Homeಕರ್ನಾಟಕವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

- Advertisement -
- Advertisement -

“ರಾಜ್ಯ ಕಾಂಗ್ರೆಸ್‌ ಘಟಕವು ಈಗ ಮಾಡುತ್ತಿರುವ ಅಭಿಯಾನಗಳು, ಹೋರಾಟಗಳು ಹಾಗೂ ಆಡಳಿತರೂಢ ಬಿಜೆಪಿಗೆ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಕಾಂಗ್ರೆಸ್ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಬದಲಿಸಿದೆಯೇ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

– ಹೌದು ಎನ್ನುತ್ತವೆ ‘ಕಾಂಗ್ರೆಸ್‌ ಮೂಲಗಳು’. “ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಯಾವ ರೀತಿಯ ತಂತ್ರಗಾರಿಕೆಯನ್ನು ಮಾಡಿತ್ತೋ, ಅದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಈಗ ಮಾಡುತ್ತಿದೆ. ಇದು ಪಕ್ಷದ ಸಾಂಪ್ರದಾಯಿಕ ರಾಜಕೀಯ ಗುಣಕ್ಕೆ ಹೊಂದಾಣಿಕೆಯಾಗದಿದ್ದರೂ, ಇಂತಹ ರಾಜಕೀಯದ ಮೂಲಕವೇ ಜನರನ್ನು ತಲುಪಬೇಕಾದ ಅನಿವಾರ್ಯತೆಯನ್ನು ಬಿಜೆಪಿಯವರು ಸೃಷ್ಟಿಸಿಬಿಟ್ಟಿದ್ದಾರೆ” ಎನ್ನುವುದು ಪಕ್ಷವನ್ನು ಬಲ್ಲವರ ಮಾತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪೇಸಿಎಂ’ ಪೋಸ್ಟರ್‌ ಅಭಿಯಾನ ಹಾಗೂ ಅದಕ್ಕೆ ಬಿಜೆಪಿಯವರು ನೀಡುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಕಾಂಗ್ರೆಸ್‌ನೊಳಗೆ ಕ್ರಿಯಾಶೀಲತೆ ಕಂಡು ಬರುತ್ತಿದೆ. ‘ಪೇಸಿಎಂ’ – ಪೋಸ್ಟರ್‌ನಲ್ಲಿನ ಸೃಜನಶೀಲತೆ ಹಾಗೂ ಅದು ಬೀರಿದ ಪರಿಣಾಮಗಳನ್ನು ಗಮನಿಸಿದವರು- ರಾಜ್ಯ ಕಾಂಗ್ರೆಸ್ ಇಷ್ಟೊಂದು ಕ್ರಿಯೇಟಿವ್‌ ಆಗಿದ್ದು ಹೇಗೆ ಎಂದು ಆಶ್ಚರ್ಯಪಡುತ್ತಿದ್ದಾರೆ.

‘40% ಕಮಿಷನ್ ಸರ್ಕಾರ, ಪೇಸಿಎಂ ಪೋಸ್ಟರ್‌’ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ, “ಈ ಹಿಂದೆ ನಮ್ಮ ಜೊತೆಯಲ್ಲಿ ಕೆಲಸ ಮಾಡಿದವರು ಈಗ ಕಾಂಗ್ರೆಸ್‌ ಜೊತೆ ಇದ್ದಾರೆ. ಟೂಲ್‌ ಕಿಟ್‌ ರೀತಿ ಕೆಲಸ ಮಾಡುತ್ತಿದ್ದಾರೆ” ಎಂದುಬಿಟ್ಟರು.

ಇದನ್ನೂ ಓದಿರಿ: ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು

“ಹೌದು, ಇದೊಂದು ಟೂಲ್‌ ಕಿಟ್‌ ಎಂಬುದರಲ್ಲಿ ಎರಡು ಮಾತಿಲ್ಲ, ಹಾಗೆಂದು ಟೂಲ್‌ಕಿಟ್ ಎಂದರೆ ಯಾವುದೋ ಭಯೋತ್ಪಾದಕ ಕೃತ್ಯವೂ ಅಲ್ಲ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರು.

