ಪುನೀತ್ ಕೆರೆಹಳ್ಳಿ ಫೇಸ್ ಬುಕ್ ಖಾತೆಯನ್ನು ನಾವು ಡಿಲೀಟ್ ಮಾಡಿಸಿಲ್ಲ. ಬದಲಿಗೆ ತಾನೇ ಡಿಆಕ್ಟಿವೇಟ್ ಮಾಡಿಕೊಂಡಿದ್ದಾನೆ. ಅಲ್ಲದೇ ಫೇಸ್ಬುಕ್ ಲೈವ್ನಲ್ಲಿ ಪೊಲೀಸರು ಎಫ್ಐಆರ್ ತಿದ್ದಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾನೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಪುನೀತ್ ಕೆರೆಹಳ್ಳಿ ಮತ್ತು ಆತನ ನಾಲ್ವರು ಸಹಚರರನ್ನು ರಾಜಸ್ಥಾನದಲ್ಲಿ ಬಂಧಿಸಿರುವುದರ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಎಫ್ಐಆರ್ ದಾಖಲಿಸಿದ ನಂತರ ಅದನ್ನು ತಿದ್ದುವ ಅಧಿಕಾರಿ ಯಾರಿಗೂ ಇಲ್ಲ. ನಾವು ಆತನ ಮೇಲೆ ಎರಡು ಎಫ್ಐಆರ್ ದಾಖಲಿಸಿದ್ದೀವಿ. ಇನ್ನು ಪೊಲೀಸರು ನನ್ನನ್ನು ವಿಚಾರಣೆಗೆ ಕರೆದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಆದರೆ ಆತ ಎರಡು ದಿನ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ” ಎಂದು ಎಸ್ಪಿ ತಿಳಿಸಿದ್ದಾರೆ.
ಆತನ ನೈತಿಕ ಪೊಲೀಸ್ಗಿರಿ ವಿಚಾರ ಕುರಿತ ಮಾತನಾಡಿದ ಅವರು ಆತನ ಮೇಲೆ ಅದಕ್ಕಾಗಿ 341 ಸೆಕ್ಷನ್ ಹಾಕಿದ್ದೇವೆ ಎಂದರು. ಅಲ್ಲದೆ ಸಾರ್ವಜನಿಕರು ಯಾರೂ ನೈತಿಕ ಪೊಲೀಸ್ ಗಿರಿ ತೋರಿಸುವ ಅವಶ್ಯಕತೆ ಇಲ್ಲ. ಎಲ್ಲಾದರೂ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದರೆ ದಯವಿಟ್ಟು ಪೊಲೀಸರ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ಅಕ್ರಮ ಚಟುವಟಿಕೆ ಎಸಗುವವರ ಮೇಲೆ ಪೊಲೀಸರು ಶೇ. ನೂರರಷ್ಟು ಕ್ರಮ ಕೈಗೊಳ್ಳುತ್ತೇವೆ. ಹಾಗಾಗಿ ನೀವು ಯಾರೂ ನೈತಿಕ ಪೊಲೀಸ್ಗಿರಿ, ಹಿರೋಇಸಂ ತೋರಿಸಲು ಹೋಗಬೇಡಿ. ಹಾಗೆ ಮಾಡಿದರೆ ನಿಮ್ಮ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವರ್ಷದಲ್ಲಿ ಅಕ್ರಮ ಗೋ ಸಾಗಣೆ ವಿರುದ್ಧ ಈಗಾಗಲೇ 12 ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ನಮ್ಮ ಗಮನಕ್ಕೆ ಬಂದ ಯಾವುದನ್ನು ನಾವು ಬಿಡುವುದಿಲ್ಲ. ಆದರೆ ಸಾರ್ವಜನಿಕರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದರು.
ಸದ್ಯಕ್ಕೆ ಕೃತ್ಯದಲ್ಲಿ ಭಾಗಿಯಾದ ರಾಷ್ಟ್ರೀಯ ರಕ್ಷಣೆ ಪಡೆಯ ಪುನೀತ್ ಕೆರೆಹಳ್ಳಿ ಸೇರಿ, ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ ಅಂಬಿಗಾರ್ ಮತ್ತು ರಾಯಚೂರಿನ ಸುರೇಶ್ ಕುಮಾರ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರು ಪರಾರಿಯಾಗಲು ಸಹಕರಿಸಿದವರು ಕಂಡು ಬಂದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇವರಿಗೆ ರಾಜಕೀಯ ಪಕ್ಷಗಳ ಅಥವಾ ರಾಜಕಾರಣಿಗಳ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಕಂಡುಬಂದಿಲ್ಲ. ಆದರೆ ಆ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ; ಇದ್ರೀಸ್ ಪಾಶ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಕೊನೆಗೂ ಅರೆಸ್ಟ್
sp acting only man purely backup hindu activist and belongs to anekal taluk.
allready he was worked at cb pur dist most useless