ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಪ್ರತಿನಿಧಿಸುತ್ತಿರುವ ಕಲ್ಯಾಣ್-ಡೊಂಬಿವಲಿ ಲೋಕಸಭಾ ಕ್ಷೇತ್ರದ ವಿಚಾರವು ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಯಲ್ಲಿ ಬಿಕ್ಕಟ್ಟು ತಂದೊಡ್ಡಿದೆ.
ಶುಕ್ರವಾರ ಸಂಜೆ ಶ್ರೀಕಾಂತ್ ಶಿಂಧೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, “ಒಂದು ವೇಳೆ ಕ್ಷುಲ್ಲಕ ವಿಚಾರವಾಗಿ, ಕಲ್ಯಾಣ್ ಡೊಂಬಿವಲಿ ಕ್ಷೇತ್ರವನ್ನು ಪಡೆಯುವ ಬಗ್ಗೆ ಬಿಜೆಪಿ ಕಟಿಬದ್ಧವಾಗಿದ್ದರೆ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ” ಎಂದು ಹೇಳಿದ್ದಾರೆ.
“ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪೋಸ್ಟಿಂಗ್ ವಿಚಾರವನ್ನು ಬಿಜೆಪಿ ಮತ್ತು ಅದರ ಕಾರ್ಯಕರ್ತರು ದೊಡ್ಡದು ಮಾಡಬಾರದು. ಇದು ಸಣ್ಣ ವಿಚಾರ. ನಾವು ದೊಡ್ಡ ಗುರಿಗಾಗಿ ಕೆಲಸ ಮಾಡಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿ ಮಾಡಬೇಕು” ಎಂದು ಡಾ.ಶ್ರೀಕಾಂತ್ ಶಿಂಧೆ ತಿಳಿಸಿದ್ದಾರೆ.
ಡೊಂಬಿವಿಲಿಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ದಿವಾದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರು ಹಲವು ಯೋಜನೆಗಳನ್ನು ಉದ್ಘಾಟಿಸಿದ ಒಂದು ದಿನದ ನಂತರ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ನಡುವೆ ಬಿಕ್ಕಟ್ಟುಗಳು ಮುನ್ನೆಲೆಗೆ ಬಂದಿವೆ.
ಜಾಹೀರಾತು ಫಲಕಗಳು, ಪೋಸ್ಟರ್ಗಳಲ್ಲಿ ಶಿವಸೇನೆ ಉದ್ದೇಶಪೂರ್ವಕವಾಗಿ ದೇವೇಂದ್ರ ಫಡ್ನಾವೀಸ್ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದಕ್ಕೆ ಕೋಪಗೊಂಡ ಕಲ್ಯಾಣ್-ಡೊಂಬಿವಿಲಿ ಘಟಕದ ಬಿಜೆಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆಯವರ ನಿಕಟವರ್ತಿ ಎನಿಸಿರುವ ಮಾನ್ಪಾಡ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಬಾಗ್ಡೆ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಮುಖಂಡರು ನಿರ್ಣಯ ಅಂಗೀಕರಿಸಿದ್ದಾರೆ.
ಬಿಜೆಪಿಯ ಡೊಂಬಿವಿಲಿ ಪೂರ್ವ ಮಂಡಲದ ಅಧ್ಯಕ್ಷ ನಂದು ಜೋಶಿ ವಿರುದ್ಧ ದಾಖಲಾದ ದೌರ್ಜನ್ಯ ಪ್ರಕರಣವೇ ಈ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಜೋಶಿಯವರನ್ನು ರಾಜಕೀಯವಾಗಿ ಮುಗಿಸಲು ಶಿವಸೇನೆ ಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಜೋಶಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸುರೇಶ್ ಬಾಗ್ಡೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೂರಿದ್ದಾರೆ.
“ಕಳೆದ ಒಂಬತ್ತು ವರ್ಷಗಳಿಂದ ಕಲ್ಯಾಣ ಡೊಂಬಿವಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾ, ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದೇನೆ. ಜನರು ಹೆಚ್ಚಿನ ಮತ ಹಾಕಿದ್ದಾರೆ” ಎಂದು ಶ್ರೀಕಾಂತ್ ಶಿಂಧೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಮಾಯಾವತಿ, ಮಾಂಝಿ ವಿರೋಧ ಪಕ್ಷಗಳ ಮೈತ್ರಿಯಿಂದ ದೂರ ಉಳಿಯುವರೇ?
“ಬಿಜೆಪಿ ಉತ್ತಮ ಅಭ್ಯರ್ಥಿ ಹೊಂದಿದ್ದರೆ, ರಾಜೀನಾಮೆ ನೀಡಲು ಸಿದ್ಧ. ಆದರೆ ಬಿಜೆಪಿ ಸಣ್ಣ ವಿಷಯವನ್ನು ದೊಡ್ಡದು ಮಾಡಿ ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಗೊಂದಲ ಸೃಷ್ಟಿಸಬಾರದು” ಎಂದು ಶಿಂಧೆ ಮನವಿ ಮಾಡಿದ್ದಾರೆ.
ಇದು ಆರೆಸ್ಸೆಸ್-ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿದೆ. ಆದ್ದರಿಂದ ಬಿಜೆಪಿಯವರು ಈ ಲೋಕಸಭಾ ಸ್ಥಾನವನ್ನು ಮರಳಿ ಪಡೆಯಬೇಕು ಎಂದು ಬಯಸುತ್ತಿದ್ದಾರೆ.
ಕಲ್ಯಾಣ್-ಡೊಂಬಿವಲಿ ಕ್ಷೇತ್ರದ ಜವಾಬ್ದಾರಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ವಹಿಸಲಾಗಿದ್ದು, ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಮತ್ತು ಬಿಜೆಪಿ ಶಾಸಕ ರವೀಂದ್ರ ಚವಾಣ್ ಅವರು ಈ ಸ್ಥಾನದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.