ಗುಜರಾತ್ ರಾಜ್ಯದ ಕಛ್ ಪ್ರದೇಶದ ಅದಾನಿ ಕೆಮಿಕಲ್ಸ್ ಮತ್ತು ಮುಂದ್ರಾ ಬಂದರು ಯೋಜನೆಗಾಗಿ ಅರಣ್ಯ ಮತ್ತು ಪರಿಸರ ಇಲಾಖೆಯು ಅಕ್ರಮ ರೀತಿಯಲ್ಲಿ ಗೌತಮ್ ಅದಾನಿ ಕಂಪನಿಗೆ ಭೂ ಮಂಜೂರಾತಿ ಮಾಡಿದೆ. ಅದರಿಂದಾಗಿ ಗುಜರಾತ್ ರಾಜ್ಯ ಸರ್ಕಾರಕ್ಕೆ 58.64 ಕೋಟಿ ರೂಗಳಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಸಲ್ಲಿಸಿದೆ.
ಬುಧವಾರ ರಾಜ್ಯ ವಿಧಾನಸಭೆಯಲ್ಲಿ ತನ್ನ 5ನೇ ವರದಿ ಮಂಡಿಸಿದ ಸಮಿತಿಯು “ಮೂರು ತಿಂಗಳಲ್ಲಿ ಕಂಪನಿಯಿಂದ ಪೂರ್ಣ ಮೊತ್ತವನ್ನು ವಸೂಲಿ ಮಾಡಬೇಕು ಮತ್ತು ಭೂಮಿಯನ್ನು ಅನುಚಿತವಾಗಿ ವರ್ಗೀಕರಿಸಿ, ರಾಜ್ಯ ಸರ್ಕಾರಕ್ಕೆ ನಷ್ಟ ಉಂಟುಮಾಡಿದ ಮತ್ತು ಕಂಪನಿಗೆ ಅನಾವಶ್ಯಕ ಲಾಭ ತಂದುಕೊಡುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು” ಶಿಫಾರಸ್ಸು ಮಾಡಿದೆ.
ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮತ್ತು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ವರ್ಗೀಕರಣ ಮಾಡಿದ್ದರಿಂದ ಕಂಪನಿ 58.64 ಕೋಟಿ ರೂ ಲಾಭ ಪಡೆದಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸ್ ಶಾಸಕ ಪೂಂಜ ವನ್ಶ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು 2004ರಲ್ಲಿ ಅದಾನಿ ಕಂಪನಿಗೆ ಕಛ್ ಜಿಲ್ಲೆಯ ಮುಂದ್ರಾದಲ್ಲಿ 1,840 ಹೆಕ್ಟೇರ್ ಮತ್ತು ಧಾರ್ಬ್ ಗ್ರಾಮದಲ್ಲಿ 168.42 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತ್ತು. ಸುಪ್ರೀಂ ಕೋರ್ಟ್ ಅರಣ್ಯ ಪ್ರದೇಶವನ್ನು ಆರು ವಿಭಾಗಗಳಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಇಂತಿಷ್ಟು ಎಂದು ಮೌಲ್ಯವನ್ನು ನಿಗಧಿ ಮಾಡಿದೆ. ಅದರಂತೆ ಕಛ್ ಜಿಲ್ಲೆಯ ಅರಣ್ಯವು ಎಕೊ ಕ್ಲಾಸ್2 (ಪ್ರತಿ ಹೆಕ್ಟೇರ್ಗೆ 7.30 ಲಕ್ಷ ರೂ) ಮತ್ತು ಎಕೊ ಕ್ಲಾಸ್ 4 ರಲ್ಲಿ (ಪ್ರತಿ ಹೆಕ್ಟೇರ್ಗೆ 4.30 ಲಕ್ಷ ರೂ) ಅಡಿಯಲ್ಲಿ ಬರುತ್ತದೆ ಎಂದು ಹೇಳಿತ್ತು.
ಆದರೆ ಗುಜರಾತ್ ಸರ್ಕಾರವು ಎಲ್ಲಾ ಅರಣ್ಯ ಭೂಮಿಯನ್ನು ಕೇವಲ ಎಕೊ ಕ್ಲಾಸ್ 4 ರ ಅಡಿಯಲ್ಲಿ ಅದಾನಿ ಕಂಪನಿಗೆ ಮಾರಾಟ ಮಾಡಿದ ಪರಿಣಾಮ ರಾಜ್ಯ ಸರ್ಕಾರಕ್ಕೆ 58.64 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಎಕೊ ಕ್ಲಾಸ್2ರ ಅಡಿಯಲ್ಲಿ ಮೂರು ತಿಂಗಳೊಳಗೆ ಕಂಪನಿಯಿಂದ ಹಣ ವಸೂಲಿ ಮಾಡಬೇಕೆಂದು ಸಮಿತಿ ಸೂಚಿಸಿದೆ.
ಇದನ್ನೂ ಓದಿ: ಮನೆ ಮುಂದೆ ಕಾರು ಪಾರ್ಕಿಂಗ್ಗೆ ವಾರ್ಷಿಕ 5000/- ವರೆಗೆ ಶುಲ್ಕ: ತರಾತುರಿ ಟೆಂಡರ್ ಕರೆದ BBMP