ಮಹಾರಾಷ್ಟ್ರದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರಿಗೆ ಬ್ಯಾಟರಿ ಚಾಲಿತ ಸಬ್ಮರ್ಸಿಬಲ್ ವಾಹನವನ್ನು ನಿರ್ಮಿಸುವ ಯೋಜನೆಯನ್ನು ಮಹಾರಾಷ್ಟ್ರದಿಂದ ಗುಜರಾತಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಶಿವಸೇನಾ (ಯುಬಿಟಿ) ಶಾಸಕ ವೈಭವ್ ನಾಯ್ಕ್ ಆರೋಪಿಸಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅದನ್ನು ತಳ್ಳಿಹಾಕಿದ್ದಾರೆ.
ವೈಭವ್ ನಾಯಕ್ ಅವರ ಪ್ರಕಾರ, ‘ಬ್ಯಾಟರಿ ಚಾಲಿತ ಸಬ್ಮರ್ಸಿಬಲ್ ವಾಹನ ಯೋಜನೆಯನ್ನು 2018ರಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅನುಮೋದಿಸಿದ್ದು, ಅಂದಿನ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು 2019ರಲ್ಲೆ ರಾಜ್ಯದ ಬಜೆಟ್ಟಿನಲ್ಲಿ ಅದಕ್ಕೆ ಹಣಕಾಸಿನ ಅನುಮೋದನೆ ನೀಡಿದೆ’ ಎಂದು ಹೇಳಿದ್ದಾರೆ.
‘ಆದರೂ, ಯೋಜನೆಯು ಈವರೆಗೆ ಪ್ರಾರಂಭವಾಗಲಿಲ್ಲ; ಅದನ್ನು ಗುಜರಾತಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ’ ಎಂದು ಅವರು ಹೇಳಿದ್ದಾರೆ.
ಉದ್ಧವ್ ಬಣದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಮಾತನಾಡಿ, ‘ರಾಜ್ಯ ಸರ್ಕಾರವು ಈ ವಿಷಯದ ಬಗ್ಗೆ ಎದ್ದಿರುವ ಗೊಂದಲವನ್ನು ಸ್ಪಷ್ಟಪಡಿಸಬೇಕು. ಇದು ಹಗಲು ದಂಧೆ… ಮರಾಠಿಗರ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ‘ಯೋಜನೆಯು ಮಹಾರಾಷ್ಟ್ರಕ್ಕೆ ಸೇರಿದ್ದು, ಅದು ಎಲ್ಲಿಯೂ ಹೋಗುತ್ತಿಲ್ಲ. ಅದರ ಬಗ್ಗೆ ಬೇರೆ ಯಾವುದೇ ಹೇಳಿಕೆಗಳನ್ನು ನಂಬಬೇಡಿ. ನಾನು ಈ ಬಗ್ಗೆ ಕೈಗಾರಿಕಾ ಸಚಿವ ಉದಯ್ ಸಾಮಂತ್ ಅವರೊಂದಿಗೆ ಮಾತನಾಡಿದ್ದೇನೆ. ಯೋಜನೆಯು ರಾಜ್ಯದಿಂದ ಹೊರಗೆ ಹೋಗುತ್ತಿಲ್ಲ’ ಎಂದು ಹೇಳಿದರು.
ಈ ಹಿಂದೆ, ಗುಜರಾತ್ನ ಸೂರತ್ಗೆ ವಜ್ರ ಉದ್ಯಮ ಸ್ಥಳಾಂತರಗೊಳ್ಳುತ್ತಿದ್ದು, ಈ ಬಗ್ಗೆ ಸರ್ಕಾರಕ್ಕೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ವೇದಾಂತ-ಫಾಕ್ಸ್ಕಾನ್, ಟಾಟಾ-ಏರ್ಬಸ್ ಮತ್ತು ಬಲ್ಕ್ ಡ್ರಗ್ ಪಾರ್ಕ್ ಯೋಜನೆಗಳ ಬಗ್ಗೆ ಶಿಂಧೆ ಸರ್ಕಾರದ ವಿರುದ್ಧ ಇದೇ ರೀತಿಯ ಆರೋಪಗಳನ್ನು ವಿಪಕ್ಷ ಮಾಡಿತ್ತು.
ಇದನ್ನೂ ಓದಿ; ಪಂಜಾಬ್ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ; ‘ದೇಶಭಕ್ತರಿಗೆ ಘೋರ ಅವಮಾನ’ ಎಂದ ಸಿಎಂ ಮಾನ್