Homeಕರ್ನಾಟಕಅರಣ್ಯ ಕಾಯ್ದೆ ತಿದ್ದುಪಡಿ; ವಿನಾಶಕ್ಕೆ ಬರೆದ ಮುನ್ನುಡಿ

ಅರಣ್ಯ ಕಾಯ್ದೆ ತಿದ್ದುಪಡಿ; ವಿನಾಶಕ್ಕೆ ಬರೆದ ಮುನ್ನುಡಿ

- Advertisement -
- Advertisement -

ಭಾರತ ದೇಶದಷ್ಟು ವೈವಿಧ್ಯತೆ ಬಹುಶಃ ಪ್ರಪಂಚದ ಕೆಲವೇ ಕೆಲವು ದೇಶಗಳಲ್ಲಿ ಇರಬಹುದೇನೋ. ಈ ವೈವಿಧ್ಯತೆ ಭಾರತದ ಭೂಪ್ರದೇಶಕ್ಕೂ ಅನ್ವಯವಾಗುತ್ತದೆ. ಇಲ್ಲಿ ಎತ್ತರದ ಹಿಮಾಲಯದಿಂದ ಹಿಡಿದು ಮರುಭೂಮಿಯವರೆಗೆ, ಪಶ್ಚಿಮ ಘಟ್ಟದ ಮತ್ತು ಈಶಾನ್ಯ ಭಾರತದ ದಟ್ಟ ಮಳೆಕಾಡುಗಳಿಂದ ಹಿಡಿದು ದಖನ್ ಪ್ರಸ್ಥಭೂಮಿಯ ಹುಲ್ಲುಗಾವಲುಗಳವರೆಗೆ ಮತ್ತು ಕರಾವಳಿ ಪ್ರದೇಶ ಮತ್ತು ದ್ವೀಪ ಸಮೂಹಗಳನ್ನು ಒಳಗೊಂಡ ಸಾಗರೀಯ ಪರಿಸರ ವ್ಯವಸ್ಥೆಯು ಕಾಲಾಂತರದಲ್ಲಿ ವಿಕಸನಗೊಂಡಿದೆ. ಇವುಗಳಲ್ಲಿ ಪಶ್ಚಿಮ ಘಟ್ಟಗಳು, ಹಿಮಾಲಯದ ಪರ್ವತ ಶ್ರೇಣಿ ಮತ್ತು ಈಶಾನ್ಯ ಭಾರತದ ಇಂಡೋ ಬರ್ಮಾ ಅರಣ್ಯಪ್ರದೇಶಗಳು ವಿಶ್ವದ 36 ಜೀವ ವೈವಿಧ್ಯತೆಯ ತಾಣಗಳಲ್ಲಿ ಸ್ಥಾನ ಪಡೆದಿವೆ. ನಾವು ಕಳೆದ ನೂರು ವರ್ಷಗಳಲ್ಲಿ ಬೃಹತ್ ಪ್ರಮಾಣದ ಅರಣ್ಯಗಳನ್ನು ಕಳೆದುಕೊಂಡಿದ್ದರೂ, ಅಚ್ಚರಿ ಎನಿಸುವಂತೆ ಇನ್ನೂ ತಕ್ಕ ಮಟ್ಟಿಗೆ ನೈಸರ್ಗಿಕ ಅರಣ್ಯವನ್ನು ಉಳಿಸಿಕೊಂಡಿದ್ದೇವೆ. ಇಷ್ಟೆಲ್ಲಾ ಜನಸಂಖ್ಯೆ ಇದ್ದರೂ, ಪರಿಸರದ ಕುರಿತು ವಿಶೇಷ ಕಾರ್ಯನೀತಿಯನ್ನೇನೂ ಹೊಂದಿರದ ರಾಜಕೀಯ ಪಕ್ಷಗಳಿದ್ದರೂ ಹೇಗೆ ನಮ್ಮಲ್ಲಿ ಕಾಡು ಉಳಿದುಕೊಂಡಿದೆ ಎಂಬುದೇ ಅಚ್ಚರಿದಾಯಕ ವಿಷಯ. ಆದರೆ ಇದಕ್ಕೆ ಕಾರಣ ಪರಿಸರ ರಕ್ಷಣೆಗಾಗಿ ಭಾರತದಲ್ಲಿದ್ದ ಸಮರ್ಥ ಕಾನೂನುಗಳು. ಅಳಿದುಳಿದ ಕಾಡುಗಳನ್ನು ಮುಂದಿನ ಪೀಳಿಗೆಗೆ ಕಾಪಾಡಲು ಈ ಕಾನೂನುಗಳೇ ಪರಿಸರಾಸಕ್ತರಿಗೆ ದಾರಿಯಾಗಿದ್ದವು. ಇಂತಹ ಕಾನೂನುಗಳಲ್ಲಿ ಮುಖ್ಯವಾದದ್ದು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಕೂಡ ಒಂದು. ಈ ಕಾಯ್ದೆಯ ಮುಖ್ಯ ಉದ್ದೇಶ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶದ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಹೇರುವುದಾಗಿತ್ತು. ಇಂತಹ ಕಾಯ್ದೆಗಳು ಮತ್ತು ಭಾರತದ ಪ್ರಬುದ್ಧ ನ್ಯಾಯಾಂಗ ವ್ಯವಸ್ಥೆಯಿಂದಾಗಿ ಭಾರತದ ಕಾಡುಗಳನ್ನು ಸ್ವಲ್ಪ ಮಟ್ಟಿಗಾದರೂ ಉಳಿಸಿಕೊಳ್ಳಲು ಅವಕಾಶವಿತ್ತು. ಆದರೆ ಇದೇ ತಿಂಗಳು ಸಂಸತ್ತಿನ ಮುಂದೆ ಮಂಡಿಸಲಾದ ಅರಣ್ಯ ಕಾಯ್ದೆಯ ತಿದ್ದುಪಡಿಯು ಅರಣ್ಯ ಕಾಯ್ದೆಯ ಮೂಲ ಆಶಯವನ್ನೇ ಅದಲುಬದಲು ಮಾಡುವಂತಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲಗೊಳಿಸಿ, ಸಾಧ್ಯವಾದಷ್ಟು ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವಂತಿದೆ.

1980ರ ಅರಣ್ಯ ಕಾಯ್ದೆಯನ್ನು ಜಾರಿಗೊಳಿಸಿದ್ದರ ಮೂಲ ಉದ್ದೇಶ ಬರಿದಾಗುತ್ತಿರುವ ಭಾರತದ ಅರಣ್ಯ ಪ್ರದೇಶಗಳನ್ನು ಉಳಿಸುವುದಾಗಿತ್ತು. ಅರಣ್ಯಗಳೆಂದರೆ ಬರೀ ಗಿಡ ಮರಗಳಲ್ಲ, ಬದಲಿಗೆ ಅಲ್ಲಿರುವ ಜೀವ ವೈವಿಧ್ಯವನ್ನೂ ಮತ್ತು ಭೂಕುಸಿತ, ಮರುಭೂಮಿಕರಣ ಮುಂತಾದವುಗಳಿಂದ ನಮ್ಮ ದೇಶದ ಭೂಸಂಪತ್ತನ್ನು ರಕ್ಷಿಸುವುದೇ ಈ ಕಾಯ್ದೆಯ ಮುಖ್ಯ ಉದ್ದೇಶವಾಗಿತ್ತು. ನಮ್ಮ ದೇಶದಲ್ಲಿ ಸ್ವಾತಂತ್ರ್ಯಾನಂತರದ ಮೊದಲ 30 ವರ್ಷಗಳಲ್ಲಿ ಸುಮಾರು 4.2 ಮಿಲಿಯನ್ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಅರಣ್ಯ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸುಮಾರು 40 ವರ್ಷದವರೆಗೆ 1.5 ಮಿಲಿಯನ್ ಹೆಕ್ಟೇರ್ ಅರಣ್ಯವನ್ನು ಮಾತ್ರ ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಅಂಕಿ ಅಂಶವು ಅರಣ್ಯ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಇದ್ದ ಈ ಕಾಯ್ದೆಯ ಒಂದು ಮಟ್ಟದ ಸಮರ್ಥತೆಯನ್ನು ತಿಳಿಸುತ್ತದೆ.

