ಮಣಿಪುರ ಹಿಂಸಾಚಾರಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಾಲ್ಲಿಯ ರಾಜ್ಯ ಬಿಜೆಪಿ ಸರ್ಕಾರಗಳೇ ನೇರ ಹೊಣೆ ಎಂದು ಬಿಆರ್ಎಸ್ ಪಕ್ಷದ ಸಂಸದೆ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕಲ್ವಕುಂಟ್ಲ ಕವಿತಾ ಅವರು ಶನಿವಾರ ದೂಷಿಸಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನಲ್ಲಿ ಆದಿವಾಸಿಗಳ ಕಲ್ಯಾಣ ಮತ್ತು ಅರಣ್ಯ ಭೂಮಿಯನ್ನು ಆದಿವಾಸಿಗಳಿಗೆ ಪೋಡು (ಶಿಫ್ಟಿಂಗ್) ಸಾಗುವಳಿಗಾಗಿ ವಿತರಿಸುವ ಕುರಿತು ಕಿರು ಚರ್ಚೆಯಲ್ಲಿ ಭಾಗವಹಿಸಿದ ಕವಿತಾ, ಮಣಿಪುರದಲ್ಲಿ ನಡೆದ ಹಿಂಸಾಚಾರವು ರಾಜ್ಯ ಪ್ರಾಯೋಜಿತವಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಕುಕಿ ಹಾಗೂ ಮೈತಿ ಎನ್ನುವ ಎರಡು ಜನಾಂಗೀಯ ಗುಂಪುಗಳ ನಡುವೆ ಬಿರುಕು ಸೃಷ್ಟಿಸಿದೆ ಎಂದು ಹೇಳಿದರು.
”ಬಿಜೆಪಿಯು ಮಣಿಪುರದಲ್ಲಿ ಎರಡು ಸಮುದಾಯಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿದೆ ಮತ್ತು ರಾಜ್ಯವನ್ನು ಯುದ್ಧಭೂಮಿಯನ್ನಾಗಿ ಮಾಡಿದೆ. ಇದು ರಾಜ್ಯ ಸರ್ಕಾರದ ಪ್ರಾಯೋಜಿತ ಹಿಂಸಾಚಾರ. ಪ್ರತಿಯೊಬ್ಬರೂ ಇದನ್ನು ಖಂಡಿಸಬೇಕು. ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಯನೀಯವಾಗಿ ವಿಫಲವಾಗಿವೆ ಎಂದು ಅವರು ಹೇಳಿದರು.
ಬಿಜೆಪಿಯು ಚುನಾವಣಾ ಲಾಭಕ್ಕಾಗಿ “ಒಡೆದು ಆಳುವ” ನೀತಿಯನ್ನು ಅನುಸರಿಸುತ್ತಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಗಳು “ಒಗ್ಗೂಡಿಸಿ ಮತ್ತು ಸಮೃದ್ಧಿ” ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಬುಡಕಟ್ಟು ಕಲ್ಯಾಣದ ಕುರಿತು, ಕೇಂದ್ರವು ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ (ಪಿಇಎಸ್ಎ) ಕಾಯ್ದೆಯನ್ನು ಸರಿಯಾಗಿ ಅನುಷ್ಠಾನಗೊಳಿಸದೆ ಆದಿವಾಸಿಗಳ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಕವಿತಾ ಆರೋಪಿಸಿದರು.
ಹೊಸ ಅರಣ್ಯ ಸಂರಕ್ಷಣಾ ನಿಯಮಗಳನ್ನು ತರುವ ಮೂಲಕ ಶ್ರೀಮಂತ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅರಣ್ಯ ಕಾಯ್ದೆಗಳನ್ನು ದುರ್ಬಲಗೊಳಿಸಿದ್ದಾರೆ. ಪರಿಶಿಷ್ಟ ಜಾತಿ ಉಪ ಯೋಜನೆಯಡಿ ರಾಜ್ಯಗಳಿಗೆ ಕೇಂದ್ರವು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ: ಮೂವರ ಸಾವು