ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡುತ್ತೇನೆ. ಅವರು ಸೂಚಿಸಿದವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಖ್ಯಾತ ಕನ್ನಡ ಸಿನಿಮಾ ನಟ ಸುದೀಪ್ ಘೋಷಿಸಿದ ಬೆನ್ನಲ್ಲೆ ಅವರ ಕಿಚ್ಚ ಸಿನಿಮಾದಲ್ಲಿ ರಾಜಕಾರಣಿಗಳನ್ನು ಬೈಯ್ಯುವ, ಸಿಎಂ ಖುರ್ಚಿಗೆ ಶಾಸಕರನ್ನು ಖರೀದಿಸುವುದನ್ನು ಖಂಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ, “ನಾನು ಮುಖ್ಯಮಂತ್ರಿಯಾಗಬೇಕು, ಅವನು ಮುಖ್ಯಮಂತ್ರಿಯಾಗಬೇಕು ಎಂದು ಒಬ್ಬೊಬ್ಬ ಎಂಎಲ್ಎಗಳನ್ನು ಪರ್ಚೇಸ್ ಮಾಡಲು ಕೋಟಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ ಈನನ್ಮಕ್ಕಳು. ಯಾರ್ಯಾರ ಹತ್ರ ಎಷ್ಟೆಸ್ಟು ಹೊಡೆದೆ? ಎಷ್ಟೆಷ್ಟು ತಿಂದೆ ಎಂದು ಹೇಳದೆ ಹೋದರೆ ನ್ಯಾಯ ಅಲ್ಲ ಅಲ್ವಾ? ಅವರುಗಳಿಗೂ ಗೊತ್ತಾಗಲಿ ಅವರ ರಕ್ತ ಹೀರಿ ನೀವು ಎಷ್ಟು ಹಣ ಸಂಪಾದನೆ ಮಾಡಿದ್ದೀರಿ ಅಂತ” ಎಂಬ ಡೈಲಾಗ್ಗಳು ಕಂಡುಬರುತ್ತವೆ.
ಮುಂದುವರಿದು ರಾಜ್ಯವನ್ನು ಒಳ್ಳೆ ರೀತಿಯಲ್ಲಿ ಆಳಲಿ ಎಂದು ನೀವೆಲ್ಲ ಓಟ್ ಹಾಕಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದೀರಿ ಈ ಸಿಂಗಾರಪ್ಪನನ್ನು. ಇವನು ಎಷ್ಟು ದುಡ್ಡು ಮಾಡಿದ್ದಾನೆ ಅಂತ ನಿಮಗೆಲ್ಲರಿಗೂ ಎಂದು ಹೇಳಿದ್ದ ಸುದೀಪ್ ಡೈಲಾಗ್ ಅನ್ನು ಇಂದಿನ ರಾಜಕಾರಣಕ್ಕೆ ಅನ್ವಯಿಸಿ ಜನ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಕೇವಲ ಅರ್ಧ ಗಂಟೆ ಸಮಯದಲ್ಲಿ ಸಾವಿರಾರು ಜನ ವಿಡಿಯೋ ಷೇರ್ ಮಾಡಿರುವುದು ಕಂಡುಬಂದಿದೆ.
ವಿಡಿಯೋ ಹಂಚಿಕೊಂಡಿರುವ ಹಿರಿಯ ಲೇಖಕರಾದ ಪುರಷೋತ್ತಮ ಬಿಳಿಮಲೆಯವರು, “ಈ ಜನ ಬಹಳ ಕ್ರಿಯೇಟಿವ್ ಇದ್ದಾರಪ್ಪಾ! ಬಾಪ್ರೇ.. ವಾಟ್ಸಾಪ್ ತುಂಬಾ ಇದುವೇ.. ಇವರ ಸಿನೇಮಾ ಒಂದೂ ನೋಡಿರಲಿಲ್ಲ. ಇವತ್ತು ನೋಡಬೇಕು! ಸಖತ್ ಇಸ್ಟೈಲ್” ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಪ್ರಚಾರ ಸಭೆಯಲ್ಲಿ ಕಿಚ್ಚ ಸುದೀಪ್ ಭಾಷಣದ ತುಣುಕು ಎಂದು ಸಿಕಂದರ್ ವಿಡಿಯೋ ಹಂಚಿಕೊಂಡಿದ್ದಾರೆ.
