Homeಕರ್ನಾಟಕ‘ಗೌರಿ’ ಸಾಕ್ಷ್ಯಚಿತ್ರ: "ದಡ ದಡ, ಒಂದಲ್ಲ ಎರಡಲ್ಲ... ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ..."

‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

- Advertisement -
- Advertisement -

ಹಾವೇರಿಯಲ್ಲಿ ಆಯೋಜನೆಯಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ನ್ಯಾಯಪಥ’ ವಾರಪತ್ರಿಕೆಯನ್ನು ಹಂಚುತ್ತಿದ್ದಾಗ ಅರವತ್ತು ದಾಟಿದ ವ್ಯಕ್ತಿಯೊಬ್ಬರು ಎದುರಾದರು. “ಗೌರಿಯವರ ಸಂಪಾದಕೀಯ ಬರಹಗಳ ’ಕಂಡದ್ದು ಕಂಡಹಾಗೆ’ ಒಂದು ಸಂಪುಟ ಮಾತ್ರ ನನ್ನ ಬಳಿ ಇದೆ, ಇನ್ನೊಂದಿಲ್ಲ. ಗೌರಿ ಹತ್ಯೆಯಾದ ಬಳಿಕ ಆಕೆಯ ಬರಹಗಳನ್ನು ಓದಲಾರಂಭಿಸಿದೆ. ಗೌರಿ ಎಂದರೆ ಏನು, ಆಕೆಯ ಬದುಕು ಎಂತಹ ದಿಟ್ಟತನದ್ದು ಎಂಬುದನ್ನು ತಿಳಿದು ಕಣ್ಣೀರು ಹಾಕಿದ್ದೇನೆ, ನಿಜಕ್ಕೂ ಈ ನಾಡಿಗೆ ದೊಡ್ಡ ನಷ್ಟ” ಎಂದು ಮರುಗಿದರು. ನಿಜ, ಗೌರಿಯ ಬಗ್ಗೆ ತಿಳಿದುಕೊಂಡಷ್ಟೂ, ಅವರು ನಂಬಿದ್ದ ಮತ್ತು ನಂಬಿದ್ದಂತೆ ನಡೆದ ರೀತಿಯ ಕುರಿತು ಅತೀವ ಗೌರವ ಹುಟ್ಟುತ್ತದೆ.

ಪೇಪರ್ ಸ್ಟಾಲ್, ಟೀ ಸ್ಟಾಲ್, ತರಕಾರಿ ಅಂಗಡಿ, ಕಟ್ಟಿಂಗ್ ಶಾಪ್, ಸಿನಿಮಾ ಮಾಲ್, ಸಂತೆ, ಜಾತ್ರೆ- ಹೀಗೆ ಎಲ್ಲಾದರೂ ಸಿಕ್ಕ ಅಪರಿಚಿತರಲ್ಲಿ “ಗೌರಿ ಲಂಕೇಶ್ ಜತೆಗೆ ಕೆಲಸ ಮಾಡುತ್ತಿದ್ದ ಟೀಮ್‌ನಲ್ಲಿ ಕೆಲಸ ಮಾಡುತ್ತಿರುವೆ” ಎಂದು ಪರಿಚಯ ಮಾಡಿಕೊಂಡ ತಕ್ಷಣ, “ಗೌರಿ ಲಂಕೇಶ್ ಕೊಂದರಲ್ಲ, ಅವರು ಸಿಕ್ಕರಾ? ಕೊಲೆ ಮಾಡಿದ್ದು ಏತಕ್ಕೆ? ಕೊಲೆಗಡುಕರಿಗೆ ಶಿಕ್ಷೆಯಾಯಿತಾ?”- ಎಂದು ಸಾಕಷ್ಟು ಜನ ಕೇಳಿದ್ದಾರೆ. ಗೌರಿ ಸಾವಿನ ನಂತರ ಜನಪದವಾಗಿಬಿಟ್ಟಿದ್ದಾರೆ, ದಂತಕತೆಯಾಗಿದ್ದಾರೆ. ಹತ್ಯೆಯಾದ ಗೌರಿ, ಅನೇಕರ ಹೃದಯದಲ್ಲಿ ಮರುಹುಟ್ಟು ಪಡೆದಿದ್ದಾರೆ.

