Homeಕರ್ನಾಟಕಗೌರಿ ಮೇಡಂ ಇಲ್ಲದ ಈ ಐದು ವರ್ಷಗಳು..

ಗೌರಿ ಮೇಡಂ ಇಲ್ಲದ ಈ ಐದು ವರ್ಷಗಳು..

- Advertisement -
- Advertisement -

ಕೆಲವು ಸಂಗತಿಗಳು ನಮ್ಮನ್ನು ಚಿಂತನೆಗೆ ಹಚ್ಚುವ ಮಹತ್ವದ ದಿನಗಳನ್ನು ಸೃಷ್ಟಿಸುತ್ತವೆ. ಗೌರಿ ಲಂಕೇಶರನ್ನು ಕೊಂದ ಸೆಪ್ಟೆಂಬರ್ 5 ಅಂತಹ ಒಂದು ದಿನ. ಅನ್ಯಾಯವಾಗಿ ಹತ್ಯೆಗೈಯ್ಯಲಾದ ವ್ಯಕ್ತಿ ನಮ್ಮೆಲ್ಲರ ಪ್ರೀತಿಯ ಗೌರಿ ಮೇಡಂ ಆಗಿದ್ದರು ಎಂಬ ಕಾರಣಕ್ಕಲ್ಲ. ಹಾಗಿದ್ದಲ್ಲಿ ಅದುವರೆಗೆ ಅವರಿಗೆ ಪ್ರೀತಿಪಾತ್ರರಾಗಿದ್ದವರಿಗೆ ಮಾತ್ರ ಅದು ಮಹತ್ವದ್ದಾಗಿರುತ್ತದೆ. ಆದರೆ, ಇದಕ್ಕೆ ಒಂದು ಚಾರಿತ್ರಿಕ ಮಹತ್ವ ಬರಲು ಬೇರೆ ಕಾರಣಗಳಿವೆ. ದೇಶದಲ್ಲಿನ ಜೀವ ವಿರೋಧಿ ರಾಜಕಾರಣ ಹಾಗೂ ಅದರ ವಿರುದ್ಧದ ಸಂಗ್ರಾಮದ ತಿರುವು ಬಿಂದುಗಳಲ್ಲಿ ಅದೂ ಒಂದಾಗಿದೆ. ಮಾನವೀಯತೆ ಪರ ನಿಂತ ಬುದ್ಧಿಜೀವಿ ಚಿಂತಕರ ಸರಣಿ ಹತ್ಯೆಗಳಲ್ಲಿ ಗೌರಿಯವರದ್ದು ನಾಲ್ಕನೆಯದ್ದು. ಆದರೆ, ಅಲ್ಲಿಂದ ಮುಂದಕ್ಕೆ ಆ ರೀತಿಯ ಹತ್ಯೆಗಳು ನಡೆಯಲಿಲ್ಲ. ಈ ಹತ್ಯೆಯ ತನಿಖೆಯ ಹೊಣೆ ಹೊತ್ತ ಎಸ್‌ಟಿಎಫ್‌ನ ಅಧಿಕಾರಿಗಳು ಹೇಳುವಂತೆ ’ಗೌರಿ ಇನ್ನೂ ಹಲವರ ಜೀವ ಉಳಿಸಿದರು’. ಗೌರಿಯವರ ಹತ್ಯೆಯ ಕಾರಣದಿಂದ ರಚನೆಯಾದ ಎಸ್‌ಟಿಎಫ್ ’ಕಿಲ್ಲರ್ ಗ್ಯಾಂಗ್’ನ್ನು ಹಿಡಿದುಹಾಕಿತು ಎಂಬ ಕಾರಣಕ್ಕೆ ಮಾತ್ರವಲ್ಲ; ಇಂತಹ ಹತ್ಯೆಗಳನ್ನು ಭಾರತದ ನಾಗರಿಕ ಸಮಾಜವು ಸುಮ್ಮನೇ ಸಹಿಸುವುದಿಲ್ಲ ಎಂಬ ಸಂದೇಶವನ್ನ ಭಾರತದ ಸಮಾಜವು ’ಸಂಬಂಧಪಟ್ಟವರಿಗೆ’ ನೀಡಿತು.

ಹತ್ಯೆಯ ಮೂಲಕ ಒಂದು ಸಂದೇಶ ಕೊಡಬೇಕೆಂದು ಬಯಸಿದವರಿಗೆ ಪ್ರತಿ ಸಂದೇಶವನ್ನು ಸಮಾಜವು ನೀಡಿದ್ದು ಗೌರಿಯವರ ಹತ್ಯೆಯ ನಂತರ. ಅಲ್ಲಿಂದಾಚೆಗೆ ಬುದ್ಧಿಜೀವಿ ಚಿಂತಕರನ್ನು ಹಣಿಯಲು ಭೀಮಾ ಕೊರೆಗಾಂವ್ ಸುಳ್ಳು ಕೇಸು, ದೆಹಲಿ ಗಲಭೆಯ ಸುಳ್ಳು ಕೇಸುಗಳನ್ನು ಹೆಣೆಯಲಾಯಿತು. ತೀರಾ ಇತ್ತೀಚೆಗೆ ತೀಸ್ತಾ ಸೆತ್ಲ್‌ವಾದ್ ಹಾಗೂ ಶ್ರೀಕುಮಾರ್‌ರನ್ನು ಜೈಲಿಗೆ ತಳ್ಳಲು ಸುಪ್ರೀಂಕೋರ್ಟನ್ನೇ ಬಳಸಿಕೊಳ್ಳಲಾಯಿತು. ಭೌತಿಕ ಹತ್ಯೆಗಳು ಅಸಾಧ್ಯವೆಂಬ ವಾತಾವರಣ ನಿರ್ಮಾಣವಾದಾಗ ಕಂಡುಕೊಂಡ ಪರ್ಯಾಯ ದಾರಿಗಳಿವು. ಅದು ಅಸಾಧ್ಯವೆಂದಾಗಿದ್ದು ಗೌರಿಯವರ ಹತ್ಯೆಯನ್ನು ಜೀರ್ಣಿಸಿಕೊಳ್ಳಲಾಗದ್ದರಿಂದ.

