Homeಮುಖಪುಟಸುಪ್ರೀಂ ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನೆಗಳಿಗೆ ಬೀಗ: ತಲೆ ಮರೆಸಿಕೊಂಡ್ರಾ ಅಪರಾಧಿಗಳು?

ಸುಪ್ರೀಂ ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನೆಗಳಿಗೆ ಬೀಗ: ತಲೆ ಮರೆಸಿಕೊಂಡ್ರಾ ಅಪರಾಧಿಗಳು?

- Advertisement -
- Advertisement -

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಲ್ಲಿ ಒಂಬತ್ತು ಮಂದಿ ವಾಸಿಸುತ್ತಿದ್ದ ಗುಜರಾತ್‌ನ ದೋಹದ್ ಜಿಲ್ಲೆಯ ರಣಧಿಕ್‌ಪುರ್ ಮತ್ತು ಸಿಂಗ್‌ವಾಡ್ ಅವಳಿ ಗ್ರಾಮಗಳಲ್ಲಿ ಮನೆಗಳಿಗೆ ಬೀಗ ಹಾಕಲಾಗಿದೆ. ಅಲ್ಲಿಗೆ ತೆರಳಿದರೆ ಬಾಗಿಲು ಮುಚ್ಚಿರುವ ಅಪರಾಧಿಗಳ ಮನೆಗಳು ಮತ್ತು ಭದ್ರತೆಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ನಮ್ಮನ್ನು ಸ್ವಾಗತಿಸುತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಸೋಮವಾರ, 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಬೆನ್ನಲ್ಲೇ ನಾವು ಅಪರಾಧಿಗಳು ವಾಸಿಸುತ್ತಿದ್ದ ಗ್ರಾಮಕ್ಕೆ ತೆರಳಿದ್ದೆವು. ಆದರೆ, ಅಲ್ಲಿದ್ದ ಅವರ ಸಂಬಂಧಿಕರು 9 ಅಪರಾಧಿಗಳು ಎಲ್ಲಿದ್ದಾರೆ ಎಂಬ ಮಾಹಿತಿ ಬಿಟ್ಟುಕೊಡಲು ನಿರಾಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

“ನನ್ನ ಮಗ ನಿರಪರಾಧಿ. ಆತ ಕಾಂಗ್ರೆಸ್‌ನ ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾನೆ” ಎಂದು ಅಪರಾಧಿಗಳಲ್ಲಿ ಒಬ್ಬನಾದ ಗೋವಿಂದ್ ನಾಯ್ (55) ನ ತಂದೆ ಅಖಂಭಾಯ್ ಚತುರ್ಭಾಯಿ ರಾವಲ್ (87) ಹೇಳಿದ್ದಾರೆ. ಆತ ಮನೆ ಬಿಟ್ಟು ಒಂದು ವಾರ ಕಳೆಯಿತು ಎಂದು ತಿಳಿಸಿದ್ದಾರೆ.

ಶನಿವಾರ (ಜನವರಿ 6) ಗೋವಿಂದ್ ಮನೆಯಿಂದ ಹೊರ ಹೋಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಮ್ಮದು ಹಿಂದೂ ಧರ್ಮದಲ್ಲಿ ಅತ್ಯಂತ ಶ್ರದ್ಧೆ, ಭಕ್ತಿ ಇರುವ ಕುಟುಂಬ, ನಮ್ಮ ಮಕ್ಕಳು ಆ ರೀತಿಯ ಅಪರಾಧ ಎಸಗಲು ಸಾಧ್ಯವಿಲ್ಲ” ಎಂದು ಗೋವಿಂದ್ ನಾಯ್‌ನ ವಯಸ್ಸಾದ ಪೋಷಕರು ಹೇಳಿದ್ದಾರೆ. ಗೋವಿಂದ್ ನಾಯ್‌ನ ಸಹೋದರ ಜಶ್ವಂತ್ ನಾಯ್ ಕೂಡ 11 ಅತ್ಯಾಚಾರಿಗಳಲ್ಲಿ ಒಬ್ಬ.