ಕೋಮುವಾದಿಗಳು ಗೌರಿಯ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಗೌರಿ ಈ ನಾಡಿನ ಸೌಹಾರ್ದತೆಗಾಗಿ, ನೆಮ್ಮದಿಗಾಗಿ, ಶಾಂತಿಗಾಗಿ ದಣಿದ ಜೀವವೆಂಬುದನ್ನು ಚರಿತ್ರೆಯ ಪುಟಗಳಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಅವರ ಚಿಂತನೆ ಮತ್ತು ಬದುಕನ್ನು ದಾಖಲೀಕರಿಸುವ ಪ್ರಯತ್ನಗಳು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಲೇ ಇವೆ.

ನಮ್ಮದೇ ನೆಲದ ಮುಖ್ಯವಾಹಿನಿ ದೃಶ್ಯ ಮಾಧ್ಯಮಗಳು ಗೌರಿಯವರ ವ್ಯಕ್ತಿತ್ವದ ಬಗ್ಗೆ ಸಶಕ್ತವಾಗಿ ದಾಖಲಿಸುವ ಕೆಲಸ ಮಾಡಿವೆಯೇ? ಅದನ್ನು ಜನಸಾಮಾನ್ಯರಿಗೆ ತಲುಪಿಸಿವೆಯೇ? ಎಂದು ಕೇಳಿದರೆ ಉತ್ತರ ಅಸ್ಪಷ್ಟ. ಜನಸಮೂಹಕ್ಕೆ ಸುಲಭವಾಗಿ ತಲುಪಬಲ್ಲ, ಪ್ರಭಾವಿಸಬಲ್ಲ ದೃಶ್ಯ ಮಾಧ್ಯಮದ ಮೂಲಕ ಗೌರಿಯವರ ಹೋರಾಟದ ಬದುಕನ್ನು ಹೆಚ್ಚುಹೆಚ್ಚು ದಾಖಲಿಸಬೇಕಾಗಿದೆ. ಅಂತಹದ್ದೊಂದು ವಿನೂತನ ಮತ್ತು ಹೃದಯಸ್ಪರ್ಶಿ ಪ್ರಯೋಗವನ್ನು ಗೌರಿಯವರ ತಂಗಿ ಕವಿತಾ ಲಂಕೇಶ್ ಮಾಡಿದ್ದಾರೆ.

ಇಶಾ ಲಂಕೇಶ್ ಪ್ರೊಡಕ್ಷನ್‌ನಿಂದ ನಿರ್ಮಾಣವಾಗಿರುವ, ತನ್ನ ಸಹೋದರಿ ಗೌರಿಯ ಬಗ್ಗೆ ಕವಿತಾ ಲಂಕೇಶ್ ನಿರ್ದೇಶಿಸಿರುವ ’ಗೌರಿ’ ಸಾಕ್ಷ್ಯಚಿತ್ರ- ಗೌರಿಯವರ ಬದುಕು, ಹೋರಾಟ, ದಿಟ್ಟ ಪತ್ರಿಕೋದ್ಯಮ ಹಾಗೂ ಅವರ ಹತ್ಯೆಯ ಕುರಿತು ಬೆಳಕು ಚೆಲ್ಲುತ್ತದೆ. ಸಾಮಾನ್ಯ ಜನಕ್ಕೆ ಗೌರಿಯವರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಪರಿಚಯಿಸಿಕೊಡುತ್ತದೆ.

