ಕೇರಳ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಮ್ಕೂಟತಿಲ್ ಅವರನ್ನು ಪೊಲೀಸರು ಬಂಧಿಸಿದ್ದು, ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ರಾಹುಲ್ ಮಮ್ಕೂಟತಿಲ್ ಅವರನ್ನು ಇಂದು ಬೆಳಿಗ್ಗೆ ಪತ್ತನಂತಿಟ್ಟದ ಅಡೂರ್ ಬಳಿಯ ಅವರ ಮನೆಯಿಂದ ತಿರುವನಂತಪುರಂನ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಬಂಧಿಸಿದೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ತಾಯಿ, ಇಂದು ಮುಂಜಾನೆ ತನ್ನ ಮನೆಗೆ ಪೊಲೀಸರು ಆಗಮಿಸಿದ ರೀತಿ ನೋಡಿದರೆ ಅಚ್ಚರಿಯಾಗುತ್ತದೆ. ಅವರು ಕಾಲಿಂಗ್ ಬೆಲ್ ಬಾರಿಸದೆ ಮನೆಗೆ ನುಗ್ಗಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು. ಬಂಧನಕ್ಕೆ ಕಾರಣ ತಿಳಿಯಲು ನಾನು ಎಷ್ಟೇ ಪ್ರಯತ್ನ ಪಟ್ಟರೂ, ಪೊಲೀಸ್ ಅಧಿಕಾರಿಗಳು ಮೇಲಧಿಕಾರಿಗಳ ಆದೇಶವನ್ನು ಪಾಲಿಸುತ್ತಿದ್ದಾರೆ ಎಂದು ಮಾತ್ರ ಹೇಳಿದ್ದಾರೆ. ನನ್ನ ಮಗನನ್ನು ಘೋರ ಅಪರಾಧ ಎಸಗಿದಂತೆ ಅವರು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಯುವ ಕಾಂಗ್ರೆಸ್ನ ಪ್ರತಿಭಟನಾ ರ್ಯಾಲಿಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮೊದಲ ಆರೋಪಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನಾಗಿದ್ದರೆ, ರಾಹುಲ್ ಮಮ್ಕೂಟತಿಲ್ ಮೂರನೇ ಆರೋಪಿಯಾಗಿದ್ದರು.
ರಾಹುಲ್ ಬಂಧನದ ನಂತರ ಅವರ ಸ್ನೇಹಿತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಜೀಪಿನ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ ಬಂಧನವು ಪಿಣರಾಯಿ ವಿಜಯನ್ ಸರ್ಕಾರದ ದುರಹಂಕಾರವನ್ನು ತೋರಿಸುತ್ತದೆ. ಏಕೆಂದರೆ ರಾಹುಲ್ ಅವರಲ್ಲಿ ಈ ಹಿಂದೆ ಪೊಲೀಸರಿಗೆ ಹಾಜರಾಗಲು ಕೇಳಿದಾಗಲೆಲ್ಲಾ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರದ ನವ ಕೇರಳ ಸದಸ್ ಕಾರ್ಯಕ್ರಮದ ವೇಳೆ ಯೂತ್ ಕಾಂಗ್ರೆಸ್ ಸದಸ್ಯರ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಕಳೆದ ತಿಂಗಳು ಯುವ ಕಾಂಗ್ರೆಸ್ ಮೆರವಣಿಗೆಯನ್ನು ಆಯೋಜಿಸಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮೊದಲ ಆರೋಪಿಯಾಗಿದ್ದಾರೆ. ರಾಹುಲ್ ಮಮ್ಕೂಟತಿಲ್, ಶಾಸಕ ಶಾಫಿ ಪರಂಬಿಲ್ ಮತ್ತು ಶಾಸಕ ಎಂ ವಿನ್ಸೆಂಟ್ ಸೇರಿದಂತೆ 300ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕಂಟೋನ್ಮೆಂಟ್ ಎಸ್ಎಚ್ಒ ಶಾಫಿ ಬಿ ಎಂ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಡಿಸೆಂಬರ್ 21ರಂದು ಯೂತ್ ಕಾಂಗ್ರೆಸ್ನ ಸೆಕ್ರೆಟರಿಯೇಟ್ ಮೆರವಣಿಗೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ಸಂಭವಿಸಿದ ನಂತರ ಪೊಲೀಸರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಅವರನ್ನು ತಿರುವನಂತಪುರಕ್ಕೆ ಕರೆದೊಯ್ಯಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಸಿಯಾನಾ ಹಿಂಸಾಚಾರದ ಆರೋಪಿಗೆ ಪಕ್ಷದ ನಾಯಕತ್ವ ಕೊಟ್ಟ ಬಿಜೆಪಿ!