Homeಮುಖಪುಟಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

ಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

- Advertisement -
- Advertisement -

1.ಬೆಳಕಿನವತಾರ

ನನ್ನ ಕನ್ನಡಿಯೊಳಗೆ ನಡೆದು ಬಂದವಳು
ಪ್ರೀತಿ ಮತ್ತು ಅದರ ಇತರ ಉತ್ಪನ್ನಗಳ ಬಗ್ಗೆ
ಚಕಾರ ಎತ್ತುವುದಿಲ್ಲ,
ಸುಮ್ಮನೇ ನಿಂತಿರುತ್ತಾಳೆ,
ತನ್ನ ಮೌನವನ್ನು ತಾನೇ ಸುಖಿಸುತ್ತಾಳೆ,
ನನಗೆ ಗೊತ್ತಿರುವ ಎಲ್ಲ ಋತುಗಳೂ
ತಾನೇ ಎಂಬಂತೆ ಉಟ್ಟು ಮೆರೆಯುತ್ತಾಳೆ,
ಒಂದು ಮೊಲೆಯಲ್ಲಿ ಕಾಡು
ಇನ್ನೊಂದರಲ್ಲಿ ಸಮುದ್ರ ಧರಿಸಿಕೊಂಡಿದ್ದಾಳೆ.

ಯಾವುದೇ ಬೇಡಿಕೆಯಿಲ್ಲ ಅವಳಲ್ಲಿ
ಒಮ್ಮೆ ನೋಡಿದರೆ ಸಾಕು.
ಎಷ್ಟೆಲ್ಲಾ ಬೇಡಿಕೆ.

ಮಾಟ ಎಲ್ಲರ ಹಾಗೇ
ಪ್ರೇಮಕ್ಕೆ ಬೇಕಾದಷ್ಟು, ಸಾಕಾದಷ್ಟು,
ನನ್ನ ಕಟ್ಟಿ ಹಾಕಿರುವುದು ಅದಲ್ಲ,
ಅದರಾಚೆಗಿನ ಬೆಳಗು.

ಒಮ್ಮೊಮ್ಮೆ ನನಗನಿಸುತ್ತದೆ
ನಾನೂ ಹಾಗೇ
ಬೆಳಕಿನವತಾರ.

*****

2. Reading between Graffiti

ಟಾಯ್ಲೆಟ್‌ನ ಗೋಡೆಯ ಮೇಲೆ
ಮಸುಕು ಮಸುಕಾದ ಗೀಚು ಬರಹ,
‘FUCK THE STRANGER TONIGHT’
ಕಳೆದ ವಾರ ಕಣ್ಣಿಗೆ ಬಿದ್ದಿರಲಿಲ್ಲ.
ಬಾಕಿ ಎಲ್ಲ ಲವ್ ಸಿಂಬಲ್‌ಗಳು,
ಕಾಮ ಪ್ರಲಾಪಗಳು, ಉತ್ಕಟ ಹಳಹಳಿಕೆಗಳು
ಈ ಅನಾಮಿಕನ ಸಲಹೆಯ ಮುಂದೆ
ಸಪ್ಪೆ, ಸಪ್ಪೆ ಎನಿಸುವಂತಿದ್ದವು.
ಕಳೆದುಕೊಂಡವರು, ಸಾಯದ ಆದರೆ ದಿನದಿನಕ್ಕೂ
ಬಾತುಕೊಳ್ಳುತ್ತಲೇ ಸಣ್ಣಗಾಗುವವರು,
ಅನುಕಂಪಕ್ಕಾಗಿ ತುಡಿಯುವ ಆದರೆ
ಟಾಯ್ಲೆಟ್‌ನ ಗೋಡೆಗಳ ಮುಂದೆ ದಿಢೀರನೇ ದಾರ್ಶನಿಕರಾಗುವವರು,
ಹೀಗೆ ಗೋಡೆ ಬರಹಗಳು
ಆಯಾ ಗುಂಪಿನ ಮನಸ್ಥಿತಿಯನ್ನು ಹಾಡುತ್ತವೆ.
ಅದೇನೇ ಇರಲಿ
ಈ ಬರಹ ಬರೆದವನಿಗೆ
ಒಂದಿಷ್ಟು ಕ್ರೆಡಿಟ್ ಕೊಡಲೇಬೇಕು,
ಕೊನೆ ಪಕ್ಷ ತಿಳಿದುಕೊಳ್ಳಲಿಕ್ಕಾದರೂ
’ಯಾಕೆ? ರಾತ್ರಿ, ಹೀಗೆ ಒಳಗೆ ಇಳಿದು
ತನ್ನ ಉನ್ಮತ್ತ ದಾಸರಿಂದ
ತಪ್ಪುತಪ್ಪಾಗಿ ಬರೆಸುತ್ತದೆ
ಸತ್ಯ ವಚನ’

