ಕೆಲ ತಿಂಗಳ ಹಿಂದೆ ಸಂಸತ್ತಿನಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿಯಿಂದ ಅವಾಚ್ಯ ಶಬ್ದಗಳ ನಿಂದನೆ ಎದುರಿಸಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಅಮ್ರೋಹ್ ಸಂಸದ ಡ್ಯಾನಿಶ್ ಅಲಿ ಅವರನ್ನು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದಿಂದ (ಬಿಎಸ್ಪಿ) ಅಮಾನತುಗೊಳಿಸಲಾಗಿದೆ.
BSP suspends Danish Ali for engaging in 'anti-party' activities
Read @ANI Story | https://t.co/fvzNa6rakY#DanishAli #BSP #bahujansamajparty pic.twitter.com/khzyKLyjZP
— ANI Digital (@ani_digital) December 9, 2023
“ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಸಂಸದ ಡ್ಯಾನಿಶ್ ಅಲಿ ಅವರನ್ನು ಇಂದು(ನವೆಂಬರ್ 9,2023) ಪಕ್ಷದಿಂದ ಅಮಾನತುಗೊಳಿಸಲಾಗಿದೆ” ಎಂದು ಬಿಎಸ್ಪಿ ಪ್ರಕಟನೆಯಲ್ಲಿ ತಿಳಿಸಿದೆ.
“ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನಿಮಗೆ ಮೊದಲೇ ಸೂಚನೆ ನೀಡಲಾಗಿತ್ತು. ನೀವು ಯಾವಾಗಲೂ ಪಕ್ಷದ ಮಾರ್ಗವನ್ನು ಅನುಸರಿಸುತ್ತೀರಿ ಎಂದು ಭರವಸೆ ನೀಡಿದ ದೇವೇಗೌಡರ ಒತ್ತಾಯದ ಮೇರೆಗೆ ನಿಮಗೆ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಆದರೆ, ಪಕ್ಷಕ್ಕೆ ಸೇರ್ಪಡೆಗೊಳ್ಳುವಾಗ ನೀಡಿದ ಭರವಸೆಗಳನ್ನು ನೀವು ಮರೆತಿದ್ದೀರಿ. ಹೀಗಾಗಿ ನಿಮ್ಮನ್ನು ಅಮಾನತು ಮಾಡಲಾಗುತ್ತಿದೆ” ಎಂದು ಡ್ಯಾನಿಶ್ ಅಲಿ ಅವರಿಗೆ ನೀಡಿದ ನೋಟಿಸ್ನಲ್ಲಿ ಬಿಎಸ್ಪಿ ಹೇಳಿದೆ. ಸಂಸದರ ಅಮಾನತಿಗೆ ಯಾವುದೇ ನಿರ್ದಿಷ್ಟ ಕಾರಣ ನೋಟಿಸ್ನಲ್ಲಿ ಉಲ್ಲೇಖಿಸಿಲ್ಲ” ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಬಿಜೆಪಿ ಸಂಸದ ರಮೇಶ್ ಬಿಧುರಿಯಿಂದ ಆಕ್ಷೇಪಾರ್ಹ ನಿಂದನೆ ಎದುರಿಸಿದ ಬಳಿಕ ಡ್ಯಾನಿಶ್ ಅಲಿ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವರು ರಮೇಶ್ ಬಿಧುರಿ ಹೇಳಿಕೆಯನ್ನು ಖಂಡಿಸಿದ್ದರು. ಡ್ಯಾನಿಶ್ ಅಲಿ ಬೆನ್ನಿಗೆ ನಿಂತಿದ್ದರು.
ನಿನ್ನೆ (ಡಿ.8) ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿದ ಬಳಿಕ ಪ್ರತಿಭಟಿಸಿದವರಲ್ಲಿ ಡ್ಯಾನಿಶ್ ಅಲಿ ಮುಂಚೂಣಿಯಲ್ಲಿದ್ದರು. ತಾನು ಸಂಸತ್ನಲ್ಲಿ ನಿಂದನೆ ಎದುರಿಸಿದ್ದಾಗ ಧ್ವನಿಯೆತ್ತಿದ್ದ ಮಹುವಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಡ್ಯಾನಿಶ್ ಅಲಿ ಸಂಸತ್ತಿನ ಮುಂದೆ ಪ್ರತಿಭಟಿಸಿದ್ದರು. ಆದರೆ, ಇಂದು ಅವರನ್ನೇ ಪಕ್ಷ ಅಮಾನತ್ತು ಮಾಡಿದೆ.
ಗಮನಾರ್ಹ ಸಂಗತಿಯೆಂದರೆ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷ ಬಿಜೆಪಿ ನೇತೃತ್ವದ ಎನ್ಡಿಎ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಈ ಎರಡೂ ಒಕ್ಕೂಟಗಳನ್ನು ಸೇರಿಲ್ಲ. ಡ್ಯಾನಿಶ್ ಅಲಿ ಇಂಡಿಯಾ ಒಕ್ಕೂಟದ ನಾಯಕರ ಜೊತೆ ಕಾಣಿಸಿಕೊಂಡಿದ್ದಕ್ಕೆ ಪಕ್ಷದಿಂದ ಮಾನತು ಮಾಡಿರಬಹುದಾ? ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಯಾಚಿಸಿದ ಬಿಜೆಪಿ ಸಂಸದ ರಮೇಶ್ ಬಿಧುರಿ