ಆದರೆ ಅರಣ್ಯ ಪರಿಸರಗಳನ್ನು ಉಳಿಸಲು ಸಹಕರಿಸಿದ್ದ ಈ ಕಾಯ್ದೆಗಳನ್ನು ಕಳೆದ ಒಂದು ದಶಕದಲ್ಲಿ ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಅದರ ಅಂಗವಾಗಿಯೇ ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಗಳು ರೂಪುಗೊಂಡಿವೆ. ಈ ತಿದ್ದುಪಡಿ ಬರುವ ಮುಂಚೆಯೂ ಮೊದಲು ಇದ್ದ ಕಟ್ಟುನಿಟ್ಟಿನ ಕಾಯ್ದೆಯಡಿಯಲ್ಲಿಯೇ ಅರಣ್ಯ ಭೂಮಿಯನ್ನು ಪರಿವರ್ತಿಸುವ ಪ್ರಸ್ತಾವನೆಗಳಿಗೆ ತುಂಬಾ ಉದಾರವಾಗಿ ಅನುಮೋದನೆಗಳನ್ನು ಕೊಡಲಾಗಿದೆ. ಉದಾಹರಣೆಗೆ 2018ರಿಂದ 2022ರವರೆಗೆ ಸುಮಾರು 90000 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸಲಾಗಿದೆ, 2020ರಲ್ಲಿ ಸ್ವೀಕರಿಸಿದ ಎಲ್ಲ ಪ್ರಸ್ತಾವನೆಗಳಲ್ಲಿ ಕೇವಲ ಮೂರನ್ನು ತಿರಸ್ಕರಿಸಿ ಒಟ್ಟು 14855 ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಪರಿವರ್ತಿಸಲಾಗಿದೆ. ಇನ್ನು ಈ ಕಾಯ್ದೆಯನ್ನು ದುರ್ಬಲಗೊಳಿಸಿದ ಬಳಿಕ ಯಾವ ಪ್ರಮಾಣದಲ್ಲಿ ಅರಣ್ಯ ನಾಶ ಉಂಟಾಗಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. ಬಹುತೇಕ ಸಂದರ್ಭದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯ ಅವಶ್ಯಕತೆಯೇ ಇಲ್ಲವಾಗಿಸುವಂತೆ ಈ ಕಾಯ್ದೆಯನ್ನು ತಿದ್ದಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತ ಮತ್ತು ಹಿಮಾಲಯದ ಬೆಟ್ಟ ಪ್ರದೇಶಗಳು ಎಂದೂ ಕಾಣದ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ, ಅಲ್ಲದೆ ಬೇಸಿಗೆಯಲ್ಲಿಯೂ ಬಿಸಿಗಾಳಿಯ ಪ್ರಮಾಣವೂ ಏರುತ್ತಿದ್ದು, ಜಾಗತಿಕ ಹವಾಮಾನ ಬದಲಾವಣೆಯು ವರ್ಷವರ್ಷಕ್ಕೂ ತನ್ನ ಪರಿಣಾಮವನ್ನು ಹೆಚ್ಚಿಸುತ್ತಲೇ ಇದೆ. ಹೀಗಿದ್ದಾಗ ಯಾವುದೇ ಒಂದು ಪ್ರಬುದ್ಧ ದೇಶ ಅಥವಾ ಸಮಾಜವು ತನ್ನ ವ್ಯಾಪ್ತಿಗೆ ಬರುವ ಅರಣ್ಯಗಳನ್ನು ಸಂರಕ್ಷಿಸುವತ್ತ ಗಮನ ನೀಡಬೇಕಾಗುತ್ತದೆ; ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಮ್ಮ ದೇಶದಲ್ಲಿ ಅಳಿದುಳಿದ ಅರಣ್ಯಗಳನ್ನೇ ನಾಶ ಮಾಡುವಂತ ಕಾನೂನನ್ನು ರೂಪಿಸುತ್ತಿದ್ದೇವೆ. ಈ ಹೊಸ ತಿದ್ದುಪಡಿಗಳ ಅನ್ವಯ ದೇಶದ ಗಡಿಯ 100 ಕಿಮಿ ಅಂತರದಲ್ಲಿ ಯಾವುದೇ ರಸ್ತೆ, ರೈಲು, ಜಲ ವಿದ್ಯುತ್ ಅಥವಾ ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಅವಶ್ಯಕವಾದ ಯೋಜನೆಗಳನ್ನು ಹಮ್ಮಿಕೊಳ್ಳಲು ಯಾವುದೇ ಪರಿಸರ ಸಂಬಂಧಿ ಅನುಮತಿ ಬೇಕಾಗಿಲ್ಲ. ರೈಲು ಮತ್ತು ರಸ್ತೆ ಮಾರ್ಗದ ಸುತ್ತ ಇರುವ 10 ಹೆಕ್ಟೇರ್ ಪ್ರದೇಶದಲ್ಲಿ ಕೂಡ ಯಾವುದೇ ಅನುಮತಿಯ ಅಗತ್ಯ ಇಲ್ಲದೇ ಕಟ್ಟಡ ನಿರ್ಮಾಣ ಮಾಡಬಹುದು. ಅರಣ್ಯ ಭೂಮಿಯಲ್ಲಿ ಮೃಗಾಲಯ ಮತ್ತು ಪರಿಸರ ಪ್ರವಾಸೋದ್ಯಮದ ಕುರಿತ ನಿರ್ಮಾಣಕ್ಕೂ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ಇನ್ನೂ ಮುಂದುವರಿದು ಕೇಂದ್ರ ಸರ್ಕಾರ ಸೂಚಿಸುವ ಯಾವುದೇ ಯೋಜನೆಗಳಿಗೂ ಅನುಮತಿಯ ಅವಶ್ಯಕತೆ ಇಲ್ಲ ಎಂದು ನಿಯಮಗಳನ್ನು ಬದಲಿಸಲಾಗಿದೆ.

ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿರುವ INDIA ಒಕ್ಕೂಟದ ಸಂಸದರು

ಭಾರತದ ಗಡಿ ಪ್ರದೇಶದ 100 ಕಿಮೀ ಒಳಗೆ ಯಾವುದೇ ರೀತಿಯ ರಸ್ತೆ ರೈಲು ಅಥವಾ ದೇಶದ ಸುರಕ್ಷತೆಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬ ತಿದ್ದುಪಡಿಯ ಅನ್ವಯ ಈಶಾನ್ಯ ಭಾರತದ ರಾಜ್ಯಗಳು ಮತ್ತು ಉತ್ತರಾಖಂಡದ ಸಂಪೂರ್ಣ ಭೂಪ್ರದೇಶದಲ್ಲಿ, ಯಾವುದೇ ಪರಿಸರದ ಕುರಿತ ಅನುಮತಿಯಿಲ್ಲದೆ ಇಂತಹ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು. ಈಗಾಗಲೇ ಸೂಕ್ಷ್ಮ ಪರಿಸರ ಮತ್ತು ಭೌಗೋಳಿಕ ವ್ಯವಸ್ಥೆಯನ್ನು ಹೊಂದಿರುವ ಹಿಮಾಲಯದ ರಾಜ್ಯದಲ್ಲಿ ಚಾರ್ ಧಾಮ್ ರಸ್ತೆ ಯೋಜನೆ ಮತ್ತು ಸುರಂಗ ಮಾರ್ಗಗಳನ್ನು ಕೊರೆದಿದ್ದರ ಪರಿಣಾಮವಾಗಿ ಅಲ್ಲಿ ಭೂಕುಸಿತದಂತಹ ಘಟನೆಗಳು ಸಂಭವಿಸುತ್ತಿವೆ. ಕೆಲ ತಿಂಗಳ ಹಿಂದೆ ಜೋಶಿ ಮಠದಲ್ಲಿ ಭೂಕುಸಿತದ ಪರಿಣಾಮವಾಗಿ ಇಡೀ ಊರನ್ನೇ ಖಾಲಿ ಮಾಡಲಾಯಿತು. ಹಿಮಾಲಯ ಪ್ರದೇಶದಲ್ಲಿ ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರೆ ಅದು ಖಂಡಿತ ಪರಿಸರದೊಂದಿಗೆ ಆಡುವ ಜೂಜಾಟವೇ ಸರಿ.