ಬಿಜೆಪಿ ಪ್ರಚಾರ ಸಭೆಯಲ್ಲಿ ಕಿಚ್ಚ ಸುದೀಪ್ ಭಾಷಣದ ತುಣುಕು. ✌️ pic.twitter.com/BJcZejZNGR
— Sikandar-ಸಿಕಂದರ್ (@SikkuTweets) April 5, 2023
ಸುದೀಪ್ ಥರದ ನಟರು ಒಂದು ರಾಜಕೀಯ ನಿಲುವು ತೆಗೆದುಕೊಂಡರೆ ಅದನ್ನು ಧೈರ್ಯವಾಗಿ ಹೇಳುವ ಬದ್ಧತೆಯನ್ನೂ ತೋರಬೇಕು. ಇವತ್ತಿನ ಅವರ ಪತ್ರಿಕಾಗೋಷ್ಟಿಯ ಸಾರಾಂಶ ಏನೆಂದರೆ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅದಕ್ಕೆ ಕಾರಣ ಏನೇ ಇರಲಿ, ಅವರು ಈ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂಬುದು ದಿಟ. ಇಷ್ಟನ್ನು ನೇರವಾಗಿ ಹೇಳುವ ಬದಲು, ನಾನು ರಾಜಕೀಯಕ್ಕೆ ಬಂದಿಲ್ಲ, ಪಾರ್ಟಿ ಸೇರಿಲ್ಲ, ವೈಯಕ್ತಿಕ ಸಂಬಂಧ, ಸಹಾಯ-ಋಣ ಲಂಗು ಲೊಟ್ಟೆ ಅನ್ನೋದು ಒಂಥರಾ ಹೇಡಿತನ. ಸುದೀಪ್ ಗೆ ಬಿಜೆಪಿ ಅಂತಲ್ಲ, ಯಾವುದೇ ಪಾರ್ಟಿ ಸೇರುವ ವೈಯಕ್ತಿಕ ಆಯ್ಕೆ, ಹಕ್ಕು ಇದ್ದೇ ಇರುತ್ತದೆ. ಆದರೆ ತನಗೆ ಯಾವುದೇ ರಾಜಕೀಯ ನಿಲುವು ಇಲ್ಲ ಎಂಬಂತೆ ಮಾತನಾಡುತ್ತ ಒಂದು ಪಾರ್ಟಿಯನ್ನು ಬೆಂಬಲಿಸುವುದು ಗೋಸುಂಬೆತನ. ಇತರ ಪಕ್ಷವನ್ನು ಬೆಂಬಲಿಸುವ ತನ್ನ ಅಭಿಮಾನಿಗಳು ಎಲ್ಲಿ ದೂರ ಹೋಗುತ್ತಾರೋ ಎಂಬ ಲೆಕ್ಕಾಚಾರ ಅವರನ್ನು ಕಾಡುತ್ತಿರಬಹುದು. ಇದನ್ನು ಸಮಯಸಾಧಕತನ ಅಂತಾರೆ. ಸುದೀಪ್ ಗೆ ಇದು ಬೇಡವಾಗಿತ್ತು. ಒಂದೇ ಗೆರೆ ನಂಬು, ಇಲ್ಲದೇ ಇದ್ದರೆ ನೆರೆ ನಂಬು ಎಂಬುವ ಮಾತೊಂದಿದೆ. ಸುದೀಪ್ ಮಧ್ಯೆ ನಿಂತಿದ್ದಾರೆ, ಅಂಜುಬುರುಕನಂತೆ. ಸದಾ ಎಲ್ಲರಿಗೂ ಬೋಧನೆ ಮಾಡುವ ಸುದೀಪ್ ಅವರಿಗೆ ಇಷ್ಟು ಮಾತ್ರ ತಿಳಿಯದೇ ಹೋಯ್ತು ಎನ್ನುವಂತಿಲ್ಲ. ಇದು ಗೊತ್ತಿದ್ದೇ ತಂದುಕೊಂಡಿರುವ ಸನ್ನಿವೇಶ. ಅಂದಹಾಗೆ ಸುದೀಪ್ ಬಿಜೆಪಿಗೆ ಪ್ರಚಾರ ಮಾಡುವುದರಿಂದ ಅವರು ರಾಜಕೀಯವಾಗಿಯೂ ಸಾರ್ವಜನಿಕ ಜೀವನಕ್ಕೆ ಬಂದಿದ್ದಾರೆ. ಹೀಗಾಗಿ ಟೀಕೆ, ವಿಮರ್ಶೆಗಳು ಹೆಚ್ಚಲಿವೆ. ಅದನ್ನು ಎದುರಿಸಲೂ ಅವರು ಸಜ್ಜಾಗಿರಬೇಕು ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂ ಬರೆದಿದ್ದಾರೆ.
ಇದನ್ನೂ ಓದಿ: ಮಾಮ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ಕೊಡುತ್ತೇನೆ: ನಟ ಸುದೀಪ್