ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ಬೆಂಬಲಿಗರ ನೆಲೆಯನ್ನು ವಿಸ್ತರಿಸುವ ಉದ್ದೇಶದಿಂದ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಚುನಾವಣಾ ಪೂರ್ವ ಭರವಸೆ ನೀಡಿದ್ದು, ರಾಜ್ಯದಲ್ಲಿ ಪಹಾರಿ ಸಮುದಾಯವು ಪರಿಶಿಷ್ಟ ಪಂಗಡವಾಗಿ (ಎಸ್ಟಿ) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲಿದೆ ಎಂದು ಮಂಗಳವಾರ ರಾಜೌರಿಯಲ್ಲಿ ಘೋಷಿಸಿದ್ದಾರೆ.
ಗೃಹ ಸಚಿವರ ಈ ಭರವಸೆ ಅನುಷ್ಠಾನಗೊಂಡರೆ, ಈ ಕೋಟಾವು ಭಾರತದಲ್ಲಿ ಭಾಷಾವಾರು ಗುಂಪು ಮೀಸಲಾತಿಯನ್ನು ಗಳಿಸಿದ ಮೊದಲ ನಿದರ್ಶನವಾಗಲಿದೆ. ಇದನ್ನು ಅನುಷ್ಠಾನಗಳಿಸಬೇಕೆಂದರೆ ಒಕ್ಕೂಟ ಸರ್ಕಾರವು ಸಂಸತ್ತಿನಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸರ್ಕಾರದಿಂದ ರಚಿಸಲಾಗಿರುವ ಜಿ.ಡಿ. ಶರ್ಮಾ ಆಯೋಗವು ವರದಿಯನ್ನು ಕಳುಹಿಸಿದೆ. ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಅದನ್ನು ಶೀಘ್ರದಲ್ಲೇ ನೀಡಲಾಗುವುದು” ಎಂದು ಅಮಿತ್ ಶಾ ಮುಂದಿನ ಚುನಾವಣೆಗೆ ಬಿಜೆಪಿಯ ಪ್ರಚಾರದ ಪ್ರಾರಂಭವೆಂದೆ ಹೇಳಲಾಗಿರುವ ರಾಜೌರಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿಳಿದ್ದಾರೆ.
ಇದನ್ನೂ ಓದಿ: ಪರಿಶಿಷ್ಟ ಪಂಗಡಗಳ ಮೀಸಲಾತಿ 6% ದಿಂದ 10%ಕ್ಕೆ ಹೆಚ್ಚಿಸಿದ ತೆಲಂಗಾಣ ಸರ್ಕಾರ
ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರವೇ ಅಂತಹ ಮೀಸಲಾತಿ ಸಾಧ್ಯವಾಗಿದ್ದು, ಈಗ ಇಲ್ಲಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಪಹಾರಿಗಳು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ. ಹೊಸದಾಗಿ ನೀಡಲಾಗುತ್ತಿರುವ ಮೀಸಲಾತಿಯಿಂದ ಅಸ್ತಿತ್ವದಲ್ಲಿರುವ ಎಸ್ಟಿಗಳು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಿದ ಸಾಂವಿಧಾನಿಕ ನಿಬಂಧನೆಗಳಾದ 35 ಎ ಮತ್ತು 370ನೇ ವಿಧಿಯನ್ನು ಆಗಸ್ಟ್ 5, 2019 ರಂದು ರದ್ದು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕೆಂದು ಅವರು ಜನರನ್ನು ಕೇಳಿಕೊಂಡಿದ್ದಾರೆ.
ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಜಮ್ಮು ಕಾಶ್ಮೀರವು ಚುನಾಯಿತ ವಿಧಾನಸಭೆಯನ್ನು ಹೊಂದಬಹುದು. ಕ್ಷೇತ್ರಗಳನ್ನು ಗುರುತಿಸುವ ಮತ್ತು ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಬಹುತೇಕ ಮುಗಿದಿರುವುದರಿಂದ ಜಮ್ಮು ಕಾಶ್ಮೀರದಲ್ಲಿ ಮೊದಲ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಜಾರಿಯಾಗದಿರಲು ‘ಉತ್ತರ ಭಾರತದ ಮನಸ್ಥಿತಿಯೆ’ ಕಾರಣ: ಶರದ್ ಪವಾರ್
ಮೀಸಲಾತಿ ನೀಡಿ ಪಹಾರಿಗಳು ಮತ್ತು ಗುಜ್ಜರ್ಗಳಿಗೆ ಅಧಿಕಾರ ನೀಡಿದ ನರೇಂದ್ರ ಮೋದಿಯನ್ನು ಬಲಪಡಿಸುವಂತೆ ಅಮಿತ್ ಶಾ ಜನರನ್ನು ಕೇಳಿಕೊಂಡಿದ್ದಾರೆ.
ಯಾರು ಈ ಪಹಾರಿ ಸಮುದಾಯ?
ಪಹಾರಿ ಜನರು ಅಥವಾ ಪಹಾರಿ ಮಾತನಾಡುವ ಜನರು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಪಾಕಿಸ್ತಾನದ ಆಡಳಿತದಲ್ಲಿರುವ ಆಜಾದ್ ಕಾಶ್ಮೀರದ ಕೆಲವು ಭಾಗಗಳಲ್ಲಿ ವಾಸಿಸುವ ಸಮುದಾಯವಾಗಿದೆ. ಪಹಾರಿ ಭಾಷೆಯು ಜಮ್ಮು ಕಾಶ್ಮೀರದ ಸಂವಿಧಾನದ ಆರನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ ಪ್ರಾದೇಶಿಕ ಭಾಷೆಗಳಲ್ಲಿ ಒಂದಾಗಿದೆ.
