Homeಪುಸ್ತಕ ವಿಮರ್ಶೆಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ'ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

- Advertisement -
- Advertisement -

ಉಶಿಗೋಮೆ – ಕಾಗುರಾಜಕದ ಹಾದಿಯಲ್ಲೊಂದು ಓಣಿಯಿತ್ತು. ಅದು ಫ್ಯೂಡಲ್ ಯುಗದ ಪ್ರತಿರೂಪದಂತಿತ್ತು. ಆ ಓಣಿಯಲ್ಲಿನ ಕಟ್ಟಡಗಳ ಮರದ ಬಾಗಿಲುಗಳು ಗಾಜಿಗೆ ಬದಲಾಗಿತ್ತು ಅಷ್ಟೇ. ಅಲ್ಲಿ ಮೂರು ವಠಾರದಂತಹ ಕಟ್ಟಡಗಳಿದ್ದವು. ನನ್ನಣ್ಣ ಉವೇದ್ ಇಲ್ಲಿಯೇ ಒಬ್ಬ ಹೆಂಗಸು ಮತ್ತು ಆಕೆಯ ತಾಯಿಯೊಂದಿಗೆ ಇದ್ದ. ಅನಾರೋಗ್ಯದಿಂದ ಚೇತರಿಸಿಕೊಂಡ ಮೇಲೆ ನಾನಿದ್ದ ಕೋಣೆಯನ್ನು ಖಾಲಿಮಾಡಿ ಅವರೊಂದಿಗೆ ಇರಲು ಹೋದೆ.

ಸಿನಿಮಾ ಪ್ಯಾಲೇಸ್ ಥಿಯೇಟರಿನ ಹಿಂಭಾಗದಲ್ಲಿ ನನ್ನನ್ನು ಮೊದಲ ಸಲ ನೋಡಿ ಅಣ್ಣ ಗಾಬರಿಯಾದ. “ಅಕಿರಾ ಏನಾಯ್ತು? ಹುಷಾರಿಲ್ಲವಾ?” ಗಾಬರಿಯಿಂದ ಕೇಳಿದ. “ಹಾಗೇನಿಲ್ಲ. ಸ್ವಲ್ಪ ಸುಸ್ತಾಗಿದಿನಿ ಅಷ್ಟೇ” ಎಂದೆ. ನನ್ನನ್ನೇ ದಿಟ್ಟಿಸಿ ನೋಡುತ್ತಾ “ಸ್ವಲ್ಪ ಸುಸ್ತಾದ ಹಾಗೆ ಕಾಣ್ತಿಲ್ಲ. ಮನೆಗೆ ನಡಿ” ಅಂದ. ಅಣ್ಣನ ಜೊತೆ ಅವನ ಮನೆಗೆ ಬಂದೆ. ಒಂದು ತಿಂಗಳ ನಂತರ ಅಲ್ಲೇ ಹತ್ತಿರವಿದ್ದ ಮತ್ತೊಂದು ಕೋಣೆಗೆ ವಾಸ್ತವ್ಯ ಬದಲಿಸಿದೆ. ಆದರೂ ಹೆಚ್ಚಿನ ಸಮಯವನ್ನು ಅಣ್ಣನ ಮನೆಯಲ್ಲೇ ಕಳೆಯುತ್ತಿದ್ದೆ. ಮನೆಬಿಟ್ಟು ಬರುವಾಗ ಅಣ್ಣನ ಜೊತೆ ಇರುವೆ ಎಂದು ಅಪ್ಪನಿಗೆ ಸುಳ್ಳು ಹೇಳಿದ್ದೆ. ಈಗ ಆ ಸುಳ್ಳು ನಿಜವಾಗಿತ್ತು.