*****

3. ದುರಂತ

ನಿನ್ನೆ
ನಡು ಮನೆಯಲ್ಲಿರುವ
ಬೆಂಕಿಗೂಡಿನ ಹಿಂದೆ
ಪೆನ್ಸಿಲ್‌ನಲ್ಲಿ ಬರೆದಿರುವ ಒಂದು ಚೀಟಿ ಸಿಕ್ಕಿತು.
ಎಷ್ಟು ಹಳೆಯದೋ ಗೊತ್ತಿಲ್ಲ
ದಿನದ ಗೋಜಲುಗಳ ನಡುವೆ
ತನ್ನ ಪಾಳಿಗಾಗಿ ಕಾತುರದಿಂದ ಕಾಯುವಂತಿತ್ತು.

’ಬಾಸ್ಟರ್ಡ್’ ಹೀಗೆ ಶುರುವಾಗಿತ್ತು
’ಮತ್ತೆಂದೂ ವಾಪಸ್ ಆಗಲಾರೆ
ಇದೇ ಕೊನೆಯ ರಾತ್ರಿ
ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದೇನೆ’

ಕೆಳಗೆ ಬರೆದಿರುವ ಹೆಸರನ್ನ
ನನಗೆ ಗುರುತಿಸಲಾಗಲಿಲ್ಲ
ಆ ಸಹಿಯನ್ನ ಮಸಿ ನುಂಗಿ ಹಾಕಿತ್ತು.

ಅದು, ನನಗೇ ಬರೆದಿರುವ ಚೀಟಿ
ಎನ್ನುವ ಗ್ಯಾರಂಟಿ ಕೂಡ ನನಗಿರಲಿಲ್ಲ.
ಬಹುಶಃ ಇರಬಹುದು
ಬಹುಶಃ ಇರಲಿಕ್ಕೂ ಇಲ್ಲ.
ನನಗೆ ಅದು ಗೊತ್ತಾಗಲೂ ಇಲ್ಲ
ನಾನು ಕಾಳಜಿ ಕೂಡ ಮಾಡಲಿಲ್ಲ.

ತಮಾಷೆ ಎಂದರೆ ಒಮ್ಮೊಮ್ಮೆ
ದುರಂತ ಹೀಗೂ ನಡೆದುಹೋಗುತ್ತದೆ
ನಗಿಸದೇ ಅಳಿಸದೆ.
(The tragedy)

*****

4. ಹುಲ್ಲಿನ ಗರಿ

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು,
ನಾನು ಹುಲ್ಲಿನ ಗರಿ ಕೊಟ್ಟೆ.
ಉಹೂಂ,
ಕವಿತೆಯೇ ಬೇಕು ನಿನ್ನ ಹಟ,
ಹುಲ್ಲಿನ ಗರಿ ಸಾಕು ನನ್ನ ವಾದ.

ಮಂಜಿನಲ್ಲಿ ಮಿಂದ ಗರಿ ಎಲ್ಲಕ್ಕಿಂತ ಹೊಸದು
ನನ್ನ ಯಾವ ರೂಪಕಕ್ಕಿಂತಲೂ
ನನ್ನ ಸಮಜಾಯಿಷಿ,
ಆದರೂ ಅದು ಕವಿತೆಯಲ್ಲ…..
ಮುಂದುವರಿದಿದೆ ನಿನ್ನ ಹಟ.

ನಿನಗೆ ಸಿಟ್ಟು
ಹುಲ್ಲಿನ ಗರಿ ಸುಲಭ ಎಂಬ ನಂಬಿಕೆ
ಯಾರೂ ಕೊಡಬಲ್ಲರು ಎಂಬ ತಿಳಿವಳಿಕೆ.

