Homeಮುಖಪುಟಮಹಾರಾಷ್ಟ್ರದ ನಾಗಪುರ ಪೀಠದ ನ್ಯಾಯಮೂರ್ತಿ ರೋಹಿತ್ ದೇವ್ ರಾಜೀನಾಮೆ ಸುತ್ತ ಎದ್ದ ಪ್ರಶ್ನೆಗಳ ಹುತ್ತ

ಮಹಾರಾಷ್ಟ್ರದ ನಾಗಪುರ ಪೀಠದ ನ್ಯಾಯಮೂರ್ತಿ ರೋಹಿತ್ ದೇವ್ ರಾಜೀನಾಮೆ ಸುತ್ತ ಎದ್ದ ಪ್ರಶ್ನೆಗಳ ಹುತ್ತ

- Advertisement -
- Advertisement -

ಆಗಸ್ಟ್ 4 ರಂದು ಮಹಾರಾಷ್ಟ್ರದ ನಾಗಪುರ ಪೀಠದ 2ನೇ ಹಿರಿಯ ನ್ಯಾಯಮೂರ್ತಿ ರೋಹಿತ್ ದೇವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಆದರೆ ಈ ರಾಜೀನಾಮೆ ಪ್ರಕಟಿಸಿದ ರೀತಿ, ಸಮಯ ಹಾಗೂ ಸಂದರ್ಭಗಳು ದೇಶದಾದ್ಯಂತ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಹಾರಾಷ್ಟ್ರದ ಮಾಜಿ ಅಡ್ವೋಕೇಟ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿರುವ ಜಸ್ಟಿಸ್ ದೇವ್ ಅವರು ಎಂದಿನಂತೆ ಶುಕ್ರವಾರ ತಮ್ಮ ಕೋರ್ಟ್ ಹಾಲ್‌ಗೆ ಬಂದರು. ಆದರೆ ಅಲ್ಲಿ ನೆರೆದಿದ್ದ ಎಲ್ಲ ವಕೀಲರು ಮತ್ತು ಕಕ್ಷಿದಾರರ ಎದುರು ತಾವು ಈ ದಿನ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡುತ್ತಿರುವುದಾಗಿ ಘೋಷಿಸಿದರು. ವಕೀಲರಿಗೆ ವೃತ್ತಿಪರತೆಯ ಬಗ್ಗೆ ಕಿವಿಮಾತನ್ನು ಹೇಳುತ್ತ ’ತನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ, ಕಠಿಣ ಶ್ರಮ ವಹಿಸಿ ಕೆಲಸ ಮಾಡಿ’ ಎಂದು ಹೃದಯಸ್ಪರ್ಶಿಯಾಗಿ ಹೇಳಿ ನೆರೆದಿದ್ದ ಜನರಲ್ಲಿ ಆಘಾತ ಉಂಟುಮಾಡಿದರು. ಅವರು ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿದ್ದರೂ ಸಹಿತ ಈ ಘಟನೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸ್ವಲ್ಪವಾದರು ಒಡನಾಟವಿರುವ ಯಾರಿಗೇ ಆಗಲಿ ಸಂಶಯ, ಪ್ರಶ್ನೆ ಹಾಗೂ ಗೊಂದಲಗಳನ್ನು ಮೂಡಿಸಿರುವುದು ನಿಜ.

ಹೈಕೋರ್ಟಿನ ನ್ಯಾಯಮೂರ್ತಿಗಳ ಜೀವನ ಕಾರ್ಯವೈಖರಿ ಎಲ್ಲವೂ ಅತ್ಯಂತ ನಿರ್ಬಂಧಿತ ವಾತಾವರಣದಲ್ಲಿ ಮತ್ತು ನ್ಯಾಯಾಂಗದ ಕಣ್ಗಾವಲಿನಲ್ಲಿ ನಡೆಯುತ್ತದೆ. ಅವರು ರಾಜೀನಾಮೆಯನ್ನು ರಾಷ್ಟ್ರಪತಿಯನ್ನು ಉದ್ದೇಶಿಸಿ ನೀಡಬೇಕಾಗುತ್ತದೆ. ಹೀಗಾಗಿ ಜಸ್ಟಿಸ್ ರೋಹಿತ್ ದೇವ್ ಅವರ ನಡೆ ಐತಿಹಾಸಿಕವಾಗಿದ್ದು ಎನ್ನಬಹುದು.

