Homeಕರ್ನಾಟಕವಾರ್ತಾಭಾರತಿಗೆ ಎರಡು ದಶಕ

ವಾರ್ತಾಭಾರತಿಗೆ ಎರಡು ದಶಕ

- Advertisement -
- Advertisement -

ಕನ್ನಡ ದಿನಪತ್ರಿಕೆ ‘ವಾರ್ತಾಭಾರತಿ’ ಎರಡು ದಶಕಗಳನ್ನು ಪೂರೈಸಿದೆ. ವಾಣಿಜ್ಯಸುದ್ದಿ ಮತ್ತು ಮತೀಯ ನಾಯಕರ ಹೇಳಿಕೆಗಳಿಗೆ ಹೆಚ್ಚಿನ ಪತ್ರಿಕೆಗಳು ಕೊಡುವ ಆದ್ಯತೆಗೆ ಹೋಲಿಸಿದರೆ, ಇದು ಜನಸಾಮಾನ್ಯರ ಸಾಮಾಜಿಕ ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾ ಬಂದಿದೆ. ಕರ್ನಾಟಕದ ಮುಖ್ಯ ಪತ್ರಿಕೆಗಳ ಮುಖಪುಟದ ತಲೆಬರೆಹಗಳನ್ನು ‘ವಾರ್ತಾಭಾರತಿ’ಯವುಗಳ ಜತೆಗಿಟ್ಟು ಗಮನಿಸಿದರೆ, ಇದರ ತಾತ್ವಿಕ ನಿಲುವು ಮತ್ತು ರಾಜಕಾರಣದ ದಿಸೆ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಅಂಬೇಡ್ಕರ್ ಚಿತ್ರಪಟವನ್ನು ತೆಗೆಸಿದ ನ್ಯಾಯಾಧೀಶರ ವಿರುದ್ಧ ನಡೆದ ಚಳವಳಿಯನ್ನು ಇದು ವರದಿ ಮಾಡಿದ ಬಗೆಯನ್ನು ನೆನೆಯಬಹುದು. ‘ವಾರ್ತಾಭಾರತಿ’ ಇಲ್ಲದಿದ್ದರೆ, ಕರ್ನಾಟಕದಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಜರುಗಿದ ಎಷ್ಟೊ ವಿದ್ಯಮಾನಗಳ ಇನ್ನೊಂದು ಮಗ್ಗುಲು ಓದುಗರಿಗೆ ಸಿಗುತ್ತಿರಲಿಲ್ಲ. ಅಡಗಿಸಲಾದ ಸುದ್ದಿಯನ್ನು ಅಥವಾ ಘಟನೆಯ ಇನ್ನೊಂದು ಮಗ್ಗುಲನ್ನು ಬಿಡಿಸಿ ತೋರಿಸುವುದು, ಭಿನ್ನಮತ ಹುಟ್ಟಿಸುವುದು, ಚಿಂತನಶೀಲತೆ ಬೆಳೆಸುವುದು ಸಾರ್ವಜನಿಕ ಚಿಂತಕರು ಮತ್ತು ಪತ್ರಿಕೆಗಳು ಮಾಡಬೇಕಾದ ಕೆಲಸ. ‘ವಾರ್ತಾಭಾರತಿ’ ಭಿನ್ನಮತವನ್ನು ಮತ್ತು ಸುದ್ದಿಯ ಭಿನ್ನಮಗ್ಗುಲನ್ನು ದಾಖಲಿಸುತ್ತ ಬಂದಿದೆ.