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು
ಹುಲ್ಲಿನ ಗರಿಯನ್ನು
ನಿನಗೆ ಒಪ್ಪಿಸಲಾಗದ ನನ್ನ ಅಸಹಾಯಕತೆಯ ಕುರಿತು
ನಾನೊಂದು ದುರಂತ ಕವಿತೆ ಬರೆದೆ
ಅದರಲ್ಲೊಂದು ಸಾಲಿತ್ತು
ನಿನ್ನ ಬಗ್ಗೆ
ವಯಸ್ಸಾಗುತ್ತಾ ಹೋದಂತೆ
ಹುಲ್ಲಿನ ಗರಿಯನ್ನು
ಒಪ್ಪಿಕೊಳ್ಳದ ನಿನ್ನ ಜಿದ್ದಿನ ಬಗ್ಗೆ.
(Blade of grass)

*****

5. What I need for the present

ಥ್ಯಾಂಕ್ಸ್, ಆದರೆ
ವಾಪಸ್ ತೆಗೆದುಕೊಂಡುಬಿಡು
ಈ ಉಂಗುರ ಮತ್ತು ಅದರ ಬಾಕ್ಸ್,
ಚಿಟ್ಟೆಯ ರೆಕ್ಕೆ ಮತ್ತು ಗಾಜಿನ ಮಣಿಗಳಿಂದ
ಅಲಂಕೃತವಾದ ಈ ಬಣ್ಣದ ಚಿತ್ರ
ಬೇಡ ನನಗೀಗ ಇವೆಲ್ಲ.
ದಯವಿಟ್ಟು, ಈ ಪುಸ್ತಕಗಳು,
ಪೋಸ್ಟ್ ಕಾರ್ಡುಗಳು,
ಜೇನು ಮೇಣದ ಕ್ಯಾಂಡಲ್‌ಗಳು,
ಹೂವಿನ ಕುಂಡಗಳು, ಪೇಂಟಿಂಗ್‌ಗಳು,
ಮತ್ತು ಈ ದುಬಾರಿ ಪೆನ್
ಎಲ್ಲವನ್ನೂ ವಾಪಸ್ ತೆಗೆದುಕೊಂಡುಬಿಡು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಯಾವುದನ್ನು ಕೊಡಲಾಗುವುದಿಲ್ಲವೋ
ಅದರ ಬದಲಿಗೆ ಕೊಡಲಾಗಿದೆ
ಎಂಬಂತಿವೆ ಈ ಉಡುಗೊರೆಗಳು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಈ ಕೋಣೆಯಲ್ಲಿ ಓಡಾಡುವಾಗಲೆಲ್ಲ
ಕಣ್ಣಿಗೆ ಬೀಳುವುದು ಈ ಉಡುಗೊರೆಗಳಲ್ಲ
ಅವುಗಳ ಮೇಲೆ ಧೂಳಿನಂತೆ ಕುಳಿತಿರುವ
ನಿನ್ನ ಗೈರು ಹಾಜರಿ ಮಾತ್ರ.

ದಯವಿಟ್ಟು ಕ್ಷಮಿಸು

ನೀನೇನೊ ಪ್ರೀತಿಯಿಂದಲೇ ಕೊಟ್ಟಿರಬಹುದು, ಆದರೆ
ಸದ್ಯ ಈ ಬೇಡಿಗಳ ತುರ್ತು ನನಗಿಲ್ಲ.

******

ಬ್ರಯಾನ್ ಪ್ಯಾಟನ್

6. She complicates her life

ಅದೇನೋ ಅವಳು
ಎಲ್ಲವನ್ನು ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಳ್ಳುತ್ತಾಳೆ.
ಕೆಲ ಭೂತಗಳು ಅವಳ ದಿನಗಳನ್ನು
ಹಿಡಿದು ಅಲ್ಲಾಡಿಸುತ್ತಿವೆ.

ಪ್ರೇಮ ತಾನಾಗಿಯೇ ಬಂದು, ಕೈಹಿಡಿದು
’ನಿಲ್ಲು’ ಎಂದರೆ
’ಹೋಗು’ ಎಂದು ಕೇಳಿಸಿಕೊಂಡು
ಬೆನ್ನು ತಿರುವಿ ಹೊರಟುಬಿಡುತ್ತಾಳೆ.

ಎಲ್ಲ ಬಾಗಿಲುಗಳನ್ನ ಮುಚ್ಚಿಕೊಂಡಿದ್ದಾಳೆ
ನೋವು ಹೆಚ್ಚಾದಾಗಲೆಲ್ಲ ಹಿಮವಾಗಿಬಿಡುತ್ತಾಳೆ.

