ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ಕ್ಷಮದಾನ ನೀಡಿ ಬಿಡುಗಡೆ ಮಾಡಿದ ನಂತರ ರಂಧಿಕ್ಪುರ ಗ್ರಾಮದ ಮುಸ್ಲಿಮರು ಊರು ತೊರೆದಿದ್ದಾರೆ.
ಅತ್ಯಾಚಾರಿಗಳ ಸಂಭ್ರಮಾಚರಣೆಯನ್ನು ನೋಡಿ, ಹೆದರಿ ತಮ್ಮ ಮನೆಗಳನ್ನು ತೊರೆದು ವಲಸೆ ಹೋಗಿದ್ದು ಅತ್ಯಾಚಾರಿಗಳು ಮತ್ತೆ ಜೈಲಿಗೆ ಸೇರಿದಾಗ ಮಾತ್ರ ತಾವು ಹಿಂತಿರುಗುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ದೇವಗಢ್ ಬರಿಯಾಗೆ ತೆರಳಿದ್ದಾರೆ.
ವಲಸೆ ಬಂದಿರುವ ಗ್ರಾಮಸ್ಥರು, “ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಬೇಕು” ಎಂದು ಗುಜರಾತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮ್ಮ ಗ್ರಾಮಕ್ಕೆ ಮತ್ತೆ ಮರಳಬೇಕೆಂದರೆ ಪೊಲೀಸ್ ರಕ್ಷಣೆಯನ್ನು ನೀಡಬೇಕೆಂದು ಕೋರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇವಗಢ್ ಬರಿಯಾಯ ಕಪ್ಡಿಯಲ್ಲಿರುವ ರಹೀಮಾಬಾದ್ ಕಾಲೋನಿಗೆ ತೆರೆಳಿದ ‘ಇಂಡಿಯಾ ಟುಡೇ’ ಮಾಧ್ಯಮ ವಾಸ್ತವ ಸ್ಥಿತಿಯನ್ನು ವರದಿ ಮಾಡಿದೆ. “ರಂಧಿಕ್ಪುರ ಗ್ರಾಮದ ಹಲವು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಈಗ ದೇವಗಡ ಬರಿಯಾದಲ್ಲಿ ವಾಸಿಸುತ್ತಿದ್ದಾರೆ. ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬ ಕೂಡ ದೇವಗಢ್ ಬರಿಯಾದಲ್ಲಿ ವಾಸಿಸುತ್ತಿದೆ” ಎಂದು ವರದಿ ತಿಳಿಸಿದೆ.
ವಲಸೆ ಬಂದವರಲ್ಲಿ ವಾಹನ ಮಾರಾಟ ಮಾಡುವ ಸಮೀರ್ ಘಾಚಿ ಕುಟುಂಬವೂ ಒಂದು. ತಮ್ಮ ಕುಟುಂಬದ 12 ಸದಸ್ಯರೊಂದಿಗೆ ರಂಧಿಕ್ಪುರ ಗ್ರಾಮವನ್ನು ತೊರೆದು ದೇವಗಢ್ ಬರಿಯಾದಲ್ಲಿರುವ ಘಾಚಿ ‘ಇಂಡಿಯಾ ಟುಡೇ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಆ 11 ಮಂದಿ ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಜೈಲಿನಿಂದ ಬಿಡುಗಡೆಯಾದ ಬಗ್ಗೆ ನಮಗೆ ಮೊದಲು ತಿಳಿದಿರಲಿಲ್ಲ. ಗ್ರಾಮಕ್ಕೆ ಮರಳಿದ ನಂತರ ಅವರು ಪಟಾಕಿ ಸಿಡಿಸಿದರು. ಡಿಜೆ ಹಾಕಿಕೊಂಡು ಸಂಭ್ರಮಿಸಿದರು. ನಾವು ನಮ್ಮ ಗ್ರಾಮವನ್ನು ತೊರೆದು ದೇವಗಢ್ ಬರಿಯಾಕ್ಕೆ ವಲಸೆ ಹೋಗಲು ನಿರ್ಧರಿಸಿದವು. ಕೊಲೆಗಡುಕರಿಗಾಗಿ ಮತ್ತು ರೇಪಿಸ್ಟ್ಗಾಗಿ ಅವರು ಹೇಗೆ ತಾನೇ ಪಟಾಕಿ ಸಿಡಿಸುತ್ತಾರೆ? ಡಿಜೆ ಹಾಕಿಕೊಂಡು ಸಂಭ್ರಮಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ ಘಾಚಿ.
11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡಬೇಕು. ಬಿಲ್ಕಿಸ್ ಬಾನೊಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ 55 ಜನರು ಪತ್ರಕ್ಕೆ ಸಹಿ ಹಾಕಿ ದಾಹೋದ್ ಕಲೆಕ್ಟರ್ಗೆ ಸಲ್ಲಿಸಿದ್ದಾರೆ.
