ಬಹುಜನ ಸಮಾಜ ಪಕ್ಷ (ಬಿಎಸ್ಪಿ) ದ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಮತ್ತು ನಿಂದನೀಯ ಹೇಳಿಕೆಗೆ ಸಂಬಂಧಪಟ್ಟಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಸಂಸದ ರಮೇಶ್ ಬಿಧುರಿ ಗುರುವಾರ ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿ ಮುಂದೆ ಕ್ಷಮೆ ಯಾಚಿಸಿದ್ದಾರೆ.
ಬಿಜೆಪಿ ಸಂಸದ ಸುನೀಲ್ ಕುಮಾರ್ ಸಿಂಗ್ ನೇತೃತ್ವದ ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿಯು ಗುರುವಾರ ಸಭೆ ಸೇರಿ ಬಿಧುರಿ ಮತ್ತು ಅಲಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈ ವೇಳೆ ಬಿಧುರಿ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಧುರಿ ಕ್ಷಮೆ ಯಾಚಿಸಿದ ಹಿನ್ನೆಲೆ ಹಕ್ಕು ಬಾಧ್ಯತಾ ಸಮಿತಿ ಪ್ರಕರಣ ಕೊನೆಗೊಳಿಸಿ ಸ್ವೀಕರ್ಗೆ ವರದಿ ಒಪ್ಪಿಸುವ ಸಾಧ್ಯತೆ ಇದೆ.
ಕಳೆದ ಸೆಪ್ಟೆಂಬರ್ 21ರಂದು ಲೋಕಸಭೆಯಲ್ಲಿ ಚಂದ್ರಯಾನ ಮಿಷನ್-3ರ ಯಶಸ್ಸಿನ ಕುರಿತ ಚರ್ಚೆಯ ವೇಳೆ ಸಂಸದ ಬಿಧುರಿ ಡ್ಯಾನಿಶ್ ಅಲಿ ಅವರನ್ನು ಗುರಿಯಾಗಿಸಿ, ಭದ್ವಾ (ಪಿಂಪ್), ಕತ್ವಾ (ಮುಂಜಿ ಮಾಡಿಸಿಕೊಂಡವರು) ಮುಲ್ಲಾ ಉಗ್ರವಾದಿ (ಮುಸ್ಲಿಂ ಭಯೋತ್ಪಾದಕ), ಅತಂಕವಾದಿ (ಭಯೋತ್ಪಾದಕ) ಇತ್ಯಾದಿ ಅಸಂಸದೀಯ ಪದಗಳನ್ನು ಬಳಸಿ ನಿಂದಿಸಿದ್ದರು. ಕೋಮುವಾದಿ ಭಾಷಣ ಮಾಡಿದ್ದರು. ಇದಕ್ಕೆ ದೇಶದಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.
ಬಿಧುರಿ ಹೇಳಿಕೆಗೆ ಲೋಕಸಭೆಯಲ್ಲಿ ಅಂದೇ ವಿಷಾದ ವ್ಯಕ್ತಪಡಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದ ಹೇಳಿಕೆಯಿಂದ ಪ್ರತಿಪಕ್ಷದ ಸದಸ್ಯರ ಮನಸ್ಸಿಗೆ ನೋವಾಗಿದ್ದರೆ ಸಂಸದ ಹೇಳಿಕೆಯನ್ನು ಕಡತಗಳಿಂದ ತೆಗೆದು ಹಾಕಲು ನಾನು ಸ್ಪೀಕರ್ಗೆ ಆಗ್ರಹಿಸುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಮೇಜು ತಟ್ಟಿ ಬೆಂಬಲ ವ್ಯಕ್ತಪಡಿಸಿದ್ದರು.
ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿ ಮುಂದೆ ಇಬ್ಬರು ಸಂಸದರನ್ನು ಕರೆದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ತನ್ನ ಹೇಳಿಕೆಗೆ ಸಂಸದ ಬಿಧುರಿ ಕ್ಷಮೆ ಯಾಚಿಸಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ಲಿವ್-ಇನ್ ಸಂಬಂಧ ಅಪಾಯಕಾರಿ ಕಾಯಿಲೆ, ಇದರ ವಿರುದ್ಧ ಕಾನೂನು ತನ್ನಿ: ಬಿಜೆಪಿ ಸಂಸದ ಆಗ್ರಹ