“ನಮ್ಮ ಮಕ್ಕಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡಬೇಕೆಂದು ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಏನನ್ನೂ ಮಾಡದೆ ದಿನವೂ ತಿರುಗಾಡುವುದಕ್ಕಿಂತ ಸೇವೆ ಮಾಡುವುದು ಉತ್ತಮ. ಅವರು ಜೈಲಿನಿಂದ ಬಿಡುಗಡೆಯಾದಾಗಿನಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಜೈಲಿಗೆ ಹಿಂತಿರುಗುವುದು ದೊಡ್ಡ ವಿಷಯವಲ್ಲ. ಅವರು ಕಾನೂನು ಬಾಹಿರವಾಗಿ ಜೈಲಿನಿಂದ ಹೊರಬಂದಿಲ್ಲ. ಕಾನೂನು ಪ್ರಕ್ರಿಯೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು, ಈಗ ಕಾನೂನು ಹಿಂತಿರುಗಿ ಹೋಗುವಂತೆ ಹೇಳಿದೆ. ಆದ್ದರಿಂದ ಹಿಂತಿರುಗುತ್ತಾರೆ. ಅವರು 20 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಇದು ಹೊಸದೇನಲ್ಲ” ಎಂದು ಅಖಂಭಾಯ್ ಹೇಳಿದ್ದಾರೆ.

ಅಪರಾಧಿಗಳ ಮನೆಗಳ ಪೈಕಿ ಗೋವಿಂದ್‌ನ ಮನೆ ಬಿಲ್ಕಿಸ್ ಬಾನೊ 2002 ರಲ್ಲಿ ವಾಸಿಸುತ್ತಿದ್ದ ಸ್ಥಳದಿಂದ ಅತ್ಯಂತ ದೂರದಲ್ಲಿದೆ.

ಹಿಂದಿನ ದಿನ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯ ನಂತರ ಬಿಲ್ಕಿಸ್ ಬಾನೊ ಮತ್ತು ಆಕೆಯ ಕುಟುಂಬ ಫೆಬ್ರವರಿ 28,2002 ರಂದು ರಣಧಿಕ್‌ಪುರದಲ್ಲಿದ್ದ ತಮ್ಮ ಮನೆಯನ್ನು ತೊರೆದಿದ್ದರು. ಮಾರ್ಚ್ 3,2002 ರಂದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ 14 ಸದಸ್ಯರನ್ನು ದಾಹೋಡ್‌ನ ಲಿಮ್ಖೇಡಾ ತಾಲೂಕಿನ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಮೃತ 14 ಮಂದಿಯ ಪೈಕಿ ಆರು ಮಂದಿಯ ಮೃತದೇಹಗಳು ಇದುವರೆಗೆ ಪತ್ತೆಯಾಗಿಲ್ಲ.

ಜನವರಿ 21, 2008 ರಂದು ಸಿಬಿಐ ವಿಶೇಷ ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸೋಮವಾರ ತಮ್ಮ ವರದಿಗಾರರು ತೆರಳಿದ್ದ ವೇಳೆ ಅತ್ಯಾಚಾರಿ ಗೋವಿಂದ್‌ನ ಮನೆಗೆ ಬೀಗ ಹಾಕಲಾಗಿತ್ತು. ಮನೆಯ ಮುಂದೆ ರಣಧಿಕ್‌ಪುರ್‌ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ ಕಾವಲು ಕಾಯುತ್ತಿದ್ದರು. ಗೋವಿಂದ್‌ನ ಮನೆಯ ಪಕ್ಕದಲ್ಲೇ ಆತನ ಪೋಷಕರ ಮನೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಹೇಳಿದೆ.

ಬಿಲ್ಕಿಸ್ ಬಾನೊ ಅತ್ಯಾಚಾರದ ಮತ್ತೋರ್ವ ಅಪರಾಧಿ, ರಾಧೇಶ್ಯಾಮ್ ಶಾ ಕಳೆದ 15 ತಿಂಗಳಿಂದ ಮನೆಗೆ ಬಂದಿಲ್ಲ ಎಂದು ಆತನ ತಂದೆ ಭಗವಾನ್‌ದಾಸ್ ಶಾ ಹೇಳಿದ್ದಾರೆ. ಆದರೆ, ರಾಧೇಶ್ಯಾಮ್ ಸೇರಿದಂತೆ ಬಹುತೇಕ ಎಲ್ಲಾ ಅಪರಾಧಿಗಳು ಭಾನುವಾರದವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು  ಸ್ಥಳೀಯರು ತಿಳಿಸಿದ್ದಾರೆ. “ರಾಧೇಶ್ಯಾಮ್ ಎಲ್ಲಿದ್ದಾನೆಂದು ನಮಗೆ ಗೊತ್ತಿಲ್ಲ. ಆತ ತನ್ನ ಹೆಂಡತಿ ಮತ್ತು ಮಗನ ಜೊತೆ ಮನೆ ಬಿಟ್ಟು ಹೋಗಿದ್ದಾನೆ” ಎಂದು ಭಗವಾನ್‌ದಾಸ್ ಹೇಳಿದ್ದಾರೆ.