ಮತೀಯವಾದದ ಪ್ರಯೋಗಭೂಮಿಯಾಗಿರುವ ಕರಾವಳಿಯಲ್ಲಿದ್ದು ಇದು ರೂಪುಗೊಂಡಿತು ಮತ್ತು ಎರಡು ದಶಕ ದಾಟಿದೆ. ಈ ಸಂಗತಿಗೆ ಚಾರಿತ್ರಿಕ ಮಹತ್ವವಿದೆ. ಕರಾವಳಿಯಲ್ಲಿ ಹುಟ್ಟುವ ಜನಪರ ಪತ್ರಿಕೆಗಳು ಬೇರುಬಿಡದಂತೆ ಕೊರಳುಗೊಯ್ಕ ಸ್ಪರ್ಧೆಯನ್ನೊಡ್ಡುವ ಸನ್ನಿವೇಶವಿದೆ. ಜನಪರ ಪತ್ರಿಕೆಗಳಿಗೆ ಇದು ಔದ್ಯಮಿಕ ಸ್ಪರ್ಧೆ ಮಾತ್ರವಾಗಿರದೆ, ಸೈದ್ಧಾಂತಿಕ ಹೋರಾಟವೂ ಆಗಿದೆ. ‘ಮುಂಗಾರು’ ಹಾಗೆ ಜನ್ಮ ತಳೆದಿದ್ದು. ಅದನ್ನು ಓದುವುದು, ಅದಕ್ಕೆ ಬರೆಯುವುದು ಮತ್ತು ಚಂದಾ ಮಾಡಿಸುವುದು ನಮಗೆಲ್ಲ ಚಳವಳಿಯ ಕೆಲಸವಾಗಿತ್ತು. ಆದರೆ ನಾನಾ ಕಾರಣಗಳಿಂದ ‘ಮುಂಗಾರು’, ಬಳಿಕ ಬಂದ ‘ಜನವಾಹಿನಿ’ ಪತ್ರಿಕೆಗಳು ಸೋತು ನಿರ್ಗಮಿಸಿದವು. ಆದರೆ ಇವು ನಡೆದ ನಿಲ್ಲಿಸಿದ ಹಾದಿಯಲ್ಲಿ ಪ್ರಯಣ ಆರಂಭಿಸಿದ ‘ವಾರ್ತಾಭಾರತಿ’ ಕರಾವಳಿಯಲ್ಲಿರುವ ಪೈಪೋಟಿಯ ಕದನದಲ್ಲಿ ಬದುಕಿದೆ. ಇದು ಮತೀಯವಾದದ ವಿರುದ್ಧ ಕೆಲಸ ಮಾಡುವ ಚಳವಳಿ ಮತ್ತು ಸಂಗಾತಿಗಳಿಗೆ ವೇದಿಕೆಯಾಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಅಂಕಣ ಬರೆಹಗಳು, ಬಲಪಂಥೀಯ ರಾಜಕೀಯಕ್ಕೆ ಸಾಂಸ್ಕೃತಿಕ ಪ್ರತಿರೋಧವನ್ನು ಕಟ್ಟುವ ಕೆಲಸ ಮಾಡಿವೆ.