“ಯಾವುದಾದರೂ ಒಂದು ಅಭಿಯಾನವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುವುದೇ ಟೂಲ್ ಕಿಟ್. ಯಾವ ವಿಚಾರದ ಮೇಲೆ ಏನನ್ನು ಪೋಸ್ಟ್ ಮಾಡಬೇಕು, ಯಾರು ಏನನ್ನು ಮಾತನಾಡಬೇಕು, ಅದಕ್ಕೆ ಸಂಬಂಧಪಟ್ಟ ಟ್ವೀಟ್‌ಗಳು ಹೇಗಿರಬೇಕು ಎಂಬುದನ್ನೆಲ್ಲ ಡಾಕ್ಯೂಮೆಂಟ್ ಮಾಡಲಾಗುತ್ತದೆ. ಇದನ್ನೇ ಬಿಜೆಪಿಯವರೂ ಮಾಡುತ್ತಾರೆ. ಒಂದು ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯವಸ್ಥಿತವಾಗಿ ಮಾಡುವುದೇ ಟೂಲ್ ಕಿಟ್‌” ಎನ್ನುತ್ತಾರೆ ಕಾಂಗ್ರೆಸ್ಸಿಗರು.

‘ಪೇಸಿಎಂ’, ‘40%ಕಮಿಷನ್ ಸರ್ಕಾರ’ದ ಸುತ್ತ ಬರುತ್ತಿರುವ ತರಹೇವಾರಿ ಟ್ರೋಲ್‌ಗಳು, ಪೋಸ್ಟರ್‌ಗಳು, ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕಾಗಿಯೇ ರೂಪುಗೊಂಡಿರುವ ವೆಬ್‌ಸೈಟ್‌, ಫೇಸ್‌ಬುಕ್ ಪೇಜ್‌, ಅಲ್ಲಿನ ಕಂಟೆಂಟ್‌ಗಳು- ಎಲ್ಲವೂ ಒಂದು ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಗಮನಿಸಬಹುದು. ಕಳೆದ ನಾಲ್ಕು ತಿಂಗಳ ಹಿಂದೆ ಇದ್ದ ಕಾಂಗ್ರೆಸ್‌ಗೂ ಈಗ ಕ್ರಿಯಾಶೀಲವಾಗಿರುವ ಕಾಂಗ್ರೆಸ್‌ಗೂ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತಿವೆ.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾದ ಬಳಿಕ, ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿತು. ಬಹುಶಃ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಒಗ್ಗಟ್ಟನ್ನು ವಿರೋಧಪಕ್ಷ  ಪ್ರದರ್ಶಿಸಿರಲಿಲ್ಲ ಎಂಬ ವಿಶ್ಲೇಷಣೆಗಳು ಬಂದವು. ಇದಾದ ನಂತರ ‘ಸಿದ್ದರಾಮಯ್ಯ’ನವರ ಅಮೃತ ಮಹೋತ್ಸವ ನಡೆಯಿತು. ಲಕ್ಷೋಪಲಕ್ಷ ಜನರು ಭಾಗಿಯಾಗಿದ್ದು ಭಾರೀ ಸುದ್ದಿಯಾಯಿತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಬಿರುಕಿದೆ ಎಂಬುದನ್ನು ಮುಚ್ಚುವ ಬಹುದೊಡ್ಡ ಪ್ರಯೋಗ ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಬಳಿಕ ಕಾಂಗ್ರೆಸ್ ಮತ್ತಷ್ಟು ಶಕ್ತಿಪ್ರದರ್ಶನವನ್ನು ಮಾಡುತ್ತಿರುವುದು ಕಂಡುಬರುತ್ತಿದೆ.

ತಂತ್ರಗಾರಿಕೆಯ ಹಿಂದಿರುವವರು ಯಾರು?

ಕಾಂಗ್ರೆಸ್‌ ತೋರುತ್ತಿರುವ ತಂತ್ರಗಾರಿಕೆಯ ಹಿಂದೆ ಕೇಳಿಬರುತ್ತಿರುವ ಹೆಸರು ಸುನಿಲ್‌ ಕಣಗೊಲು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ಜೊತೆಯಲ್ಲಿ ಕೆಲಸ ಮಾಡಿದವರಾದ ಸುನಿಲ್, ಈಗ ರಾಜ್ಯ ಕಾಂಗ್ರೆಸ್‌ಗಾಗಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿ ಯಾವ ಅಸ್ತ್ರಗಳನ್ನು ಬಳಸಲಾಗಿತ್ತೋ, ಅದೇ ಅಸ್ತ್ರಗಳನ್ನು ಕಾಂಗ್ರೆಸ್‌ನಲ್ಲಿ ಪ್ರಯೋಗ ಮಾಡಲಾಗುತ್ತಿದೆ.

