ಜನ ಹಣಕ್ಕಿಂತ ಸ್ವಾಭಿಮಾನಕ್ಕೆ ಬೆಲೆ ಕೊಡುತ್ತಾರೆಂಬ ಸತ್ಯ ಅನರ್ಹರಿಗೆ ತಿಳಿದಿಲ್ಲ. ಮಂಡ್ಯದ ಜನ ಸ್ವಾಭಿಮಾನಕ್ಕೆ ಬೆಲೆಕೊಟ್ಟು ಸುಮಲತಾ ಅವರಿಗೆ ಮತ ನೀಡಲಿಲ್ಲವೇ? ಹಾಗೆ ಇಲ್ಲಿನ ಮತದಾರರೂ ಹಣಕ್ಕೆ ಸ್ವಾಭಿಮಾನವನ್ನು ಮಾರಿಕೊಳ್ಳುವುದಿಲ್ಲ ಎಂದು ನಂಬಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಉಪ ಚುನಾವಣೆಗೆ ಕಹಳೆ ಊದಿದ್ದಾರೆ.
ಹೊಸಕೋಟೆಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ‘ಸ್ವಾಭಿಮಾನಿ ಸಮಾವೇಶದಲ್ಲಿ’ ಭಾಗವಹಿಸಿ ಮಾತನಾಡಿದ ಅವರು, ಎಂಬಿಟಿ ನಾಗರಾಜ್ ಅವರು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ತಮ್ಮನ್ನು ತಾವು ಮಾರಿಕೊಂಡು ಬಿಜೆಪಿ ಪಕ್ಷ ಸೇರಿರುವುದರ ಫಲ ಇಂದು ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವಂತಾಗಿದೆ. ಜನರ ತೀರ್ಪನ್ನು ಧಿಕ್ಕರಿಸಿದವರಿಗೆ ಈ ಚುನಾವಣೆ ತಕ್ಕ ಪಾಠವಾಗಬೇಕು ಎಂದಿದ್ದಾರೆ.
ಕ್ಷೇತ್ರದ ಮತದಾರರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಬೆಳಿಗ್ಗೆಯಿಂದ ರಾತ್ರಿ ಹನ್ನೆರಡು ಗಂಟೆಯವರೆಗೂ ನಮ್ಮ ಮನೆಯಲ್ಲಿ ಕೂತು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸು ಪಡೆಯುತ್ತೇನೆ ಎಂದು ಮಾತು ಕೊಟ್ಟು, ನಮ್ಮ ಮನೆ ಗೇಟಿನ ಬಳಿ ಹೋದಕೂಡಲೇ ಸುಧಾಕರ್ ಅವರ ಜೊತೆ ಮಾತನಾಡಿ ರಾಜೀನಾಮೆ ಹಿಂಪಡೆಯುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಮಾತು ಬದಲಿಸಿದವರು ನಾಗರಾಜ್, ಇಂಥವರು ನಂಬಿಕೆಗೆ ಅರ್ಹರೇ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಹಣ ಹೆಚ್ಚಿದ್ದಲ್ಲಿ ಭಯವಿರುತ್ತದೆ. ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಅಧಿಕಾಗಳನ್ನು ನೀಡಿದ್ದರೂ ನಾಗರಾಜ್ ಅವರು ಪಕ್ಷ ತೊರೆಯಲು ಕಾರಣ ಕೇಂದ್ರ ಸರ್ಕಾರದ ಭಯವಿರಬಹುದು. ಅವರು ಪಕ್ಷ ತೊರೆದದ್ದು ನನಗೆ ಬೇಸರವಿಲ್ಲ, ಆದರೆ ಕ್ಷೇತ್ರದ ಮತದಾರರ ಬೆನ್ನಿಗೆ ಚೂರಿ ಹಾಕಿ ರಾತ್ರೋರಾತ್ರಿ ಬಿಜೆಪಿ ಸೇರಿರುವುದು ಸರಿಯಲ್ಲ ಅಷ್ಟೆ. ಎಂಟಿಬಿ ನಾಗರಾಜ್ ಅವರ ಬಳಿ ಹಣವಿದೆ, ಜನರನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು ಎಂದು ತಪ್ಪು ತಿಳಿದಿದ್ದಾರೆ ಎಂದರು.
ದೇಶದ ಯುವ ಜನತೆಗೆ ಉದ್ಯೋಗವಿಲ್ಲ, ಬಡತನ, ಅಪೌಷ್ಟಿಕತೆ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ. ಸಮಾಜದ ಎರಡು ಕೋಮುಗಳ ನಡುವೆ ಬೆಂಕಿಹಚ್ಚಿ, ತನ್ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಪಕ್ಷಕ್ಕೆ ಎಂಟಿಬಿ ನಾಗರಾಜ್ ಸೇರಿದ್ದಾರಲ್ಲ, ಅವರಿಗೆ ಜನಪರ ಕಾಳಜಿ ಮತ್ತು ತಾವು ನಂಬಿದ ಸಿದ್ದಾಂತದ ಬಗ್ಗೆ ಗೌರವವೇನಾದರೂ ಇದೆಯೇ? ಎಂಟಿಬಿ ನಾಗರಾಜ್ ಸ್ಪರ್ಧೆ ಇನ್ನೂ ಖಚಿತಗೊಂಡಿಲ್ಲ. ಅವರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅವರೇ ಸ್ಪರ್ಧಿಸಲಿ ಅಥವಾ ಅವರ ಪರವಾಗಿ ಯಾರಾದರೂ ಸ್ಪರ್ಧಿಸಲಿ, ಹೊಸಕೋಟೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕ್ಷೇತ್ರದ ಜನರ ಸ್ವಾಭಿಮಾನ ಎತ್ತಿಹಿಡಿಯಿರಿ ಎಂದು ಮನವಿ ಮಾಡಿದ್ದಾರೆ.