Homeಮುಖಪುಟಸಿಯಾನಾ ಹಿಂಸಾಚಾರದ ಆರೋಪಿಗೆ ಪಕ್ಷದ ನಾಯಕತ್ವ ಕೊಟ್ಟ ಬಿಜೆಪಿ!

ಸಿಯಾನಾ ಹಿಂಸಾಚಾರದ ಆರೋಪಿಗೆ ಪಕ್ಷದ ನಾಯಕತ್ವ ಕೊಟ್ಟ ಬಿಜೆಪಿ!

- Advertisement -
- Advertisement -

ಸಿಯಾನಾ ಹಿಂಸಾಚಾರದ ಆರೋಪಿಯನ್ನು ಬಿಜೆಪಿ ಪಕ್ಷದ ಬುಲಂದ್‌ಶಹರ್‌ ವಲಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಪೊಲೀಸ್‌ ಇನ್ಸ್‌ಪೆಕ್ಟರ್‌ ಸೇರಿ ಇಬ್ಬರ ಸಾವಿಗೆ ಕಾರಣವಾದ ಹಿಂಸಾಚಾರದ ಆರೋಪಿಗೆ ಬಿಜೆಪಿಯ ಸ್ಥಳೀಯ ನಾಯಕತ್ವವನ್ನು ನೀಡಲಾಗಿದೆ.

ಬಿಜೆಪಿಯ ಉತ್ತರಪ್ರದೇಶ ಘಟಕವು ಬುಲಂದ್‌ಶಹರ್‌ ಬಿಜೆಪಿ ವಲಯಾಧ್ಯಕ್ಷರನ್ನಾಗಿ ಸಚಿನ್ ಅಹ್ಲಾವತ್ ಎಂಬಾತನನ್ನು ನೇಮಿಸಿದೆ. ಈತ  2018ರಲ್ಲಿ ನಡೆದ ಉತ್ತರಪ್ರದೇಶದ ಬುಲಂದ್‌ಶಹರ್‌ನ ಸಿಯಾನಾದಲ್ಲಿ ಗೋ ಹತ್ಯೆ ನೆಪದಲ್ಲಿ ನಡೆದ ಹಿಂಸಾಚಾರದ ಆರೋಪಿಯಾಗಿದ್ದಾನೆ. ಹಿಂಸಾಚಾರದಲ್ಲಿ ಪೊಲೀಸ್‌ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹತ್ಯೆ ಮತ್ತು ಉದ್ರಿಕ್ತರ ಗುಂಪಿನಲ್ಲಿದ್ದ ಸುಮಿತ್‌ ಕುಮಾರ್‌ ಚಿಂಗರಾವಟಿ ಎಂಬಾತನ ಸಾವು ಸಂಭವಿಸಿತ್ತು.

ಬಿಜೆಪಿಯ ರಾಜ್ಯ ಘಟಕ ಕಳೆದ ವಾರ ಬಿಜೆಪಿಯ 31 ವಲಯಾಧ್ಯಕ್ಷರನ್ನು ನೇಮಿಸಿದೆ. 38 ವರ್ಷದ ಸಚಿನ್‌ ಅಹ್ಲಾವತ್ ಕೂಡ ಪಟ್ಟಿಯಲ್ಲಿ ಸೇರಿದ್ದಾನೆ. ಅವನನ್ನು ಬಿಬಿ ನಗರ ಮಂಡಲದ ಅಧ್ಯಕ್ಷರನ್ನಾಗಿ ಬಿಜೆಪಿ ನೇಮಕ ಮಾಡಿದೆ. ಈತ ಹಿಂಸಾಚಾರ ಪ್ರಕರಣದಲ್ಲಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದು, ಅಹ್ಲಾವತ್ ವಿರುದ್ಧ ಗಲಭೆ, ಸಾರ್ವಜನಿಕ ನೌಕರನಿಗೆ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಮಾಡಿದ ಆರೋಪ ಇದೆ.