ಅದಕ್ಕೆ ಮುಂಚೆಯೇ ಜೆಎನ್‌ಯುನಲ್ಲಿ ನಡೆದ ಪ್ರತಿಭಟನೆ, ಊನಾ ಪ್ರತಿಭಟನೆ, ರೋಹಿತ್ ವೇಮುಲ ಹತ್ಯೆಯ ನಂತರ ನಡೆದ ಪ್ರತಿಭಟನೆಗಳು ಒಂದು ವಾತಾವರಣವನ್ನು ಉಂಟು ಮಾಡಿದ್ದವು. ಸಂಬಂಧಪಟ್ಟ ವ್ಯಕ್ತಿಗಳು ದೈತ್ಯ ಶಕ್ತಿಗಳೆದುರಿನ ಪ್ರತಿರೋಧದ ಸಂಕೇತಗಳಾಗಿ ಹೊರಹೊಮ್ಮುತ್ತಿದ್ದರು. ಅಂತಹ ಸಂಕೇತಗಳನ್ನೇ ಗೌರಿಯವರು ತನ್ನ ಮಕ್ಕಳು ಎಂದು ಕರೆದಿದ್ದು. ಅವೆಲ್ಲವೂ ಶಿಖರ ಮುಟ್ಟಿದ್ದು ಗೌರಿಯವರ ಹತ್ಯೆಯ ಸಂದರ್ಭದಲ್ಲಿ. ಒಂದಲ್ಲ ಒಂದು ರೀತಿಯಲ್ಲಿ ಆ ಪ್ರತಿರೋಧವು ಇಂದೂ ಮುಂದುವರಿಯುತ್ತಿದೆ. ಆದರೆ, ಇದಕ್ಕಿಂತ ಭಿನ್ನ ಆಯಾಮದ ಎರಡು ಜನಾಂದೋಲನಗಳು ಮತ್ತು ಒಂದು ಪಕ್ಷ ’ಅಜೇಯ’ರನ್ನು ಮಣಿಸಿದವು. ಆ ಎರಡು ಜನಾಂದೋಲನಗಳ ನೇತೃತ್ವ ವಹಿಸಿದವರು ಜನಸಾಮಾನ್ಯರು. ಒಂದು, ದೇಶದ ಮುಸ್ಲಿಮರ ನೇತೃತ್ವದಲ್ಲಿ ನಡೆದ ಸಿಎಎ ವಿರೋಧಿ ಆಂದೋಲನ. ಎರಡು, ಪಂಜಾಬ್ ಹರಿಯಾಣಗಳ ರೈತರ ನೇತೃತ್ವದಲ್ಲಿ ನಡೆದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದ ಆಂದೋಲನ. ಗುಣಾತ್ಮಕವಾಗಿ ಬೇರೆ ಬಗೆಯ ಚಳವಳಿಗಳಾದ ಇವುಗಳು, ವಿಶಾಲಾರ್ಥದಲ್ಲಿ ಕಳೆದೊಂದಷ್ಟು ಕಾಲದ ಒಳಬೇಗುದಿಯ ಅಭಿವ್ಯಕ್ತಿಯೇ ಆಗಿದ್ದವು. ಆ ಅರ್ಥದಲ್ಲಿ ಇವು ನಿಜಕ್ಕೂ ನಾಲ್ಕು ಹೆಜ್ಜೆ ಮುಂದಕ್ಕೆ ತಂದ ವಿದ್ಯಮಾನಗಳು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸು ಬಿಜೆಪಿಯ ಓಟಕ್ಕೆ ತಡೆ ಹಾಕಿತು.

ಅದೇನೇ ಇದ್ದರೂ, ಕೊಲೆಗೀಡಾದ ಮತ್ತು ಬಂಧನಕ್ಕೊಳಗಾಗಿರುವ ವ್ಯಕ್ತಿಗಳಾರೂ ಬಯಸದ ಪುನರಾಯ್ಕೆ 2019ರಲ್ಲಿ ನಡೆಯಿತು. ಬಯಸದ ಪ್ರಮಾಣದಲ್ಲಿ ಮೋದಿ ಸರ್ಕಾರ ಪುನರಾಯ್ಕೆಯಾಯಿತು. ಉತ್ತರ ಪ್ರದೇಶದಂತಹ ರಾಜ್ಯ ಇನ್ನೂ ಕೆಟ್ಟಸ್ಥಿತಿಗೆ ಹೋಯಿತು. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಿಜೆಪಿಗೆ ಬಹುಮತ ಬಾರದಿದ್ದರೂ ಅಧಿಕಾರಕ್ಕೆ ಬಂದಿತು. ಒಂದು ರೀತಿಯಲ್ಲಿ ಗೌರಿ ಲಂಕೇಶರು ಇದ್ದ ಕಾಲದ ಕೇಡುಗಳ ಮುಂದುವರಿಕೆಗಳಿವು. ಅದುವರೆಗೆ ತೆವಳುತ್ತಾ ಭಜನೆ ಮಾಡತೊಡಗಿದ್ದ ಮಾಧ್ಯಮದ ಜೊತೆಗೆ ನ್ಯಾಯಾಲಯಗಳೂ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ್ದು ಈ ಅವಧಿಯ ಇನ್ನೊಂದು ’ಬೆಳವಣಿಗೆ’. ಮಂದಿರ ಶಿಲಾನ್ಯಾಸ, ಕಾಶ್ಮೀರ, ಹಿಜಾಬ್ ಒಳಗೊಂಡು ಹಲವು ಹತ್ತು ಬಗೆಯ ಕಮ್ಯುನಲ್ ಆಕ್ಷನ್‌ಗಳೆಲ್ಲದರ ಸಂದರ್ಭದಲ್ಲಿ ಕೋರ್ಟು ತನ್ನ ಕ್ರಿಯೆ ಅಥವಾ ನಿಷ್ಕ್ರಿಯೆಗಳ ಮೂಲಕ ಶಾಮೀಲಾಯಿತು. ಇನ್ನೊಂದು ಮುಂದುವರಿಕೆಯದು.

