ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ಬಿಡುಗಡೆ ಮಾಡಿರುವ ಬಗ್ಗೆ ಕಾಂಗ್ರೆಸ್ ಬುಧವಾರ ಪ್ರಶ್ನಿಸಿದ್ದು, ಈ ವಿಳಂಬ ಉದ್ದೇಶಪೂರ್ವಕವೇ ಎಂದು ಕೇಳಿದೆ.
ಈ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಪಿಎಂ-ಕಿಸಾನ್ನ 6ನೇ ಕಂತು ಆ.1, 2020ರಂದು, 9ನೇ ಕಂತು ಆ.9, 2021ರಂದು ಮತ್ತು 12ನೇ ಕಂತು ಅ.17, 2022 ರಂದು ಬಿಡುಗಡೆಯಾಗಿದೆ.
ಈಗ ಪಿಎಂ-ಕಿಸಾನ್ನ 15ನೇ ಕಂತು ಇಂದು ನ.15, 2023 ರಂದು ಬಿಡುಗಡೆ ಮಾಡಲಾಗಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢಕ್ಕೆ ಎರಡು ದಿನಗಳಲ್ಲಿ ಚುನಾವಣೆ ಇದೆ ಮತ್ತು ಮುಂದಿನ 10 ದಿನಗಳಲ್ಲಿ ರಾಜಸ್ಥಾನದಲ್ಲಿ ಮತ್ತು 15 ದಿನಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಇಂದು ರೈತರಿಗೆ 15ನೇ ಕಂತು ಬಿಡುಗಡೆ ಮಾಡಲಾಗುತ್ತಿದೆ. ಈ ವಿಳಂಬವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲವೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶದಾದ್ಯಂತ 8 ಕೋಟಿಗೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಯೋಜನೆಯ 15ನೇ ಕಂತಾಗಿ 18,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.
ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ ಜಂಜಾಟಿಯಾ ಗೌರವ್ ದಿವಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದ್ದಾರೆ.
ಜಂಜಾಟಿಯಾ ಗೌರವ್ ದಿವಸ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಕಂತಿನಲ್ಲಿ 8 ಕೋಟಿಗೂ ಹೆಚ್ಚು ರೈತರು 18,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಪಡೆಯುತ್ತಾರೆ ಎಂದು ಹೇಳಿತ್ತು.
ಇದನ್ನು ಓದಿ: ಇಸ್ರೇಲ್ಗೆ ಬೆಂಬಲ: ಬೈಡನ್ ನಿಲುವಿಗೆ ಅಮೆರಿಕದಲ್ಲಿ ಹೆಚ್ಚಿದ ಆಂತರಿಕ ಅಸಮಾಧಾನ