ಅಹ್ಲಾವತ್ ಹಿಂಸಾಚಾರದ ಮಾಸ್ಟರ್‌ ಮೈಂಡ್‌ ಆಗಿನ ಬಜರಂಗದಳದ ಸಂಚಾಲಕ ಯೋಗೇಶ್ ರಾಜ್‌ನ್ನು ಕರೆ ಮಾಡಿ ತಮ್ಮ ಗ್ರಾಮದಲ್ಲಿ ಗೋಹತ್ಯೆ ಘಟನೆ ನಡೆದಿದೆ ಎಂದು ತಿಳಿಸಿದ್ದ. ಕೂಡಲೇ ಸ್ಥಳದಲ್ಲಿ ಉದ್ರಿಕ್ತ ಗುಂಪು ಜಮಾಯಿಸಿತ್ತು. ಆದರೆ ಯೋಗೇಶ್ ರಾಜ್‌ಗೆ ಕರೆ ಮಾಡಿರುವುದನ್ನು ಅಹ್ಲ್ವತ್ ನಿರಾಕರಿಸಿದ್ದಾನೆ. ಘಟನೆಯ ದಿನ, ಪೊಲೀಸ್ ಸಿಬ್ಬಂದಿಯೊಬ್ಬರು ನನ್ನ ಮೊಬೈಲ್ ಫೋನ್ ಕೇಳಿದರು. ನಾನು ಅವರಿಗೆ ಕೊಟ್ಟೆ. ಯೋಗೀಶ್ ರಾಜ್‌ಗೆ ಅವರು ಕರೆ ಮಾಡಿದ್ದಾರೆ. ಈಗ ಯಾರೂ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಅಹ್ಲಾವತ್  ಹೇಳಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ನನ್ನ ಗ್ರಾಮದ ಮಹಾವ್‌ನಲ್ಲಿ ಘಟನೆ ನಡೆದಿದ್ದರಿಂದ ಏನಾಗುತ್ತಿದೆ ಎಂದು ತಿಳಿಯಲು ನಾನು ಸ್ಥಳಕ್ಕೆ ಹೋಗಿದ್ದೆ. ಆಗ ನಾನು ಬಿಜೆಪಿಯ ಸಿಯಾನ ಮಂಡಲ ಕಾರ್ಯದರ್ಶಿಯಾಗಿದ್ದೆ. ನಾನು ದೂರದಿಂದ ಪ್ರತಿಭಟನೆಯನ್ನು ನೋಡುತ್ತಿದ್ದೆ ಮತ್ತು ಸ್ಥಳದಲ್ಲಿದ್ದ ಕೆಲವು ಜನರು ಛಾಯಾಚಿತ್ರ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುತ್ತಿದ್ದರು. ಛಾಯಾಚಿತ್ರಗಳು ಮತ್ತು ವೀಡಿಯೊಗಳಲ್ಲಿ ನಾನು ಕಾಣಿಸಿಕೊಂಡಿದ್ದರಿಂದ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ನನ್ನಂತೆ ನನ್ನ ಗ್ರಾಮದ ಇತರ ಹಲವಾರನ್ನು ಪೊಲೀಸರು ಬಂಧಿಸಿದ್ದರು ಎಂದು ಹೇಳಿದ್ದಾರೆ. ಆದರೆ ಮಂಡಲ ಕಾರ್ಯದರ್ಶಿಯಾಗಿದ್ದ ಅಹ್ಲಾವತ್ ಇತರರು ಉದ್ರಿಕ್ತರಾಗಿದ್ದಾಗ ಸುಮ್ಮನೆ ದೂರದಿಂದ ನಿಂತುಕೊಂಡು ನಾನು ನೋಡಿದ್ದೆ ಎನ್ನುವುದನ್ನು ಪೊಲೀಸರು ಒಪ್ಪಲು ಸಿದ್ದವಿರಲಿಲ್ಲ.

ಇದು ನನ್ನ ವಿರುದ್ಧದ ಏಕೈಕ ಪೊಲೀಸ್ ಕೇಸ್, ಇದರಿಂದ ನಾನು ತುಂಬಾ ತೊಂದರೆ ಅನುಭವಿಸಿದ್ದೇನೆ. ನನ್ನ ಕಠಿಣ ಪರಿಶ್ರಮ ಮತ್ತು ಬಿಜೆಪಿಯೊಂದಿಗಿನ ದೀರ್ಘಕಾಲದ ಒಡನಾಟದಿಂದಾಗಿ ನನ್ನನ್ನು ಬಿಬಿ ನಗರ ಮಂಡಲದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅಹ್ಲಾವತ್ ಹೇಳಿದ್ದಾನೆ.

