ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೈಎಸ್ ವಿ ದತ್ತ ಅವರಿಗೆ ಟಿಕೆಟ್ ಕೈ ತಪ್ಪಿದ ಬಳಿಕ ಬೇಸರಗೊಂಡಿದ್ದರು. ಇದೀಗ ಮತ್ತೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ನಿಂದ ಟಿಕೆಟ್ ಸಿಗದಿದ್ದಕ್ಕೆ ಮುನಿಸಿಕೊಂಡ ದತ್ತ ತನ್ನ ಬೆಂಬಲಿಗರೊಂದಿಗೆ ಸಭೆ ಕರೆದು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿದ್ದರು. ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿಯೂ ಹೇಳಿದ್ದರು. ಆದರೆ ಪಕ್ಷೇತರರಾಗಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ ಹಾಗಾಗಿ ಜೆಡಿಎಸ್ನತ್ತ ಮುಖ ಮಾಡಿದ ದತ್ತ ಅವರು, ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದರು. ದೇವೇಗೌಡರ ಬಳಿ ದತ್ತ ಅವರು, ”ಕಾಂಗ್ರೆಸ್ನಲ್ಲಿ ಅನ್ಯಾಯ ಆಗೋಯ್ತು” ಎಂದು ಅಳಲು ತೋಡಿಕೊಂಡು, ಪಕ್ಷಕ್ಕೆ ವಾಪಾಸ್ ಆಗುವ ಅಭಿಲಾಷೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ದತ್ತ ಮಾತನಾಡಿದ್ದು, ”ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ನನಗೆ ಹೇಳಿದ್ದಾರೆ. ಹಾಗಾಗಿ ಅವರ ಮಾತಿಗೆ ಬೆಲೆ ಕೊಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆದಿದ್ದೇನೆ. ಎಲ್ಲರ ಸಮ್ಮತಿಯೊಂದಿಗೆ ಜೆಡಿಎಸ್ ಸೇರಿದ್ದು, 18ರಂದು ನಾಮಪತ್ರ ಸಲ್ಲಿಸಲಿದ್ದೇನೆ” ಎಂದು ದತ್ತ ಹೇಳಿದ್ದಾರೆ.
ಇದನ್ನೂ ಓದಿ: ‘ಕೈ’ ತಪ್ಪಿದ ಟಿಕೆಟ್; ಏ.9ರಂದು ಅಭಿಮಾನಿಗಳೊಂದಿಗೆ ವೈಎಸ್ವಿ ದತ್ತ ಸಭೆ
ಇದೀಗ ಎಚ್ಡಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರು ಗುರುವಾರ ವೈ ಎಸ್ ವಿ ದತ್ತ ಅವರ ಮನೆಗೆ ಭೇಟಿ ನೀಡಿ, ಅಧಿಕೃತವಾಗಿ ಅವರನ್ನು ಮರಳಿ ಜೆಡಿಎಸ್ಗೆ ಬರಮಾಡಿಕೊಂಡಿದ್ದಾರೆ.
ಈ ಬೆಳವಣಿಗೆಗೂ ಮುನ್ನ ಪ್ರಜ್ವಲ್ ರೇವಣ್ಣ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ನಿವಾಸಕ್ಕೆ ಭೇಟಿ ನೀಡಿದ್ದರು. ದತ್ತಾ ಜತೆ ಮಾತುಕತೆ ನಡೆಸಿದ ಬಳಿಕ ಹೇಳಿಕೆ ನೀಡಿದ್ದ ಪ್ರಜ್ವಲ್, ”ದತ್ತಾರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂದು ದೇವೇಗೌಡರು ಹೇಳಿದ್ದಾರೆ. ದತ್ತಾರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದ್ದೆವು. ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ ಎಂಬುದೂ ಗೊತ್ತಿತ್ತು. ಯಾವಾಗಲೂ ನಾನು ದತ್ತಾ ಅಣ್ಣ ಜೊತೆ ಇರುತ್ತೇನೆ” ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಸೋಲುಂಡ ಬಳಿಕ ದತ್ತ ಅವರಿಗೆ 2023ರ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಬಹುದು ಎನ್ನುವ ಕಾರಣಕ್ಕೆ ಜನವರಿ 15ರಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಪಕ್ಷ ಸೇರಿ ಮೂರು ತಿಂಗಳು ಕಳೆಯುವ ಮುನ್ನವೇ ದತ್ತ ಅವರು ಕಾಂಗ್ರೆಸ್ಸಿಗೂ ಗುಡ್ ಬೈ ಹೇಳಿದ್ದಾರೆ.
ದತ್ತ ಅವರು ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಲ್ಲಿಯೇ ಕಾಂಗ್ರೆಸ್ ಸೇರಿದ್ದರು. ಆದರೆ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುರಿತು ವಿವಾದಿತ ಹೇಳಿಕೆ ನೀಡಿದ್ದರು. ಅದೇ ಕಾರಣಕ್ಕೆ ಇದೀಗ ಟಿಕೆಟ್ ತಪ್ಪಲು ಕಾರಣವಾಗಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿವೆ. ಕಡೂರು ಕ್ಷೇತ್ರಕ್ಕೆ ಕೆಎಸ್ ಆನಂದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.