ಬಂಧನಕ್ಕೊಳಗಾಗಿ, ಇದೀಗ ಬಿಡುಗಡೆಯಾಗಿರುವ ಹಾಗೂ ಗೌರಿ ನೆನಪಿನ ಕಾರ್ಯಕ್ರಮಕ್ಕೆ ಬರಲಿರುವ ಝುಬೇರ್ ಇನ್ನೊಂದು ವಿದ್ಯಮಾನದ ಮುಂದುವರಿಕೆ. ಇಂತಹ ನೂರಾರು ಕ್ರಿಯಾಶೀಲರು ಹೊಸ ಮಾಧ್ಯಮದ ಪ್ರಯತ್ನದಲ್ಲಿ ಸ್ಥಾಪಿತ ಪಟ್ಟಭದ್ರರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಇದು ಹಿಂದಿನ ಶತಮಾನದ ಒಳ್ಳೆಯ ಜರ್ನಲಿಸಂನ ಮುಂದುವರಿಕೆಯಾದರೂ, ಸ್ವತಃ ಗೌರಿಯವರು ಪ್ರತಿನಿಧಿಸುತ್ತಿದ್ದ ಈ ಕಾಲದ ಜರ್ನಲಿಸಂ-ಆಕ್ಟಿವಿಸಂನ ಮುಂದುವರಿಕೆಯೂ ಹೌದು.

ಕೇಡು ತನ್ನ ಸ್ವರೂಪದಲ್ಲಿ ಹಾಗೂ ಪ್ರಮಾಣದಲ್ಲಿ ನೆಗೆದು ನಿಂತಿದೆ. ಪ್ರತಿರೋಧವು ಅದೇ ಪ್ರಮಾಣದಲ್ಲಿ ಬೆಳೆದಿಲ್ಲವಾದರೂ, ಮುಂದುವರೆದಿದೆ; ಒಂದಷ್ಟು ಭಿನ್ನ ಸ್ವರೂಪದಲ್ಲೂ ಸಹಾ. ಭಿನ್ನ ಸ್ವರೂಪ ಏಕೆಂಬುದನ್ನು ಒಂದು ಉದಾಹರಣೆಯ ಮೂಲಕ ವಿವರಿಸಬಹುದು. ಸಿಎಎ ಸಂದರ್ಭದಲ್ಲಿ ಆ ಆಂದೋಲನದ ಶಕ್ತಿಯಾಗಿದ್ದದ್ದು ಮುಸ್ಲಿಂ ಜನಸಾಮಾನ್ಯರು; ಆದರೆ ಅದಕ್ಕೊಂದು ವಿಶಿಷ್ಟ ಕಳೆ ತಂದುಕೊಟ್ಟಿದ್ದು ಮುಸ್ಲಿಂ ಮಹಿಳೆಯರು ಮತ್ತು ನಗರಗಳಲ್ಲಿ ಯುವಜನರ ಗುಂಪುಗಳು. ಇವರು ಹಿಂದೆ ಇಂತಹ ಕಡೆ ಕಾಣದವರು. ರೈತಾಂದೋಲನದ ಹೊಸದಲ್ಲ; ತಿಂಗಳುಗಟ್ಟಲೆ ಸಾವಿರ ಸಾವಿರ ಜನರು ಈ ಪರಿ ಕೂರುವುದು ಹೊಸದು. ಝುಬೇರ್‌ರಂಥವರು ಹೊಸಬರು. ಅಂದರೆ ’ಪ್ರಗತಿಪರರ ಐಕ್ಯತೆ’ಯ ಅದೇ ಹಳೆಯ ಮಂತ್ರದಿಂದ ಸಾಧಿತವಾಗದ ಹೊಸದು ಇದು. ಉಡುಪಿಯ ಸಹಬಾಳ್ವೆ ಸಮಾವೇಶದಲ್ಲೂ ಅಂತಹದೊಂದು ಹೊಸತನ ಸಣ್ಣ ಪ್ರಮಾಣದಲ್ಲಿ ಇದ್ದಿತ್ತು. ಆದರೆ ಈ ಕಡೆಯ ಕೇಡುಗಳು ಕಡಿಮೆಯೇನಿಲ್ಲ. ಬಿಜೆಪಿ, ಆರೆಸ್ಸೆಸ್ಸನ್ನು ಅವರ ಅಸ್ತ್ರಗಳಿಂದಲೇ ಕತ್ತರಿಸಹೊರಡುವ ಎಲ್ಲವೂ ಆ ಕಡೆಗೇ ಅನುಕೂಲ ಮಾಡಿಕೊಡುತ್ತವೆ. ಆ ಅಸ್ತ್ರಗಳೆಂದರೆ ಸುಳ್ಳು, ದ್ವೇಷ, ಅವಕಾಶವಾದಿತನ, ಅಸಹನೆ ಇತ್ಯಾದಿ. ಮತ್ತು ಈ ಕಡೆಯವರಿಗೆ ಮಾತ್ರ ಸಿದ್ಧಿಸಿರುವ ಈಗೋ, ಸಣ್ಣತನ ಮತ್ತು ಎಂತಹುದೇ ಸಂದರ್ಭದಲ್ಲೂ ತಮ್ಮದೇ ಕಿರೀಟ ಎತ್ತರದಲ್ಲಿರಬೇಕೆಂಬ ಅತೀವ ಲಾಲಸೆ. ಇದೂ ಸಹಾ ಹಿಂದಿನದ್ದೇ ಮುಂದುವರಿಕೆ.

