Homeಅಂಕಣಗಳುಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

- Advertisement -
- Advertisement -

ಡಿಸೆಂಬರ್ 16, 2022ರ ಬೆಳ್ಳಂಬೆಳಗ್ಗೆ ಫಲಿಯಾನ ಗ್ರಾಮದ ರಜೌರಿ ಸೇನಾ ನೆಲೆಯ ಮುಂದೆಯೇ ಇಬ್ಬರು ದಲಿತರ ಮೃತ ದೇಹಗಳು ಪತ್ತೆಯಾದವು. ಈ ಘಟನೆಗೆ ಕಾರಣ ಉಗ್ರಗಾಮಿಗಳೆಂದು ಸೇನೆಯು ಹೇಳಿತು. ಆದರೆ ಅಲ್ಲಿನ ಗ್ರಾಮಸ್ಥರು ಮತ್ತು ದಲಿತ ಕುಟುಂಬಗಳು ಈ ಕೊಲೆಗೆ ಕಾರಣ ಸೇನೆಯೇ ಆಗಿದೆ ಎಂದು ಆರೋಪಿಸಿವೆ. ಉಗ್ರಗಾಮಿಗಳೆಂದು ಭಾವಿಸಿ ನಡೆಯುವ ವಿಚಾರಣಾ ರಹಿತ ಎನ್‌ಕೌಂಟರ್‌ಗಳ ಮಾದರಿಯಲ್ಲಿಯೇ ತಪ್ಪಾಗಿ ನಮ್ಮ ಮಕ್ಕಳನ್ನು ಸೇನೆ ಬಲಿ ಪಡೆದಿದೆ ಎಂಬುದೇ ಅವರ ಆರೋಪ. ಈ ಆರೋಪ ನೂರಕ್ಕೆ ನೂರು ಸುಳ್ಳಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರಿಗೆ ಉಗ್ರಗಾಮಿಗಳೆಂಬ ಹಣೆಪಟ್ಟಿ ಕಟ್ಟಿ ಎನ್‌ಕೌಂಟರ್ ಮಾಡಿ ದೇಹವನ್ನೇ ನಾಪತ್ತೆಯಾಗಿಸುವ ತಂತ್ರ ಇಂದು ನಿನ್ನೆಯದಲ್ಲ. ಈ ಬಗ್ಗೆ ಹಲವು ಆಪಾದನೆಗಳಿಗೆ ಮತ್ತು ಕೆಲವು ಪ್ರಕರಣಗಳು ವಿಚಾರಣೆ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಭಾರತ ಸರ್ಕಾರ ಈ ದಲಿತ ಯುವಕರ ಹತ್ಯೆಯನ್ನು ತನಿಖೆ ಮಾಡಲು ತಂಡವನ್ನು ರಚಿಸಿದೆ. ತನಿಖೆ ನಡೆಯುತ್ತಿದೆ. ಸತ್ಯ ಆದಷ್ಟು ಬೇಗ ಬೆಳಕಿಗೆ ಬರಬಹುದೇ? ಕಾದು ನೋಡಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾಸವಿರುವ ಹಿಂದೂ-ಮುಸ್ಲಿಮರು ಕಾಶ್ಮೀರಿಯತ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರುತ್ತಿದ್ದಾರಾದರೂ ಆಳುವ ಇಚ್ಛೆ ಇರುವ ಸರ್ಕಾರಗಳಿಗೆ ಅವರ ಒಗ್ಗಟ್ಟು ಮುಳುವಾಗಿದೆ. ಹಾಗಾಗಿ ಹಿಂದೂ ವರ್ಸಸ್ ಮುಸ್ಲಿಂ ಮಾಡಲು ಶತಾಯಗತಾಯ ಎರಡೂ ಕಡೆಯ ಕುತಂತ್ರ ರಾಜಕಾರಣಿಗಳು ಶ್ರಮ ಪಡುತ್ತಿದ್ದಾರೆ. ಅದಿರಲಿ, ಇಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ ಸೇನೆಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಹಿಂದೂ ಮೇಲ್ಜಾತಿ ಹಾಗೂ ದಲಿತರ ಜೀವಗಳು ಒಂದೇ ಎಂಬ ಭಾವನೆ ಇಲ್ಲದಿರುವುದು. ಭಾರತೀಯರಿಗೆ ಜಾತಿ ಪದ್ಧತಿ ಆಚರಣೆಯು ಸಹಜವಲ್ಲವೇ? ಅದು ಸೇನಾ ಮುಖ್ಯಸ್ಥರಾದರೇನು? ನ್ಯಾಯಾಧೀಶರಾದರೇನು? ಸರ್ಕಾರದ ಮಂತ್ರಿಯಾದರೇನು? ಎಲ್ಲರೂ ಇರುವೆಗಳೇ – ಜಾತಿ ಎಂಬ ಸಿಹಿಗೆ.

