Homeಮುಖಪುಟಮೋದಿ ಸರ್ಕಾರದಿಂದ ಫ್ಯಾಸಿಸಂ ದಾಳಿ: ದೀಪಂಕರ್ ಭಟ್ಟಾಚಾರ್ಯ

ಮೋದಿ ಸರ್ಕಾರದಿಂದ ಫ್ಯಾಸಿಸಂ ದಾಳಿ: ದೀಪಂಕರ್ ಭಟ್ಟಾಚಾರ್ಯ

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಫ್ಯಾಸಿಸಂ ದಾಳಿ ನಡೆಸುತ್ತಿದೆ. ಇದಕ್ಕೆ ದೃತಿಗೆಡದೆ ಸಮರ್ಥವಾಗಿ ಪ್ರತಿರೋಧ ಒಡ್ಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಉಳಿಸಲು ಸಾರ್ವಜನಿಕರು ಕಟಿಬದ್ಧರಾಗಬೇಕಿದೆ ಎಂದು ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳಿದರು.

ರಾಯಚೂರಿನ ಸಿಂಧನೂರು ನಗರದ ಟೌನ್‌ಹಾಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ 2ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಈ ದೇಶ ಹಿಂದೂ ರಾಷ್ಟ್ರ ಏನಾದರೂ ಆದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ’ ಎಂದು ಹೇಳಿದ್ದಾರೆ. ಆದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿವೆ. ಸಮಾಜವನ್ನು ಒಂದುಗೂಡಿಸುವುದಕ್ಕಿಂತ ವಿಭಜಿಸುವ ಕೃತ್ಯ ಯಥೇಚ್ಛವಾಗಿ ನಡೆಯುತ್ತಿದೆ. ಎರಡು ನೂರು ವರ್ಷ ದೇಶವನ್ನು ಆಳಿದ ಬ್ರಿಟೀಷರನ್ನು ತ್ಯಾಗ, ಬಲಿದಾನಗಳ ಮೂಲಕ ಈ ದೇಶದ ಸ್ವಾತಂತಂತ್ರ್ಯ ಸೇನಾನಿಗಳು ತೊಲಗಿಸಿದ್ದಾರೆ. ಆದರೆ, ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಸಾಮ್ರಾಜ್ಯ ಶಾಹಿಗಳೊಂದಿಗೆ ಶಾಮೀಲಾಗುವ ಮೂಲಕ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಪಾದಿಸಿದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ಸರ್ಕಾರದ ಕಾನೂನುಗಳು ವರ್ಷದಿಂದ ವರ್ಷಕ್ಕೆ ಕಠಿಣಗೊಳ್ಳುತ್ತಿವೆ. ಸಾರ್ವಜನಿಕ ಉದ್ದಿಮೆಗಳು ವರ್ಷದಿಂದ ವರ್ಷಕ್ಕೆ ಖಾಸಗಿಯವರ ಪಾಲಾಗುತ್ತಿವೆ. ಅಂಬಾನಿ, ಆದಾನಿಯಂತವರು ಸಾರ್ವಜನಿಕ ಉದ್ಯಮಗಳನ್ನು ತಮ್ಮ ಕಬ್ಜಾಕ್ಕೆ ತೆಗೆದುಕೊಳ್ಳುವ ಮೂಲಕ ಸಂಪತ್ತನ್ನು ದ್ವಿಗುಣಗೊಳಿಸಿಕೊಳ್ಳುತ್ತಿದ್ದಾರೆ. ಘನತೆಯುಕ್ತ ಬದುಕು ನಡೆಸಬೇಕಾದ ಕಾರ್ಮಿಕರನ್ನು ದೇಶದ ಆಡಳಿತಾರೂಢ ಸರ್ಕಾರ ಕಾರ್ಮಿಕ ಕಾನೂನುಗಳಿಗೆ ಮನಬಂದಂತೆ ತಿದ್ದುಪಡಿ ತರುವ ಮೂಲಕ ಗುಲಾಮಗಿರಿಗೆ ತಳ್ಳುತ್ತಿದೆ. ದುಡಿಯುವ ವರ್ಗದ ಜನರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಕಾರ್ಪೋರೇಟ್ ಮತ್ತು ಕೋಮುವಾದಿಗಳನ್ನು ಪ್ರತಿರೋಧಿಸುವ ಸವಾಲು ನಮ್ಮೆಲ್ಲರ ಮುಂದಿದೆ. ಇದಕ್ಕೆ ದೀರ್ಘ ಸಂಘರ್ಷವೇ ಬೇಕಿದೆ. ದೇಶದಲ್ಲಿ ಎಲ್ಲ ಎಡ ಪಕ್ಷಗಳು ಒಗ್ಗಟ್ಟಾಗಿ ಪರ್ಯಾಯವನ್ನು ಹುಡುಕಬೇಕಿದೆ. ಇಲ್ಲದೇ ಹೋದರೆ ದೇಶದ ದುಡಿಯುವ ವರ್ಗ ಮತ್ತಷ್ಟು ತೊಂದರೆಗೀಡಲಾಗಲಿದೆ ಎಂದು ಹೇಳಿದರು.

ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೋ ಮಾತನಾಡಿ, ದೇಶದಲ್ಲಿ  ಇಂದು ಎಲ್ಲ ದುಡಿಯುವ ಜನರು ಕಡುಕಷ್ಟ ಕಾಲದಲ್ಲಿ ಬದುಕುತ್ತಿದ್ದಾರೆ. ಬಿಜೆಪಿ ಅಜೆಂಡಾ ಬಹುತ್ವ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿದೆ. ಹಿಂದೂರಾಷ್ಟ್ರ ಪರಿಕಲ್ಪನೆಯೇ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬಂದೊದಗಿದ ಆಪತ್ತಾಗಿದೆ. ಒಂದು ವೇಳೆ ಹಿಂದೂ ರಾಷ್ಟ್ರ ಕಲ್ಪನೆ ಸಾಕಾರಗೊಂಡಿದ್ದಾದರೆ ಈ ದೇಶದಲ್ಲಿ ಪುನಃ ಜಾತಿ ಶ್ರೇಣಿಕೃತ ವ್ಯವಸ್ಥೆ ಬಂದು ತಳ ಸಮುದಾಯಗಳು ಇನ್ನಷ್ಟು ಸಂಕಷ್ಟ, ದಬ್ಬಾಳಿಕೆಯನ್ನು ಎದುರಿಸಲಿ. ಹಾಗಾಗಿ ಫ್ಯಾಸಿಸಂ ಸೋಲಿಸಲು ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬೇಕು ಎಂದು ಕರೆ ನೀಡಿದರು.

ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ಜನರಿಗೆ ಹುಸಿ ಭ್ರಮೆಯನ್ನು ತುಂಬುತ್ತಿರುವ ಸರ್ಕಾರಗಳಿಂದಾಗಿ ಇಂದು ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ತಲುಪಿದೆ. ಅಂಬಾನಿ, ಆದಾನಿ ಸೇರಿದಂತೆ ದೇಶದ ನೂರಕ್ಕೂ ಹೆಚ್ಚು ಶ್ರೀಮಂತರ ಆಸ್ತಿ ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಏರುತ್ತಿದ್ದರೆ, ಬಡವರ ತಲಾ ಆದಾಯ ತೀವ್ರ ಕುಸಿತ ಕಂಡಿದೆ. ಮೋದಿಯವರ ಸರ್ಕಾರ ಬಹುಜನರ ಮೇಲೆ ವಿಪರೀತ ತೆರಿಗೆಯನ್ನು ಹೇರಿ, ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಿದೆ. ಆರ್‌ಎಸ್‌ಎಸ್ ಮತ್ತು ಹಿಂದೂಪರ ಸಂಘಟನೆಗಳು ಕಾರ್ಪೋರೇಟ್ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ಬಿಜೆಪಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿದೆ. ಜನಪರವಾಗಿ ಧ್ವನಿ ಎತ್ತಿದವರನ್ನು ಜೈಲಿಗೆ ಹಾಕುವ ಮೂಲಕ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ. ಹಾಗಾಗಿ ಎಡ ಚಳವಳಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಕೋಮುವಾದಿ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ಐಪ್ವಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ರತಿರಾವ್ ಅವರು ಮಾತನಾಡಿ, ಕೋಮುವಾದ, ಕಾರ್ಪೋರೇಟ್‌ವಾದ ಮತ್ತು ಮನುವಾದ ಮಹಿಳಾ ಅನುಪಾತದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆ ಭ್ರೂಣ ಹತ್ಯೆಯಂತಹ ಪೈಶಾಚಿಕ ಕೃತ್ಯಗಳನ್ನು ಪೋಷಿಸುತ್ತಿದೆ. ಈ ದುರ್ದಾಳಿಯನ್ನು ಸಮರ್ಥವಾಗಿ ಪ್ರತಿರೋಧಿಸಬೇಕು ಎಂದು ಕರೆ ನೀಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಅವರು ಮಾತನಾಡಿ, ಹುಸಿ ರಾಷ್ಟ್ರೀಯ ವಾದವನ್ನೇ ಆರ್‌ಎಸ್‌ಎಸ್ ಮತ್ತು ಹಿಂದೂಪರ ಸಂಘಟನೆಗಳು ಸಮಾಜದಲ್ಲಿ ಬಿತ್ತುವ ಮೂಲಕ ಸಮಾಜವನ್ನು ಒಡೆಯುತ್ತಿವೆ. ಇದಕ್ಕೆ ಕಮ್ಯುನಿಸ್ಟರು ಚಳವಳಿಗಳ ಮೂಲಕವೇ ಉತ್ತರ ಕೊಡಬೇಕಿದೆ ಎಂದರು.

ಬೃಹತ್ ರ‍್ಯಾಲಿ:  ನಗರದ ಎಪಿಎಂಸಿಯಿಂದ ಟೌನ್‌ಹಾಲ್‌ವರೆಗೆ ಬೃಹತ್ ರ‍್ಯಾಲಿ ನಡೆಯಿತು. ಭಗತ್ ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಅವರ ನೇತೃತ್ವದಲ್ಲಿ ಹುತಾತ್ಮರ ಭಾವಚಿತ್ರಗಳೊಂದಿಗೆ 100ಕ್ಕೂ ಹೆಚ್ಚು ಆಟೋಗಳ ರ‍್ಯಾಲಿ ಗಮನ ಸೆಳೆಯಿತು. ರ‍್ಯಾಲಿಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು, ವಿವಿಧ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ : ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ, ಸಿ ಕೆ ನಾಣು ಉಚ್ಚಾಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...