Homeಮುಖಪುಟಅಂಧಕಾರದಲ್ಲಿ ಬೆಳಕಿನ ಕಿರಣ; ಚುನಾವಣಾ ಆಯುಕ್ತರ ನೇಮಕಾತಿಯ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅಂಧಕಾರದಲ್ಲಿ ಬೆಳಕಿನ ಕಿರಣ; ಚುನಾವಣಾ ಆಯುಕ್ತರ ನೇಮಕಾತಿಯ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

- Advertisement -
- Advertisement -

ಕೊನೆಗೂ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯುಕ್ತರ ನೇಮಕಾತಿಯಲ್ಲಿದ್ದ ತಪ್ಪುಗಳನ್ನು ಸುಧಾರಿಸಿದೆ.

ಸಂವಿಧಾನ ಜಾರಿಯಾಗಿ 83 ವರ್ಷಗಳ ನಂತರ, ಕೊನೆಗೂ ಸಾಂವಿಧಾನಿಕ ವ್ಯವಸ್ಥೆಯ ಒಂದು ಗಂಭೀರ ಅಸಂಬದ್ಧತೆಯನ್ನು ಕಳೆದ ವಾರ ಸರ್ವೋಚ್ಚ ನ್ಯಾಯಾಲಯವು ಸರಿಪಡಿಸಿದೆ. ಒಂದು ಐತಿಹಾಸಿಕ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಪೀಠವು ಸರ್ವಸಮ್ಮತಿಯಿಂದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಬದಲಿಸಿದೆ. ಈಗ ಈ ನೇಮಕಾತಿಗಳು ಸರಕಾರದ ಕೈಯ್ಯಲ್ಲಿ ಮಾತ್ರ ಇರುವುದಿಲ್ಲ. ಈ ನೇಮಕಾತಿಯನ್ನು ಮೂರು ಸದಸ್ಯರ ಸಮಿತಿಯ ಶಿಫಾರಸ್ಸಿನ ಮೇಲೆ ಮಾಡಲಾಗುವುದು, ಅದರಲ್ಲಿ ಪ್ರಧಾನಮಂತ್ರಿ ಮತ್ತು ಲೋಕಸಭೆಯಲ್ಲಿನ ವಿರೋಧಪಕ್ಷದ ಮುಖಂಡರ ಹೊರತಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಇರಲಿದ್ದಾರೆ. ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಒಂದು ಶಾಶ್ವತ ಕಾನೂನಾತ್ಮಕ ವ್ಯವಸ್ಥೆ ಮಾಡುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸಂವಿಧಾನ ರಚಿಸುವ ಸಮಯದಲ್ಲೇ ಈ ಅಸಂಬದ್ಧತೆಯ ಬಗ್ಗೆ ಸಂವಿಧಾನ ಸಭೆಯ ಸದಸ್ಯರಿಗೆ ಗೊತ್ತಾಗಿತ್ತು. ಸಂವಿಧಾನ ಸಭೆಯಲ್ಲಿ ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿರಬೇಕು ಹಾಗೂ ಅದನ್ನು ಸರಕಾರದ ಒತ್ತಡದಿಂದ ಮುಕ್ತವಾಗಿಟ್ಟರಬೇಕು ಎಂಬುದರ ಬಗ್ಗೆ ಸಹಮತವಿತ್ತು. ಆದರೆ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರ ನೇಮಕಾತಿಯ ಬಗ್ಗೆ ಒಮ್ಮತಕ್ಕೆ ಬರಲಾಗಲಿಲ್ಲ. ಕೊನೆಗೆ ಸಂವಿಧಾನದಲ್ಲಿ ಬರೆಯಲಾಗಿದ್ದೇನೆಂದರೆ, ಚುನಾವಣಾ ಆಯುಕ್ತರ ನೇಮಕಾತಿಯ ಸ್ವತಂತ್ರ ಪ್ರಕ್ರಿಯೆ ರಚಿಸಲು ಸಂಸತ್ತು ಒಂದು ಕಾನೂನನ್ನು ಸೃಷ್ಟಿಸಬೇಕೆಂದು.