ಡಿಸೆಂಬರ್ 2025ರವರೆಗೂ ಸೇವೆ ಬಾಕಿ ಇರುವ ಜಸ್ಟಿಸ್ ದೇವ್ 2 ವರ್ಷಗಳಿಗೂ ಅಧಿಕ ಸೇವಾವಧಿ ಬಾಕಿ ಇರುವಂತೆಯೇ ರಾಜೀನಾಮೆ ನೀಡಿರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಪತಿಗೆ ರಾಜೀನಾಮೆಯನ್ನು ಇಮೇಲ್ ಮತ್ತು ಪೋಸ್ಟ್‌ನಲ್ಲೂ ಕಳಿಸಿದ್ದಾಗಿ ಜಸ್ಟಿಸ್ ದೇವ್ ತಿಳಿಸಿದ್ದಾರೆ.

2017ರಿಂದ ಈ ಹುದ್ದೆಗೆ ಏರಿದ್ದ ಜಸ್ಟಿಸ್ ರೋಹಿತ್ ದೇವ್ ಮಹಾರಾಷ್ಟ್ರದ 2ನೇ ಹಿರಿಯ ನ್ಯಾಯಮೂರ್ತಿ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಷಯ ಇಷ್ಟೊಂದು ಪ್ರಾಮುಖ್ಯತೆ ಪಡೆಯಲು ಕಾರಣವೆಂದರೆ ಕಳೆದ ಅಕ್ಟೋಬರ್ 14, 2022ರಂದು ಜಸ್ಟಿಸ್ ದೇವ್ ನಕ್ಸಲ್ ಸಹಾನುಭೂತಿ ಹೊಂದಿರುವ ಹಣೆಪಟ್ಟಿಯ ಜಿ.ಎನ್. ಸಾಯಿಬಾಬಾ ಮತ್ತು ಇತರ ನಾಲ್ವರನ್ನು ಜೀವಾವಧಿ ಶಿಕ್ಷೆಯಿಂದ ಬಿಡುಗಡೆಗೊಳಿಸಿದ್ದಾರೆ. ಮಹಾರಾಷ್ಟ್ರದ ಗಡಚಿರೋಲಿಯ ಸೆಷನ್ಸ್ ನ್ಯಾಯಾಲಯ ಈ 5 ಜನರಿಗೂ ಯುಎಪಿಎ ಕಾಯ್ದೆಯ ಅಡಿಯಲ್ಲಿ ನಕ್ಸಲ್ ಕಾರ್ಯಾಚರಣೆಗೆ ಸಹಾಯ ಮಾಡಿದ ಹಾಗೂ ದೇಶದ ಮೇಲೆ ಯುದ್ಧ ಘೋಷಿಸಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಆರೋಪಿಗಳ ಶಿಕ್ಷೆಯನ್ನು ಜಸ್ಟಿಸ್ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರ ಪೀಠ ತಳ್ಳಿಹಾಕಿ ಆರೋಪಿಗಳನ್ನು ಬಿಡುಗಡೆಗೊಳಿಸುವ ತೀರ್ಪು ನೀಡಿದ್ದರು. ಆದರೆ ಆ ತೀರ್ಪು ಪ್ರಕಟವಾದ 24 ಗಂಟೆಗಳ ಒಳಗೆ ಸುಪ್ರೀಂ ಕೋರ್ಟ್ ಈ ತೀರ್ಮಾನದ ವಿರುದ್ಧ ತಡೆಯಾಜ್ಞೆ ನೀಡಿ ತೀರ್ಪನ್ನು ತಡೆಹಿಡಿಯುವ ಆದೇಶ ನೀಡಿತು.

