ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದೆ. ಮಣಿಪುರದ ಗಡಿ ಪಟ್ಟಣವಾದ ಮೊರೆಹ್ನಲ್ಲಿ ಭದ್ರತಾ ಪಡೆಗಳು ಮತ್ತು ಸಶಸ್ತ್ರದಾರಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, 200 ಗ್ರಾಮಸ್ಥರಿಗೆ ಮನೆ ಬಿಟ್ಟು ತೆರಳುವಂತೆ ಬಲವಂತ ಮಾಡಲಾಗಿದೆ. ಗುಂಡಿನ ಚಕಮಕಿಯ ಮುಂದುವರಿಕೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಮ್ಯಾನ್ಮಾರ್ ಗಡಿಯಲ್ಲಿ ಮೊರೆಹ್ ಪಟ್ಟಣವಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಸಶಸ್ತ್ರದಾರಿಗಳಿಂದ ಸರಣಿ ದಾಳಿಯು ನಡೆಯುತ್ತಿದೆ. ಭದ್ರತಾ ಪಡೆಗಳು ಮತ್ತು ಮಣಿಪುರ ಪೊಲೀಸ್ ಕಮಾಂಡೋಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ದಾಳಿಯು ನಡೆಯುತ್ತಿರುವ ಹಿನ್ನೆಲೆ ಹೆಚ್ಚಿನ ನಿಗಾವನ್ನು ಕೂಡ ವಹಿಸಲಾಗಿದೆ.
ಗುಂಡಿನ ಚಕಮಕಿಯು ಭಾನುವಾರ ಮತ್ತೆ ಆರಂಭವಾಗಿದೆ. ಇತ್ತೀಚಿನ ಹಿಂಸಾಚಾರವು ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆಯುವಂತೆ ಮಾಡಿದೆ. ಸೋಮವಾರ ನ್ಯೂ ಮೊರೆಹ್, ಲಂಗ್ಕಿಚೋಯ್ ಮತ್ತು ಜಿಯಾನ್ ವೆಂಗ್ನಲ್ಲಿ ಗುಂಡಿನ ದಾಳಿ ನಡೆದಿದೆ. ಸಶಸ್ತ್ರದಾರಿಗಳು ಭದ್ರತಾ ಪಡೆಗಳಂತೆ ನಟಿಸಿ ಕುಕಿ ಜನರಿರುವ ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಆರಂಭವಾದ ಬಳಿಕ ಸುಮಾರು 200 ಗ್ರಾಮಸ್ಥರು ಮನೆ ತೊರೆದಿದ್ದಾರೆ.
ಮೊರೆಹ್ನ ‘ಹಿಲ್ ಟ್ರೈಬಲ್ ಕೌನ್ಸಿಲ್’ ಯುನಿಟ್ 8ರ ಅಧ್ಯಕ್ಷರಾದ ಕೆ. ಮಿನ್ಲುನ್ ಟೌಥಾಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸದ್ಯ ಊರಿನ ಇನ್ನೊಂದು ಭಾಗದಲ್ಲಿರುವ ಕಟ್ಟಡದಲ್ಲಿ ತಂಗಿದ್ದೇವೆ. ಗುಂಡಿನ ದಾಳಿಯು ನಿಂತಿದೆ ಎಂದು ನಮಗೆ ತಿಳಿಸಲಾಗಿದೆ ಆದರೆ ನಾವು ದಾಳಿಗೆ ಒಳಗಾಗುವ ಭೀತಿಯಿಂದ ಗ್ರಾಮಕ್ಕೆ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ.
ಮೊರೆಹ್ ಬಜಾರ್ ಬಳಿ ಭಾನುವಾರ ಸಂಜೆ ಭದ್ರತಾ ಸಿಬ್ಬಂದಿಗಳು ಮತ್ತು ಸಶಸ್ತ್ರ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ. ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.