ಈಗಾಗಲೇ ಉಲ್ಲೇಖಿಸಿದಂತೆ ಡಿಸೆಂಬರ್ 16ನೇ ತಾರೀಕು ಜಮ್ಮುವಿನ ರಜೌರಿ ಬಳಿಯ ಫಲಿಯಾನ ಗ್ರಾಮದ ಸೇನಾ ಕ್ಯಾಂಪ್ ಮುಂಭಾಗ ಸುರೇಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಎಂಬ ಇಬ್ಬರು ದಲಿತ ಯುವಕರ ಮೃತದೇಹಗಳು ಬಿದ್ದಿದ್ದವು. ಆ ಎರಡು ದೇಹಗಳ ಮೇಲೆ ಗುಂಡಿನ ದಾಳಿಯಾಗಿತ್ತು. ಸೇನೆಯ ಡೆಪ್ಯುಟಿ ಕಮಿಷನರ್ ಆ ಇಬ್ಬರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಘೋಷಿಸಿದರು. ದಲಿತರ ಹೋರಾಟದಿಂದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರತಿ ದಲಿತ ಕುಟುಂಬಕ್ಕೆ ಹೆಚ್ಚುವರಿಯಾಗಿ ಘೋಷಿಸಿದರು. ಒಟ್ಟು ಆ ಎರಡು ದಲಿತ ಜೀವಗಳ ಬದಲಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದರು. ಇದು ದೇಶಾದ್ಯಂತ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿತ್ತರಗೊಳ್ಳಲಿಲ್ಲ.