ಅಪರೂಪದ ದೃಶ್ಯಗಳನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರಕ್ಕೆ 2022ರ ಟೊರೊಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿಯೂ ದೊರತಿದೆ. ಕಳೆದ ಜನವರಿ 29ರಂದು ಗೌರಿ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಮ್ಮೆಲ್ಲರ ಭಾವಕೋಶದೊಳಗಿರುವ ಗೌರಿ, ಕಣ್ಣಾಲಿಗಳಲ್ಲಿ ಹೊರಬರುವುದಕ್ಕೆ ಈ ಸಾಕ್ಷ್ಯಚಿತ್ರ ಕಾರಣವಾಯಿತು. ಪ್ರದರ್ಶನ ಮುಗಿದ ಬಳಿಕ ಗಾಢ ಮೌನ ಆವರಿಸಿತ್ತು.

ಗೌರಿಯವರ ಒಡನಾಡಿಗಳು, ಚಿಂತಕರು, ಹೋರಾಟಗಾರರು, ಸಹದ್ಯೋಗಿಗಳು, ಸರ್ಕಾರದ ಪ್ರತಿನಿಧಿಗಳು, ತನಿಖಾ ಅಧಿಕಾರಿಗಳು, ಪತ್ರಕರ್ತರು, ಸಂಬಂಧಿಕರು- ಹೀಗೆ ಮೊದಲಾದವರ ಅಭಿಪ್ರಾಯಗಳನ್ನು ಈ ಸಾಕ್ಷ್ಯಚಿತ್ರ ದಾಖಲಿಸಿದೆ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದ ಗೌರಿ, ತನ್ನ ತಂದೆಯ ಮರಣದ ನಂತರ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟರು; ಸವಾಲುಗಳನ್ನು ಎದುರಿಸಿದರು. ಲಂಕೇಶ್ ಪತ್ರಿಕೆಯ ಜವಾಬ್ದಾರಿಯಿಂದ ಹೊರಬಂದು ಗೌರಿ ಲಂಕೇಶ್ ಪತ್ರಿಕೆ ಆರಂಭಿಸಿದರು. ಸರ್ಕಾರಗಳನ್ನು ದಿಟ್ಟವಾಗಿ ಪ್ರಶ್ನಿಸಿ ಎದುರು ಹಾಕಿಕೊಂಡರು. ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಲೇಖಕಿ ಎಂ.ಎಸ್.ಆಶಾದೇವಿ ಹೇಳುತ್ತಾರೆ: “ಗೌರಿ, ತನ್ನ ತಂದೆಯಾದ ಲಂಕೇಶ ಅವರ ಮುಂದುವರಿಕೆಯಲ್ಲ, ಲಂಕೇಶ್ ಅವರ ಬೆಳವಣಿಗೆ”. ನಿಜ, ಲಂಕೇಶ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಆಕ್ಟಿವಿಸ್ಟ್-ಜರ್ನಲಿಸ್ಟ್ ಆದರು. ಚಳವಳಿಗಳ ಭಾಗವಾದರು. ಸಂಪಾದಕೀಯ ಬರಹಗಳಲ್ಲಿ ತಮ್ಮ ನಿಲುವುಗಳನ್ನು ದಿಟ್ಟವಾಗಿ ವ್ಯಕ್ತಪಡಿಸಿದರು.

