ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ದೇಶದಾದ್ಯಂತ ಸುಮಾರು 500 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಪರೇಡ್ ನಡೆಸಲಿದೆ ಎಂದು ಸಂಘಟನೆಯು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಔಪಚಾರಿಕ ಗಣರಾಜ್ಯೋತ್ಸವ ಪರೇಡ್ನ ಮುಕ್ತಾಯದ ನಂತರ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ ಎಂದು ಅದು ಹೇಳಿದೆ.
“ಎಸ್ಕೆಎಂ ಜನವರಿ 26,2024ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಟ್ರಾಕ್ಟರ್ ಪರೇಡ್ ನಡೆಸಲಿದೆ. ಕನಿಷ್ಠ 500 ಜಿಲ್ಲೆಗಳಲ್ಲಿ ಪರೇಡ್ ನಡೆಯುವ ನಿರೀಕ್ಷೆಯಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಎಸ್ಕೆಎಂ ಮನವಿ ಮಾಡುತ್ತದೆ. ದೆಹಲಿಯಲ್ಲಿ ಗಣರಾಜ್ಯೋತ್ಸವದ ಔಪಚಾರಿಕ ಮೆರವಣಿಗೆಯ ಸಮಾರೋಪದ ಬಳಿಕ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ” ಎಂದು ಸಂಘಟನೆ ಪ್ರಕಟನೆಯಲ್ಲಿ ತಿಳಿಸಿದೆ.
ಪರೇಡ್ನಲ್ಲಿ ಭಾಗವಹಿಸುವ ರೈತರು ಸಂಘ, ಸಂಸ್ಥೆಗಳ ಧ್ವಜದೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ. ಭಾರತದ ಸಂವಿಧಾನದಲ್ಲಿರುವ ಪ್ರಜಾಪ್ರಭುತ್ವ, ಒಕ್ಕೂಟ, ಜಾತ್ಯತೀತತೆ ಮತ್ತು ಸಮಾಜವಾದದ ತತ್ವಗಳನ್ನು ರಕ್ಷಿಸಲು ರೈತರು ಪ್ರತಿಜ್ಞೆ ಮಾಡಲಿದ್ದಾರೆ. ಟ್ರ್ಯಾಕ್ಟರ್ಗಳ ಜೊತೆಗೆ, ಇತರ ವಾಹನಗಳು ಮತ್ತು ಮೋಟಾರು ಸೈಕಲ್ಗಳು ಕೂಡ ಪರೇಡ್ನಲ್ಲಿ ಸೇರಿಕೊಳ್ಳಲಿವೆ” ಎಂದು ಎಸ್ಕೆಎಂ ಹೇಳಿದೆ.
20 ರಾಜ್ಯಗಳಲ್ಲಿನ ಎಸ್ಕೆಎಂ ರಾಜ್ಯ ಘಟಕಗಳು ಮುಂದಿನ ವರ್ಷ ಜನವರಿ 10 ರಿಂದ20 ರವರೆಗೆ ಭಾರತದಾದ್ಯಂತ ಮನೆ-ಮನೆ ಭೇಟಿ ಮತ್ತು ಕರಪತ್ರಗಳ ವಿತರಣೆಯ ಮೂಲಕ “ಜನ ಜಾಗರಣ” ಅಭಿಯಾನವನ್ನು ನಡೆಸಲಿವೆ. ಕೇಂದ್ರ ಸರ್ಕಾರದ “ಕಾರ್ಪೊರೇಟ್ ಪರ ಆರ್ಥಿಕ ನೀತಿಗಳನ್ನು ಬಹಿರಂಗಪಡಿಸುವುದು” ಸಾಮೂಹಿಕ ಅಭಿಯಾನದ ಉದ್ದೇಶವಾಗಿದೆ ಎಂದು ಅದು ಮಾಹಿತಿ ನೀಡಿದೆ.
“ಕೋಮುವಾದ, ಜಾತಿವಾದಿ ಧ್ರುವೀಕರಣದ ಮೂಲಕ ಜನರನ್ನು ಶೋಷಿಸುವ ಮತ್ತು ವಿಭಜಿಸುವ ಕಾರ್ಪೊರೇಟ್-ಕೋಮುವಾದಿ ನಂಟು” ತೊಡೆದುಹಾಕಲು ಅಭಿಯಾನ ಮತ್ತು ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ಎಸ್ಕೆಎಂ ಭಾರತದಾದ್ಯಂತ ರೈತರಿಗೆ ಕರೆ ನೀಡಿದೆ.
ಕೇಂದ್ರ ಸರ್ಕಾರ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 26, 2021ರಂದು, ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘಗಳು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ವೇಳೆ ಪ್ರತಿಭಟನಾನಿರತ ಸಾವಿರಾರು ರೈತರು ಮತ್ತು ಪೊಲೀಸ ನಡುವೆ ಘರ್ಷಣೆ ನಡೆದಿತ್ತು. ಕೆಲವು ಪ್ರತಿಭಟನಾಕಾರರು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜಗಳನ್ನು ಹಾರಿಸಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಇಡಿ, ಸಿಬಿಐ ಬಳಸಿ ಹಣ ಲೂಟಿ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ


