Homeಮುಖಪುಟಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

ಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

- Advertisement -
- Advertisement -

ಕಾಶ್ಮೀರವು ನಿಸ್ಸಂದೇಹವಾಗಿ ಭಾರತದ ಭಾಗ. ಈ ಮಾತನ್ನು ಹೇಳದೇ ಮುಂದುವರೆದರೆ ಕೆಲವರ ದಾಳಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹೇಳುತ್ತಲೇ ಇಲ್ಲ. ಏಕೆಂದರೆ, ಇಡೀ ಲೇಖನ ಅಂಥವರ ನಿಲುವನ್ನು ಬಯಲುಗೊಳಿಸಲಿದೆ. ಆದರೆ, ಬಹುಮುಖಿ ಸಂಸ್ಕೃತಿಯನ್ನು ಒಳಗೊಂಡ ಅಪೂರ್ವವಾದ ಸಂಕರ ಸಂಸ್ಕೃತಿಯನ್ನು ಒಳಗೊಂಡಿದ್ದ ಕಾಶ್ಮೀರವು ಭಾರತಕ್ಕೆ ಶಿಖರಪ್ರಾಯವಾದ ಬದುಕನ್ನು ಹೊಂದಿತ್ತು. ಆ ದೃಷ್ಟಿಯಿಂದ ಅದಿಲ್ಲದೇ ಭಾರತವು ಅಪೂರ್ಣ ಎಂದು ಯಾರಾದರೂ ಹೇಳಿದರೆ ಅದಕ್ಕೆ ಅರ್ಥವಿದೆ.

ಎರಡನೆಯ ಸಂಗತಿ, ಕಾಶ್ಮೀರವನ್ನು ಒಂದು ಸಮಸ್ಯೆಯನ್ನಾಗಿ ಮಾಡುವುದರಲ್ಲಿ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಪಾತ್ರ ದೊಡ್ಡದು. ಅದನ್ನು ಸೂಕ್ತವಾಗಿ ಬಗೆಹರಿಸಿದ್ದರೆ ಬಿಜೆಪಿ ಆರೆಸ್ಸೆಸ್‍ಗಾಗಲೀ, ಪಾಕಿಸ್ತಾನಕ್ಕಾಗಲೀ ಅದರಲ್ಲಿ ತಾವು ಇರುತ್ತಲೇ ಇರಲಿಲ್ಲ. ಈ ವಿವರಗಳು ಈ ಸಂಚಿಕೆಯ ಉಳಿದ ಲೇಖನಗಳಲ್ಲೂ ದೊರೆಯುವುದರಿಂದ ಅದರ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ.

ಆದರೆ, ಎರಡು ಸಂಗತಿಗಳನ್ನು ಇಲ್ಲಿ ಚರ್ಚಿಸಲೇಬೇಕಿದೆ. ಒಂದು ‘ಸ್ವಾಯತ್ತ’ ರಾಜ್ಯವಾಗಿದ್ದ ಕಾಶ್ಮೀರವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಪ್ರಕ್ರಿಯೆಯನ್ನು ಆಗಗೊಳಿಸಲು ಒಕ್ಕೂಟ ಸರ್ಕಾರವು ಅನುಸರಿಸಿದ ವಿಧಾನ ಯಾವುದು? ಆ ವಿಧಾನವು ನಮಗೆ ಯಾವ ಸೂಚನೆಗಳನ್ನು ನೀಡುತ್ತದೆ? ತನ್ನ ಅವಿಭಾಜ್ಯ ಅಂಗವೆಂದು ವಿವಿಧ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಹೇಳುತ್ತಾ ಬಂದ ಒಂದು ಭೂಭಾಗದ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ, ಆ ಭೂಭಾಗದಲ್ಲಿ ವಾಸಿಸುತ್ತಿರುವ ಜನರ ಅಭಿಪ್ರಾಯ ಕೇಳುವ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ತೋರಲಿಲ್ಲ ಎಂಬುದಷ್ಟೇ ಅಲ್ಲ. ಅವರನ್ನು ಕೇಳಿದರೆ ಆ ಭೂಭಾಗ ನಮ್ಮ ಜೊತೆಗೇ ಇರುವುದಿಲ್ಲ ಎಂಬ ಭಯ ಭಾರತದ ಆಳುವವರಿಗೆ ಇತ್ತೇ ಎಂಬುದು ಮುಖ್ಯವಾದ ಪ್ರಶ್ನೆ.