*****

7. ತುಂಬಿಕೊಂಡವಳು

ಮೊನ್ನೆ ನಿನ್ನ
ಕಿಟಕಿಯಲ್ಲಿ ನೋಡಿದೆ.
ಅದೇ ಚೆಲುವು, ಅದೇ ಹೊಂಗೂದಲಿನ ಜಡೆ
ಅವೇ ಅಲೌಕಿಕ ನೀಳ ಕಾಲುಗಳು.
ಓಡಿ ಬೀದಿಗೆ ಬಂದವನೇ
ನಿನ್ನ ಹೆಸರಿಟ್ಟು ಕೂಗಿದೆ.
ನೀನು ಹಿಂತಿರುಗಿ ನೋಡಿ
ನನ್ನ ಆತುರಕ್ಕೆ
’ಛೀ’ ಎಂದೆ.
ಹೌದು obviously ಆಕೆ ನೀನಾಗಿರಲಿಲ್ಲ

ಮೂವತ್ತು ವರ್ಷ ಹೇಗೆ ಕಳೆದುಹೋಯಿತೆಂಬುದನ್ನ

ನಾನೂ ಮರೆತುಬಿಟ್ಟಿದ್ದೆ.
ಕ್ಷಮೆ ಕೇಳಿದೆ

“ಸಾರಿ, ಬೇರೆ ಯಾರೋ ಅಂದುಕೊಂಡಿದ್ದೆ” ತೊದಲಿದೆ.
ಆದರೆ ಇದರಲ್ಲಿ ನನ್ನದೇನೂ ಅಂಥ ತಪ್ಪಿಲ್ಲ.
ನಾನು ನೋಡಿದ್ದು,
ನನ್ನೊಳಗೆ ಅಂದು ತುಂಬಿಕೊಂಡಿದ್ದ ನಿನ್ನನ್ನು
ಈ ಹೊತ್ತಿಗೂ.

*****

8. ಪ್ರೇಮ ಪಾಠ

ಹಠಾತ್ ಆಗಿ ಪ್ರೇಮ
ತನ್ನ ಎಲ್ಲ ಹತಾಶೆಗಳಿಂದ ವಾಪಸ್ಸಾಗಿ
ನಿಮ್ಮ ತೋಳಲ್ಲಿ ಹುದುಗಿ, ಮುಲುಕುತ್ತ

“ಇನ್ನು ಎಲ್ಲೂ ಹೋಗಲಾರೆ,
ಬೇರೆ ದೇಹಗಳೆಲ್ಲ ಬಹುತೇಕ ರಾಜಿ ಮಾತ್ರ”

ಎಂದರೆ ಆ ಸುಳ್ಳನ್ನ
ಥಟ್ ಅಂತ ಒಪ್ಪಿಕೊಂಡುಬಿಡುತ್ತೀರಿ ನೀವು
ಅಕಸ್ಮಾತ್ ಜಾಣರಾಗಿದ್ದರೆ.
(Love lesson)

*****

9. ಸಿನಿಕನ ಪ್ರೇಮಗೀತೆ

ಪ್ರೇಮದ ಕೆಲಸವೇ
ಬರೋದು, ಹೋಗೋದು
ಮತ್ತು
ಆಗಾಗ ನಿಲ್ಲೋದು
ಆದರೆ

ಮತ್ತೆ ವಾಪಸ್ ಬರೋದು ಮಾತ್ರ
ಆದ ಅನಾಹುತದ ಪರಿಶೀಲನೆಗೆ

*****

10. ವ್ಯಾಲಂಟೈನ್

ಒಬ್ಬರು ಇನ್ನೊಬ್ಬರ ಜೊತೆ
ಹೀಗೇ ಸದಾ
ಯಾವದೇ ಸಂಶಯ ಇಲ್ಲದೆ
ಇದ್ದುಬಿಡುವ ಆಸೆ ಉಳ್ಳವರು,
(ಮುಂದೆ ಆಗಬಹುದಾದ ದಣಿವಿನ ಬಗ್ಗೆ ಯಾವ ಕಳವಳವೂ ಇಲ್ಲದೆ)

ನನ್ನ ನಿನ್ನ ಹಾಗೆ ಇರುವವರೇ,

ರಾತ್ರಿ ಇಡೀ ಪಿಸುಮಾತಿನಲ್ಲಿ
ಲೋಕದ ಉಸಿರನ್ನು ಜೀವಂತವಾಗಿಟ್ಟವರು,

ಶಾಶ್ವತದ ಮಿತಿಗೆ ಗಾಬರಿಯಾಗಿ
ನೆಲಕ್ಕೆ ಅಂಗುಷ್ಟವ ಒತ್ತಿದವರು,

ಎರಡು ಉಸಿರುಗಳ ನಡುವಿನ ಅಂತರದ ವಿರುದ್ಧ
ಕೋರ್ಟಿನಲ್ಲಿ ಸಾಕ್ಷಿ ಹೇಳಿದವರು.
( A Valentine)

ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...