ಒಂದು ನ್ಯಾಯಾಲಯ ನೀಡಿರುವ ತೀರ್ಪಿನ ಮೇಲೆ ಅದರ ಮೇಲಿನ ನ್ಯಾಯಾಲಯ ವ್ಯತಿರಿಕ್ತ ತೀರ್ಪು ಕೊಡುವುದು ಇಲ್ಲ ತಡೆಯಾಜ್ಞೆ ಕೊಡುವುದು ಸಾಮಾನ್ಯ; ಇದರಲ್ಲಿ ಅಂಥ ವೈಪರೀತ್ಯ ಏನಿದೆ ಎಂಬ ಮಾತು ಬರಬಹುದು. ಆದರೆ ನೀಡಿರುವ ತೀರ್ಪು ಯಾರದು, ಅದು ಸಮಾಜಕ್ಕೆ ನೀಡುವ ಸಂದೇಶವೇನು? ಯಾವ ಸಂದರ್ಭದಲ್ಲಿ ಆ ತೀರ್ಪು ಹೊರಬಂದಿದೆ ಮತ್ತು ಅದರಿಂದ ಆಡಳಿತ ಪಕ್ಷಕ್ಕೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಮೇಲೆ ತೀರ್ಪಿನ ಪ್ರಾಮುಖ್ಯತೆಯನ್ನು ಅರ್ಥೈಸಬೇಕಾಗುತ್ತದೆ.

ಸಾಯಿಬಾಬಾ ಕೇಸ್‌ನ ಹಿನ್ನಲೆ

ಆಂಧ್ರ ಮೂಲದ ಸಾಯಿಬಾಬಾ ದೆಹಲಿಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಫ್ರೊಫೆಸರ್. ಶೇಕಡ 90% ಅಂಗವೈಕಲ್ಯದಿಂದ ಬಳಲುತ್ತಿರುವ ಸಾಯಿಬಾಬಾ ಅವರಿಗೆ ಸುಮಾರು 15ಕ್ಕಿಂತ ಹೆಚ್ಚಿನ ಗಂಭೀರವಾದ ಕಾಯಿಲೆಗಳಿವೆ. ಇಂತಹ ಗಂಭೀರ ಸಮಸ್ಯೆಗಳ ನಡುವೆಯೂ ಆದಿವಾಸಿಗಳ ಸಮಸ್ಯೆಗಳಿಗೆ ಮರುಗಿ ಅವರ ಹಕ್ಕುಗಳ ಸಲುವಾಗಿ ಹೋರಾಟ ಮಾಡಿದ ಸಾಯಿಬಾಬಾರನ್ನು ಮಹಾರಾಷ್ಟ್ರ ಸರ್ಕಾರ ’ನಿಷೇಧಿತ ಸಿಪಿಐ(ಎಂ)’ ಸಂಘಟನೆಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಲಾದ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (RDF)’ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಸಾಯಿಬಾಬಾ ಮತ್ತು ಇತರರನ್ನು 2014ರಲ್ಲಿ ಬಂಧಿಸಿತು. ನ್ಯಾಯಾಲಯ ಯುಎಪಿಎ ಕಾಯ್ದೆಯಅಡಿ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತು. ಜೈಲಿನ ವಾತಾವರಣದಲ್ಲಿ ಜರ್ಝರಿತರಾದ ಸಾಯಿಬಾಬಾರ ಆರೋಗ್ಯದ ಬಗ್ಗೆ ಸಂಯುಕ್ತ ರಾಷ್ಟ್ರ ಸಂಘಟನೆಗಳ ಮಾನವ ಹಕ್ಕು ಅಂಗ ಭಾರತ ಸರ್ಕಾರಕ್ಕೆ ಕಾಳಜಿ ವಹಿಸುವಂತೆ ಕೋರಿದೆ; ಆದರೆ ಪರಿಣಾಮ ಶೂನ್ಯ.