ಇದನ್ನು ಸಂವಿಧಾನದ ಪರಿಚ್ಛೇದ 324(2)ನಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ: ’ಚುನಾವಣಾ ಆಯೋಗವು ಮುಖ್ಯ ಚುನಾವಣಾ ಕಮಿಷನರ್‌ನನ್ನೂ ಮತ್ತು ಬೇಕಿದ್ದಲ್ಲಿ, ರಾಷ್ಟ್ರಪತಿಯವರು ಕಾಲಕಾಲಕ್ಕೆ ನಿಗದಿಪಡಿಸಬಹುದಾದಷ್ಟು ಚುನಾವಣಾ ಕಮಿಷನರಗಳನ್ನು ಹೊಂದಿರತಕ್ಕದ್ದು, ಮುಖ್ಯ ಚುನಾವಣಾ ಕಮಿಷನರ್‌ಅನ್ನು ಮತ್ತು ಇತರ ಚುನಾವಣಾ ಕಮಿಷನರುಗಳ ನೇಮಕಾತಿಯನ್ನು ಆ ಬಗ್ಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು ರಾಷ್ಟ್ರಪತಿಯವರು ಮಾಡತಕ್ಕದ್ದು.’

ಅಸಂಬದ್ಧತೆ ಹುಟ್ಟಿದ್ದು ಹೇಗೆಂದರೆ, ಈ ವಿಷಯದಲ್ಲಿ ಸಂಸತ್ತು ಆ ಕಾನೂನನ್ನು ರಚಿಸಲೇ ಇಲ್ಲ. ಇಂತಹ ಯಾವುದೇ ಸ್ವತಂತ್ರ ವ್ಯವಸ್ಥೆಯು ಇಲ್ಲದಿರುವದರಿಂದ ಸಂವಿಧಾನಕ್ಕೆ ಗೌರವ ನೀಡುವ ಅರ್ಥ ಏನಾಯಿತೆಂದರೆ, ಈ ನೇಮಕಾತಿಯನ್ನು ರಾಷ್ಟ್ರಪತಿ ಮಾಡುತ್ತಾರೆ ಎಂದು. ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಇದರ ಅರ್ಥ ಕೊನೆಗೆ ಏನಾಯಿತೆಂದರೆ, ಈ ತೀರ್ಮಾನ ಸರಕಾರ ಮಾಡುವುದು ಎಂದು. ಕಳೆದ 7 ದಶಕಗಳಿಂದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರ ನೇಮಕಾತಿಗಳು ಪ್ರಧಾನಮಂತ್ರಿಗಳ ಇಷ್ಟದ ಅನುಗುಣವಾಗಿ ಆಗುತ್ತಿತ್ತು. ವಿಪರ್ಯಾಸವೇನೆಂದರೆ, ಇದರ ನಡುವೆ ಚುನಾವಣಾ ಆಯೋಗಕ್ಕಿಂತ ಕಡಿಮೆ ಸಾಂವಿಧಾನಿಕ ಅಧಿಕಾರವುಳ್ಳ ಅನೇಕ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಸುಧಾರಣೆ ಆಯಿತು. ಲೋಕಪಾಲ್ ಮತ್ತು ಸೂಚನಾ ಆಯೋಗದ ಕಾನೂನುಗಳ ನೇಮಕಾತಿಯ ವ್ಯವಸ್ಥೆಯಲ್ಲಿ ಸರಕಾರದ ಜೊತೆಗೆ ವಿರೋಧಪಕ್ಷಗಳ ನಾಯಕರು ಮತ್ತು ನ್ಯಾಯಾಂಗವನ್ನು ಜೋಡಿಸಲಾಯಿತು. ಇಲ್ಲಿಯ ತನಕ, ಸಿಬಿಐದ ನಿರ್ದೇಶಕ ಮತ್ತು ಪ್ರೆಸ್ ಕೌನ್ಸಿಲ್‌ನ ಅಧ್ಯಕ್ಷರ ನೇಮಕಾತಿಯಲ್ಲಿಯೂ ಸರಕಾರ ಮತ್ತು ವಿಪಕ್ಷ ಎರಡರ ಪಾತ್ರಗಳ ಸಮತೋಲನವನ್ನು ಸಾಧಿಸಲಾಗಿದೆ. ಆದರೆ ಚುನಾವಣಾ ಆಯೋಗದಂತಹ ನಿರ್ಣಾಯಕ ಸಂಸ್ಥೆಯಲ್ಲಿ ನೇಮಕಾತಿಯು ಆಡಳಿತದಲ್ಲಿರುವ ಪಕ್ಷಗಳ ಇಷ್ಟದಂತೆ ನಡೆಯುತ್ತಿತ್ತು.