ಕುಕಿ ಇನ್ಪಿ ತೆಂಗ್ನೌಪಾಲ್ನ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಣಿಪುರ ಪೊಲೀಸ್ ಕಮಾಂಡೋಗಳು ಪಕ್ಷಪಾತ ಮಾಡುತ್ತಿದ್ದಾರೆ ಮತ್ತು ಕುಕಿ-ಜೋ ಬುಡಕಟ್ಟು ಜನಾಂಗದವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಪೊಲೀಸ್ ಪಡೆಗಳ ಬದಲಿಗೆ ಕೇಂದ್ರೀಯ ಅರೆಸೇನಾ ಪಡೆಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಣಿಪುರ ಪೊಲೀಸ್ ಕಮಾಂಡೋಗಳು ಪಕ್ಷಪಾತಿಗಳಾಗಿದ್ದಾರೆ ಮತ್ತು ಕುಕಿ-ಜೋ ಬುಡಕಟ್ಟು ಜನಾಂಗದವರ ಹತ್ಯೆಯಲ್ಲಿ ತೊಡಗಿದ್ದಾರೆ. ಅನೇಕ ಮೈತೈ ಗುಂಪುಗಳು, ಕಮಾಂಡೋಗಳು ಅಥವಾ ಭದ್ರತಾ ಪಡೆಗಳಂತೆ ನಟಿಸುತ್ತಿದ್ದಾರೆ ಮತ್ತು ಕುಕಿ ಗ್ರಾಮಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ತೆಂಗ್ನೌಪಾಲ್ ಹೇಳಿದ್ದಾರೆ.
ಘಟನೆಯಿಂದಾಗಿ ಕುಕಿ ಮಹಿಳೆಯರು ಸೋಮವಾರ ಮೊರೆಹ್ ಮತ್ತು ಕಾಂಗ್ಪೊಕ್ಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕುಕಿ ಪ್ರದೇಶಗಳಿಂದ ಮಣಿಪುರ ಪೊಲೀಸ್ ಕಮಾಂಡೋಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.
ಇತ್ತೀಚಿನ ದಾಳಿಗಳಲ್ಲಿ ಮ್ಯಾನ್ಮಾರ್ನ ಕೈವಾಡದ ಬಗ್ಗೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಸಂಶಯ ವ್ಯಕ್ತಪಡಿಸಿದ್ದಾರೆ. ಮ್ಯಾನ್ಮಾರ್ ಕಡೆಯಿಂದ ವಿದೇಶಿ ಆಗಂತುಕರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಅನುಮಾನವಿದೆ ಎಂದು ಹೇಳಿದ್ದಾರೆ. ಮೇ 3 ರಂದು ಹಿಂಸಾಚಾರ ಪ್ರಾರಂಭವಾದಾಗಿನಿಂದ ಅವರು ಇದೇ ರೀತಿಯ ವಾದಗಳನ್ನು ಮುಂದಿಡುತ್ತಿದ್ದಾರೆ. ಆದರೆ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾದ ಅವರ ಸರ್ಕಾರದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ವಿಮರ್ಶಕರು ವಾದಿಸುತ್ತಾರೆ.
ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡುವುದನ್ನು ವಿರೋಧಿಸಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3, 2023ರಂದು ‘ಬುಡಕಟ್ಟು ಐಕಮತ್ಯ ಮೆರವಣಿಗೆ’ ಆಯೋಜಿಸಲಾಗಿತ್ತು. ಇದು ಬಳಿಕ ಜನಾಂಗೀಯ ಹಿಂಸಾಚಾರಕ್ಕೆ ತಿರುಗಿತ್ತು. ಮೇ.3ರಿಂದ ಮಣಿಪುರದಲ್ಲಿ ಕುಕಿಗಳು ಮತ್ತು ಮೈತೈ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ರಾಜ್ಯದಲ್ಲಿ ಕನಿಷ್ಠ 60,000 ಜನರು ನಿರಾಶ್ರಿತರಾಗಿದ್ದಾರೆ. ಡಿ.4ರಂದು ತೆಂಗೊಪಾಲ್ ಜಿಲ್ಲೆಯ ಲೀತು ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿ ಮೃತಪಟ್ಟಿದ್ದರು. ಕೆಲ ದಿನಗಳ ಕಾಲ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪ್ರತ್ಯೇಕವಾದ ಘಟನೆಯಲ್ಲಿ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೈತೈ ಮತ್ತು ಕುಕಿ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮೈತೈ ಸಮುದಾಯದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇದಲ್ಲದೆ ಮಣಿಪುರ ಗಡಿಭಾಗದ ಮೊರೆಹ್ ಪಟ್ಟಣದಲ್ಲಿ ಪೊಲೀಸ್ ಕಮಾಂಡೋಗಳು ಮತ್ತು ಸಶಸ್ತ್ರದಾರಿ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಪೇದೆ ಗಾಯಗೊಂಡಿದ್ದರು.
ಇದನ್ನು ಓದಿ: ಸಿಯಾನಾ ಹಿಂಸಾಚಾರದ ಆರೋಪಿಗೆ ಪಕ್ಷದ ನಾಯಕತ್ವ ಕೊಟ್ಟ ಬಿಜೆಪಿ!