“ಮುಂಚೆ ಕಾಂಗ್ರೆಸ್‌ನವರೇ ಎಲ್ಲ ಪ್ರತಿಕ್ರಿಯೆಗಳನ್ನು ನೇರವಾಗಿ ನೀಡುತ್ತಿದ್ದರು. ಆದರೆ ಈಗ ಅವರೊಂದಿಗೆ ವಿಷಯತಜ್ಞರು ಸೇರಿಕೊಂಡಿದ್ದಾರೆ. ಈ ತಜ್ಞರು ಬಿಜೆಪಿ, ಜೆಡಿಎಸ್‌ ಸೇರಿದಂತೆ ದೇಶದ ಬೇರೆ ಪಕ್ಷಗಳ ಜೊತೆಗೂ ಕೆಲಸ ಮಾಡಿದ್ದಾರೆ. ವೃತ್ತಿಪರ ಕ್ಯಾಂಪೈನಿಂಗ್ ಮ್ಯಾನೇಜರ್‌ಗಳು, ಕಂಟೆಂಟ್ ರೈಟರ್‌ಗಳು, ಡಿಸೈನರ್‌ಗಳು ಕಾಂಗ್ರೆಸ್‌ ಜೊತೆಗಿದ್ದಾರೆ” ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

2018ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ವಿರುದ್ಧ 10% ಕಮಿಷನ್‌ ಸರ್ಕಾರ ಎಂಬ ಅಸ್ತ್ರವನ್ನು ಬಿಜೆಪಿ ಬಳಸಿತ್ತು. ಈಗ ಕಾಂಗ್ರೆಸ್ 40% ಕಮಿಷನ್‌ ಸರ್ಕಾರ ಎಂಬ ಆರೋಪ ಮಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುವ ಪೋಸ್ಟ್‌ಗಳಲ್ಲಿ ಬಳಸುವ ಪದಗಳಲ್ಲೂ ಕಾಂಗ್ರೆಸ್ ನಾಯಕರು ಬದಲಾವಣೆ ಮಾಡಿಕೊಂಡಿದ್ದಾರೆ. ಅಗ್ರೆಸಿವ್‌‌ ಆಗಿರುವುದು ಕಂಡು ಬರುತ್ತಿದೆ. ‘ಪೇಸಿಎಂ ಗುರುಶಿಷ್ಯರು’, ‘40% ಸರ್ಕಾರ ಬಿಜೆಪಿ ಅಂದ್ರೆ ಭ್ರಷ್ಟಾಚಾರ’, ‘ಕಮಿಷನ್‌ ಕೊಟ್ರೆ ಪರ್ಮಿಷನ್‌’,- ಈ ರೀತಿಯಲ್ಲಿ ದಾಳಿ ಮಾಡಲಾಗುತ್ತಿದೆ. ಜೊತೆಗೆ ಜನಪ್ರಿಯ ಸಿನಿಮಾ ತುಣುಕುಗಳನ್ನು, ಜಾಹೀರಾತುಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡುವುದು ನಡೆಯುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಒಂದು ವಿಡಿಯೊ ವೈರಲ್ ಆಗಿದೆ. “ಯಾಕ್ರೀ ಸುಮ್ಮನಿದ್ದೀರಿ, ಹೊಡೆಯಿರಿ ಚಪ್ಪಾಳೆ, ಹೇಳಿಸಿಕೊಂಡು ಚಪ್ಪಾಳೆ ಹೊಡೆಸಿಕೊಳ್ಳಬೇಕಾದ ಸ್ಥಿತಿ ನಮಗೆ ಬಂದಿದೆ” ಎಂದಿರುವ ವಿಡಿಯೊ ತುಣುಕನ್ನು ವೈರಲ್ ಮಾಡಲಾಗುತ್ತಿದೆ. ಈ ಹಿಂದೆ ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಬಿಂಬಿಸಿದ್ದೂ ಇದೇ ರೀತಿಯಲ್ಲಿ. “ರಾಹುಲ್‌ ಗಾಂಧಿಯವರನ್ನು ಪಪ್ಪು ಮಾಡಿದವರು ಈಗ ಬೊಮ್ಮಾಯಿಯನ್ನು ಪಪ್ಪು ಮಾಡುತ್ತಿದ್ದಾರೆ”.