ಇದನ್ನೂ ಓದಿ: ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು: ಮದ್ರಾಸ್ ಹೈಕೋರ್ಟ್‌ನ ಮಹತ್ವದ ತೀರ್ಪು

ಜೀವಾವಧಿ ಶಿಕ್ಷೆಯ ಮೇಲ್ಮನವಿಯಲ್ಲಿ ಸುಮಾರು 101 ಪುಟಗಳ ಸುದೀರ್ಘ ತೀರ್ಪನ್ನು ನೀಡಿದ ಪೀಠ ಹೇಗೆ ನ್ಯಾಯದಾನದ ಪ್ರತಿ ಹಂತದಲ್ಲೂ ಕಾನೂನುಬದ್ಧ ಕ್ರಮಗಳ ಉಲ್ಲಂಘನೆ ಆಗಿದೆ ಎಂದು ಹೇಳಿರುವುದಲ್ಲದೆ, ಜೊತೆಗೆ ಅತ್ಯಂತ ಪ್ರಮುಖ ಅಂಶವಾದ, “ದೇಶದ ವಿರುದ್ಧ ನಡೆಯುವ ವಿಧ್ವಂಸಕ ಕೃತ್ಯಗಳನ್ನು ತಡೆಯುವ ಅಗತ್ಯಗಳ ಜೊತೆಗೆ, ಪ್ರಜಾಪ್ರಭುತ್ವದ ಆಶಯಗಳು ಹಾಗೂ ನಾಗರಿಕ ಹಕ್ಕುಗಳ ರಕ್ಷಣೆ ಪ್ರಮುಖವಾದದ್ದು”, ಈ ನಿಟ್ಟಿನಲ್ಲಿ ಯಾವುದೇ ಕಾರ್ಯವೈಖರಿ ಅಥವಾ ಕರ್ತವ್ಯಲೋಪಗಳನ್ನು ಸಮರ್ಥಿಸಲು ಆಗುವುದಿಲ್ಲ ಎಂದು ಹೇಳಿತ್ತು.

ಜಿ.ಎನ್. ಸಾಯಿಬಾಬಾ

ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ 24 ಗಂಟೆಗಳ ಒಳಗೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿಗೆ ಹೋದಾಗ ಮೊದಲಿಗೆ ಅದು ಜಸ್ಟಿಸ್ ಚಂದ್ರಚೂಡ್ ಅವರ ಎದುರಿಗೆ ಬಂದಿತ್ತು. ಇನ್ನೆರಡೇ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಆಗಲಿದ್ದ ಅವರು, ಯಾವುದೇ ತುರ್ತು ಅಗತ್ಯ ಇಲ್ಲದ ಕಾರಣ 2 ದಿನಗಳ ನಂತರ ಸೋಮವಾರಕ್ಕೆ ಪ್ರಕರಣ ಕೈಗೆತ್ತಿಕೊಳ್ಳಬಹುದು ಎಂದಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಕರಣವನ್ನು ಬೇರೆ ಪೀಠದ ಮುಂದೆ ತುರ್ತಾಗಿ ತರುವಂತೆ ಕೇಳಿದ ಮೇರೆಗೆ, ಶನಿವಾರ ಜಸ್ಟಿಸ್ ಶಾ ಹಾಗೂ ಬೇಲಾ ತ್ರಿವೇದಿ ಅವರ ಪೀಠದ ಮುಂದೆ ಪ್ರಕರಣವನ್ನು ತಂದು ತಡೆಯಾಜ್ಞೆಯನ್ನು ಪಡೆಯಲಾಯಿತು. ಈ ಪ್ರಕರಣದ ಆಳ ಅಗಲಗಳನ್ನು ಬಗೆಯುತ್ತ ಹೋದರೆ ಅಲ್ಲಿ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಅಂತಃಸಾಕ್ಷಿಗೆ ಚೂರಿ ಇರಿದ ಅನುಭವವಾಗುತ್ತದೆ.

ಜಸ್ಟಿಸ್ ರೋಹಿತ್ ದೇವ್ ತಮ್ಮ ರಾಜೀನಾಮೆಗೆ ಯಾವುದೇ ಕಾರಣಗಳನ್ನು ನೀಡಿರದೇ ಇರಬಹುದು ಆದರೆ ಇತ್ತೀಚೆಗೆ ಅವರನ್ನು ನಾಗಪುರದಿಂದ ಅಲಹಾಬಾದ್‌ಗೆ ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವೂ ಕಾರಣ ಎನ್ನಲಾಗುತ್ತಿದೆ.

