ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿಯವರು ಅಧ್ಯಕ್ಷರಾಗಬೇಕೆಂದು ಬಯಸಿದ್ದೆ. ಅವರು ಗಾಂಧಿ ಕುಟುಂಬದ ಯಾರೊಬ್ಬರೂ ಅಧ್ಯಕ್ಷರಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಹಾಗಾಗಿ ನನಗೆ ಸೂಚಿಸಿದ್ದಾರೆ ಎಂದಿದ್ದಾರೆ.
ಬಹುತೇಕ ಜನರು ನನ್ನನ್ನು ಅಧ್ಯಕ್ಷ ಹುದ್ದೆಯಲ್ಲಿ ಕಾಣಬಯಸುತ್ತಾರೆ ಎಂಬುದು ನನಗೆ ಗೊತ್ತು. ಆದರೆ ಗಾಂಧಿ ಕುಟುಂಬದವರು ಅಧ್ಯಕ್ಷರಾಗಬಾರದು ಎಂದು ನಾನು ನಿರ್ಧರಿಸಿದ್ದೇನೆ. ಹಾಗಾಗಿ ಗಾಂಧಿಯೇತರ ಕುಟುಂಬದವರು ಅಧ್ಯಕ್ಷರಾಗಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಕೇರಳದಲ್ಲಿರುವ ಅವರು ಈ ವಾರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ, ಅದಕ್ಕೆ ಸಿದ್ದತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಗೆಹ್ಲೋಟ್ ಅಧ್ಯಕ್ಷರಾಗಿ ಆಯ್ಕೆಯಾದರೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಎರಡು ಹುದ್ದೆ ನಿರ್ವಹಿಸಲು ಗೆಹ್ಲೋಟ್ಗೆ ಒಲವಿದ್ದರೂ ಸಹ ರಾಹುಲ್ ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂಬ ನೀತಿಯನ್ನು ಪುನರುಚ್ಚರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ನಾಯಕ ಸಚಿನ್ ಪೈಲಟ್ ಅವರಿಗೆ ರಾಜಸ್ಥಾನದ ಸಿಎಂ ಅಧಿಕಾರ ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನಿಯಮವು ಅಶೋಕ್ ಗೆಹ್ಲೋಟ್ಗೆ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ನಾವು ಉದಯಪುರದ ಚಿಂತನ್ ಶಿವಿರ್ನಲ್ಲಿ ನಿರ್ಣಯ ಮಾಡಿದ್ದು, ಆ ಬದ್ಧತೆಯನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ರಾಹುಲ್ ಗಾಂಧಿಯವರ ಆಯ್ಕೆಯಾಗಿದ್ದು, ಅದು ಸಾಧ್ಯವಾದಲ್ಲಿ 20 ವರ್ಷದ ನಂತರ ಗಾಂಧಿಯೇತರ ಕುಟುಂಬದವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕಾಣಸಿಗಲಿದ್ದಾರೆ.
ಇದೇ ವೇಳೆ ರಾಜಸ್ಥಾನದಲ್ಲಿ ಗೆಹ್ಲೋಟ್ ಅವರ ಬದಲಿಯಾಗಿ ಅವರ ಪಕ್ಷದೊಳಗಿನ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಗೆಹ್ಲೋಟ್ ವಿರುದ್ಧ 2020 ರಲ್ಲಿ ಸಚಿನ್ ಪೈಲಟ್ ಬಂಡಾಯವೆದ್ದಿದ್ದರು. ಆದರೆ ರಾಹುಲ್ ಗಾಂಧಿ ಅವರ ಮಧ್ಯ ಪ್ರವೇಶದ ನಂತರ ಸರ್ಕಾರ ಉರುಳಿರಲಿಲ್ಲ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಗುರುವಾರದಿಂದ ನಾಮಪತ್ರಗಳು ಲಭ್ಯವಿದ್ದು, ನಾಮಪತ್ರಗಳ ಸಲ್ಲಿಕೆ ಸೆಪ್ಟೆಂಬರ್ 24 ಮತ್ತು 30 ರ ನಡುವೆ ನಡೆಯಲಿದೆ.
ಅಕ್ಟೋಬರ್ 1 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅದೇ ದಿನ ಮಾನ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಕ್ಟೋಬರ್ 8ರ ವರೆಗೆ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಇದರ ನಂತರ ಅಂತಿಮ ಪಟ್ಟಿಯನ್ನು ಹೊರತರಲಾಗುವುದು. ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ; ಮನೆ ಮುಂದೆ ಕಾರು ಪಾರ್ಕಿಂಗ್ಗೆ ವಾರ್ಷಿಕ 5000/- ವರೆಗೆ ಶುಲ್ಕ: ತರಾತುರಿ ಟೆಂಡರ್ ಕರೆದ BBMP