ವಲಸೆ ಬಂದಿರುವ ಮತ್ತೋರ್ವ ಗ್ರಾಮಸ್ಥ ಇಕ್ಬಾಲ್ ಅಬ್ದುಲ್ ಪ್ರತಿಕ್ರಿಯಿಸಿ, “11 ಅತ್ಯಾಚಾರಿಗಳು ಮತ್ತು ಹಂತಕರನ್ನು ಮತ್ತೆ ಜೈಲಿಗೆ ಹಾಕುವವರೆಗೆ ಮತ್ತು ನಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವವರೆಗೆ ನಾವು ರಂಧಿಕ್ಪುರಕ್ಕೆ ಹಿಂತಿರುಗುವುದಿಲ್ಲ. ನಮ್ಮ ಜೀವನ ಮತ್ತು ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ನಾವು ಅಸಹಾಯಕರಾಗಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಡುಗಡೆಗೆ ಸುಪ್ರೀಂಕೋರ್ಟ್ ಆಕ್ಷೇಪ
ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ. “ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿಲ್ಲ, ಆದರೆ ಕ್ಷಮಾದಾನ ನೀಡಬಹುದೇ ಎಂದು ಪರಿಶೀಲಿಸಿ ಎಂದಷ್ಟೆ ಹೇಳಿತ್ತು” ಎಂದು ಸಿಜೆಐ ಎನ್.ವಿ ರಮಣ ಹೇಳಿದ್ದಾರೆ.
11 ಅಪರಾಧಿಗಳು ಕ್ಷಮಾದಾನ ಪಡೆದು ಬಿಡುಗಡೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸುಪ್ರೀಂ, ಕ್ಷಮಾದಾನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಗುಜರಾತ್ ಸರ್ಕಾರ ಉತ್ತರಿಸುವಂತೆ ಸೂಚಿಸಿದೆ. 11 ಅಪರಾಧಿಗಳನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆಯೂ ನ್ಯಾಯಾಲಯ ಸೂಚಿಸಿದೆ. ಎರಡು ವಾರದ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿದೆ.
ಸಿಪಿಎಂ(ಎಂ) ನಾಯಕಿ ಸುಭಾಷಿಣಿ ಅಲಿ ಮತ್ತು ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್ ಸೇರಿದಂತೆ ಮೂವರು ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಕೂಡ ಎರಡನೇ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ
ಗುಜರಾತ್ ಗಲಭೆಯ ಸಮಯದಲ್ಲಿ ಬಿಲ್ಕಿಸ್ರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಯಿತು ಮತ್ತು ಅವರ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ 14 ಜನರನ್ನು ಮಾರ್ಚ್ 3, 2002 ರಂದು ದಾಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಜನಸಮೂಹವೊಂದು ಕೊಂದು ಹಾಕಿತ್ತು. ಆ ಸಮಯದಲ್ಲಿ ಬಿಲ್ಕಿಸ್ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು.
ಜನವರಿ 21, 2008ರಂದು ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಹಾಗೂ ಅವರ ಕುಟುಂಬದ ಏಳು ಸದಸ್ಯರ ಹತ್ಯೆಯ ಆರೋಪದ ಮೇಲೆ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.
ಇದನ್ನೂ ಓದಿರಿ: ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?
ಈ ಅಪರಾಧಿಗಳು 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು. ನಂತರ ಅವರಲ್ಲಿ ಒಬ್ಬಾತ ತನ್ನ ಅವಧಿಪೂರ್ವ ಬಿಡುಗಡೆಗಾಗಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದನು. ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ವಿಷಯವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಪಂಚಮಹಲ್ ಜಿಲ್ಲಾಧಿಕಾರಿ ಸುಜಲ್ ಮಾಯಾತ್ರಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
“ಕೆಲವು ತಿಂಗಳ ಹಿಂದೆ ರಚಿಸಲಾದ ಸಮಿತಿಯು ಪ್ರಕರಣದಲ್ಲಿ ಎಲ್ಲಾ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಸರ್ವಾನುಮತದ ನಿರ್ಧಾರ ತೆಗೆದುಕೊಂಡಿದೆ. ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ನಾವು ಅವರ ಬಿಡುಗಡೆಯ ಆದೇಶವನ್ನು ಸ್ವೀಕರಿಸಿದ್ದೇವೆ” ಎಂದು ಮಾಯಾತ್ರಾ ಹೇಳಿದ್ದರು ಮತ್ತು ಅವರನ್ನು ಬಿಡುಗಡೆ ಮಾಡಲಾಗಿತ್ತು.