ಸಂಪಾದಕೀಯವು ಯಾವುದೇ ಪತ್ರಿಕೆಯ ದೃಷ್ಟಿಕೋನವನ್ನು ಪ್ರಕಟಪಡಿಸುವ ಹೃದಯ ಭಾಗ. ಆದರೆ ಕರ್ನಾಕಟದ ಕೆಲವು ಪತ್ರಿಕೆಗಳಿಗೆ ಸಂಪಾದಕೀಯಗಳೇ ಇಲ್ಲ. ಸಂಪಾದಕೀಯ ಇರುವ ಕೆಲವು ಪತ್ರಿಕೆಗಳಲ್ಲಿ ಅದು ಮಹತ್ವದ ಭಾಗವಾಗಿಲ್ಲ. ಸಂಪಾದಕೀಯ ಹೊಣೆಗಾರಿಕೆಯನ್ನು ಕಿರುಪತ್ರಿಕೆಗಳು ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಬಂದ ಚರಿತ್ರೆಯಿದೆ. ‘ಜೀವನ’ ಪತ್ರಿಕೆಗೆ ಮಾಸ್ತಿ, ‘ರುಜುವಾತು’ಗೆ ಅನಂತಮೂರ್ತಿ, ‘ಸಂಕ್ರಮಣ’ಕ್ಕೆ ಚಂಪಾ, ‘ಪ್ರಪಂಚ’ಕ್ಕೆ ಪಾಪು, ‘ಲಂಕೇಶ್ ಪತ್ರಿಕೆ’ಗೆ ಲಂಕೇಶ್, ‘ಗೌರಿ ಲಂಕೇಶ್’ ಪತ್ರಿಕೆಗೆ ಗೌರಿಲಂಕೇಶ್ ಬರೆದ ಸಂಪಾದಕೀಯಗಳು ಪುಸ್ತಕಗಳಾಗಿ ಪ್ರಕಟವಾಗಿವೆ; ಕನ್ನಡ ಚಿಂತನ ಸಾಹಿತ್ಯದ ಭಾಗವಾಗಿವೆ. ತಿಂಗಳ ಅಥವಾ ವಾರದ ಪತ್ರಿಕೆಗಳಲ್ಲಿ ಚಿಂತನಶೀಲವಾದ ಧ್ಯಾನಸ್ಥ ಸಂಪಾದಕೀಯಗಳು ಸಾಧ್ಯ. ಆದರೆ ದಿನವೂ ಪ್ರಕಟವಾಗುವ ಧಾವಂತದ ದಿನಪತ್ರಿಕೆಗಳಲ್ಲಿ ಇವು ಕಷ್ಟ. ಆದರೂ ‘ಹಿಂದೂ’ ‘ಡೆಕ್ಕನ್‌ಹೆರಾಲ್ಡ್’ ಪತ್ರಿಕೆಗಳ, ಈಚೆಗೆ ‘ಪ್ರಜಾವಾಣಿ’ಯ ಸಂಪಾದಕೀಯಗಳು ತಮ್ಮ ಖಚಿತ ಮತ್ತು ಪ್ರಗತಿಪರ ನಾಡನ್ನು ಕಟ್ಟುವ ಕಾಳಜಿಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ. ರಘುರಾಮಶೆಟ್ಟರು ‘ಮುಂಗಾರು’ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯಗಳು ಚಿಂತನೆಯಿಂದ ಕೂಡಿರುತ್ತಿದ್ದವು. ಅವು ಈಗ ಪುಸ್ತಕವಾಗಿ ಹೊರಬಂದಿವೆ.

ಈ ಹಿನ್ನೆಲೆಯಲ್ಲಿ ವಾರ್ತಾಭಾರತಿಯ ಸಂಪಾದಕೀಯಗಳಲ್ಲಿರುವ ಚಿಂತನಶೀಲತೆ, ರಾಜಕೀಯ ಪ್ರಜ್ಞೆ, ಅಂತಾರಾಷ್ಟ್ರೀಯ ರಾಜಕಾರಣದ ಅರಿವು, ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗೆಗಿನ ಸೈದ್ಧಾಂತಿಕ ಪ್ರತಿರೋಧ, ಜನಪರ ಕಾಳಜಿ ಮತ್ತು ಬದ್ಧತೆ, ತಾತ್ವಿಕ ಖಚಿತತೆ ಮುಖ್ಯವಾಗಿವೆ. ಸಂಪಾದಕೀಯದ ಭಾಷೆಯಲ್ಲಿ ತಾರ್ಕಿಕ ಬಿಗಿಯಿರುತ್ತದೆ. ಹೊಣೆಗಾರಿಕೆ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಿದ್ಯಮಾನವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ರೀತಿ, ಪರ್ಯಾಯಗಳನ್ನು ಹೊಳೆಸುವ ಬಗೆ, ನಾಡನ್ನು ಕಟ್ಟುವ ಕಾಣ್ಕೆ ಇರುತ್ತದೆ. ರಾಜಕೀಯವಾಗಿ ಸರಿತನಕ್ಕಾಗಿ ಅತಿ ಎಚ್ಚರವಹಿಸದೆ, ಚರ್ಚಿಸಲು ಹಿಂಜರಿಕೆ ಹುಟ್ಟಿಸುವ ಸಂಕೀರ್ಣ ವಿಷಯಗಳ ಬಗ್ಗೆ, ದಿಟ್ಟವಾದ ಸಂಪಾದಕೀಯಗಳು ಇಲ್ಲಿವೆ. ತಪ್ಪಾದ ಧೋರಣೆಯ ಸಂಪಾದಕೀಯ ಬಂದಾಗ ಓದುಗರು ಹೀಗಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿರುವುದೂ ಉಂಟು. ಉದಾಹರಣೆಗೆ ಆಫಘಾನಿಸ್ಥಾನದಲ್ಲಿ ಸಾಮ್ರಾಜ್ಯಶಾಹಿ ಅಮೆರಿಕದ ನಿರ್ಗಮನದ ಹೊತ್ತಲ್ಲಿ ಸಂಭವಿಸಿದ ಅಧಿಕಾರ ಬದಲಾವಣೆಯ ಕುರಿತು ಬರೆಯಲಾದ ಸಂಪಾದಕೀಯ. ವಾರ್ತಾಭಾರತಿಯ ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಪ್ರಕಟವಾದರೆ ಕನ್ನಡ ಚಿಂತನ ಸಾಹಿತ್ಯಕ್ಕೆ ಕೊಡುಗೆಯಾಗಬಲ್ಲವು; ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೈಪಿಡಿಯಾಗಬಲ್ಲವು.

