ಮಣಿಪುರದ ಕುಕಿ-ಜೋ ಬುಡಕಟ್ಟು ಪ್ರಾಬಲ್ಯದ ಚುರಚಂದ್ಪುರ ಜಿಲ್ಲೆಯ ‘ಗ್ರಾಮ ರಕ್ಷಣಾ ಸ್ವಯಂಸೇವಕರ’ ಬಂಕರ್ನಲ್ಲಿ ಸೆಲ್ಫಿ ತೆಗೆದುಕೊಂಡ ಹೆಡ್ಕಾನ್ಸ್ಟೇಬಲ್ನ ಅಮಾನತು ವಿರೋಧಿಸಿ ನೂರಾರು ಜನರು ಇಂದು ಭದ್ರತಾ ಪಡೆಗಳೊಂದಿಗೆ ನಡೆಸಿದ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ ಎಂದು ಪೊಲೀಸರು ತಿಳಿಸಿದ್ದು, ಬೆಟ್ಟದ ಮೇಲಿರುವ ಗ್ರಾಮ ರಕ್ಷಣಾ ಸ್ವಯಂಸೇವಕರ ಬಂಕರ್ನಲ್ಲಿ ಸೆಲ್ಫಿ ತೆಗೆದುಕೊಂಡ ಹೆಡ್ ಕಾನ್ಸ್ಟೇಬಲ್ ಸಿಯಾಮ್ಲಾಲ್ಪಾಲ್ ಅವರನ್ನು ಮರುನೇಮಕಕ್ಕೆ ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಸುತ್ತುವರೆದಿರುವುದು ಕಂಡುಬಂದಿದೆ.
ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಯ ಹೊರಗೆ ಬಸ್ ಮತ್ತು ಇತರ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಕೋಪಗೊಂಡ ಗುಂಪು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ಚುರಚಂದ್ಪುರ ಜಿಲ್ಲಾ ಪೊಲೀಸ್ನ ಸಿಯಾಮ್ಲಾಲ್ಪಾಲ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ, ಫೆಬ್ರವರಿ 14 ರಂದು ಅವರು ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ವೀಡಿಯೊ ಮಾಡುತ್ತಿರುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಚುರಚಂದಪುರ ಪೊಲೀಸ್ ಅಧೀಕ್ಷಕ ಶಿವಾನಂದ್ ಸುರ್ವೆ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.
ಬಹುಸಂಖ್ಯಾತ ಕುಕಿ-ಜೋ ಬುಡಕಟ್ಟುಗಳು ಮತ್ತು ಕಣಿವೆಯ ಬಹುಸಂಖ್ಯಾತ ಮೈತೇಯಿ ನಡುವಿನ ಜನಾಂಗೀಯ ಉದ್ವಿಗ್ನತೆಯ ಮಧ್ಯೆ ಮಣಿಪುರವು ಪ್ರತಿಸ್ಪರ್ಧಿ ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ಚಕಮಕಿಗಳನ್ನು ಎದುರಿಸುತ್ತಿದೆ. ಅವರು ತಮ್ಮನ್ನು ತಾವು “ಗ್ರಾಮ ರಕ್ಷಣಾ ಸ್ವಯಂಸೇವಕರು” ಎಂದು ಕರೆದುಕೊಳ್ಳುತ್ತಾರೆ.

ರಾಜ್ಯದ ರಾಜಧಾನಿ ಇಂಫಾಲ್ನಿಂದ 65 ಕಿಮೀ ದೂರದಲ್ಲಿರುವ ಚುರಾಚಂದ್ಪುರದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಅಶ್ರುವಾಯು ಶೆಲ್ಗಳನ್ನು ಹಾರಿಸಿದೆ ಎಂದು ಪೊಲೀಸರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
‘ಅಂದಾಜು 300-400 ಸಂಖ್ಯೆಯ ಜನಸಮೂಹವು ಇಂದು ಚುರಚಂದಪುರ ಎಸ್ಪಿ (ಪೊಲೀಸ್ ವರಿಷ್ಠಾಧಿಕಾರಿ) ಕಚೇರಿಗೆ ನುಗ್ಗಲು ಪ್ರಯತ್ನಿಸಿತು. ಕಲ್ಲು ತೂರಾಟ, ಇತ್ಯಾದಿ ನಡೆಸಿದ್ದು, ಆರ್ಎಎಫ್ ಸೇರಿದಂತೆ ಎಸ್ಎಫ್ ಪಡೆಗಳು ಗುಂಪನ್ನು ನಿಯಂತ್ರಿಸಲು ಅಶ್ರುವಾಯು ಶೆಲ್ಗಳನ್ನು ಹಾರಿಸುವ ಮೂಲಕ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ; ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಮಣಿಪುರ ಪೊಲೀಸರು ಎಕ್ಸ್ನಲ್ಲಿನ ಪೋಸ್ಟ್ ಮಾಡಿದ್ದಾರೆ.