ಈ ಘಟನೆಯಾದ 15 ದಿನಗಳ ನಂತರ ಅಂದರೆ, ಜನವರಿ 1, 2023ರಂದು ಅದೇ ರಜೌರಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದ್ದ ಧಂಗ್ರಿ ಎಂಬ ಹಳ್ಳಿಯೊಂದರಲ್ಲಿ 6 ಜನರ ಕೊಲೆಯಾಗಿತ್ತು. ಉಗ್ರಗಾಮಿ ಸಂಘಟನೆಯೊಂದು ಅವರನ್ನು ಅಮಾನವೀಯವಾಗಿ ಕೊಂದಿತ್ತು. ಹೊಸ ವರ್ಷದ ದಿನದಂದೇ ನಡೆದ ಈ ಘಟನೆಯಲ್ಲಿ ಪರಸ್ಪರ ಸಂಬಂಧಿಕರಾದ ವಿಹಾನ್ ಶರ್ಮ, ಸಮೀಕ್ಷ ಶರ್ಮ, ಸತೀಶ್ ಕುಮಾರ್, ದೀಪಕ್ ಕುಮಾರ್, ಪ್ರೀತಮ್ ಲಾಲ್ ಮತ್ತು ಶಿಶುಪಾಲ್ ಕೊಲೆಗೀಡಾಗಿದ್ದರು. ಮಾಧ್ಯಮಗಳು ಎಂದಿನಂತೆ ನಮ್ಮಲ್ಲೇ ಮೊದಲು ಎಂದು ಮುಗಿಬಿದ್ದು ಸುದ್ದಿ ಮಾಡಿದವು. ಖಂಡಿತಾ ಮಾಡಲೇಬೇಕು. ಎಲ್ಲರ ಜೀವಕ್ಕೂ ಬೆಲೆ ಇದೆ. ಈ ಘಟನೆ ಆದ ತಕ್ಷಣ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆ ಹಳ್ಳಿಗೆ ಬೇಟಿ ನೀಡಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಈ ಮೇಲಿನ ಎರಡೂ ಘಟನೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಾಕು, ಭಾರತದ ಸೇನೆಯಲ್ಲೂ ಜಾತಿಪದ್ಧತಿ ಅದೆಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದು ಮನದಟ್ಟಾಗುತ್ತದೆ. ಲೆಫ್ಟಿನೆಂಟ್ ಗವರ್ನರ್ 6 ಜನರು ಮೃತರಾದ ಹಳ್ಳಿಗೆ ದೌಡಾಯಿಸಿದ ಮುಖ್ಯ ಕಾರಣ ಅವರೆಲ್ಲರೂ ಬ್ರಾಹ್ಮಣ ಕುಟುಂಬದವರಾಗಿದ್ದರು ಎಂಬುವುದಾಗಿತ್ತು. ಆದರೆ ಕಜೌರಿಯಲ್ಲಿ ಮೃತಪಟ್ಟವರು ದಲಿತರಾದ ಕಾರಣ ಗವರ್ನರ್ ಅವರಿಗೆ ಅಷ್ಟು ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಮನಸ್ಸಾಗಲಿಲ್ಲ. ಪರಿಹಾರ ಘೋಷಿಸುವಲ್ಲಿಯೂ ಸೇನಾ ಮುಖ್ಯಸ್ಥರು ತಾರತಮ್ಯವೆಸಗಿದ್ದಾರೆ. ಬ್ರಾಹ್ಮಣರಿಗೆ 10 ಲಕ್ಷ ರೂ, ದಲಿತರಿಗೆ 6 ಲಕ್ಷ ರೂ. ಅದೂ ಹೋರಾಟ ಮಾಡಿದರೆ ಮಾತ್ರ! ಸೇನಾ ನೆಲೆಯ ಮುಂದೆಯೇ ಹೆಣವಾದ ದಲಿತರು ಸುದ್ದಿಯಾಗುವುದೇ ಇಲ್ಲ. ಸೇನಾ ನೆಲೆಯಿಂದ 7 ಕಿಲೋಮೀಟರ್ ದೂರದಲ್ಲಿ ನಡೆದ ಶೂಟೌಟ್ ಸುದ್ದಿಯಾಗುತ್ತದೆ. ಎರಡೂ ಘಟನೆಯೂ ನಡೆಯಬಾರದಿತ್ತು. ಎರಡೂ ಘಟನೆಯನ್ನು ಮನುಷ್ಯರಾದವರು ಖಂಡಿಸಬೇಕು. ಸಮಾನ ಆದ್ಯತೆ ನೀಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ದಲಿತರಿಗೆ ಬದುಕಿದ್ದಾಗಲೂ ಸಮಾನ ಸ್ಥಾನವಿಲ್ಲ. ಸತ್ತ ಮೇಲೂ ಸಮಾನ ಸ್ಥಾನವಿಲ್ಲ ಎನ್ನುತ್ತಾರೆ ಕಜೌರಿಯ ಗ್ರಾಮಪಂಚಾಯತ್ ಅಧ್ಯಕ್ಷರು.

