೇ ಇತ್ತೀಚಿನ ವರ್ಷಗಳಲ್ಲಿ ಆರ್ಎಸ್ಎಸ್ ರಾಷ್ಟ್ರಧ್ವಜವನ್ನು ಗೌರವಿಸುತ್ತಿದೆ” ಎಂಬ ಆರೋಪಗಳು ಬಂದಿದ್ದವು.



ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಆರ್ಎಸ್ಎಸ್ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್, “ಇಂತಹ ವಿಷಯಗಳನ್ನು ರಾಜಕೀಯಗೊಳಿಸಬಾರದು. ಆರ್ಎಸ್ಎಸ್ ಈಗಾಗಲೇ ‘ಹರ್ ಘರ್ ತಿರಂಗ’ ಮತ್ತು ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮಗಳಿಗೆ ತನ್ನ ಬೆಂಬಲವನ್ನು ನೀಡಿದೆ. ಸರ್ಕಾರ, ಖಾಸಗಿ ಸಂಸ್ಥೆಗಳು ಮತ್ತು ಆರ್ಎಸ್ಎಸ್ ಅಂಗ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಜನ ಮತ್ತು ಸ್ವಯಂಸೇವಕರು ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಆರ್ಎಸ್ಎಸ್ ಜುಲೈನಲ್ಲೇ ಮನವಿ ಮಾಡಿದೆ” ಎಂದು ಸಮರ್ಥಿಸಿಕೊಂಡಿದ್ದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಲವು ತಿಂಗಳ ಹಿಂದೆ, “ನಾವು ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸುತ್ತೇವೆ” ಎಂದು ಹೇಳಿಕೆ ನೀಡಿದ್ದು ವಿವಾದ ಉಂಟಾಗಿತ್ತು. ಅಲ್ಲದೆ ‘ಭಗವಾಧ್ವಜ’ದ ಕುರಿತು ಹೆಗಡೇವಾರ್ ಮಾತನಾಡಿರುವುದನ್ನು ‘ಧ್ವಜ’ ಎಂದು ತಿರುಚಿ ಕರ್ನಾಟಕ ಸರ್ಕಾರ ಪಠ್ಯಪುಸ್ತಕದಲ್ಲಿ ಸೇರಿಸಿತ್ತು.
ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯೆ ನೀಡಿದ್ದ ಆರ್ಎಸ್ಎಸ್ ಪ್ರಮುಖ್ ಸುನೀಲ್, “ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬಾರದು” ಎಂದು ಅಭಿಪ್ರಾಯಪಟ್ಟಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಎದ್ದಿರುವ ಪ್ರಶ್ನೆಗಳ ಬಗ್ಗೆ ಸ್ಪಷ್ಟವಾಗಿ ಉತ್ತರಿಸದ ಅವರು, “ಇದು ಒಂದು ಪ್ರಕ್ರಿಯೆ. ಅದನ್ನು ನಮ್ಮದೇ ರೀತಿಯಲ್ಲಿ ನಿಭಾಯಿಸುತ್ತೇವೆ. ಹೇಗೆ ಆಚರಿಸಬೇಕು ಎಂದು ಯೋಚಿಸುತ್ತಿದ್ದೇವೆ. ಸಂಘವು ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಾರಂಭಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಸಂಘವು ಬೆಂಬಲಿಸಿದೆ” ಎಂದಿದ್ದರು.
‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಉತ್ಸಾಹದಿಂದ ಆಚರಿಸಲು ಜನರು ಮತ್ತು ಸ್ವಯಂಸೇವಕರನ್ನು ಆರ್ಎಸ್ಎಸ್ ಕೇಳಿಕೊಂಡಿದೆ. ಸಿದ್ಧತೆಗಳು ನಡೆಯುತ್ತಿವೆ ಎಂದಿದ್ದರು.
ಇದನ್ನೂ ಓದಿರಿ: ಬೊಮ್ಮಾಯಿ ಆಡಳಿತದ ಒಂದು ವರ್ಷದಲ್ಲಿ ರಾಜ್ಯ ಕಂಡ ಕೋಮುದ್ವೇಷ ಪ್ರಕರಣಗಳಿವು
“ಇದು ಸಂಘದ ನಿಲುವು. ಇದನ್ನು ರಾಜಕೀಯ ವಿಷಯ ಮಾಡುವುದು ತಪ್ಪು. ಈ ರೀತಿಯ ತೀಕ್ಷ್ಣವಾದ ಪ್ರಶ್ನೆಗಳು ಇರಬಾರದು. ಇಂತಹ ಪ್ರಶ್ನೆಗಳನ್ನು ಎತ್ತುತ್ತಿರುವ ಪಕ್ಷವೇ ದೇಶ ವಿಭಜನೆಗೆ ಕಾರಣವಾಗಿತ್ತು” ಎಂದು ಕಾಂಗ್ರೆಸ್ ಮೇಲೆ ಆರೋಪ ಹೊರಿಸಿದ್ದರು.
ಪಿಎಂ ಮೋದಿ ಮತ್ತು ಹಲವಾರು ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ತ್ರಿವರ್ಣ ಧ್ವಜವನ್ನು ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಅಪ್ಲೋಡ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಇದಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರು ತ್ರಿವರ್ಣಧ್ವಜವನ್ನು ಹಿಡಿದಿರುವ ಫೋಟೋವನ್ನು ಪ್ರೊಫೈಲ್ ಚಿತ್ರವಾಗಿ ಅಪ್ಲೋಡ್ ಮಾಡಿದ್ದಾರೆ. ಆ ಮೂಲಕ ತ್ರಿವರ್ಣಧ್ವಜವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿತು ಎಂಬ ಸಂದೇಶವನ್ನು ಕಾಂಗ್ರೆಸ್ ನೀಡಿದೆ.
ದೇಶದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಾರಂಭಿಸಲಾದ “ಹರ್ ಘರ್ ತಿರಂಗ” ಅಭಿಯಾನವು ಈಗ ಆರ್ಎಸ್ಎಸ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.