ಹೆಡ್ಕಾನ್ಸ್ಟೇಬಲ್ ಅವರನ್ನು ಅನ್ಯಾಯವಾಗಿ ಅಮಾನತುಗೊಳಿಸಲಾಗಿದ್ದು, ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕುಕಿ-ಜೋ ಬುಡಕಟ್ಟು ಜನಾಂಗದವರ ಪ್ರಾಬಲ್ಯವಿರುವ ಜಿಲ್ಲೆ ಚುರಾಚಂದ್ಪುರ, ಮೇ 2023 ರಲ್ಲಿ ಪ್ರಾರಂಭವಾದ ಜನಾಂಗೀಯ ಘರ್ಷಣೆಗಳಿಂದ ಹೆಚ್ಚು ಪ್ರಭಾವಿತವಾದ ಪ್ರದೇಶಗಳಲ್ಲಿ ಒಂದಾಗಿದೆ.
ಕುಕಿ-ಜೋ ಬುಡಕಟ್ಟು ಜನಾಂಗದವರು ತಮ್ಮ ಹಳ್ಳಿಗಳ ಮೇಲೆ ದಾಳಿ ಮಾಡುವಲ್ಲಿ ರಾಜ್ಯ ಪೋಲೀಸರ ಪಾಲ್ಗೊಳ್ಳುವಿಕೆಯನ್ನು ಪದೇ ಪದೇ ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆರೋಪಗಳನ್ನು ನಿರಾಕರಿಸಿದ್ದು, ಬದಲಿಗೆ ಕುಕಿ-ಜೊ ದಂಗೆಕೋರರು “ಗ್ರಾಮ ರಕ್ಷಣಾ ಸ್ವಯಂಸೇವಕರನ್ನು” ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.
ಕುಕಿ-ಝೋ ನಾಗರಿಕ ಸಮಾಜದ ಗುಂಪು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಗುರುವಾರ ತಡರಾತ್ರಿ ಹೇಳಿಕೆಯಲ್ಲಿ ಚುರಚಂದಪುರ ಪೊಲೀಸ್ ಮುಖ್ಯಸ್ಥರು “ಇಂದು ರಾತ್ರಿ ಜಿಲ್ಲೆಯಲ್ಲಿ ನಡೆದ ಘಟನೆಗೆ ಸಂಪೂರ್ಣ ಹೊಣೆಗಾರರಾಗಿದ್ದಾರೆ…” ಎಂದು ಕಿಡಿಕಾರಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಮಣಿಪುರ ಪೊಲೀಸ್ ಸಿಬ್ಬಂದಿ ಸಶಸ್ತ್ರ ಗುಂಪುಗಳೊಂದಿಗೆ ಹೋರಾಡುತ್ತಿರುವುದನ್ನು ಮತ್ತು ಕುಕಿ-ಜೋ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ಐಟಿಎಲ್ಎಫ್ ಆಪಾದಿತ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಐಟಿಎಲ್ಎಫ್ ಹೇಳಿದೆ. ಸಿವಿಲ್ ಸೊಸೈಟಿ ಗುಂಪಿನ ಮಾಜಿ ನಾಯಕ ಮಣಿಪುರ ಪೊಲೀಸರಿಗೆ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕೊಲೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಪ್ರಕರಣ ದಾಖಲಿಸುವಂತೆ ಪತ್ರ ಬರೆದಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ (ಯುದ್ಧ) ಕರ್ನಲ್ ನೆಕ್ಟರ್ ಸಂಜೆನ್ಬಾಮ್ (ನಿವೃತ್ತ) ತನಗೆ ರಾತ್ರಿ ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತೆಂಗ್ನೋಪಾಲ್ ಘಟಕದ ಕುಕಿ ವಿದ್ಯಾರ್ಥಿಗಳ ಸಂಘಟನೆಯ (ಕೆಎಸ್ಒ) ಮಾಜಿ ಮುಖ್ಯಸ್ಥ ಎಚ್ ಥಾಂಗ್ಟಿನ್ಲೆನ್ ಡೇನಿಯಲ್ ಮೇಟ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
‘ನನಗೆ ನೆಕ್ಟರ್ ಅವರ ಫೋನ್ ಸಂಖ್ಯೆಯಿಂದ ಕರೆ ಬಂದಿದೆ … ತಡರಾತ್ರಿಯಾದ ಕಾರಣ ನಾನು ಕರೆ ಸ್ವೀಕರಿಸಲಿಲ್ಲ. ನಂತರ ಕೆಲವು ನಿಮಿಷಗಳ ನಂತರ ನನಗೆ ಜೀವ ಬೆದರಿಕೆಯ ಸಂದೇಶ ಬಂದಿತು … ಅವರು ನನ್ನ ಬಗ್ಗೆ ಗೊತ್ತು ಎಂದು ಸಂದೇಶದಲ್ಲಿ ಹೇಳಿದ್ದಾರೆ. ಅವರು ನನ್ನನ್ನು ಕೊಲ್ಲಲು ಹೊರಟಿದ್ದಾರೆ’ ಎಂದು ಮೇಟ್ ಗುರುವಾರ ತೆಂಗನೌಪಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ‘ದೆಹಲಿ ಚಲೋ’ ಮೆರವಣಿಗೆ: ಹೃದಯಾಘಾತದಿಂದ ಪ್ರತಿಭಟನಾನಿರತ ರೈತ ನಿಧನ


