ಕೇರಳದ ಕಣ್ಣೂರು ಜಿಲ್ಲೆಯ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಏಕಾಏಕಿ ಕಾಣಿಸಿಕೊಂಡಿದೆ. ಅದರ ನಂತರ ಜಿಲ್ಲಾಧಿಕಾರಿಗಳು ಅಲ್ಲಿನ ಎರಡು ಫಾರ್ಮ್ಗಳಲ್ಲಿ ಹಂದಿಗಳನ್ನು ಹತ್ಯೆ ಮಾಡಲು ಆದೇಶಿಸಿದ್ದಾರೆ.
ಶುಕ್ರವಾರ ಮಲೆಯಂಪಾಡಿ ಖಾಸಗಿ ಜಮೀನಿನಲ್ಲಿರುವ ಫಾರ್ಮ್ ನಲ್ಲಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿಜ್ವರ ಇರುವುದನ್ನು ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ನಂತರ ಜಿಲ್ಲೆಯ ಅಧಿಕಾರಿಗಳು, ಆಫ್ರಿಕನ್ ಹಂದಿಜ್ವರ ಪತ್ತೆಯಾದ ಫಾರ್ಮ್ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಮತ್ತೊಂದು ಫಾರ್ಮ್ ನಲ್ಲಿನ ಹಂದಿಗಳನ್ನು ಹತ್ಯೆ ಮಾಡಲು ಸೂಚಿಸಿದ್ದಾರೆ.
ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಲಾಗಿದೆ. 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ಹಂದಿ ಮಾಂಸದ ವಿತರಣೆ ಮತ್ತು ಮಾರಾಟ ಮತ್ತು ಇತರ ಸ್ಥಳಗಳಿಗೆ ಸಾಗಿಸುವುದನ್ನು ಮೂರು ತಿಂಗಳವರೆಗೆ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ಎರಡು ತಿಂಗಳಿನಿಂದ ಸೋಂಕು ಕಾಣಿಸಿಕೊಂಡ ಫಾರ್ಮ್ ನಿಂದ ಬೇರೆ ಫಾರ್ಮ್ ಗಳಿಗೆ ಹಂದಿಗಳನ್ನು ಸಾಗಿಸಲಾಗಿದೆಯೇ ಎಂದು ಕೂಡ ಖಚಿತಪಡಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನು ಓದಿ: ರಾಜಸ್ಥಾನ: ಮರ ಕಡಿದ ಶಂಕೆಯ ಮೇಲೆ ಮುಸ್ಲಿಂ ಯುವಕನಿಗೆ ಥಳಿಸಿ ಹತ್ಯೆ; ಅರಣ್ಯಾಧಿಕಾರಿಗಳು ಸೇರಿ 10 ಆರೋಪಿಗಳ ಬಂಧನ