ಅಂತಹ ಭಯ ಇದ್ದುದರಿಂದಲೇ, ಈಗಾಗಲೇ ಅಲ್ಲಿದ್ದ ಅಸಂಖ್ಯಾತ ಸೇನೆ, ಅರೆಸೇನಾ ಪಡೆಗಳ ಜೊತೆಗೆ, ಸುಮಾರು 45 ಸಾವಿರ ಪಡೆಗಳನ್ನು ಒಂದು ವಾರದ ಮೊದಲು ಜಮಾವಣೆ ಮಾಡಲಾಯಿತು. ಕಾಶ್ಮೀರದ ಕುರಿತು ಸಂಸತ್ತಿನಲ್ಲಿ ಘೋಷಣೆ ಮಾಡುವ ದಿನ ಮತ್ತೆ 8 ಸಾವಿರ ಸೈನಿಕರನ್ನು ದೇಶದ ವಿವಿಧ ಭಾಗಗಳಿಂದ ವಿಮಾನಗಳಲ್ಲಿ ಕೊಂಡೊಯ್ದು ಇಳಿಸಲಾಯಿತು. ಆ ದಿನ ಕಾಶ್ಮೀರದಲ್ಲಿ ಇಂಟರ್‍ನೆಟ್, ಫೋನ್ ಇತ್ಯಾದಿ ಸಂಪರ್ಕ ಸಾಧನಗಳು ಇರಲಿಲ್ಲ. ಅಲ್ಲೇನು ನಡೆಯುತ್ತಿದೆ ಎಂಬ ಸುಳಿವು ಹೊರಜಗತ್ತಿಗೆ ಗೊತ್ತಾಗಲಿಲ್ಲ. ಆದರೆ, ಸೈನ್ಯದ ಸಂಪರ್ಕಕ್ಕೆ ಸೆಟಲೈಟ್ ಫೋನ್‍ಗಳನ್ನು ಒದಗಿಸಲಾಗಿತ್ತು.

ಅದಕ್ಕೆ ಹಿಂದಿನ ದಿನಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ ಭಯಗ್ರಸ್ತ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಕಫ್ರ್ಯೂ ವಾತಾವರಣವನ್ನು ಸಾಕಷ್ಟು ಅನುಭವಿಸಿ ಗೊತ್ತಿರುವ ಅವರು, ದಿನಗಟ್ಟಲೇ ಮನೆಯಿಂದ ಹೊರಗೆ ಬರದಿದ್ದರೂ ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರದಾಡಿದರು. ದಿನ ತುಂಬಿದ ಗರ್ಭಿಣಿಯರ ಹೆರಿಗೆಗೆ ಏನು ಮಾಡಬೇಕೆಂದು ಕುಟುಂಬದವರು ಚಿಂತಾಕ್ರಾಂತರಾಗಿದ್ದರು.

ಆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮತ್ತು ಇಂದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಜೊತೆಗೇ ಹಿಂದೆ ಅಧಿಕಾರ ಹಂಚಿಕೊಂಡಿದ್ದ ಇಬ್ಬರನ್ನು ಗೃಹಬಂಧನದಲ್ಲಿರಿಸಲಾಗಿತ್ತು ಮತ್ತು ಘೋಷಣೆಯ ನಂತರ ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರ ತಂದೆ (ಮುಫ್ತಿ ಮಹಮದ್ ಸಯೀದ್) ಈ ದೇಶದ ಗೃಹ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಭಯೋತ್ಪಾದಕರು ಅವರ ಮಗಳನ್ನು ಅಪಹರಿಸಿದ್ದರು. ಇನ್ನೊಬ್ಬರ ತಾತ (ಷೇಕ್ ಅಬ್ದುಲ್ಲಾ) ಒಬ್ಬ ಸೆಕ್ಯುಲರ್ ವ್ಯಕ್ತಿಯಾಗಿದ್ದು, ಕಾಶ್ಮೀರವು ಭಾರತದೊಂದಿಗೆ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಹೊತ್ತಿನ ಕಾಶ್ಮೀರದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ಅವರು ಶ್ರೀನಗರ ಲಾಲ್‍ಚೌಕ್‍ನಲ್ಲಿ ನೆಹರು ಪಕ್ಕ ನಿಂತು ತನ್ನ ಜನರಿಗೆ ಜನಮತಗಣನೆಯ ಭರವಸೆಯನ್ನು ಕೊಟ್ಟಿದ್ದರು. ಆ ಭರವಸೆಯನ್ನು ಸ್ವತಃ ನೆಹರೂ ಉಳಿಸಿಕೊಳ್ಳದೇ, ತನ್ನೀ ಸ್ನೇಹಿತನನ್ನು ಬಂಧಿಸಿ ದೂರದ ಊಟಿಯಲ್ಲಿಟ್ಟಿದ್ದರು.
ಇಂತಹ ಮೋಸಗಳನ್ನು ಅನುಭವಿಸಿದ ಕಾಶ್ಮೀರಿಗಳು ದಿನೇ ದಿನೇ ಭಾರತ ಸರ್ಕಾರದಿಂದ ದೂರ ಸರಿದಿದ್ದರು. ಆದರೆ, ಭಾರತದಿಂದ ಅಲ್ಲ.