ಕೆಲವೊಂದು ಸಂದರ್ಭಗಳಲ್ಲಿ ಕಾರಣಗಳನ್ನು ನೇರವಾಗಿ ಹೇಳದೆ ಇದ್ದರೂ ಆ ಸಂದರ್ಭದ ಹಿನ್ನೆಲೆ ಹಾಗೂ ಅದನ್ನು ಸುತ್ತುವರಿದ ಘಟನಾವಳಿಗಳ ಹಿನ್ನೆಲೆಯಲ್ಲಿ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಈ ವಿಶ್ಲೇಷಣೆಗಳು ತರ್ಕದ ಹಿನ್ನಲೆಗಳು ಎಲ್ಲವನ್ನು ಜಾಲಾಡಿದಾಗ ವಸ್ತುಸ್ಥಿತಿ ಗೋಚರವಾಗಬಹುದು. ಇಂದಿನ ಮಾಧ್ಯಮಗಳ ದಿವಾಳಿತನ ಮತ್ತು ಆಡಳಿತ ಪಕ್ಷದೆಡೆಗಿನ ಭಟ್ಟಂಗಿತನವನ್ನು ನೋಡುವ ಯಾವುದೇ ವ್ಯಕ್ತಿಗೆ ವಸ್ತುನಿಷ್ಠ ವರದಿ ಹಾಗೂ ಕಾರಣಗಳು ಕಾಣುವ ಸಾಧ್ಯತೆಗಳಿಲ್ಲ.

ದೇಶದ ಆಗುಹೋಗುಗಳನ್ನು ಕೇವಲ ಆ ದಿನದ ಘಟನೆಗಳಂತೆ ನೋಡುವವರಿಗೆ ಒಂದು ಗಂಭೀರ ಘಟನೆಯ ಚಾರಿತ್ರಿಕ ಹಿನ್ನಲೆಯಾಗಲಿ ಅದು ಮುಂದೆ ದೇಶದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯಾಗಲಿ ಅರಿವು ಇರುವುದಿಲ್ಲ. ಜಸ್ಟಿಸ್ ದೇವ್ ಅವರ ರಾಜೀನಾಮೆ ಕೇವಲ ಒಂದು ಸಣ್ಣ ಘಟನೆ ಅಲ್ಲ.

ಇನ್ನು ವೃತ್ತಿಬಾಂಧವರಿಗೆ ಇದೊಂದು ನೋವಿನ ಸಂಗತಿ. ಒಬ್ಬ ದಕ್ಷ ನ್ಯಾಯಮೂರ್ತಿಯ ರಾಜೀನಾಮೆ ಕೆಲಸದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಆದರೆ ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ಇರಿಸಿ ದೇಶದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರತಿಯೊಬ್ಬರಿಗೂ ಇದೊಂದು ಆಘಾತಕಾರಿ ಸುದ್ದಿ.