ಕಾಂಗ್ರೆಸ್ ಚುನಾವಣಾ ತಂತ್ರಗಳೇನು?

“ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂಬುದೇ ರಾಜ್ಯ ಕಾಂಗ್ರೆಸ್‌ನ ಚುನಾವಣಾ ಅಸ್ತ್ರ. ಇಷ್ಟೇ ಅಲ್ಲದೆ ಮತ್ತಷ್ಟು ದಾಳಿಗಳನ್ನು ಕಾಂಗ್ರೆಸ್ ಮಾಡಲಿದೆ. ಬಿಜೆಪಿಯ ವಚನ ಭ್ರಷ್ಟತೆಯನ್ನು ಮುನ್ನೆಲೆಗೆ ತರಲಾಗುತ್ತದೆ. ಸುಮಾರು ಆರು ನೂರು ವಚನಗಳನ್ನು ಬಿಜೆಪಿ ನೀಡಿತ್ತು. ಅದರಲ್ಲಿ ಶೇ. 10ರಷ್ಟು ಕೂಡ ನೆರವೇರಿಲ್ಲ. ಕಾಂಗ್ರೆಸ್‌ ಇದನ್ನು ದೊಡ್ಡ ಮಟ್ಟದಲ್ಲಿ ಪ್ರಶ್ನಿಸಲಿದೆ. ‘ವಚನ ವಂಚನೆ’ ಅಭಿಯಾನವೂ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ‘ವಚನ ವಂಚನೆ’ ಕ್ಯಾಂಪೇನ್‌‌ ಚರ್ಚೆಯಾಗಬೇಕೆಂದು ಕಾಂಗ್ರೆಸ್ ಬಯಸಿದೆ. ಬಿಜೆಪಿ ನೀಡಿದ ವಚನವೇನು? ಈಗ ಮಾಡಿದ್ದೇನು? ಎಂಬ ಪ್ರಶ್ನೆಯನ್ನು ದೊಡ್ಡ ಮಟ್ಟದಲ್ಲಿ ಕೇಳಲಿದ್ದೇವೆ” ಎನ್ನುತ್ತಾರೆ ಕಾಂಗ್ರೆಸ್ಸಿಗರು.

ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮು ಹಿಂಸೆಗಳು, ರೈತರ ಸಮಸ್ಯೆ- ಈ ವಿಚಾರಗಳನ್ನು ಟಾರ್ಗೆಟ್ ಮಾಡಲಿದೆ ಎಂದು ಮೂಲಗಳು ಹೇಳುತ್ತವೆ. ಬಿಜೆಪಿ ಕೋಮುವಿಚಾರಗಳನ್ನೇ ಮೊದಲ ಆದ್ಯತೆಯಾಗಿ ನೋಡುತ್ತಿದೆ. ಧರ್ಮವನ್ನು ಮುನ್ನೆಲೆಗೆ ತಂದು ಹಿಂದುತ್ವದ ಪ್ಲೇಕಾರ್ಡ್ ಹಾಕುತ್ತದೆ. ಇದನ್ನು ಕಾಂಗ್ರೆಸ್ ಹೇಗೆ ನಿಭಾಯಿಸುತ್ತದೆ? ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆಯಂತಹ ಗಂಭೀರ ಸಂಗತಿಗಳು ಹಿಂದಕ್ಕೆ ಸರಿದು, ಕೋಮುಭಾವನೆಯೇ ಪ್ರಧಾನವಾದರೆ ಕಾಂಗ್ರೆಸ್ ಏನು ಮಾಡಬಲ್ಲದು? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೂ ಕಾಂಗ್ರೆಸ್‌ ಒಂದು ಹಾದಿಯನ್ನು ಹಿಡಿದಿದೆ.