ಕನ್ನಡದಲ್ಲಿ ಬಂಡವಾಳ ಹೂಡಿಕೆ, ಪ್ರಸರಣ ಸಂಖ್ಯೆ, ಗುಣಮಟ್ಟಗಳ ದೃಷ್ಟಿಯಿಂದ ಯಶಸ್ಸನ್ನು ಸಾಧಿಸಿದ ಪತ್ರಿಕೆಗಳು ಬಹಳಷ್ಟಿವೆ. ಆದರೆ ಸುದ್ದಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಆ ಮೂಲಕ ಒಂದು ತಾತ್ವಿಕ ಚಿಂತನೆ ಮಂಡಿಸುವ ವಿಷಯ ಬಂದಾಗ, ಹೆಚ್ಚಿನವು ನಿರಾಶೆ ಹುಟ್ಟಿಸುತ್ತವೆ. ಕೆಲವಕ್ಕೆ ನಮ್ಮ ಕಣ್ಣೆದುರಿನ ಸಮಾಜ ಕುರಿತಂತೆ ಒಂದು ಆಳವಾದ ದಾರ್ಶನಿಕ ದೃಷ್ಟಿಕೋನವೇ ಇರುವುದಿಲ್ಲ. ಇದಕ್ಕೆ ಕಾರಣ, ಅಲ್ಲಿ ಬರೆಯುವ ಚಿಂತಕರ ಗುಣಮಟ್ಟವೂ ಕಾರಣ. ಆದರೆ ಕೆಲವು ಪತ್ರಿಕೆಗಳಲ್ಲಿ ಸುದ್ದಿಗಿಂತ ಸುದ್ದಿ ವಿಶ್ಲೇಷಣೆಗಳೇ ಅವುಗಳ ಹಿರಿಮೆಗೆ ಕಾರಣ. ಅಲ್ಲಿನ ಚಿಂತಕರು ಮಾಡುವ ವಿದ್ಯಮಾನಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಓದುಗರ ಅರಿವನ್ನು ವಿಸ್ತರಿಸಿವೆ ಮತ್ತು ಚಿಂತಿಸುವ ದೃಷ್ಟಿಕೋನವನ್ನೆ ಬದಲಿಸಿವೆ. ‘ವಾರ್ತಾಭಾರತಿ’ಯಲ್ಲಿ ನಾಡಿನ ಅತ್ಯುತ್ತಮ ಚಿಂತಕರು ಬರೆಯುತ್ತಾ ಬಂದಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಸೆ. 5ಕ್ಕೆ ಗೌರಿ ನೆನಪು ಕಾರ್ಯಕ್ರಮ: ಅರುಂಧತಿರಾಯ್, ಪ್ರಕಾಶ್ ರಾಜ್, ಮೊಹಮ್ಮದ್ ಝುಬೇರ್ ಭಾಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...