ಬಹುತೇಕ ಪರಿಸರಾಸಕ್ತರಿಗೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಸುಪರಿಚಿತವಾದುದು 1996ರಲ್ಲಿ ಸರ್ವೋಚ್ಚ ನ್ಯಾಯಾಲಯ ಗೋದಾವರ್ಮನ್ ತಿರುಮಲಪಾದ್ ಪ್ರಕರಣದಲ್ಲಿ ಕೊಟ್ಟ ಐತಿಹಾಸಿಕ ತೀರ್ಪು. ಈ ತೀರ್ಪು ಅರಣ್ಯರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಈ ತೀರ್ಪಿನನ್ವಯ ಒಂದು ಪ್ರದೇಶವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಅರಣ್ಯ ಭೂಮಿ ಎಂದು ಘೋಷಣೆ ಮಾಡದಿದ್ದರೂ, ಅಲ್ಲಿ ಅರಣ್ಯದ ಗುಣಲಕ್ಷಣಗಳು ಇದ್ದರೆ ಆ ಪ್ರದೇಶವು ಕೂಡ ಕಾನೂನಿನ ಅನ್ವಯ ರಕ್ಷಣೆಗೆ ಒಳಪಡುತ್ತದೆ. ಕೇರಳದ ನೀಲಗಿರಿ ಅರಣ್ಯದಲ್ಲಿ ವ್ಯಾಪಕವಾದ ಅರಣ್ಯನಾಶದ ವಿರುದ್ಧ ಈ ತೀರ್ಪನ್ನು ಕೊಡಲಾಗಿತ್ತು. ಈಗ ಹೊಸ ತಿದ್ದುಪಡಿಯ ಅನ್ವಯ ಅರಣ್ಯಗಳ ವ್ಯಾಖ್ಯಾನವನ್ನೇ ಬದಲಾವಣೆ ಮಾಡಲಾಗಿದೆ; ಹೀಗಾಗಿ ಅರಣ್ಯದ ಗುಣಲಕ್ಷಣವಿದ್ದರೂ ಬಹುಪಾಲು ಭೂಪ್ರದೇಶಗಳು ಅರಣ್ಯದ ಪರಿಧಿಯಿಂದ ಹೊರಬರುತ್ತವೆ ಮತ್ತು ತಮಗಿದ್ದ ರಕ್ಷಣೆಯನ್ನೂ ಕಳೆದುಕೊಳ್ಳುತ್ತವೆ.