ಅಣ್ಣನಿದ್ದ ವಠಾರ ಹಾಗೂ ಓಣಿಗಳು ರಾಕುಗೋ (ಜಪಾನಿನ ಕತೆ ಹೇಳುವ ಪ್ರದರ್ಶನಕಲೆ) ಕತೆ ಹೇಳುವವರ ಕತೆಗಳ ಆವಾಸಸ್ಥಾನವಿದ್ದಂತಿತ್ತು. ಅಲ್ಲಿದ್ದ ಒಂದೇ ಬಾವಿಯಿಂದ ಜನ ನೀರು ಸೇದಿಕೊಳ್ಳುತ್ತಿದ್ದರು. ಅಲ್ಲಿನ ನಿವಾಸಿಗಳು ಸಂಪ್ರದಾಯಬದ್ಧವಾದ ಟೋಕಿಯನ್ನರು. ನನ್ನಣ್ಣ ಈ ಪರಿಸರದಲ್ಲಿ ಒಡೆಯನಿಲ್ಲದ ಸಮುರಾಯ್‌ನಂತೆ, ಏಳನೇ ಶತಮಾನದಲ್ಲಿ ಯುದ್ಧಕ್ಕೆ ಹೆದರಿದ ಹೊರಿಬೆ ಯಸುಯಿ ರೀತಿ ಇದ್ದ. ಅವನನ್ನು ಅಲ್ಲಿ ಬಹಳ ಭಕ್ತಿ, ಗೌರವಗಳಿಂದ ಕಾಣುತ್ತಿದ್ದರು.

ಈ ಕಟ್ಟದಲ್ಲಿನ ಪ್ರತಿ ಮನೆಯನ್ನು ಮೂರು ಭಾಗಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ 4ಬೈ4 ಅಡಿ ಜಾಗವಿರುತ್ತಿತ್ತು. ಅದಾದ ಮೇಲೆ 12 ಅಡಿ ಜಾಗದಲ್ಲೊಂದು ಕೋಣೆ ಹಾಗೂ ಹಿಂಭಾಗಕ್ಕೆ ಅಡುಗೆಮನೆ, ಬಚ್ಚಲುಮನೆ ಇರುತ್ತಿತ್ತು. ಬಹಳ ಇಕ್ಕಟ್ಟಾದ ಜಾಗ. ಅಣ್ಣ ಅಷ್ಟೊಂದು ಸಂಪಾದಿಸುತ್ತಿದ್ದರೂ ಯಾಕೆ ಇಂತಹ ಸ್ಥಳದಲ್ಲಿದ್ದಾನೆ ಎನ್ನುವುದು ಅರ್ಥವಾಗಿರಲಿಲ್ಲ. ದಿನಕಳೆದಂತೆ ಅಲ್ಲಿನ ಬದುಕಿನ ಶೈಲಿ ಇಷ್ಟವಾಗತೊಡಗಿತು.

ಇದನ್ನೂ ಓದಿ: ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

ಆ ಪ್ರದೇಶದಲ್ಲಿ ಗಾರೆ ಕೆಲಸಗಾರರು, ಬಡಗಿಗಳು, ಪ್ಲಾಸ್ಟಿಂಗ್ ಮಾಡುವವರು ಹೀಗೆ ವಿವಿಧ ವೃತ್ತಿಯ ಜನರಿದ್ದರು. ಬಹುತೇಕ ಮಂದಿಗೆ ಇಂತಹದ್ದೇ ಎನ್ನುವ ಕೆಲಸವಿರಲಿಲ್ಲ. ನಿರ್ದಿಷ್ಟ ಆದಾಯ ಮೂಲವಿರಲಿಲ್ಲ. ಅದ್ಹೇಗೋ ಅವರೆಲ್ಲ ಒಬ್ಬರೊಂದಿಗೆ ಒಬ್ಬರು ಹಂಚಿಕೊಳ್ಳುತ್ತಾ ಬದುಕುತ್ತಿದ್ದರು. ನರಕವಾಗಬಹುದಾಗಿದ್ದ ಬದುಕನ್ನು ತಮ್ಮ ಹಾಸ್ಯಪ್ರಜ್ಞೆಯಿಂದ ಜೀವಂತವಾಗಿರಿಸಿದ್ದರು. ಸಣ್ಣ ಮಕ್ಕಳು ಕೂಡ ನಗೆಚಟಾಕಿಗಳನ್ನು ಹಾರಿಸುತ್ತಿದ್ದರು.

