“ನಾನು ಹಿಂದೂ ವಿರೋಧಿಯೂ ಅಲ್ಲ, ರಾಮನ ವಿರೋಧಿಯೂ ಅಲ್ಲ. ಬಿಜೆಪಿ ನಾಟಕ ಮಂಡಳಿಯ ಪ್ರದರ್ಶನ ಮುಗಿದ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಬೆಂಬಲಿಸಿದ್ದರು. ಈ ಕಾರಣಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿಎಂ, “ರಾಮಲಲ್ಲ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವನ್ನು ಬೆಂಬಲಿಸುತ್ತೇನೆ ಎಂಬ ಹೇಳಿಕೆಯ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಯಥಾಪ್ರಕಾರ ನನ್ನನ್ನು ಹಿಂದು ವಿರೋಧಿ ಎಂದು ಚಿತ್ರಿಸಲು ನಾಲಗೆ ಹರಿಬಿಡುತ್ತಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
ರಾಮಲಲ್ಲ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವನ್ನು ಬೆಂಬಲಿಸುತ್ತೇನೆ ಎಂಬ ಹೇಳಿಕೆಯ ವಿರುದ್ಧ ರಾಜ್ಯದ @BJP4Karnataka ನಾಯಕರು ಯಥಾಪ್ರಕಾರ ನನ್ನನ್ನು ಹಿಂದು ವಿರೋಧಿ ಎಂದು ಚಿತ್ರಿಸಲು ನಾಲಗೆ ಹರಿಬಿಡುತ್ತಿದ್ದಾರೆ.
ನಾನು ಹಿಂದೂ ವಿರೋಧಿಯೂ ಅಲ್ಲ, ಶ್ರೀರಾಮಚಂದ್ರನ ವಿರೋಧಿಯೂ…
— Siddaramaiah (@siddaramaiah) January 12, 2024
“ನಾನು ಹಿಂದೂ ವಿರೋಧಿಯೂ ಅಲ್ಲ, ಶ್ರೀರಾಮಚಂದ್ರನ ವಿರೋಧಿಯೂ ಅಲ್ಲ. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಿಜೆಪಿ ನಾಟಕ ಮಂಡಳಿಯ ಪ್ರದರ್ಶನವೆಲ್ಲ ಮುಗಿದ ನಂತರ ಅರಾಮವಾಗಿ ಒಂದು ದಿನ ನಾನು ಅಯೋಧ್ಯೆಗೆ ಹೋಗಿ ರಾಮ ಮಂದಿರಕ್ಕೂ ಭೇಟಿ ನೀಡಿ ಬರಬೇಕೆಂದು ತೀರ್ಮಾನ ಮಾಡಿದ್ದೇನೆ. ನನ್ನನ್ನು ಶ್ರೀ ರಾಮಚಂದ್ರನ ವಿರೋಧಿಯೆಂದು ಕತೆ ಕಟ್ಟುತ್ತಿರುವವರ ಜೊತೆಗೂ ಆ ಭೇಟಿಯ ಪೋಟೋಗಳನ್ನು ಹಂಚಿಕೊಳ್ಳುತ್ತೇನೆ” ಎಂದಿದ್ದಾರೆ.
“ನಾನು ಈಗಾಗಲೇ ತಿಳಿಸಿರುವಂತೆ ಪ್ರಧಾನಿ ಮತ್ತು ಸಂಘ ಪರಿವಾರದ ನಾಯಕರು ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರೊಪಗಾಂಡ ಕಾರ್ಯಕ್ರಮ ಮಾಡಿರುವುದನ್ನು ಪ್ರತಿಭಟಿಸಿ ನಾವು ಆ ಸಮಾರಂಭದಿಂದ ದೂರ ಇದ್ದೇವೆಯೇ ಹೊರತು ನಾವೇನು ದೇವರು-ಧರ್ಮದ ವಿರೋಧಿಗಳಲ್ಲ” ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
“ನಾವು ಮಾತ್ರವಲ್ಲ ಹಿಂದೂ ಧರ್ಮದ ಹಿರಿಯ ಸ್ವಾಮೀಜಿಗಳಾದ ಶಂಕರಾಚಾರ್ಯರು ಕೂಡಾ ಜನವರಿ 22ರಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗೂ ಇದೆ ಎಂದಿದ್ದಾರೆ.
ಇದನ್ನೂ ಓದಿ : ಐದನೇ ಗ್ಯಾರಂಟಿ ‘ಯುವನಿಧಿ ಯೋಜನೆ’ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