ಎಂ.ಎಸ್ ಆಶಾದೇವಿ

ಕೋಮು ಸೌಹಾರ್ದದ ಬಗ್ಗೆ ಗೌರಿಯವರು ಆಡಿದ್ದ ಮಾತುಗಳ ಮೂಲಕ ಈ ಸಾಕ್ಷ್ಯಚಿತ್ರ ಆರಂಭವಾಗುತ್ತದೆ. ಕೊನೆ ಗಳಿಗೆಯವರಿಗೆ ತಾವು ನಂಬಿದ್ದ ವಿಚಾರಗಳಿಗೆ ಬದ್ಧರಾಗಿ ಬದುಕಿದ ಜೀವ ಗೌರಿ. ಸಂಘಪರಿವಾರ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿ ದರ್ಗಾದ ಸುತ್ತ ಕೋಮು ವಿಷಮತೆಯನ್ನು ಹುಟ್ಟಿಹಾಕಿದ ನಂತರದಲ್ಲಿ ಮಾಡಲಾದ ಸತ್ಯಶೋಧಕ ವರದಿಯಲ್ಲಿ ಗೌರಿ ಮುಂಚೂಣಿಯಲ್ಲಿದ್ದರು. ಬಾಬಾಬುಡನ್‌ಗಿರಿ ದರ್ಗಾಕ್ಕೆ ಭೇಟಿ ನೀಡಿದರು. ಅಳಿ ತಪ್ಪಿದ ಸೌಹಾರ್ದತೆಯನ್ನು ಮರುಸ್ಥಾಪಿಸಲು ಪ್ರಯತ್ನಪಟ್ಟರು. ಆ ಸಮಯದಲ್ಲಿ ಗೌರಿಯವರ ಮೇಲೆ ಸಂಘಪರಿವಾರದ ದುರುಳರು ಮಾಡಿದ ದಾಳಿಯ ದೃಶ್ಯಾವಳಿಗಳು (ದೀಪು ಅವರು ಚಿತ್ರಿಸಿದ್ದ ಫುಟೇಜ್‌ಗಳು) ಕರ್ನಾಟಕದಲ್ಲಿ ಕೋಮು ವಿಷಬೀಜ ಬಿತ್ತಿದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ.

ಕುದುರೆಮುಖವನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿದಾಗ ಆದಿವಾಸಿಗಳು ಕಂಗಾಲಾದರು. ಮೂಲ ನಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಿದಾಗ ನಕ್ಸಲ್ ಹೋರಾಟ ಬಲವಾಯಿತು. ಆದಿವಾಸಿಗಳನ್ನು, ನಕ್ಸಲ್ ಹೋರಾಟಗಾರರನ್ನು ಭೇಟಿಯಾಗಿ ಸಂಭಾಷಣೆ ನಡೆಸಿದ ಆ ಕಾಲದ ಅಪರೂಪದ ದೃಶ್ಯಗಳು ಈ ಸಾಕ್ಷ್ಯಚಿತ್ರದಲ್ಲಿವೆ. ಶಾಂತಿಗಾಗಿ ಶ್ರಮಿಸಿದ ಗೌರಿಯವರ ಹೋರಾಟ ಪರಿಣಾಮಕಾರಿಯಾಗಿ ದಾಖಲಾಗಿದೆ.

ಸಾಕೇತ್ ರಾಜನ್ ಹತರಾದ ಬಳಿಕ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಗೌರಿ ಕೈಹಾಕಿದರು. ಒಳ್ಳೆಯ ಆಶಯಕ್ಕಾಗಿ ನಡೆಯುತ್ತಿರುವ ಚಳವಳಿ ನಾಡಿನೊಳಗೆ ಇರಬೇಕೆಂದು ಆಶಿಸಿದಾಗ, ನಕ್ಸಲ್ ಹೋರಾಟಗಾರರು, “ಸರ್ಕಾರದ ಶರಣಾಗತಿ ನೀತಿ”ಯಲ್ಲಿನ ದೋಷಪೂರಿತ ಷರತ್ತುಗಳನ್ನು ಒಪ್ಪಲಿಲ್ಲ. ಆದರೆ ಎಚ್.ಎಸ್.ದೊರೆಸ್ವಾಮಿ, ಗೌರಿ ಲಂಕೇಶ್ ಮೊದಲಾದವರ ಪ್ರಯತ್ನದ ಫಲವಾಗಿ ಸರ್ಕಾರ ತನ್ನ ಶರಣಾಗತಿ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿತು.

ಕೊಡಗಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳ ಗುಡಿಸಲುಗಳನ್ನು ಧ್ವಂಸ ಮಾಡಿದ ಪ್ರಭುತ್ವ, ಆ ಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಿತು. ತಲ್ಲಣಿಸುವ ಜೀವವಾದ ಗೌರಿ, ಅಲ್ಲಿಗೆ ದೌಡಾಯಿಸಿದರು. ದಿಡ್ಡಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಾಯಿತು. ಸರ್ಕಾರ ನೊಂದವರ ಕೂಗನ್ನು ಆಲಿಸಿವಂತೆ ಆಯಿತು. ಮಾತುಕತೆಗಳು ನಡೆದವು. ಈ ಹೋರಾಟದ ಫಲವಾಗಿ ಈಗ ಪುನರ್ವಸತಿಯಾಗಿದೆ. ಅಲ್ಲಿನ ಆದಿವಾಸಿಗಳು ಕೊಂಚ ಉಸಿರಾಡುವಂತಾಗಿದೆ.

ಶಿವಸುಂದರ್

ಬಾಬಾ ಬುಡನ್‌ಗಿರಿ ದರ್ಗಾ ಹೋರಾಟದಿಂದ ಹಿಡಿದು, ವಿದ್ಯಾರ್ಥಿಗಳ ಹೋರಾಟಗಳವರೆಗೂ ಗೌರಿ ದಣಿದರು, ದುಡಿದರು. ಹೊಸ ತಲೆಮಾರಿನ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ, ಉಮರ್ ಖಾಲಿದ್ ಥರದ ಯುವಕರು ಕೈಗೆತ್ತಿಕೊಂಡ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಗೌರಿ ಬೆಂಬಲಿಸಿದರು. ಕನ್ಹಯ್ಯನವರನ್ನು ತನ್ನ ಕಂದ ಎಂದರು. ಇದೆಲ್ಲವನ್ನೂ ’ಗೌರಿ’ ಸಾಕ್ಷ್ಯಚಿತ್ರ ಮನಮಿಡಿಯುವಂತೆ ಚಿತ್ರಿಸಿದೆ.

ಪತ್ರಿಕೆಯ ಕುರಿತು ಗೌರಿ ಒಮ್ಮೆ ಹೇಳಿದ್ದನ್ನು ಲೇಖಕಿ ಕೆ.ಷರೀಫಾ ಅವರು ನೆನೆಯುತ್ತಾ, “ಷರೀಫಾ, ಎಲ್‌ಐಸಿಯ ಹಣ ಬಂದಿದೆ, ನನ್ನ ಕಚೇರಿ ಸಿಬ್ಬಂದಿಗಳಿಗೆ ಹಣವನ್ನು ಹಂಚಿ, ಪತ್ರಿಕೆ ಮುಚ್ಚಬೇಕೆಂದಿದ್ದೇನೆ ಎಂದಿದ್ದಳು”- ಎನ್ನುತ್ತಾ ಗದ್ಗದಿತರಾಗುತ್ತಾರೆ. ಅದನ್ನು ತೆರೆಯ ಮೇಲೆ ನೋಡಿ, ಪ್ರೇಕ್ಷಕರೂ ಭಾವುಕರಾಗಿಬಿಡುತ್ತಾರೆ.

ಚಿಂತಕ ಶಿವಸುಂದರ್ ಅವರು ಗೌರಿ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕುತ್ತಾ, “ಸಾಕಷ್ಟು ಸಲ ಆಕೆಯೊಂದಿಗೆ ಜಗಳವಾಡಿದ್ದಿದೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೆವು. ನಿಮ್ಮ ನಿಲುವು ಸರಿಯಲ್ಲ ಎಂದು ಹೇಳಿದ ಬಹುತೇಕ ಸಂದರ್ಭದಲ್ಲಿ ಅದನ್ನು ಒಪ್ಪಿಕೊಂಡಿದ್ದುಂಟು” ಎಂದು ನೆನೆಯುತ್ತಾರೆ.