ದೊಡ್ಡವರ ನಡುವಿನ ಮಾತುಕತೆ ಹೀಗಿರುತ್ತಿತ್ತು- “ಬೆಳಗ್ಗೆ ಮಹಡಿ ಮೇಲೆ ಮಲಗಿದ್ದೆ. ಇದ್ದಕ್ಕಿದ್ದ ಹಾಗೆ ಪಕ್ಕದ ಮನೆ ಕಡೆಯಿಂದ ಸುತ್ತಿದ್ದ ಚಾಪೆ ಹಾರಿಬಂತು. ನೋಡ್ತಿನಿ ಪಕ್ಕದ್ಮನೆಯವನು ಆ ಚಾಪೆ ಮಧ್ಯೆ ಇದ್ದ. ಅವನ ಹೆಂಡತಿ ಮನೆಕ್ಲೀನಿಂಗ್ ಭಯಂಕರ.” ಇದಕ್ಕೆ ಇನ್ನೊಬ್ಬ ಹೇಳುತ್ತಿದ್ದ “ಏ ಹಾಗೇನಿಲ್ಲ. ಗಂಡನಿಗೆ ನೋವಾಗಬಾರದು ಅಂತ ಚಾಪೆಯಲ್ಲಿ ಸುತ್ತಿ ಎಸೆದಿದಾಳೆ ಅಷ್ಟೇ.”

ಮೊದಲೇ ಇಕ್ಕಟ್ಟಾಗಿರೋ ಮನೆಯೊಳಗೆ ಕೋಣೆಗಳನ್ನು ಮಾಡಿ ಅದನ್ನು ಬಾಡಿಗೆಗೆ ಕೊಡುತ್ತಿದ್ದರು. ಅಂತಹದ್ದೇ ಒಂದು ಕೋಣೆಯಲ್ಲಿ ಇದ್ದವನೊಬ್ಬ ಮೀನು ಮಾರುತ್ತಿದ್ದ. ಪ್ರತಿದಿನ ಸೂರ್ಯ ಹುಟ್ಟೋದಕ್ಕೂ ಮುಂಚೆ ನದಿಗೆ ಹೋಗಿ ಮೀನು ಹಿಡಿಯುತ್ತಿದ್ದ. ತಿಂಗಳೆಲ್ಲ ಹೀಗೆ ಮೈಮುರಿದು ಕೆಲಸ ಮಾಡುತ್ತಿದ್ದ. ತಿಂಗಳ ಕೊನೆಯಲ್ಲಿ ಚಂದದ ಬಟ್ಟೆ ಹಾಕಿಕೊಂಡು ಸೂಳೆಯರ ಮನೆಗೆ ಹೋಗುತ್ತಿದ್ದ. ಇಡೀ ತಿಂಗಳು ಅವನು ದುಡಿದಿದ್ದು ಸಾರ್ಥಕವಾಗುವುದು ಹೀಗೆ ಮಾಡಿದಾಗಲೇ ಅಂದುಕೊಂಡಹಾಗಿತ್ತು.

ಇವರುಗಳ ನಡುವೆ ಇದ್ದಾಗ ನನಗೆ ಹದಿನೆಂಟನೆಯ ಶತಮಾನದ ಸಾಂಬಾ, ಕ್ಯೋಡನ್‌ರ ಕತೆಗಳ ಲೋಕದಲ್ಲಿದ್ದಂತೆ ಅನ್ನಿಸೋದು. ಇವರಿಂದ ಬಹಳಷ್ಟನ್ನು ಕಲಿತೆ. ಪಕ್ಕದ ಮನೆಯಲ್ಲಿದ್ದ ಮುದುಕ ಕತೆಹೇಳುವ ಪ್ರದರ್ಶನ ಮಂದಿರದ ಹೊರಗಡೆ ಚಪ್ಪಲಿ ಕಾಯುತ್ತಿದ್ದ ಇಲ್ಲವೇ ಸಿನಿಮಾ ಥಿಯೇಟರುಗಳಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ. ಇಂತಹವರಿಗೆ ಅಲ್ಲಿನ ಪ್ರದರ್ಶನಗಳಿಗೆ ಪಾಸು ಸಿಗುತ್ತದೆ. ಆ ಪಾಸುಗಳನ್ನು ತಮ್ಮ ನೆರೆಹೊರೆಯವರಿಗೆ ಬಾಡಿಗೆಗೆ ಕೊಡುತ್ತಿದ್ದರು. ಈ ತರಹದ ಪಾಸ್ ಪಡೆದು ಪ್ರತಿದಿನ ಬೆಳಗ್ಗೆ, ಸಂಜೆ ಸಿನಿಮಾ ನೋಡುತ್ತಿದ್ದೆ ಇಲ್ಲವೇ ಕತೆಕೇಳಲು ಹೋಗುತ್ತಿದ್ದೆ.