ಈ ತಿದ್ದುಪಡಿಯ ಇನ್ನೊಂದು ಮುಖ್ಯಾಂಶವೆಂದರೆ ಮೃಗಾಲಯಗಳಿಗೆ ಮತ್ತು ಪರಿಸರ ಪ್ರವಾಸೋದ್ಯಮದ ಯೋಜನೆಗಳಿಗೆ ಪರಿಸರ ಅನುಮತಿಯ ವಿನಾಯಿತಿ ನೀಡಿರುವುದು. ಇಂದು ನಾವು ನೋಡುತ್ತಿರುವ ಯಾವುದೇ ಹಸಿರು ಪ್ರವಾಸೋದ್ಯಮವು ಪರಿಸರ ಸ್ನೇಹಿಯಾಗಿಲ್ಲ. ಪರಿಸರದ ಅರಿವು ಮೂಡಿಸಬೇಕಿದ್ದ ಇದು ಕೇವಲ ಇನ್ಸ್ಟಾಗ್ರಾಮ್ ಪೋಸ್ಟ್ ಅಥವಾ ರೀಲುಗಳಿಗೆ ಸೀಮಿತವಾಗುತ್ತಿದೆ. ಅಷ್ಟೇ ಅಲ್ಲದೆ ಅದನ್ನು ನೋಡಿ ಮತ್ತೂ ಸಾವಿರಾರು ಜನ ಅಲ್ಲಿ ದಾಂಗುಡಿಯಿಟ್ಟು ಅರಣ್ಯದ ನೆಮ್ಮದಿಯನ್ನೇ ಕೆಡಿಸುತ್ತಿದ್ದಾರೆ. ಅವರ ಅನುಕೂಲಕ್ಕೆ ತಲೆಯೆತ್ತುವ ರೆಸಾರ್ಟ್‌ಗಳು ಹೋಟೆಲು ಮತ್ತಿತರ ಅಂಗಡಿಗಳು ಟನ್ನುಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿವೆ. ಹೀಗೆ ಎಲ್ಲೆಂದರಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಕಟ್ಟಡಗಳ ನಿರ್ಮಾಣ ಆರಂಭವಾದರೆ ಅದು ಹೊಸ ಸಮಸ್ಯೆಯನ್ನೇ ಸೃಷ್ಟಿಸಲಿದೆ. ಇತ್ತೀಚಿಗೆ ಜೋಗ ಜಲಪಾತದ ಸುತ್ತ ಪಂಚತಾರಾ ಹೋಟೆಲಿನ ನಿರ್ಮಾಣದ ಪ್ರಸ್ತಾಪನೆಯಿತ್ತು. ಇನ್ನು ಈ ತಿದ್ದುಪಡಿಯ ನಂತರ ಇಂತಹ ಅನೇಕ ಯೋಜನೆಗಳು ಪರಿಸರ ಪ್ರವಾಸದ ಸೋಗಿನಲ್ಲಿ ಅರಣ್ಯ ಪ್ರದೇಶದ ಸುತ್ತಮುತ್ತ ಎದ್ದರೆ ಅಚ್ಚರಿಯೇನಿಲ್ಲ. ಅಷ್ಟೇ ಅಲ್ಲದೆ ನಾವು ಯಾವತ್ತೂ ವನ್ಯಜೀವಿಗಳ ಸಂರಕ್ಷಣೆಯನ್ನು ಅವುಗಳ ನೈಸರ್ಗಿಕ ಆವಾಸದಲ್ಲಿಯೇ ಕೈಗೊಳ್ಳಬೇಕು ಮತ್ತು ಅವುಗಳ ಸಹಜ ಬದುಕಿಗೆ ಅಡ್ಡಿಯಾಗದಂತೆ ಅರಣ್ಯ ಪ್ರದೇಶಗಳನ್ನು ಉಳಿಸಬೇಕು; ಅದುಬಿಟ್ಟು ಅರಣ್ಯದ ಸುತ್ತ ಮೃಗಾಲಯಗಳನ್ನು ನಿರ್ಮಿಸಿ ಅಲ್ಲಿ ಪ್ರಾಣಿಗಳನ್ನು ಕೂಡಿಹಾಕಿದರೆ ಅದೆಂದೂ ವನ್ಯಜೀವಿ ಸಂರಕ್ಷಣೆ ಅನಿಸಿಕೊಳ್ಳಲಾರದು. ಈ ತಿದ್ದುಪಡಿಯಲ್ಲಿ ಅದೇಕೆ ಮೃಗಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದಾರೆ ಮತ್ತು ಅದು ಹೇಗೆ ಅರಣ್ಯ ಸಂರಕ್ಷಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದೇ ಅರ್ಥವಾಗದ ವಿಷಯ.