ಬಾರ್ ಎಂಡ್ ಬೆಂಚ್ ವರದಿಯ ಪ್ರಕಾರ 2017ರಿಂದ ಈಚೆಗೆ ಒಟ್ಟು 15 ಜನ ನ್ಯಾಯಮೂರ್ತಿಗಳು ಬಾಂಬೆ ಹೈಕೋರ್ಟ್‌ಗೆ ರಾಜೀನಾಮೆಯನ್ನು ನೀಡಿದ್ದಾರೆ. ಇನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ನ್ಯಾಯಮೂರ್ತಿಗಳು ಎಂಥ ಕಠಿಣ ಪರಿಸ್ಥಿತಿಗಳಲ್ಲೂ ತಮ್ಮ ನಿಷ್ಠೆ, ಪ್ರಾಮಾಣಿಕತೆಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂಬುದು ಸಮಾಜದ ಆಶಯ. ಆದರೆ ಒಂದು ವ್ಯತಿರರಿಕ್ತ ಪರಿಸ್ಥಿತಿಯಲ್ಲಿ ಸಮಗ್ರ ವ್ಯವಸ್ಥೆಯನ್ನೇ ಎದುರು ಹಾಕಿಕೊಳ್ಳುವ ದಾಷ್ಟ್ರ್ಯ ಮತ್ತು ಅಗತ್ಯ ಎಷ್ಟು ಜನರಿಗೆ ಇರುತ್ತದೆ? ತಮ್ಮ ತೀರ್ಪುಗಳಲ್ಲಿ ಕಾನೂನುಗಳ ಉಲ್ಲೇಖಾ, ವಿಶ್ಲೇಷಣೆಗಳ ಜೊತೆಗೆ ಧರ್ಮದ ತಿರುಳು, ಸಾರ ಮುಂತಾದ ಉದಾಹರಣೆಗಳನ್ನು ನೀಡುತ್ತಿದ್ದ ಕೆಲವು ನ್ಯಾಯಮೂರ್ತಿಗಳನ್ನು ನಾವು ನೋಡಿದ್ದೇವೆ; ಆದರೆ ಪ್ರಖ್ಯಾತ ಕಾನೂನು ತಜ್ಞ ಡಾ. ಮೋಹನ್ ಗೋಪಾಲ್ ಅವರು ನೀಡಿರುವ ಒಂದು ಉಪನ್ಯಾಸದಲ್ಲಿ “ಸಂವಿಧಾನದಿಂದ ಮೂಲವನ್ನು ಗ್ರಹಿಸುವ ಬದಲು ಧರ್ಮಗ್ರಂಥಗಳಿಂದ ಆಕರಗಳನ್ನು ಹುಡುಕಿ ತೀರ್ಪು ನೀಡುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ ಕಳೆದ ದಶಕದಲ್ಲಿ ಹೆಚ್ಚಾಗಿವೆ” ಎಂದು ಉದಾಹರಣೆಗಳ ಮೂಲಕ ಹೇಳುತ್ತಾರೆ. ಅಂದರೆ ಇವತ್ತಿನ ಧರ್ಮದ ಅಮಲಿನ ಆಡಳಿತ ಪಕ್ಷಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅರ್ಥ. ಇನ್ನು ಸಂವಿಧಾನಾತ್ಮಕವಾಗಿ ತೀರ್ಪು ನೀಡಿದರೆ ಅನಪೇಕ್ಷಿತ ಮತ್ತು ಅನಿರೀಕ್ಷಿತ ವರ್ಗಾವಣೆಗಳು ಕಾಯುತ್ತವೆ ಎಂದರೆ ನ್ಯಾಯಮೂರ್ತಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಹೇಗೆ ಸಾಧ್ಯ?

ನ್ಯಾಯಾಂಗ ಇವತ್ತು ಅಡ್ಡರಸ್ತೆಯಲ್ಲಿ ಇದೆಯಾ? ನ್ಯಾಯದಾನ ಎಂಬುದು ಎಲ್ಲಿದೆ? ಅಸಮಾನತೆ ಮತ್ತು ಅಸಹಿಷ್ಣುತೆಯ ಪ್ರತಿಬಿಂಬವಾದ ಮನು ಮಹಾರಾಜನ ಮೂರ್ತಿಯನ್ನು ತನ್ನ ಆವರಣದಲ್ಲಿ ಪ್ರತಿಷ್ಠಾಪಿಸಿದ ರಾಜಸ್ಥಾನದ ಹೈಕೋರ್ಟ್ ಜನರಿಗೆ ಕೊಡುತ್ತಿರುವ ಸಂದೇಶವೇನು? ಇವೆಲ್ಲಾ ಪ್ರಶ್ನೆಗಳು ಜಸ್ಟಿಸ್ ರೋಹಿತ್ ದೇವ್ ರಾಜೀನಾಮೆ ಹಿನ್ನೆಲೆಯಲ್ಲಿ ಏಳುತ್ತವೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...