ಆ ಸಮಯದಲ್ಲಿ ಕಾಗುರಾಜಕದಲ್ಲಿ ಎರಡು ಸಿನಿಮಾ ಥಿಯೇಟರ್‌ಗಳಿದ್ದವು. ಉಶಿಗೋಮೆಕಾನಿನಲ್ಲಿ ವಿದೇಶಿ ಚಿತ್ರಗಳು ಹಾಗೂ ಬುನ್ಮೇಕಾನಿನಲ್ಲಿ ಜಪಾನಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಮೂರು ಕತೆಹೇಳುವ ಪ್ರದರ್ಶನ ಮಂದಿರಗಳಿದ್ದವು. ಕಾಗುರಾಜಕ ಎನ್ಬುಜೊ ಅಂತ ಒಂದರ ಹೆಸರು. ಉಳಿದೆರಡರ ಹೆಸರು ನೆನಪಿಲ್ಲ. ಎರಡು ಥಿಯೇಟರುಗಳನ್ನು ಹೊರತುಪಡಿಸಿ ಅಣ್ಣ ಪರಿಚಯಿಸಿದ್ದ ಸ್ನೇಹಿತರ ಥಿಯೇಟರುಗಳಲ್ಲೂ ನನಗಿಷ್ಟವಾಗುವ ಸಿನಿಮಾಗಳನ್ನು ನೋಡುತ್ತಿದ್ದೆ. ಕತೆಹೇಳುವ ಪ್ರದರ್ಶನಗಳು ಅಷ್ಟು ರುಚಿಸಲು ಕಾರಣ ನಾನಿದ್ದ ಪರಿಸರ. ಭವಿಷ್ಯದಲ್ಲಿ ಈ ಕತೆಹೇಳುವ, ಹಾಡುಹೇಳುವ ಕಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎನ್ನುವುದರ ಕಲ್ಪನೆಯೂ ಇಲ್ಲದೆ ಇವುಗಳನ್ನು ಆಸ್ವಾದಿಸುತ್ತಿದ್ದೆ.

ಹೆಸರಾಂತ ಕಲಾವಿದರ ಪ್ರದರ್ಶನಗಳಲ್ಲದೆ ಹಾಸ್ಯಗಾರರ ಪ್ರದರ್ಶನಗಳನ್ನು ಇಲ್ಲಿ ನೋಡಿದ್ದೆ. ಅವರು ಈ ಪ್ರದರ್ಶನ ಮಂದಿರಗಳನ್ನು ಬಾಡಿಗೆಗೆ ಪಡೆದು ತಮ್ಮ ಪ್ರದರ್ಶನಗಳನ್ನು ನೀಡುತ್ತಿದ್ದರು. ಅಂತಹ ಒಂದು ಪ್ರದರ್ಶನ ನೆನಪಿದೆ. “ಮೂರ್ಖನ ಸೂರ್ಯಾಸ್ತ” ಎಂದು ಅದರ ಹೆಸರು. ವ್ಯಕ್ತಿಯೊಬ್ಬ ಮುಳುಗುತ್ತಿರುವ ಸೂರ್ಯ, ಆಕಾಶ, ಗೂಡಿಗೆ ಮರಳುತ್ತಿರುವ ಹಕ್ಕಿಗಳನ್ನು ನೋಡುತ್ತಿರುತ್ತಾನೆ. ಆ ದೃಶ್ಯ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಆ ಪ್ರದರ್ಶನ ನೀಡುತ್ತಿದ್ದ ವ್ಯಕ್ತಿ ಹೊಮ್ಮಿಸುತ್ತಿದ್ದ ಭಾವನೆಗಳನ್ನು ನೋಡಿ ಮನದುಂಬಿತು.

ಇದೇ ಸಮಯದಲ್ಲಿ ಟಾಕಿ ಚಿತ್ರಗಳು ಬರಲಾರಂಭಿಸಿದವು. ಅವುಗಳಲ್ಲಿ ಕೆಲವು ನೆನಪಿದೆ- All Quiet on the Western Front – Lewis Milestone, The Last Company – Curtis Bernhardt, Westfront IQI8 – G. W. Pabst, Hell’s Heroes – William Wyler, Sous les toits de Paris – Rene Clair, The Blue Angel – Josef von Sternberg, The Front Page – Milestone, Street Scene – King Vidor, Morocco, Shanghai Express – von Sternberg, City Lights – Charles Chaplin, The Threepenny Opera – Pabst, Der Kongress tanzt – Erik Charell.

