ಬೆಂಗಳೂರು ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ, ತಮ್ಮ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ನೂರಾರು ಶ್ರಮಿಕ ವ್ಯಾಪಾರಿಗಳು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. “ಒಕ್ಕಲೆಬ್ಬಿಸಿದ ಬಡ ವ್ಯಾಪಾರಿಗಳಿಗೆ ತಕ್ಷಣವೇ ಅದೇ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು” ಸೇರಿದಂತೆ ಹಲವು ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟಗಾರರು ಧ್ವನಿ ಎತ್ತಿದ್ದಾರೆ.

ನಗರದ ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಿಬಿಎ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದು ವ್ಯಾಪಾರಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಬಡವರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ.
ಸಚಿವ ಕೃಷ್ಣಬೈರೇಗೌಡರೇ ಸ್ಥಳಕ್ಕೆ ಬನ್ನಿ:
ಪ್ರತಿಭಟನಾ ನಿರತ ಮುಖಂಡರು ಮಾತನಾಡಿ, “ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಸ್ವಾವಲಂಬಿ ಬದುಕನ್ನು ನಾಶಪಡಿಸುತ್ತಿರುವುದು ಖಂಡನೀಯ. ತಕ್ಷಣವೇ ಈ ಒಕ್ಕಲೆಬ್ಬಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು. ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಖುದ್ದಾಗಿ ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಬೇಕು. ಇಲ್ಲವಾದರೆ ಇಡೀ ಬೆಂಗಳೂರಿನಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಬೀದಿಬದಿ ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು ಇಲ್ಲಿವೆ:
- ಒಕ್ಕಲೆಬ್ಬಿಸಲಾದ ಎಲ್ಲಾ ಬೀದಿ ವ್ಯಾಪಾರಿಗಳಿಗೆ ತಕ್ಷಣವೇ ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಬೇಕು.
- ಸಾರ್ವಜನಿಕರ ಸಂಚಾರಕ್ಕೆ ನಿಜಕ್ಕೂ ಅಡ್ಡಿಯಾಗಿದ್ದರೆ, ಅಷ್ಟೇ ವ್ಯಾಪಾರ ವಹಿವಾಟು ನಡೆಯುವ ಪರ್ಯಾಯ ಸೂಕ್ತ ಸ್ಥಳವನ್ನು ಗುರುತಿಸಿಕೊಡಬೇಕು.
- ಅಧಿಕಾರಿಗಳು ಅಕ್ರಮವಾಗಿ ಜಪ್ತಿ ಮಾಡಿರುವ ಬಡ ವ್ಯಾಪಾರಿಗಳ ಸರಕು ಮತ್ತು ಸಾಮಗ್ರಿಗಳನ್ನು ಬೇಷರತ್ತಾಗಿ ವಾಪಸ್ ನೀಡಬೇಕು.
- ಕೇಂದ್ರ ಸರ್ಕಾರದ ‘ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
- ನಗರದಾದ್ಯಂತ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ಪೂರ್ಣಗೊಳ್ಳುವವರೆಗೂ ಯಾವುದೇ ರೀತಿಯ ‘ಎತ್ತಂಗಡಿ’ ಪ್ರಕ್ರಿಯೆಯನ್ನು ನಡೆಸಬಾರದು.
- ಹೊಸದಾಗಿ ರಚನೆಯಾಗಿರುವ ನಗರ ಪಾಲಿಕೆಗಳಲ್ಲಿ ತಕ್ಷಣವೇ ನಿಯಮಾನುಸಾರ ‘ಟೌನ್ ವೆಂಡಿಂಗ್ ಕಮಿಟಿ’ಗಳನ್ನು (TVC) ರಚಿಸಬೇಕು.
- ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಫುಟ್ಪಾತ್ಗಳನ್ನು ವೈಜ್ಞಾನಿಕವಾಗಿ ಅಗಲೀಕರಣ ಮಾಡಬೇಕು.
ಬೃಹತ್ ಒಗ್ಗಟ್ಟು ಪ್ರದರ್ಶಿಸಿದ ಜಂಟಿ ಹೋರಾಟ ಸಮಿತಿ:
ಬೀದಿಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಗೆ ರಾಜ್ಯದ ಪ್ರಮುಖ ಶ್ರಮಿಕ ಸಂಘಟನೆಗಳು ಜಂಟಿಯಾಗಿ ಬೆಂಬಲ ಘೋಷಿಸಿವೆ. ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ, ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ, ನವ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘ, ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ ಮತ್ತು ಕರ್ನಾಟಕ ಮಹಿಳಾ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸಾವಿರಾರು ಕಾರ್ಯಕರ್ತರು ಈ ಐಕ್ಯ ಹೋರಾಟದಲ್ಲಿ ಭಾಗವಹಿಸಿ, ಸರ್ಕಾರದ ಬಡವಿರೋಧಿ ಧೋರಣೆಯ ವಿರುದ್ಧ ಆಕ್ರೋಶ ಹೊರಹಾಕಿದರು.


