ಕೇಂದ್ರ ಪರಿಸರ ಸಚಿವಾಲಯದ ಅಧೀನದ ತಜ್ಞರ ಮೌಲ್ಯಮಾಪನ ಸಮಿತಿ(ಇಎಸಿ) ಸದಸ್ಯರಾಗಿ ಜನಾರ್ದನ್ ಚೌಧರಿ ಅವರನ್ನು ನೇಮಕ ಮಾಡಿದ್ದಕ್ಕೆ ವಿರೋಧ ಪಕ್ಷಗಳು ಮಂಗಳವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೌಧರಿ ಅದಾನಿ ಕಂಪೆನಿಯ ಉದ್ಯೋಗಿ ಎಂದು ಆರೋಪಿಸಿದೆ.
ಮಾದ್ಯಮ ವರದಿಗಳ ಪ್ರಕಾರ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ನ ಸಲಹೆಗಾರರಾಗಿರುವ ಚೌಧರಿಯನ್ನು ಅದಾನಿ ಸಮೂಹದ ಜಲವಿದ್ಯುತ್ ಯೋಜನೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಿರುವ ಪರಿಸರ ಸಚಿವಾಲಯದ ಮೌಲ್ಯಮಾಪನ ಸಮಿತಿಗೆ ಸೆಪ್ಟಂಬರ್ನಲ್ಲಿ ನೇಮಕ ಮಾಡಲಾಗಿದೆ.
ಪರಿಸರ ಸಚಿವಾಲಯದ ಅಡಿಯ ಇಎಸಿ ಸದಸ್ಯರನ್ನಾಗಿ ಅದಾನಿ ಕಂಪೆನಿಯ ಉದ್ಯೋಗಿ ಜನಾರ್ದನ್ ಚೌಧರಿ ಅವರನ್ನು ಅದಾನಿಯ ಪ್ರಧಾನ ಸೇವಕ ನೇಮಿಸಿದ್ದಾರೆ. ಈ ಸಮಿತಿಯು ಅದಾನಿಯ 6 ಯೋಜನೆಗಳನ್ನು (10,300 MW) ಅನುಮೋದಿಸಬೇಕಾಗಿದೆ ಎಂದು ಕೇರಳ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಸತಾರದಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಇವರೇ ಒಪ್ಪಿಗೆ ನೀಡಿದ್ದಾರೆ ಎಂದು ಆರೋಪಿಸಿದೆ. ಇದು ವ್ಯಾಪಾರವನ್ನು ಸುಲಭಗೊಳಿಸುವ ವಿಧಾನ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಚೌದರಿ ಅವರು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ನ (AGEL) ಪ್ರಮುಖ ಸಲಹೆಗಾರ, ಈಗ ಅವರು ಕೇಂದ್ರದ ಪರಿಸರ ಸಚಿವಾಲಯದ ಮೌಲ್ಯಮಾಪನ ಸಮಿತಿಯ (ಇಎಸಿ) ಸದಸ್ಯರಾಗಿದ್ದಾರೆ. ಸೆಪ್ಟೆಂಬರ್ 27ರಂದು ಕೇಂದ್ರ ಪರಿಸರ ಸಚಿವಾಲಯವು 7 ಸಾಂಸ್ಥಿಕ ಸದಸ್ಯರ ನೇಮಕದ ವೇಳೆ ಚೌಧರಿ ಅವರನ್ನು ಕೂಡ ನೇಮಿಸಿದ್ದರು.
ಶಿವಸೇನಾ (ಉದ್ಧವ್ ಬಣ) ಹಾಗೂ ತೃಣಮೂಲ ಕಾಂಗ್ರೆಸ್ ಕೂಡ ಪರಿಸರ ಸಚಿವಾಲಯದ ಮೌಲ್ಯಮಾಪನ ಸಮಿತಿಗೆ ಚೌದರಿಯನ್ನು ನೇಮಕ ಮಾಡಿರುವುದನ್ನು ವಿರೋಧಿಸಿದೆ. ದೋಸ್ತಿ ಎಂದರೆ ಹೀಗಿರಬೇಕು ಎಂದು ಶಿವಸೇನಾ ರಾಜ್ಯಸಭೆ ಸದಸ್ಯೆ ಪ್ರಿಯಾಂಕ ಚತುರ್ವೇದಿ ಟೀಕಿಸಿದ್ದಾರೆ.
ಇದನ್ನು ಓದಿ: ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಆರೋಪಿ ಅರೆಸ್ಟ್