ಟಾಕಿ ಚಿತ್ರಗಳ ಆರಂಭದೊಂದಿಗೆ ಮೂಕಿ ಚಿತ್ರಗಳ ಯುಗ ಅಂತ್ಯಗೊಂಡಿತು. ಅದರೊಂದಿಗೆ ನಿರೂಪಕರ ಅವಶ್ಯಕತೆಯೂ ಮುಗಿಯಿತು. ಅಣ್ಣ ಕೆಲಸ ಕಳೆದುಕೊಂಡ. ಅಲ್ಲಿಯವರೆಗೆ ಅವನ ಜೀವನ ಚೆನ್ನಾಗಿ ಸಾಗುತ್ತಿತ್ತು. ಆ ವೇಳೆಗೆ ಅವನು ನಿರೂಪಕನಾಗಿ ಸಾಕಷ್ಟು ಹೆಸರುವಾಸಿಯಾಗಿದ್ದ. ಕ್ರಮೇಣ ಎಲ್ಲ ಬದಲಾಗಲಾರಂಭಿಸಿತು. ನಾನಷ್ಟು ಇಷ್ಟ ಪಡುತ್ತಿದ್ದ ಓಣಿಯ ಬದುಕಿನ ಕರಾಳ ಮುಖಗಳು ತೆರೆದುಕೊಳ್ಳಲಾರಂಭಿಸಿತು. ಇದು ಮನುಷ್ಯ ಬದುಕಿನ ವಾಸ್ತವ. ಬೆಳಕು ಕತ್ತಲೊಳಗೆ ಕರಗಲಾರಂಭಿಸುತ್ತದೆ. ನನಗದು ಮೊದಲ ಅನುಭವವಾದ್ದರಿಂದ ಆ ಕುರಿತು ಯೋಚಿಸಲಾರಂಭಿಸಿದೆ.

ಇಲ್ಲಿ ಕೂಡ ಎಲ್ಲ ಕಡೆಯಂತೆ ಕೆಟ್ಟ ಸಂಗತಿಗಳು ಘಟಿಸಿದವು. ಮುದುಕನೊಬ್ಬ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ. ಹೆಂಗಸೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಾಡುತ್ತಾ ಇಡೀ ಕಟ್ಟಡದ ರಾತ್ರಿಗಳ ನೆಮ್ಮದಿ ಹಾಳುಗೆಡವಿದಳು. ಒಂದು ರಾತ್ರಿ ಅವಳು ನೇಣು ಹಾಕಿಕೊಳ್ಳುತ್ತಿ ರುವುದನ್ನು ನೋಡಿದ ಪಕ್ಕದ ಮನೆಯವನು ನಕ್ಕನಂತೆ. ಆಕೆ ಮೌನವಾಗಿ ಬಾವಿಗೆ ಹಾರಿ ಪ್ರಾಣಬಿಟ್ಟಳು. ಮಲಮಕ್ಕಳ ಕತೆಗಳು ಹರಿದಾಡಲಾ ರಂಭಿಸಿದವು. ಇವೆಲ್ಲ ಮನಸ್ಸಿಗೆ ಬೇಸರ ಉಂಟುಮಾಡುತ್ತಿತ್ತು. ಅಂತಹ ಕತೆಯೊಂದನ್ನು ಹೇಳುತ್ತೇನೆ.

ಮಲತಾಯಿ ತನ್ನ ಮಲಮಗುವಿನ ವಿಷಯದಲ್ಲೇಕೆ ಕ್ರೂರಿಯಾಗಿರಬೇಕು? ಅವಳ ಗಂಡನ ಮೊದಲ ಹೆಂಡತಿಯ ಬಗೆಗಿನ ದ್ವೇಷದಿಂದ ಎನ್ನುವುದು ಸಮರ್ಥನೀಯವಲ್ಲ. ಈ ಅಪರಾಧಕ್ಕಿರುವ ಒಂದೇ ವಿವರಣೆ ಅಜ್ಞಾನ. ಅಜ್ಞಾನವೆನ್ನುವುದು ಮನುಷ್ಯ ಪ್ರಾಣಿಯಲ್ಲಿರುವ ಒಂದು ಬಗೆಯ ಹುಚ್ಚು. ದುರ್ಬಲರಾದ ಮಕ್ಕಳನ್ನು ಹಿಂಸಿಸುವವರು ವಾಸ್ತವವಾಗಿ ಹುಚ್ಚರು. ಭಯಂಕರವಾದ ಸಂಗತಿಯೆಂದರೆ ವೈಯಕ್ತಿಕ ನೆಲೆಯಲ್ಲಿ ಹೀಗೆ ಹುಚ್ಚರಾಗಿರುವವರು ಸಾರ್ವಜನಿಕವಾಗಿ ಬಹಳ ಮುಗ್ಧರೆನ್ನುವಂತೆ ಇರುತ್ತಾರೆ.