ಆ ಅರ್ಥದಲ್ಲಿ ಒಂದಷ್ಟು ಜನ ತುಂಬಾ ಮುಂದುವರೆದಿಲ್ಲ. ಮುಂದುವರೆದವರು ರೈತರು, ಮುಸ್ಲಿಂ ಮಹಿಳೆಯರು, ನೂರು ಬಗೆಯ ಹೊಸ ಸಂವಹನ ಸಾಧ್ಯತೆ ಕಂಡುಕೊಂಡಿರುವವರು ಮುಂತಾದವರು. ಬಹುಶಃ ಅವರು ಮತ್ತು ಅವರಂಥವರೇ ಮುಂದಿನ ಹಾದಿಯನ್ನೂ ತೋರುತ್ತಾರೆ ಮತ್ತು ಮುನ್ನಡೆಸುತ್ತಾರೆಂದು ತೋರುತ್ತದೆ.

ಪ್ರತಿ ಸೆಪ್ಟೆಂಬರ್ 5, ಜೀವಪರ ಕನಸ್ಸುಳ್ಳ ಕರ್ನಾಟಕದ ಒಂದಷ್ಟು ಕ್ರಿಯಾಶೀಲರಿಗೆ ಒಂದ್ಹೆಜ್ಜೆ ನಿಂತು ನೋಡಿಕೊಳ್ಳುವ ಸಂದರ್ಭವೆನ್ನುವುದಾದರೆ, ಈ ಹೊತ್ತು ನೋಡಿಕೊಳ್ಳಲು ಸಾಧ್ಯವಾಗಿದ್ದು ಇಷ್ಟೇ.


ಇದನ್ನೂ ಓದಿ: ‘ಜಾಮೀನು ನಿರಾಕರಿಸಲು ಕಾರಣವೇ ಇಲ್ಲ’: ತೀಸ್ತಾ ಸೆಟಲ್ವಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...