ಆರಂಭದಲ್ಲಿ ಸರಕಾರವು ಈ ಸ್ಥಾನದ ಮತ್ತು ಲೋಕತಾಂತ್ರಿಕ ಗೌರವವನ್ನು ಗಮನದಲ್ಲಿಟ್ಟುಕೊಂಡು ನಿಷ್ಪಕ್ಷಪಾತ ವ್ಯಕ್ತಿಗಳ ನೇಮಕಾತಿ ಮಾಡಿದವು. ಆದರೆ ಆಗಾಗ ಸರಕಾರದ ಭಟ್ಟಂಗಿ ಅಧಿಕಾರಿಗಳು ಚುನಾವಣಾ ಆಯೋಗದಲ್ಲಿ ನೇಮಕಗೊಳ್ಳುವ ದೂರು ಕೇಳಿಬರುತ್ತಿತ್ತು. ಮೋದಿ ಸರಕಾರವು ಎಲ್ಲೋ ಸ್ವಲ್ಪ ಮಿಕ್ಕಿ ಉಳಿದಿದ್ದ ಗೌರವವನ್ನು ಬದಿಗೆ ಸರಿಸಿ ಅನೇಕ ಏಕಪಕ್ಷೀಯ ನೇಮಕಾತಿಗಳನ್ನು ಮಾಡಿತು, ಅದರಿಂದ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಸಂದೇಹ ಹುಟ್ಟಿಕೊಂಡವು. ಕಳೆದ ಕೆಲವು ವರ್ಷಗಳಲ್ಲಿ ಸಾಂವಿಧಾನಿಕ ಸಂಸ್ಥೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಹುಟ್ಟಿಕೊಳ್ಳುವಂತೆ ಚುನಾವಣಾ ಆಯೋಗವೇ ಅನೇಕ ತೀರ್ಮಾನಗಳನ್ನು ಕೈಗೊಂಡಿತು. ಚುನಾವಣಾ ಆಯೋಗವು ಬಿಜೆಪಿಯ ಕಚೇರಿಯಾಗಿದೆ ಎಂಬ ಆರೋಪಗಳು ಸಾರ್ವಜನಿಕ ಚರ್ಚೆಗಳಲ್ಲಿ ಕೇಳಿಬಂದವು. ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಗಳಿಗೆ ಜಗತ್ತಿನಲ್ಲೇ ಉದಾಹರಣೆಯಾಗಿದ್ದ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂದು ನಿಸ್ಸಂದೇಹವಾಗಿ ಒಂದು ನಾಚಿಕೆಗೇಡಿನ ಅವಧಿಯಾಗಿತ್ತು.

ಇದನ್ನೂ ಓದಿ: ಚುನಾವಣಾ ಆಯೋಗದೊಂದಿಗೆ ₹ 2,000 ಕೋಟಿ ಡೀಲ್ ಮಾಡಿದ ಶಿಂಧೆ ಬಣ: ಸಂಜಯ್ ರಾವತ್ ಆರೋಪ

ಈ ಅಸಂಬದ್ಧತೆಗೆ ಪರಿಹಾರವಾಗಿ, ಪದೇಪದೇ ಚುನಾವಣಾ ಸುಧಾರಣೆಯ ವರದಿ ಮತ್ತು ಶಿಫಾರಸ್ಸುಗಳಲ್ಲಿ ಒತು ನೀಡಲಾಯಿತು. ಚುನಾವಣಾ ಆಯೋಗದ ಸಾಂವಿಧಾನಿಕ ಸ್ಥಾನಗಳಲ್ಲಿ ನೇಮಕಾತಿಯನ್ನು ಒಂದು ನಿಷ್ಪಕ್ಷಪಾತ ವ್ಯವಸ್ಥೆಯ ಮೂಲಕ ಮಾಡಬೇಕೆಂದು ಎಪ್ಪತ್ತರ ದಶಕದ ತಾರಕುಂಡೆ ಸಮಿತಿಯಿಂದ ಹಿಡಿದು ಭಾರತ ಸರಕಾರ ನೇಮಕ ಮಾಡಿದ ದಿನೇಶ ಗೋಸ್ವಾಮಿ ಸಮಿತಿ ಹಾಗೂ ಕಾನೂನು ಆಯೋಗದ ವರದಿಗಳಲ್ಲಿ ಅನೇಕ ಬಾರಿ ಶಿಫಾರಸ್ಸನ್ನು ಮಾಡಲಾಗಿತ್ತು. ಆದರೆ ಎಲ್ಲಾ ಆಡಳಿತ ಪಕ್ಷಗಳು ಹಾಗೂ ಸರಕಾರಗಳು ಕಣ್ಣುಮುಚ್ಚಿ ಕುಳಿತವು ಹಾಗೂ ಸಂವಿಧಾನದ ನಿರ್ದೇಶನವನ್ನು ಉಲ್ಲಂಘನೆ ಮಾಡುತ್ತಾ ಮುಂದುವರಿದವು.