ಇದನ್ನೂ ಓದಿ: ಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- “ಬೆಳಕಿನ ಬೇಸಾಯ”

ಹಳೆಯ ಕತೆಯೊಂದರಲ್ಲಿ ಮಲತಾಯಿಯು ಮಲಮಗುವನ್ನು ಸುಡುವುದಕ್ಕಾಗಿ ಬಳಸುವ ವಸ್ತುವನ್ನು ತರಲು ಕಳಿಸುತ್ತಾಳೆ. ಅದು ತನ್ನನ್ನೇ ಸುಡಲು ಎಂದು ಗೊತ್ತಿಲ್ಲದ ಮಗು ಅದನ್ನು ತರಲು ಹೋಗುತ್ತದೆ. ಈ ಕತೆ ನನ್ನನ್ನು ಬಹಳ ಕಾಡಿತ್ತು. ಒಂದು ದಿನ ಅಣ್ಣನ ಮನೆಯಲ್ಲಿದ್ದಾಗ ಪಕ್ಕದಮನೆಯಾಕೆ ಬಿಕ್ಕುತ್ತಾ ಬಂದಳು. ಅವಳು ಅಳುತ್ತಿದ್ದ ರೀತಿಯನ್ನು ನೋಡಿ ಸಹಿಸಲಾಗಲಿಲ್ಲ. ಏನಾಯಿತು ಅಂತ ಕೇಳಿದಾಗ ಅವಳ ಪಕ್ಕದ ಮನೆಯಾಕೆ ಮಲಮಗಳನ್ನು ಹಿಂಸಿಸುತ್ತಿರುವುದಾಗಿ ಹೇಳಿದಳು. ಆ ಹುಡುಗಿ ಅಳುತ್ತಿರುವುದನ್ನು ಕೇಳಿ ತಡೆಯಲಾಗದೆ ಪಕ್ಕದ ಮನೆಯವರ ಅಡುಗೆಮನೆಯಲ್ಲಿ ಇಣುಕಿ ನೋಡಿದ್ದಳು. ಅಲ್ಲಿ ಹುಡುಗಿಯನ್ನು ಕಟ್ಟಿಹಾಕಿ ಆ ಮಲತಾಯಿ ಹುಡುಗಿಯ ಹೊಟ್ಟೆಯನ್ನು ಸುಡುತ್ತಿದ್ದಳಂತೆ. ಅವಳು ಇನ್ನೂ ಏನೋ ಹೇಳುವವಳಿದ್ದಳು. ಹೊರಗೆ ನೋಡಿ ಸುಮ್ಮನಾಗಿಬಿಟ್ಟಳು.

ಅಲಂಕರಿಸಿಕೊಂಡ ಮಹಿಳೆಯೊಬ್ಬಳು ರಸ್ತೆಯಲ್ಲಿ ಹೋಗುತ್ತಿದ್ದಳು. ಆಕೆ ನಮ್ಮನ್ನು ನೋಡಿ ನಸುನಕ್ಕು ವಂದಿಸಿ ಮುಂದೆ ಸಾಗಿದಳು. ಇಷ್ಟು ಹೊತ್ತು ಅಳುತ್ತಿದ್ದ ಹೆಂಗಸು ಅವಳನ್ನೇ ಬೆರಗಿನಿಂದ ನೋಡುತ್ತಾ “ಸ್ವಲ್ಪಹೊತ್ತಿಗೆ ಮುಂಚೆ ರಾಕ್ಷಸಿಯಂತಿದ್ದಳು. ಈಗ ನೋಡಿದರೆ ಕುರಿಮರಿಯಂತಿದ್ದಾಳೆ. ಪಿಶಾಚಿ!” ಅಂದಳು. ಆ ಹುಡುಗಿಯನ್ನು ಹಿಂಸಿಸುತ್ತಿದ್ದ ಮಲತಾಯಿ ಆಗಷ್ಟೇ ಬೀದಿಯಲ್ಲಿ ಹೋದ ಮಹಿಳೆ ಎಂದು ನಂಬಲಾಗಲಿಲ್ಲ. ಪಕ್ಕದಮನೆಯಾಕೆ ನನ್ನತ್ತ ತಿರುಗಿ “ಅಕಿರಾ, ದಯವಿಟ್ಟು ಆ ಹುಡುಗಿಗೆ ಸಹಾಯ ಮಾಡು. ಅವಳನ್ನು ಬಿಡಿಸು” ಎಂದು ಬೇಡಿಕೊಂಡಳು. ಮಾತಿಲ್ಲದೆ, ಅಪನಂಬಿಕೆಯಲ್ಲೇ ಅವಳನ್ನು ಹಿಂಬಾಲಿಸಿದೆ.

