ಬಸವರಾಜ ಬೊಮ್ಮಾಯಿಯವರನ್ನು ನಾನು ಮಾಮ ಎಂದು ಚಿಕ್ಕ ವಯಸ್ಸಿನಿಂದ ಹಾಗೆ ಕರೆದು ಅಭ್ಯಾಸ ಆಗಿದೆ. ಇದರಲ್ಲಿ ನನ್ನ ನಿಲುವು, ರಾಜಕೀಯ ಇಲ್ಲ. ಚಿತ್ರರಂಗದಲ್ಲಿ ನನ್ನ ಕಷ್ಟದ ದಿನಗಳಲ್ಲಿ ಕೆಲವೇ ಕೆಲವರು ನನ್ನ ಜೊತೆ ನಿಂತಿದ್ದರು. ಅವರಲ್ಲಿ ಮಾಮ ಬಸವರಾಜ ಬೊಮ್ಮಾಯಿಯವರು ಒಬ್ಬರು. ನಾನು ಅವರ ಪರವಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಲು ಪತ್ರಿಕಾಗೋಷ್ಟಿಯಲ್ಲಿ ಇದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ನನಗೆ ಗಾಡ್ಫಾದರ್ ಯಾರೂ ಇರಲಿಲ್ಲ. ಆಗ ಮಾಮ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದರು. ಅವರು ನನಗೆ ಬೆಂಬಲ ಕೊಟ್ಟಿದ್ದರು. ಈಗ ನಾನು ನನ್ನ ಬೆಂಬಲವನ್ನು ಅವರಿಗೆ ನೀಡಲು ಬಂದಿದ್ದೇನೆ. ನನ್ನ ಕೆಲವು ಸ್ನೇಹಿತರುಗಳಿದ್ದಾರೆ. ಅವರ ಪರವಾಗಿ ನಿಲ್ಲುತ್ತೇನೆ ಎಂದು ಸುದೀಪ್ ಹೇಳಿದರು.
ನನಗೆ ಪಕ್ಷ ಕರೆದಿಲ್ಲ. ಬೊಮ್ಮಾಯಿ ಸರ್ ಕರೆದಿದ್ದಾರೆ. ಅವರ ಪರವಾಗಿ ಬಂದಿದ್ದೇನೆ ಎಂದು ಸುದೀಪ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಮಾಧ್ಯಮಗಳು ಮಾಡಿದ್ದ ಊಹೆ ಸತ್ಯವಾಗಿದೆ. ನಿಮಗೆ ಅಭಿನಂದನೆಗಳು. ಕಿಚ್ಚ ಸುದೀಪ್ ಅವರು ಇವತ್ತು ತಮ್ಮ ವಿಚಾರ ಮತ್ತು ನಿಲುವನ್ನು ಹಂಚಿಕೊಳ್ಳುತ್ತಾರೆ ಎಂದು ಮೊದಲು ಹೇಳಿದ್ದ ಬಸವರಾಜ ಬೊಮ್ಮಾಯಿಯವರು ಆನಂತರ ಅವರು ಯಾವುದೇ ಪಕ್ಷ ಸೇರಿಲ್ಲ. ನನಗೆ ಮೊದಲಿಂದಲೂ ಅವರೊಂದಿಗೆ ಸಂಬಂಧ ಇರುವುದರಿಂದ ಅವರೊಟ್ಟಿಗೆ ಮಾತನಾಡಿ ನಮ್ಮ ಪಕ್ಷ ಸೇರದಿದ್ದರೂ ನಿಮ್ಮ ಪ್ರಚಾರ ಅಗತ್ಯವಿದೆ ಎಂದು ಮನವಿ ಮಾಡಿದ್ದೆ. ಆಗ ಸುದೀಪ್ ರವರು ನಿಮಗೆ ಪ್ರಚಾರ ಮಾಡುತ್ತೇನೆ ಎಂದಿದ್ದರು. ಅದರರ್ಥ ನಮ್ಮ ಪಕ್ಷಕ್ಕೂ ಪ್ರಚಾರ ಮಾಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೆಲವು ಶಕ್ತಿಗಳು ಸೇರಿದರೆ ಒಳ್ಳೆಯದಾಗುತ್ತದೆ ಎಂದರೆ ಮಾಡುತ್ತೇನೆ. ಅವರು ಪಕ್ಷಕ್ಕೆ ಮಾಡಿ ಅಂದರೆ ಅದಕ್ಕೂ ಮಾಡುತ್ತೇನೆ. ಆದರೆ ಇಡೀ ರಾಜ್ಯದಲ್ಲಿ ಮಾಡಲು ಆಗುವುದಿಲ್ಲ. ಎಷ್ಟೊಂದು ಎಸ್ಟಿ ಕ್ಷೇತ್ರಗಳು ಇವೆ, ಅಲ್ಲೆಲ್ಲ ಹೋಗಲು ಸಾಧ್ಯವಿಲ್ಲ ಎಂದು ಸುದೀಪ್ ಹೇಳಿದರು.
ಬಸವರಾಜ ಬೊಮ್ಮಾಯಿಯವರು ಯಾವುದೇ ಪಕ್ಷದಲ್ಲಿದ್ದರೂ ಅವರಿಗೆ ನಾನು ಬೆಂಬಲ ಕೊಡುತ್ತೇನೆ ಎಂದು ನಟ ಸುದೀಪ್ ಸ್ಪಷ್ಟಪಡಿಸಿದರು.
ಪ್ರಕಾಶ್ ರಾಜ್ರವರು ಸುದೀಪ್ ಮಾರಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬುದಕ್ಕೆ ಉತ್ತರಿಸಿದ ಅವರು, “ಪ್ರಕಾಶ್ ರಾಜ್ರವರು ಅದ್ಭುತ ಕಲಾವಿದರು. ಅವರೊಟ್ಟಿಗೆ ರನ್ನ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮುಂದೆ ಅವರೊಟ್ಟಿಗೆ ಯಾವ ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದೇನೆ” ಎಂದರು.
ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅನಿವಾರ್ಯಕ್ಕೆ ಚುನಾವಣೆಗೆ ನಿಲ್ಲುವುದಿಲ್ಲ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸುವುದಾದರೆ ಮೊದಲೇ ಘೋಷಿಸುತ್ತೇನೆ ಎಂದರು.
ಇದನ್ನೂ ಓದಿ; ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಸ್ನೇಹಿತರ ಪರ ಪ್ರಚಾರ ಮಾಡುತ್ತೇನೆ ಅಷ್ಟೇ: ಸುದೀಪ್ ಸ್ಪಷ್ಟನೆ