ಕೊನೆಗೆ, ಲೋಕತಾಂತ್ರಿಕ ಸುಧಾರಣೆಗೆ ಕಟಿಬದ್ಧ ಸ್ವತಂತ್ರ ಸಂಘಟನೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿತು ಹಾಗೂ ಅವರ ಪರವಾಗಿ ಪ್ರಸಿದ್ಧ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತರ ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದವು. ಸರಕಾರವು ತನ್ನ ವರಿಷ್ಠ ವಕೀಲರನ್ನು ಮುಂದೆ ನಿಲ್ಲಿಸಿ ನ್ಯಾಯಾಲಯವು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಒತ್ತಾಯಿಸಿತು. ಕೂದಲು ಸೀಳುವ ಕೆಲಸ ಮಾಡುತ್ತ ಸಂವಿಧಾನದ 324ರ ಅನುಚ್ಛೇದದಲ್ಲಿ ಸಂಸತ್ತಿಗೆ ಕಾನೂನು ರಚಿಸುವ ಅವಕಾಶ ಇಲ್ಲ ಎಂದು ಹೇಳಲಾಯಿತು. ಕಾನೂನು ರಚಿಸುವ ಕೆಲಸ ಸರ್ವೋಚ್ಚ ನ್ಯಾಯಾಲಯದ್ದು ಅಲ್ಲ ಎಂದೂ ವಾದ ಮಂಡಿಸಲಾಯಿತು. ಒಂದು ವೇಳೆ ಸಂಸತ್ತು ಕಾನೂನು ರಚಿಸದೇ ಇದ್ದರೆ ಈ ಕೊರತೆಯನ್ನು ಸರ್ವೋಚ್ಚ ನ್ಯಾಯಾಲಯ ತುಂಬಲು ಆಗುವುದಿಲ್ಲ ಎಂದು ಕೂಡ ಹೇಳಿದರು. ಒಂದು ವೇಳೆ ನ್ಯಾಯಾಲಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ, ನಂತರ ಏನೆಲ್ಲ ವಿಷಯಗಳು ಹೊರಬಿದ್ದಾವು ಎಂಬ ಬೆದರಿಕೆಯನ್ನೂ ನ್ಯಾಯಾಲಯದೆದುರಿಗೆ ಪ್ರದರ್ಶಿಸಲಾಯಿತು. ಸರಕಾರ ಇದರಿಂದ ಎಷ್ಟು ಹೆದರಿಕೊಂಡಿತ್ತೆಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗದಲ್ಲಿ ಸರಕಾರ ಒಂದು ವಿಚಿತ್ರವಾದ ನೇಮಕಾತಿ ಮಾಡಿತು. ಈ ಪ್ರಕರಣ ವಿಚಾರಣೆ ನಡೆಯುತ್ತಿರುವಾಗ ಚುನಾವಣಾ ಆಯೋಗದಲ್ಲಿ ಯಾವುದೇ ಹೊಸ ನೇಮಕಾತಿ ಮಾಡಬಾರದು ಎಂದು ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ ಕೂಡಲೇ, ಮರುದಿನ ಸರಕಾರ, ರಾಷ್ಟ್ರಪತಿಯ ಕೈಯ್ಯಿಂದ ಅರುಣ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಫರ್ಮಾನು ಜಾರಿ ಮಾಡಿಸಿತು. ಯಾವಾಗ ನ್ಯಾಯಾಲಯವು ಈ ನೇಮಕಾತಿಯ ಕಡತ ಕೊಡಿ ಎಂದು ಕೇಳಿತೋ, ಆಗ ತಿಳಿದಿದ್ದೇನೆಂದರೆ, 24 ಗಂಟೆಗಳ ಒಳಗೇ ಕಾನೂನು ಸಚಿವಾಲಯವು ನೇಮಕಾತಿಯ ಪ್ಯಾನಲ್ ರಚಿಸಿತು, ಪ್ರಧಾನಮಂತ್ರಿ ಅದರಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದರು, ಆ ವ್ಯಕ್ತಿ ಐಎಎಸ್‌ನಿಂದ ರಾಜೀನಾಮೆ ನೀಡಿದರು, ಆ ರಾಜೀನಾಮೆಯನ್ನು ಸ್ವೀಕರಿಸಲಾಯಿತು ಹಾಗೂ ಅವರ ಹೊಸ ನೇಮಕಾತಿಯ ಆದೇಶವನ್ನೂ ಜಾರಿಗೊಳಿಸಲಾಯಿತು. ಚುನಾವಣಾ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯ ಎಲ್ಲಾ ಕೊರತೆಗಳು ಈ ಒಂದು ಉದಾಹರಣೆಯಲ್ಲಿ ಸ್ಪಷ್ಟಗೊಂಡವು.