ವರದಿಗಾರರು ತೆರಳಿದ್ದಾಗ ರಾಧೇಶ್ಯಾಮ್‌ನ ಸಹೋದರ ಆಶಿಶ್ ಶಾ ತರಾತುರಿಯಲ್ಲಿ ತನ್ನ ಬಟ್ಟೆ, ಬರೆಗಳನ್ನು ಪ್ಯಾಕ್ ಮಾಡ್ತಿದ್ದ. ಆತ ರಾಧೇಶ್ಯಾಮ್‌ನ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾನೆ. ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಕೇಳಿದ್ದಕ್ಕೆ, “ಈಗಷ್ಟೇ ತೀರ್ಪು ಹೊರ ಬಿದ್ದಿದೆ. ನಾವಿನ್ನೂ ನಮ್ಮ ವಕೀಲರ ಜೊತೆ ಮಾತನಾಡಿಲ್ಲ. ಮುಂದೆ ಏನು ಮಾಡೋದು ನೋಡೋಣ” ಎಂದು ಆಶಿಶ್ ಶಾ ಹೇಳಿದ್ದಾಗಿ ವರದಿ ತಿಳಿಸಿದೆ.

ಸ್ಥಳೀಯ ಅಂಗಡಿಯವರನ್ನು ಮಾತನಾಡಿಸಲು ಪ್ರಯತ್ನಿಸಲಾಯಿತಾದರೂ, ಅವರು ಯಾರೂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಮುಂದೆ ಬಂದಿಲ್ಲ. ಎಲ್ಲರೂ ಮೌನ ಪಾಲಿಸಿದ್ದರು. ಈಗ ನಿಮಗೆ ಅವರು ಸಿಗಲಾರರು, ಅವರು ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ.

“ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಪರಾಧಿಗಳ ಮನೆಗಳ ಮುಂದೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು” ಎಂದು ರಣಧಿಕ್‌ಪುರ್‌ ಪೊಲೀಸ್ ಠಾಣೆಯ ಪ್ರಭಾರಿ ಸಬ್ ಇನ್ಸ್‌ಪೆಕ್ಟರ್ ಜಿ ಬಿ ರಥ್ವಾ ಮಾಹಿತಿ ನೀಡಿದ್ದಾರೆ.

“ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆ ಮಾಧ್ಯಮದವರು ಮನೆ ಬಳಿ ಬರಬಹುದೆಂದು ಅಂದಾಜಿಸಿ ಅವರು ಬೀಗ ಹಾಕಿ ಹೋಗಿರಬಹುದು. ಅಲ್ಲದೆ, ತಲೆಮರೆಸಿಕೊಳ್ಳುವ ಉದ್ದೇಶ ಅವರಿಗೆ ಇರಲು ಸಾಧ್ಯವಿಲ್ಲ. ಏಕೆಂದರೆ, ಕಳೆದ 20 ವರ್ಷಗಳಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಗೊಂಡಾಗಲೂ ಅವರು ಯಾರೂ ತಪ್ಪಿಸಿಕೊಂಡಿಲ್ಲ” ಎಂದು ಅಪರಾಧಿ ಗೋವಿಂದ್‌ನ ತಂದೆ ಅಖಂಭಾಯ್ ಹೇಳಿದ್ದಾರೆ.

ಪ್ರಕರಣ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ (57)ನ ಮನೆಗೆ ಕೂಡ ಬೀಗ ಹಾಕಲಾಗಿತ್ತು. ಪ್ರದೀಪ್ ಸೋಮವಾರ ಮುಂಜಾನೆ ಮನೆಯಿಂದ ಹೊರ ಹೋಗಿದ್ದಾನೆ. ಆತನ ಬೈಕ್ ಮನೆ ಬಳಿಯೇ ಇದೆ. ಆದ್ದರಿಂದ ವಾಪಸ್ ಬರಬಹುದು ಎಂದು ಮನೆ ಬಳಿ ನಿಯೋಜಿಸಿದ್ದ ಸಬ್ ಇನ್ಸ್‌ಪೆಕ್ಟರ್ ಆರ್ ಎನ್ ದಾಮೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.