“ಕೋಮುಪ್ರಕರಣಗಳಿಂದ ಅಂತರ ಕಾಯ್ದುಕೊಳ್ಳುವುದೇ ಕಾಂಗ್ರೆಸ್‌ನ ತಂತ್ರಗಾರಿಕೆ. ಕೋಮುಪ್ರಚೋದನೆಗಳು ನಡೆದಾಗ ಕಾಂಗ್ರೆಸ್ ಪ್ರತಿಕ್ರಿಯೆ ನೀಡುವುದಿಲ್ಲ. ಮೊದಲು ಮೌನವಹಿಸುತ್ತದೆ. ವಿರೋಧ ಪಕ್ಷಗಳು ಪ್ರತಿಕ್ರಿಯೆ ನೀಡಿದರೆ ಮಾತ್ರ ಆ ಘಟನೆಗೆ ಮಹತ್ವ ಬಂದುಬಿಡುತ್ತದೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಕಾರಣ ಅಲ್ಲಿ ಕೋಮು ಪ್ರಕರಣಗಳಿಂದ ಅಂತರ ಕಾಯ್ದುಕೊಳ್ಳಲಾಗಿತ್ತು” ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.

ಇದನ್ನೂ ಓದಿರಿ: ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪಿಎಫ್‌ಐ ವಿರುದ್ಧ ಮತ್ತೆ ದಾಳಿ ನಡೆಸಿದ NIA; 50 ಜನರು ವಶಕ್ಕೆ

ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸುತ್ತೇವೆ ಎಂದಾಗ ಕಾಂಗ್ರೆಸ್ ನಾಯಕರು, “ಬೋಧಿಸಿ, ತಪ್ಪೇನಿಲ್ಲ” ಎನ್ನುವ ಮೂಲಕ ಈ ವಿಷಯಕ್ಕೆ ಹೆಚ್ಚಿನ ಮಾನ್ಯತೆಯನ್ನೇ ನೀಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳಾದಾಗ ಕಾಂಗ್ರೆಸ್‌ ಅಷ್ಟಾಗಿ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ. ಅಂದರೆ ಮತೀಯ ವಿಷಯಗಳಿಗೆ ಹೆಚ್ಚಿನ ಸ್ಪೇಸ್ ನೀಡುವುದಕ್ಕೆ ಕಾಂಗ್ರೆಸ್ ಹೋಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಹಾಗಾದರೆ ಕೋಮುಗಲಭೆಗಳಾದಾಗ ಕಾಂಗ್ರೆಸ್‌ ಏನು ಮಾಡುವುದಿಲ್ಲವೆ? ಎಂಬ ಕೇಳಿದರೆ, “ಕೋಮು ಸೂಕ್ಷ್ಮ ವಿಷಯಗಳಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವುದಿಲ್ಲ. ಘಟನೆ ನಡೆದ ಸ್ಥಳದಲ್ಲಿ ಪಕ್ಷದ ಮುಖಂಡರು ಶಾಂತಿ ಸಭೆಯನ್ನು ನಡೆಸುತ್ತಾರೆ. ಒಟ್ಟಿಗೆ ಕೂರಿಸಿ ಮಾತನಾಡುತ್ತಾರೆ. ಈ ರೀತಿಯ ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್ ಆನ್‌ಲೈನ್‌ನಿಂದ ಆಫ್‌ಲೈನ್‌ಗೆ ಶಿಪ್ಟ್ ಆಗಿದೆ. ಮಾತುಕತೆಗಳ ಮೂಲಕ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಆನ್‌ಲೈನ್ ಹಾದಿ ಹಿಡಿದಿದೆ. ಆದರೆ ಅದಕ್ಕೆ ವಿರುದ್ಧ ಧ್ರುವದಲ್ಲಿ ಆಫ್‌ಲೈನ್‌ ತಂತ್ರಗಾರಿಕೆಯೇ ಮುಖ್ಯವಾಗುತ್ತದೆ. ಭಾರತ್‌ ಜೋಡೋ ಯಾತ್ರೆಯನ್ನು ಬೀದಿಗಿಳಿದು ಮಾಡುತ್ತಿರುವುದು ಆಫ್‌ಲೈನ್‌ ಹೋರಾಟದ ಬಹುದೊಡ್ಡ ಭಾಗ. ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಕಾಂಗ್ರೆಸ್ ಯತ್ನಿಸುತ್ತಿದೆ” ಎನ್ನುತ್ತವೆ ಪಕ್ಷದ ಮೂಲಗಳು.

‘ಹಿಂದುತ್ವ’ದ ಕುರಿತು ಮೌನ ಸರಿಯೇ?

‘ಹಿಂದುತ್ವ’ದ ಕುರಿತು ಕಾಂಗ್ರೆಸ್ ಮೌನವಹಿಸುವುದು ಸರಿಯೇ? ಕೇವಲ ಭ್ರಷ್ಟಾಚಾರವನ್ನು ಪ್ರಶ್ನಿಸಿದರಷ್ಟೇ ಸಾಕೆ? ಎಂಬ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಕಾಂಗ್ರೆಸ್ ತಂತ್ರಗಾರಿಕೆಗಳ ಕುರಿತು ಪ್ರತಿಕ್ರಿಯಿಸಿದ ಚಿಂತಕ ಶಿವಸುಂದರ್‌, “ಕಾಂಗ್ರೆಸ್ ಬದಲಾಗುತ್ತಿದೆ ಎಂದು ಅನಿಸುತ್ತಿಲ್ಲ. ಬಾಬಾಬುಡನ್ ದರ್ಗಾ, ಹಿಜಾಬ್‌, ಇಡಬ್ಲ್ಯೂಎಸ್‌, ರಾಮಜನ್ಮಭೂಮಿಯಂತಹ ವಿಚಾರದಲ್ಲಿ ಕಾಂಗ್ರೆಸ್ ಸರಿಯಾದ ನಿಲುವು ತಾಳಲಿಲ್ಲ. ಸಿದ್ದರಾಮಯ್ಯನಂಥವರು ಕೆಲವೊಮ್ಮೆ ಮಾತನಾಡುತ್ತಾರಷ್ಟೇ” ಎಂದರು.

“ಒಟ್ಟಾರೆ ರಾಜಕೀಯ ವ್ಯವಸ್ಥೆಯಲ್ಲಿ ಸವರ್ಣೀಯ ಮನಸ್ಥಿತಿಯನ್ನು ಹಿಂದುತ್ವ ಮನಸ್ಥಿತಿಯಾಗಿ ಬಿಜೆಪಿಯವರು ಬೆಳೆಸಿದ್ದಾರೆ. ಅದನ್ನು ಒಡೆದುಹಾಕುವ ಪರ್ಯಾಯವಿರದೆ ಇದ್ದರೆ ಇದೆಲ್ಲ ಕೇವಲ ನೆಪಮಾತ್ರದ ಬದಲಾವಣೆ ಅನಿಸುತ್ತದೆ. ರಾಮಜನ್ಮಭೂಮಿಯ ಭೂಮಿಪೂಜೆಯಾಯಿತು. ಅಂದು ಪ್ರಿಯಾಂಕಾ ಗಾಂಧಿಯವರು ನಿಧಿ ಸಂಗ್ರಹಿಸಿದ್ದರು. ಈಗ ಮುಸ್ಲಿಂ ಮತಗಳಿಗೆ ಮೂರ್ನಾಲ್ಕು ಜನ ಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಮುಸ್ಲಿಂ ಮತಗಳ ಮೇಲೆಯೂ ನಂಬಿಕೊಳ್ಳುವಂತಿಲ್ಲ. ಪಿಎಫ್‌ಐ ವಿಚಾರದಲ್ಲಿ ತರಹೇವಾರಿ ಹೇಳಿಕೆಗಳನ್ನು ಕಾಂಗ್ರೆಸ್‌ನವರು ಕೊಡುತ್ತಿರುವುದೇ ಈ ಕಾರಣಕ್ಕೆ. ಸವರ್ಣೀಯ ಮನಸ್ಥಿತಿಗೆ ಧಕ್ಕೆಯಾಗದಂತೆ ಒಂದಿಷ್ಟು ತಂತ್ರಗಾರಿಕೆಗಳನ್ನು ಬಿಜೆಪಿಯೇತರ ಕಾಂಗ್ರೆಸ್‌, ಎಎಪಿ ಥರದ ಪಕ್ಷಗಳು ಮಾಡುತ್ತವೆ. ರಾಜಕಾರಣದಲ್ಲಿ ಹಿಂದುತ್ವ ಪ್ರಬಲವಾಗಿದೆ. ಬಿಜೆಪಿ ಅಸ್ತಿತ್ವ ಕಳೆದುಕೊಂಡರೂ ಇನ್ನುಳಿದ ಪಕ್ಷಗಳು ಹಿಂದುತ್ವವನ್ನು ಪ್ರಶ್ನೆ ಮಾಡುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...