ಇಷ್ಟೆಲ್ಲಾ ಇದ್ದರೂ ಭಾರತವು 2070ರ ಹೊತ್ತಿಗೆ ಕಾರ್ಬನ್ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ತರಬೇಕು ಮತ್ತು ದೇಶದ ಹಸಿರು ಹೊದಿಕೆಯನ್ನು ಹೆಚ್ಚಿಸಬೇಕು ಎಂದು ಈ ಕರಡು ತಿದ್ದುಪಡಿಯು ಉಲ್ಲೇಖಿಸುತ್ತದೆ. ಇಷ್ಟೆಲ್ಲಾ ಅರಣ್ಯ ನಾಶವಾದರೆ ಅದು ಹೇಗೆ ಇಂಗಾಲದ ಹೊರಸೂಸುವಿಕೆ ನಿಲ್ಲುತ್ತದೆ ಎಂಬುದೇ ಮಹಾವೈರುಧ್ಯ. ಇಲ್ಲಿರುವ ಇನ್ನೊಂದು ಮೂಲ ಸಮಸ್ಯಾತ್ಮಕ ಅಂಶವೆಂದರೆ ನೈಸರ್ಗಿಕ ಅರಣ್ಯ ಪ್ರದೇಶ ಮತ್ತು ಕೃತಕ ನೆಡುತೋಪು- ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗಿರುವುದು. ಕೃತಕ ನೆಡುತೋಪು ಯಾವತ್ತೂ ನೈಸರ್ಗಿಕ ಅರಣ್ಯವನ್ನು ಸೃಷ್ಟಿಸಲಾರದು ಮತ್ತು ನೈಸರ್ಗಿಕ ಅರಣ್ಯದಂತೆ ಜೀವ ವೈವಿಧ್ಯತೆಯನ್ನು ಪೋಷಿಸಲಾರದು. ಅಷ್ಟೇ ಅಲ್ಲದೆ ನೈಸರ್ಗಿಕವಾದ ಕಾಡು ನೆಡುತೋಪಿಗಿಂತ 40% ಹೆಚ್ಚು ಇಂಗಾಲವನ್ನು ಹೀರಿಕೊಳ್ಳುತ್ತದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಹೀಗಿರುವಾಗ ಸಹಜ ಕಾಡನ್ನು ಕಳೆದುಕೊಂಡು ಅಲ್ಲಲ್ಲಿ ನೆಡುತೋಪನ್ನು ಸೃಷ್ಟಿಸಿದರೆ ನಾವೂ ಯಾವತ್ತೂ ಅರಣ್ಯ ಸಂವರ್ಧನೆಯ ಗುರಿಯನ್ನು ತಲುಪಲಾರೆವು.

ಹವಾಮಾನ ವೈಪರೀತ್ಯ ಹೆಚ್ಚಿದಂತೆ ನಾವು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪರಿಸರ ಮತ್ತು ಅರಣ್ಯ ಸಂಪತ್ತನ್ನು ಬರಗಾಲದಲ್ಲಿ ಕೂಡಿಟ್ಟ ಅಕ್ಕಿಯಂತೆ ತುಂಬಾ ಮುತುವರ್ಜಿಯಿಂದ ಬಳಸಬೇಕು, ಅದು ಬಿಟ್ಟು ಅಳಿದುಳಿದ ಧಾನ್ಯವನ್ನೆಲ್ಲ ಬಳಸಿ ಒಂದೇ ದಿನ ಮೃಷ್ಟಾನ್ನ ಭೋಜನವನ್ನು ಮಾಡಿದರೆ ಬರುವ ದಿನಗಳಲ್ಲಿ ಉಪವಾಸ ಬೀಳುವುದು ಖಂಡಿತ. ದೇಶದ ಸುರಕ್ಷತೆಯ ಕಾರಣಕ್ಕಾಗಿ ನಾವು ಮಾಡುತ್ತಿರುವ ಅರಣ್ಯನಾಶದಿಂದಾಗಿಯೇ ಒಂದು ದಿನ ದೇಶ ಸಂಕಟಕ್ಕೆ ಸಿಲುಕಿದರೆ ಅಚ್ಚರಿಯೇನಿಲ್ಲ, ಇದು ಚಿನ್ನದ ಮೊಟ್ಟೆಯ ಆಸೆಗೆ ಕೋಳಿಯನ್ನು ಕೊಯ್ದ ರೈತನ ಕಥೆಯಂತೆಯೇ ಆಗುತ್ತದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...