ಜಸ್ಟಿಸ್ ಕೆ.ಎಂ ಜೋಸೆಫ್ ಅವರ ಅಧ್ಯಕ್ಷತೆಯ ಈ ಪೀಠವು (ನ್ಯಾಯಮೂರ್ತಿ ಕೆ.ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್) ಒಮ್ಮತದಿಂದ ಸರಕಾರ ಮಂಡಿಸಿದ ಎಲ್ಲಾ ಕುತರ್ಕಗಳನ್ನು ತಳ್ಳಿಹಾಕಿತು. 378 ಪುಟಗಳ ಎರಡು ಏಕರೂಪದ ತೀರ್ಪುಗಳಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನ ನಡಾವಳಿ ಸಭೆಯ ಚರ್ಚೆ, ಸಂವಿಧಾನದ ಶಬ್ದಾವಳಿ ಹಾಗೂ ಇದಕ್ಕೆ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ಪ್ರತಿಯೊಂದು ಹಳೆಯ ತೀರ್ಪುಗಳನ್ನು ವಿವರವಾಗಿ ಚರ್ಚಿಸಿ ಎಲ್ಲಾ ಸಂದೇಹಗಳನ್ನು ನಿವಾರಿಸಲಾಗಿದೆ. 73 ವರ್ಷಗಳ ನಂತರ ಸಂವಿಧಾನ ಸಭೆಯ ಅಭಿಪ್ರಾಯವನ್ನು ಗೌರವಿಸುತ್ತ ಸ್ಪಷ್ಟಪಡಿಸಿದ್ದೇನೆಂದರೆ, ಚುನಾವಣಾ ಆಯೋಗದಂತಹ ಮಹತ್ವಪೂರ್ಣ ಸಾಂವಿಧಾನಿಕ ಸಂಸ್ಥೆಗೆ ನೇಮಕಾತಿಯನ್ನು ಸರಕಾರದ ಬೆರಳ ತುದಿಯ ಮೇರೆಗೆ ನಡೆಸುವುದು ಸಂವಿಧಾನದ ಆತ್ಮ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಉಲ್ಲಂಘನೆಯೆಂದು.

ಪ್ರಜಾಪ್ರಭುತ್ವಕ್ಕೆ ಅಪಾಯಗಳು ಸನ್ನಿಹಿತವಾಗುತ್ತಿರುವ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಂಧಕಾರದಲ್ಲಿ ಒಂದು ಬೆಳಕಿನ ಕಿರಣವನ್ನು ತಂದಂತಿದೆ. ಈಗ ಸಂಸತ್ತಿನಲ್ಲಿ ತರಾತುರಿಯಲ್ಲಿ ಯಾವುದೋ ಒಂದು ಕಾನೂನು ತಂದು ಈ ತೀರ್ಪಿನ ಪರಿಣಾಮ ಇಲ್ಲವಾಗುವಂತೆ ಮಾಡುವ ಬದಲಿಗೆ ಸರಕಾರವು ಈ ತೀರ್ಪಿನ ಭಾವನೆಯನ್ನು ಗೌರವಿಸುತ್ತದೆ ಎಂದು ನಿರೀಕ್ಷೆ ಮಾಡಬೇಕಿದೆ. ಹಾಗೂ ಈ ತೀರ್ಪಿನಲ್ಲಿ ಹೇಳಿರುವಂತೆ ಆಯೋಗದ ನಿಷ್ಪಕ್ಷಪಾತದ ಅನಿವಾರ್ಯಕ್ಕೆ ಸಂಬಂಧಿಸಿದ ಟಿಪ್ಪಣಿಗಳಿಂದ ಚುನಾವಣಾ ಆಯೋಗ ಸ್ವತಃ ಪಾಠ ಕಲಿತು ತನ್ನ ಸಾಂವಿಧಾನಿಕ ಗರಿಮೆಯ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂತಲೂ ಆಶಿಸಬೇಕಿದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...