ವಕೀಲ ಅಶೋಕ್ ದಾಗರ್ ಪ್ರಕಾರ, ಗಲಭೆ ಪ್ರಕರಣದಲ್ಲಿ ಅಹ್ಲಾವತ್ ಸೇರಿದಂತೆ 44 ಜನರ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. 44 ಆರೋಪಿಗಳ ಪೈಕಿ ಆರು ಮಂದಿ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ ಮತ್ತು ಇದುವರೆಗೆ ನಾಲ್ವರು ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ಬುಲಂದ್‌ಶಹರ್ ಜಿಲ್ಲಾಧ್ಯಕ್ಷ ವಿಕಾಸ್ ಚೌಹಾಣ್ ಕೂಡ ಅಹ್ಲಾವತ್ ನೇಮಕವನ್ನು ಸಮರ್ಥಿಸಿಕೊಂಡಿದ್ದು, ಘಟನೆಯ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿಕೊಂಡು ಪೊಲೀಸರು ಎಫ್‌ಐಆರ್‌ನಲ್ಲಿ ಸಚಿನ್ ಅಹ್ಲಾವತ್ ಅವರನ್ನು ಹೆಸರಿಸಿದ್ದಾರೆ. ಸಚಿನ್ ಸ್ಥಳದಲ್ಲಿ ಇದ್ದರು. ಆದರೆ ಕೃತ್ಯದಲ್ಲಿ ಭಾಗವಹಿಸಿಲ್ಲ. ಆತನಿಗೆ ಈ ಮೊದಲು ಕ್ರಿಮಿನಲ್‌ ಹಿನ್ನೆಲೆ ಇರಲಿಲ್ಲ. ಸಚಿನ್ ಅಹ್ಲಾವತ್ ಸುಮಾರು ಒಂದು ದಶಕದಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಹಲವಾರು ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ.

ಏನಿದು ಘಟನೆ?

ಡಿಸೆಂಬರ್ 3, 2018ರ ಬೆಳಿಗ್ಗೆ ಉತ್ತರಪ್ರದೇಶದ ಬುಲಂದ್‌ಶಹರ್‌ನ ಸಿಯಾನಾ ಮಹಾವ್ ಗ್ರಾಮದ ಹೊಲವೊಂದರಲ್ಲಿ ಹಸುವಿನ ಮೃತದೇಹಗಳು ಕಂಡುಬಂದಿದೆ ಎಂದು ತ್ವರಿತ ಕ್ರಮಕ್ಕೆ ಒತ್ತಾಯಿಸಿ ಸುಮಾರು 50-60 ಜನರ ಗುಂಪು ಶವಗಳನ್ನು ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ತುಂಬಿದರು ಮತ್ತು ಚಿಂಗ್ರಾವತಿ ಪೊಲೀಸ್ ಬೂತ್‌ನ ಬಳಿ ತಂದು ನಿಲ್ಲಿಸಿ ಬುಲಂದ್‌ಶಹರ್‌ಗೆ ಹೋಗುವ ಹೆದ್ದಾರಿಯನ್ನು ತಡೆದಿದ್ದಾರೆ. ಅಂದಿನ ಭಜರಂಗದಳದ ಸಂಚಾಲಕ ಯೋಗೇಶ್ ರಾಜ್ ಮತ್ತು ಇತರ ಹಲವು ಆರೋಪಿಗಳು ಗೋಹತ್ಯೆ ಆರೋಪ ಮಾಡಿದ ಕೆಲವು ಮುಸ್ಲಿಮರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಂಪಾಟ ಮಾಡಿದ್ದಾರೆ.

ಸ್ಥಳಕ್ಕೆ ಸಿಯಾನ ಪೊಲೀಸ್ ಠಾಣೆಯ ಪ್ರಭಾರಿ ಸುಬೋಧ್ ಕುಮಾರ್ ಸಿಂಗ್ ಅವರು ತಮ್ಮ ತಂಡದೊಂದಿಗೆ  ತೆರಳಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದವರ ಜೊತೆ ಮಾತುಕತೆ ನಡೆಸಿ, ಎಫ್‌ಐಆರ್ ದಾಖಲಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಟ್ರಾಫಿಕ್ ತೆರವುಗೊಳಿಸುವಂತೆ ಉದ್ರೇಕಿತರಿಗೆ ಮನವಿ ಮಾಡಿದರು. ಸಿಂಗ್ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಂತೆ, ಗುಂಪು ಅವರನ್ನು ಥಳಿಸಿ ಅವರಿಂದ ಸರ್ವೀಸ್ ರಿವಾಲ್ವರ್‌ ಕಸಿದು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಇದೇ ಹಿಂಸಾಚಾರದ ವೇಳೆ ಉದ್ರಿಕ್ತರ ಗುಂಪಿನಲ್ಲಿದ್ದ ಸುಮಿತ್‌ ಕುಮಾರ್‌ ಚಿಂಗರಾವಟಿ ಎಂಬವರು ಕೊಲ್ಲಲ್ಪಟ್ಟಿದ್ದರು.

ಇದನ್ನು ಓದಿ: ದಲಿತ ಯುವಕನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಥಳಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...