ಕೆಲವೇ ತಿಂಗಳು ನಡೆಯುವ ಅಮರನಾಥ ಯಾತ್ರೆಯೊಂದರಿಂದಲೇ 50,000 ಕಾಶ್ಮೀರಿಗಳು ತಮ್ಮ ಇಡೀ ವರ್ಷದ ಬದುಕನ್ನು ನಡೆಸುತ್ತಾರೆ. ಭಾರತದ ಜೊತೆಗೆ ಅವರದ್ದು ಶತಮಾನಗಳ ಸಂಬಂಧ. ಅದನ್ನು ಮತ್ತಷ್ಟು ಬೆಸೆದುಕೊಂಡು ಪ್ರೀತಿಯಿಂದ ಅವರನ್ನು ಗೆಲ್ಲುವ ಪ್ರಯತ್ನವನ್ನು ಕಾಂಗ್ರೆಸ್ಸೂ ಮಾಡಲಿಲ್ಲ, ಬಿಜೆಪಿಯೂ ಮಾಡಲಿಲ್ಲ. ಇದ್ದುದರಲ್ಲಿ ವಿ.ಪಿ.ಸಿಂಗ್, ದೇವೇಗೌಡರು ಮತ್ತು ಬಿಜೆಪಿಯ ವಾಜಪೇಯಿ ಆ ಪ್ರಯತ್ನವನ್ನು ಒಂದು ಮಟ್ಟಿಗಾದರೂ ಮಾಡಿದ್ದರು.

ಅಳಿದುಳಿದಿದ್ದ ವಿಶ್ವಾಸವನ್ನು ಕಿತ್ತುಹಾಕುವ ಹಾಗೆ ಮೋದಿ – ಅಮಿತ್‍ಷಾ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ರೀತಿಯು ಇಡೀ ದೇಶಕ್ಕೆ ಒಂದು ಸಂದೇಶ ನೀಡಿದೆ. ದೇಶದ ಯಾವ ಭೂಭಾಗವನ್ನು ಬೇಕಾದರೂ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳಲು ತಾವು ಶಕ್ತರಾಗಿದ್ದೇವೆ ಎಂಬುದೇ ಆ ಸಂದೇಶ. ಅದಕ್ಕೆ ಬೇಕಿರುವುದು, ಆ ಭೂಭಾಗದ ಜನರನ್ನು ಉಳಿದವರ ಕಣ್ಣಿನಲ್ಲಿ ದುಷ್ಟರನ್ನಾಗಿಸುವುದು. ಅದಕ್ಕೆ ಪೂರಕವಾಗಿ ದುಡಿಯಲು ಭಾರೀ ದೊಡ್ಡ ಮಾಧ್ಯಮ ಶಕ್ತಿ ಅವರೊಂದಿಗಿರುವುದರಿಂದ ಸೈನ್ಯದ ಬಲ ಎರಡನೆಯ ಸುತ್ತಿನಲ್ಲಷ್ಟೇ ಬೇಕಾಗುತ್ತದೆ. ಭಾರತ ಒಕ್ಕೂಟದ ಮೂಲಭೂತ ಆಶಯಕ್ಕೆ ವಿರುದ್ಧವಾಗಿ ಈ ಕೆಲಸ ನಡೆಯುತ್ತಿದೆ ಎಂಬುದನ್ನು ದೇಶದ ಪ್ರತಿಯೊಂದು ರಾಜ್ಯದ ಜನರೂ ಅರಿಯಬೇಕಿದೆ.

ಕಾಶ್ಮೀರದ ಜನರನ್ನು ಪ್ರೀತಿಯಿಂದ ಗೆದ್ದು ಅವರನ್ನು ಭಾರತದ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹೊಣೆ ಈಗ ಸಂಪೂರ್ಣ ಭಾರತದ ಜನರದ್ದೇ ಆಗಿದೆ.

  • ಡಾ. ವಾಸು ಎಚ್.ವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...