ಇದನ್ನೂ ಓದಿ: ಕವಿತಾ ಲಂಕೇಶ್‌ ನಿರ್ದೇಶನದ “ಗೌರಿ” ಸಾಕ್ಷ್ಯಚಿತ್ರಕ್ಕೆ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿ

ಗೌರಿಯವರ ಪತ್ರಿಕೆಯಲ್ಲಿ ಕೆಲಸ ಮಾಡಿದ ಗಿರೀಶ್ ತಾಳಿಕೋಟೆ ಹೀಗೆ ನೆನೆಯುತ್ತಾರೆ: “ಪ್ರತಿ ಸಂಚಿಕೆಯು ಮುಗಿದ ಬಳಿಕ ನಮ್ಮೆಲ್ಲರಿಗೂ ಮೇಡಂ ಥ್ಯಾಂಕ್ಸ್ ಹೇಳುತ್ತಿದ್ದರು. ನಾವು ಸಂಬಳ ತೆಗೆದುಕೊಳ್ಳುತ್ತೇವೆ, ಹಾಗಿದ್ದರೂ ಏಕೆ ಈ ಥ್ಯಾಂಕ್ಸ್ ಹೇಳುತ್ತೀರಿ?- ಎಂದು ಕೇಳಿದ್ದೆ. ನಿಮ್ಮ ಕೆಲಸಕ್ಕೆ ನಾನು ಸಂಬಳ ಕೊಡಬಹುದು, ಆದರೆ ನಿಮ್ಮ ಕಮಿಟ್‌ಮೆಂಟ್‌ಗಲ್ಲ ಎಂದಿದ್ದರು”.

ಈಗ ಸಂಸ್ಕೃತಿ ಸಚಿವರಾಗಿರುವ ಸುನಿಲ್‌ಕುಮಾರ್ ಮತ್ತು ಇವರ ವಿರುದ್ಧ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿಕೊಂಡಿರುವ ಪ್ರಮೋದ್ ಮುತಾಲಿಕ್- ಆ ಕಾಲದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಆಡಿದ ಮಾತುಗಳ ವಿಡಿಯೊ ಫುಟೇಜ್‌ಗಳನ್ನೂ ಸಾಕ್ಷ್ಯಚಿತ್ರ ಒಳಗೊಂಡಿದೆ. ಗೋವಾ ಮತ್ತು ಮಹಾರಾಷ್ಟ್ರದವರೆಗೆ ಗೌರಿ ಹಂತಕರ ಜಾಲ ಹಬ್ಬಿರುವುದನ್ನು ತೆರೆದಿಡಲಾಗಿದೆ. ಅಂತಿಮವಾಗಿ ಗೌರಿ ಹತ್ಯೆಯಲ್ಲಿ ಹದಿನೆಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.

ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಗೌರಿ ಒಡನಾಡಿಗಳಾದ ವಿ.ಎಸ್.ಶ್ರೀಧರ್, ನೂರ್ ಶ್ರೀಧರ್, ಶಿವಸುಂದರ್, ಕೆ.ಎಲ್.ಅಶೋಕ್, ಪತ್ರಕರ್ತರಾದ ಆದಿತ್ಯ ಭಾರದ್ವಾಜ್, ದಿನೇಶ್ ಅಮಿನ್‌ಮಟ್ಟು, ಪಿ.ಸಾಯಿನಾಥ್, ವಿದ್ಯಾರ್ಥಿ ನಾಯಕರಾದ ಕನ್ಹಯ್ಯಕುಮಾರ್, ಜಿಗ್ನೇಶ್ ಮೇವಾನಿ, ಗೌರಿಯವರ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್ ಮತ್ತು ಅವರ ಮಗಳಾದ ಇಶಾ ಲಂಕೇಶ್, ಗೌರಿ ಹತ್ಯೆಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಬಾಲನ್ ಮೊದಲಾದವರ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರ ದಾಖಲಿಸಿದೆ. ಗೌರಿ ಮೊಮೊರಿಯಲ್ ಟ್ರಸ್ಟ್‌ನ ಕಾರ್ಯದರ್ಶಿಯಾದ ದೀಪು ಅವರು ಈ ಸಾಕ್ಷ್ಯಚಿತ್ರ ಮೂಡಿಬರಲು ಸಾಕಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದನ್ನು ಕವಿತಾ ಲಂಕೇಶ್ ಕಾರ್ಯಕ್ರಮದಲ್ಲಿ ಮನದುಂಬಿ ನೆನೆದರು. ದೀಪು ಅವರು ಸಾಕ್ಷ್ಯಚಿತ್ರದ ಛಾಯಾಗ್ರಾಹಕರಾಗಿಯೂ ಭಾಗಿಯಾಗಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನೋಡಿದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಾಕ್ಷ್ಯಚಿತ್ರ ಎಲ್ಲಿ ಲಭ್ಯವಿದೆ ಎಂದು ಆಸಕ್ತರು ಕೇಳುತ್ತಿದ್ದಾರೆ. ಆದಷ್ಟು ಬೇಗ ಇದು ಸಾರ್ವಜನಿಕವಾಗಿ ಲಭ್ಯವಾಗಿ, ಹೆಚ್ಚು ಹೆಚ್ಚು ಕಾಲೇಜುಗಳಲ್ಲಿ ಇದು ಪ್ರದರ್ಶನ ಕಾಣಬೇಕಿದೆ. ಆ ನಿಟ್ಟಿನಲ್ಲಿ ಯುವಕರು ಗೌರಿಯ ದಿಟ್ಟತನದ ಬಗ್ಗೆ, ಆ ದಿಟ್ಟತನ ಎದುರಿಸಿದ ಸವಾಲುಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಒಂದು ಗಂಟೆಯ ಈ ಸಾಕ್ಷ್ಯಚಿತ್ರ ನಮ್ಮ ಹೊಸ ತಲೆಮಾರಿನಲ್ಲಿ ಅರಿವಿನ ದೀಪ ಹಚ್ಚುತ್ತದೆ, ನಾವು ಕಳೆದುಕೊಂಡಿದ್ದು ಅನರ್ಘ್ಯ ರತ್ನವೆಂಬುದನ್ನು ನೆನೆಸುತ್ತದೆ, ಗೌರಿ ನಂಬಿದ್ದ ಪ್ರಜಾಸತ್ತಾತ್ಮಕ, ಸಂವಿಧಾತ್ಮಕ ಮೌಲ್ಯಗಳ ಉಳಿವು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಅದರ ಜೊತೆಗೆ ಕರ್ನಾಟಕದಲ್ಲಿ ಕೋಮುವಾದ ಬೆಳೆದ ಸಂದರ್ಭದ ಒಂದು ದಾಖಲೆಯಾಗಿಯೂ ಈ ಸಾಕ್ಷ್ಯಚಿತ್ರ ಮಹತ್ವದ್ದಾಗಿದೆ. ಅದರ ಸುತ್ತ ಹುಟ್ಟಿದ ಹೋರಾಟಗಳ ನೆನಪಿನ ದಾಖಲೆಯಾಗಿಯೂ ಕೂಡ!

’ಗೌರಿ’ ಸಾಕ್ಷ್ಯಚಿತ್ರ ನೋಡುನೋಡುತ್ತಾ ಕಿಕ್ಕಿರಿದು ತುಂಬಿದ್ದ ಸಭಾಂಗಣ ಸ್ತಬ್ಧವಾಯಿತು. ನಮ್ಮ ಭಾವಕೋಶದೊಳಗೆ ಅವಿತಿರುವ ಗೌರಿ ಕಣ್ಣೀರಾಗಿ ಹೊರಬಂದರು. ಇಂಥದ್ದೊಂದು ಸಾಕ್ಷ್ಯಚಿತ್ರ ನೀಡಿದ ಹೋರಾಟದ ಎಲ್ಲ ಜೀವಗಳಿಗೆ ಮತ್ತು ಪ್ರಮುಖವಾಗಿ ಕವಿತಾ ಅವರಿಗೆ ಶರಣು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...