ಕಿಟಕಿಯಿಂದ ಇಣುಕಿದಾಗ ಅಲ್ಲಿ ಹುಡುಗಿಯನ್ನು ಕಟ್ಟಿಹಾಕಿರುವುದು ಕಾಣಿಸಿತು. ಕಿಟಕಿ ತೆರೆದಿತ್ತು. ಕಳ್ಳನಂತೆ ಒಳಹೊಕ್ಕೆ. ಕಟ್ಟಿದ್ದ ಕೈಗಳನ್ನು ಬಿಡಿಸುತ್ತಿದ್ದಂತೆ ಅವಳು ಸಿಟ್ಟಿನಿಂದ ನನ್ನ ನೋಡುತ್ತಾ “ಏನ್ಮಾಡ್ತಿದಿಯಾ? ನಿನ್ನ ಯಾರು ಸಹಾಯ ಮಾಡಲು ಕೇಳಿದರು!” ಅಂದಳು. ಆಶ್ಚರ್ಯದಿಂದ ಅವಳತ್ತ ನೋಡಿದೆ. “ಅವಳು ಬರೋ ಹೊತ್ತಿಗೆ ನನ್ನ ಕೈಗಳನ್ನು ಕಟ್ಟಿಹಾಕಿಲ್ಲ ಅಂದರೆ ಮತ್ತೆ ಹಿಂಸಿಸುತ್ತಾಳೆ.” ಕೆನ್ನೆಗೆ ಬಾರಿಸಿದಂತಾಯಿತು. ಅವಳ ಕೈಗಳ ಕಟ್ಟನ್ನು ಬಿಡಿಸಿದರೂ ಆ ಪರಿಸರದಿಂದ ಅವಳಿಗೆ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅವಳಿಗೆ ಬೇರೆಯವರ ಕರುಣೆಯಿಂದ ಸಹಾಯಕ್ಕಿಂತ ಅಪಾಯವೇ ಹೆಚ್ಚಿತ್ತು. “ಬೇಗ ನನ್ನ ಕಟ್ಟಿಹಾಕು” ಅಂದಳು. ಅವಳು ಹೇಳಿದಂತೆ ಮಾಡದಿದ್ದರೆ ಕಚ್ಚಿ ಬಿಡ್ತಾಳೇನೋ ಅನ್ನಿಸಿ ಕಟ್ಟಿಹಾಕಿದೆ.

ಅಕಿರಾ ಕುರೋಸಾವಾ
ಜಪಾನಿನ ಖ್ಯಾತ ನಿರ್ದೇಶಕ. ’ರಾಶೋಮಾನ್’, ’ಇಕಿರು’, ’ಸೆವೆನ್ ಸಮುರಾಯ್’ ಅವರ ಪ್ರಖ್ಯಾತ ಸಿನಿಮಾಗಳಲ್ಲಿ ಕೆಲವು. ’ರ್‍ಯಾನ್’ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

(ಕನ್ನಡಕ್ಕೆ): ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ
ಕನ್ನಡದಲ್ಲಿ ಎಂ.ಎ ಮತ್ತು ಪಿ.ಎಚ್‌ಡಿ ಪದವೀಧರೆ. ಅನುವಾದದಲ್ಲಿ ಆಸಕ್ತಿ. ಅಬ್ಬಾಸ್ ಕಿಯರಸ್ತೋಮಿಯ ಕಿರು ಪದ್ಯಗಳ ಅನುವಾದ ಸಂಕಲನ ’ಹೆಸರಿಲ್ಲದ ಹೂ’, ಅನುವಾದಿತ ಲೇಖನಗಳ ಸಂಗ್ರಹ ’ಉರಿವ ಬನದ ಕೋಗಿಲೆಗಳು’ ಪ್ರಕಟವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...