ಪೊಲೀಸ್ ಭದ್ರತೆ ಕಲ್ಪಿಸಿ ಕೇವಲ ಒಂದೆರಡು ದಿನಗಳಾಗಿವೆ. ಕಳೆದ 16 ತಿಂಗಳಿನಿಂದ ಅಪರಾಧಿಗಳು ಮನೆಯಲ್ಲೇ ಇದ್ದರು. ಎಲ್ಲೂ ತಪ್ಪಿಸಿಕೊಂಡಿಲ್ಲ ಎಂದು ದಾಮೋರ್ ತಿಳಿಸಿದ್ದಾರೆ.

ಮತ್ತೋರ್ವ ಅಪರಾಧಿ ರಮೇಶ್ ಚಂದ್‌ ಮನೆಯಲ್ಲಿ ಇರಲಿಲ್ಲ. ಆತನಿಗೆ ಕರೆ ಮಾಡಿದ್ರೆ ಸ್ವೀಕರಿಸಿಲ್ಲ. 2022ರ ಆಗಸ್ಟ್‌ನಲ್ಲಿ ಆತನ ಜೈಲಿನಿಂದ ಬಿಡುಗಡೆಯಾದಾಗ ಮಾಧ್ಯಮವದರು ಆತನನ್ನು ಭೇಟಿಯಾಗಿದ್ದರು. ಸಿಂಗ್‌ವಾಡ್‌ ಗ್ರಾಮದಲ್ಲಿ ನೆಲೆಸಿದ್ದ ರಮೇಶ್, ಪ್ರಸ್ತುತ ಗೋದ್ರಾದಲ್ಲಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಮೇಶ್‌ನ ಮನೆಯ ಪಕ್ಕದಲ್ಲೇ ಆತನ ಅಳಿಯ ಪ್ರದೀಪ್‌ನ ಮನೆ ಇದೆ. ಆತನೊಂದಿಗೆ ರಮೇಶ್ ಬಗ್ಗೆ ವಿಚಾರಿಸಿದ್ದಕ್ಕೆ, “ರಮೇಶ್ ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ, ಫೋನ್‌ ಮೂಲಕವೂ ಮಾತನಾಡುವುದು ಕಷ್ಟ” ಎಂದು ಹೇಳಿದ್ದಾರೆ.

ಅಪರಾಧಿ ರಾಧೇಶ್ಯಾಮ್‌ನ ಮನೆಯ ಪಕ್ಕದಲ್ಲೇ ಇನ್ನಿಬ್ಬರು ಅಪರಾಧಿಗಳಾದ ಶೈಲೇಶ್ ಭಟ್ (65) ಮತ್ತು ಮಿತೇಶ್ ಭಟ್ (58) ಮನೆಯಿದೆ. ಅಲ್ಲಿ ಅವರು ಇರುವ ಬಗ್ಗೆ ರಾಧೇಶ್ಯಾಮ್‌ನ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ವಾಸವಿದ್ದ ಉಳಿದ ಅಪರಾಧಿಗಳೆಂದರೆ ರಾಜುಭಾಯ್ ಸೋನಿ, ಕೇಶರಭಾಯ್ ವೋಹಾನಿಯಾ, ಬಕಾಭಾಯಿ ವೋಹಾನಿಯಾ ಮತ್ತು ಬಿಪಿನ್‌ಚಂದ್ರ ಜೋಶಿ, ಇವರು ಪ್ರಸ್ತುತ ಜಿಲ್ಲೆಯಲ್ಲೇ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾಗಿ ವರದಿ ಹೇಳಿದೆ.

ಇದನ್ನೂ ಓದಿ : ಸುಪ್ರೀಂ ತೀರ್ಪು ಸಮಾಧಾನ ಕೊಟ್ಟರೂ, ವಿಜಯದ ಸಂತಸದಲ್ಲಿಲ್ಲ ಬಿಲ್ಕಿಸ್ ಬಾನು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...