1991 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಪರಿಶಿಷ್ಟ ಪಂಗಡಗಳೆಂದು ಪಟ್ಟಿ ಮಾಡಿರುವ ಗುಜ್ಜರ್ಗಳು ಮತ್ತು ಇತರ ಬುಡಕಟ್ಟು ಸಮುದಾಯಗಳು ಪಹಾರಿ ಮಾತನಾಡುವ ಜನರಿಗೆ ಎಸ್ಟಿ ಸ್ಥಾನಮಾನ ಮತ್ತು ಇತರ ರೀತಿಯ ಪ್ರಯೋಜನಗಳನ್ನು ನೀಡುವುದನ್ನು ವಿರೋಧಿಸುತ್ತಿದ್ದಾರೆ. ಇಂತಹ ಕ್ರಮವು ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಸಂಪೂರ್ಣ ದುರ್ಬಲಗೊಳಿಸುತ್ತದೆ ಎಂಬುವುದು ಅವರ ವಾದವಾಗಿದೆ. ಪಹಾರಿ ಭಾಷೆ ಮಾತನಾಡುವ ಭಾಷಾ ಗುರುತಿನ ಏಕೈಕ ಆಧಾರದ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿದರೆ ಬುಡಕಟ್ಟುಗಳ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಗುಜ್ಜರ್ಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 10% ಮೀಸಲಾತಿ: ಆರ್ಎಸ್ಎಸ್ ಮಂದಿ ಹಬ್ಬಿಸಿರುವ 100% ಸುಳ್ಳುಗಳು!
ಪಹಾರಿ ಮಾತನಾಡುವ ಜನರಲ್ಲಿ ಹೆಚ್ಚಿನವರು ಮೇಲ್ವರ್ಗದ ಮುಸ್ಲಿಮರಾಗಿದ್ದಾರೆ ಎಂದು ಗುಜ್ಜರ್ಗಳು ವಾದಿಸುತ್ತಾರೆ. ಅದರಲ್ಲಿ, ಸೈಯದ್, ಖಾಜಿ, ಪರ್, ಬೇಗ್, ರಾಜಾ, ಮಲಿಕ್, ಮಿರ್ಜಾ, ಖಾನ್, ಮೊಘಲರು, ರಜಪೂತರು, ಕಾಶ್ಮೀರಿಗಳು ಮತ್ತು ಮೇಲ್ವರ್ಗದ ಸಿಖ್ಖರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಬ್ರಾಹ್ಮಣರು, ರಜಪೂತರು, ಮಹಾಜನರು ಸೇರಿದ್ದಾರೆ. ಈ ಯಾವುದೆ ಸಮುದಾಯಗಳು ಗುಜ್ಜಾರ್ಗಳು, ಬಕರ್ವಾಲ್ಗಳು, ಗಡ್ಡಿಗಳು ಮತ್ತು ಜಮ್ಮು ಕಾಶ್ಮೀರದ ಇತರ ಬುಡಕಟ್ಟುಗಳಂತಹ ಯಾವುದೇ ಸಾಮಾಜಿಕ ಕಳಂಕ ಅಥವಾ ಜಾತಿ ಅಸಮಾನತೆಯನ್ನು ಅವರು ಎದುರಿಸುವುದಿಲ್ಲ ಎಂದು ಅವರ ವಾದವಾಗಿದೆ.
ಈಗಾಗಲೆ ಈ ಎಲ್ಲಾ ಸುಮುದಾಯಗಳು, ‘ವಾಸ್ತವಿಕ ನಿಯಂತ್ರಣ ರೇಖೆಯ ಆವಾಸಸ್ಥಾನದ ಅಡಿ’ಯಲ್ಲಿ 4%, ಮೀಸಲು ಹಿಂದುಳಿದ ಪ್ರದೇಶದಲ್ಲಿ 10%, ಇತರ ಸಾಮಾಜಿಕ ಜಾತಿಗಳ ಅಡಿಯಲ್ಲಿ 4%, ಆರ್ಥಿಕವಾಗಿ ದುರ್ಬಲ ವರ್ಗದ ಅಡಿಯಲ್ಲಿ 10%, ಪಹಾರಿ ಮಾತನಾಡುವವರ ಅಡಿಯಲ್ಲಿ 4% ಮೀಸಲಾತಿಯನ್ನು ಮತ್ತು ಸಾಮಾನ್ಯ ವರ್ಗದ 48% ಮೀಸಲಾತಿ ಪಡೆಯುತ್ತಿದ್ದಾರೆ.
ಇಷ್ಟೆ ಅಲ್ಲದೆ ಈಗ ST ಅಡಿಯಲ್ಲಿ 10% ನಮ್ಮ ಪಾಲನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುವುದು ಗುಜ್ಜರ್ಗಳ ಆತಂಕವಾಗಿದೆ.
ಇದನ್ನೂ ಓದಿ: ಸಂಪತ್ತು ಅನುಭವಸಿದವರೇ ಮೀಸಲಾತಿ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ ವಿಷಾದ
ಅಲ್ಲದೆ, ಏಪ್ರಿಲ್ 2020 ರಲ್ಲಿ, ಜಮ್ಮು ಕಾಶ್ಮೀರ ಸರ್ಕಾರವು ‘ಪಹಾರಿ-ಮಾತನಾಡುವ ಜನರಿಗೆ’ ನೇರ ನೇಮಕಾತಿ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಸೀಟುಗಳ ಪ್ರವೇಶ ಮತ್ತು ಹಂಚಿಕೆಗಾಗಿ 4% ಮೀಸಲಾತಿಯನ್ನು ನೀಡಿತ್ತು.