ಮನೋಜ್ ಸಿನ್ಹಾ

ಈ ಎರಡು ಘಟನೆಗೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ನಿಲುವು ಸಹ ಬಹಿರಂಗಗೊಂಡಿದೆ. ಒಕ್ಕೂಟ ಸರ್ಕಾರದ ಗೃಹ ಮಂತ್ರಿಯಾದ ಅಮಿತ್ ಶಾ ಜನವರಿ 13, 2023ರಂದು 6 ಬ್ರಾಹ್ಮಣರನ್ನು ಕೊಂದಿದ್ದ ಧಂಗ್ರಿ ಗ್ರಾಮಕ್ಕೆ ಬೇಟಿ ನೀಡಿ ಆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ವೇಳಾಪಟ್ಟಿ ನಿಗದಿಪಡಿಸಿಕೊಂಡಿದ್ದರು. ವಾಯುಗುಣ ಸರಿ ಇಲ್ಲದ ಕಾರಣ ಹವಾಮಾನ ಇಲಾಖೆಯು ಪ್ರಯಾಣವನ್ನು ರದ್ದುಗೊಳಿಸಿದ್ದರಿಂದಾಗಿ ನೊಂದುಕೊಂಡ ಅಮಿತ್ ಶಾ ಫೋನ್ ಮೂಲಕವೇ 6 ಸಂತ್ರಸ್ತ ಕುಟುಂಬದವರೊಟ್ಟಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ನಿಮ್ಮೊಟ್ಟಿಗೆ ನಮ್ಮ ಸರ್ಕಾರವಿದೆ ಎಂಬ ಭರವಸೆ ನೀಡಿದರು. ನಿಜಕ್ಕೂ ಈ ಬೆಳವಣಿಗೆ ಸ್ವಾಗತಾರ್ಹ. ಪ್ರತಿಯೊಬ್ಬ ಭಾರತೀಯರ ನೋವಿಗೆ ದನಿಯಾಗಬೇಕಿರುವುದು ಪ್ರಗತಿಪರ ಸರ್ಕಾರದ ಹೊಣೆಯಾಗಿರುತ್ತದೆ. ಆದರೆ ಅಮಿತ್ ಶಾ ಅವರಿಗೆ ಕಜೌರಿಯಲ್ಲಿ ಕೊಲೆಯಾದ 2 ದಲಿತ ಯುವಕರ ಕುಟುಂಬ ನೆನಪಾಗಲಿಲ್ಲವಲ್ಲ ಏಕೆ? ಅವರ ಮನೆಗೆ ಭೇಟಿ ನೀಡುವುದಿರಲಿ, ಕನಿಷ್ಠ ಪಕ್ಷ ಫೋನ್ ಮಾಡಿ ವಿಚಾರಿಸಿಕೊಳ್ಳಲಿಲ್ಲವೇಕೆ? ದಲಿತ ಕುಟುಂಬಗಳಿಗೇನು ಸಾಂತ್ವನ ಮಾಡುವ ಅವಶ್ಯಕತೆ ಇಲ್ಲವೆಂಬುದು ಅಮಿತ್ ಶಾ ಹಾಗೂ ಮೋದಿಯವರ ಸರ್ಕಾರದ ನಿಲುವೇ? ಈ ಎಲ್ಲಾ ಪ್ರಶ್ನೆಗಳನ್ನು ಮೃತ ದಲಿತ ಯುವಕರ ಕುಟುಂಬಸ್ಥರು ಕೇಳುತ್ತಿದ್ದಾರೆ. ಆದರೆ ಈ ಎರಡು ಬಡಪಾಯಿ ದಲಿತ ಕುಟುಂಬದ ಪರವಾಗಿ ನಿಲ್ಲುವವರಾರು? ದಪ್ಪ ಚರ್ಮದ ಸರ್ಕಾರದ ಬಾಯಿ ಬಿಡಿಸುವವರಾರು?

ಈ ರೀತಿಯ ಬಹಿರಂಗ ತಾರತಮ್ಯಗಳು, ದಲಿತರನ್ನು ಈ ಸರ್ಕಾರ ಎರಡನೇ ದರ್ಜೆಯ ನಾಗರಿಕರನ್ನಾಗಿ ಪದೇಪದೇ ಕಾಣುತ್ತಿರುವುದನ್ನು ಸಾಬೀತುಪಡಿಸುತ್ತಿದೆ. ಈ ಸರ್ಕಾರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರಿ ದಲಿತರು ಒಂದೇ ಅಲ್ಲ. ಕಾಶ್ಮೀರಿ ಪಂಡಿತರಿಗಿರುವ ಬೆಲೆ ದಲಿತರಿಗಿಲ್ಲ. ವಿಪರ್ಯಾಸ ಹಾಗೂ ದುರಂತವೆಂದರೆ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಕಾಶ್ಮೀರಿ ಪಂಡಿತರ ಮೇಲೆಯೂ ಪ್ರಾಮಾಣಿಕ ಪ್ರೀತಿ ಇಲ್ಲ. ಹಿಂದೂ-ಮುಸ್ಲಿಂ ಎಂದು ಒಡೆದು ಆಳುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಪಂಡಿತರು ಬೇಕಾಗಿದ್ದಾರೆ. ಅವರಿಗೆ ವಸತಿ, ಮೂಲಸೌಕರ್ಯ, ಭದ್ರತೆ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಹೀಗೆ ಪಂಡಿತರ ಸ್ಥಿತಿಯೇ ಚಿಂತಾಜನಕವಾಗಿರುವಾಗ ದಲಿತರ ಸ್ಥಿತಿ ಕೇಳುವವರಾರು? ಕೇಳಬೇಕೆಂದರೆ ದಲಿತರು ಏನು ಮಾಡಬೇಕು? ಖಂಡಿತವಾಗಿಯೂ ಇದಕ್ಕೆ ಭಾರತ ಉತ್ತರಿಸಲೇಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...