ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವರದಿ ಮಾಡುತ್ತಿದ್ದ ಛಾಯಾಚಿತ್ರ ವರದಿಗಾರರ(ಫೋಟೋ ಜರ್ನಲಿಸ್ಟ್) ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಪಟೇಲ್ ಚೌಕ್ನಲ್ಲಿ ನಡೆದಿದ್ದು, ಪ್ರತಿಭಟನೆಯನ್ನು ಹೊರ ಜಗತ್ತಿಗೆ ಅರಿಯದಂತೆ ಮಾಡಲು ವ್ಯವಸ್ಥಿತ ಪಿತೂರಿ ನಡೆಸಿರುವ ಆರೋಪ ಕೇಳಿ ಬಂದಿದೆ.
ಪೊಲೀಸರ ಹಲ್ಲೆಯಿಂದ ಹಿಂದೂಸ್ತಾನ್ ಟೈಮ್ಸ್ನ ಛಾಯಾಚಿತ್ರ ವರದಿಗಾರ ಸಲ್ಮಾನ್ ಅಲಿ ಅವರ ಎಡ ಮೊಣಕೈ ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ತಿಳಿದು ಬಂದಿದೆ. ದಿ ವರ್ಕಿಂಗ್ ನ್ಯೂಸ್ ಕ್ಯಾಮರಾಮನ್ಸ್ ಅಸೋಸಿಯೇಷನ್ ಬಿಡುಗಡೆ ಮಾಡಿದ ಪೋಟೋದಲ್ಲಿ ಇಂಡಿಯಾ ಟುಡೆಯ ಅರುಣ್ ಠಾಕೂರ್ ಅವರ ಕತ್ತನ್ನು ಪೋಲೀಸ್ ಅಧಿಕಾರಿಯೋರ್ವರು ಹಿಡಿದಿರುವುದನ್ನು ತೋರಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಲವಾರು ಛಾಯಾಚಿತ್ರಗಳು ಮತ್ತು ವೀಡಿಯೊ ಕ್ಲಿಪ್ಗಳು ಕ್ಯಾಮೆರಾಗಳನ್ನು ಹೊತ್ತೊಯ್ಯುತ್ತಿರುವ ಪತ್ರಕರ್ತರಿಗೆ ಹಲವಾರು ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದನ್ನು ತೋರಿಸಿದೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹಲ್ಲೆಯನ್ನು ಖಂಡಿಸಿ ಹೇಳಿಕೆಯನ್ನು ನೀಡಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದ ಉನ್ನತ ಮಟ್ಟದ ಸಮಿತಿಯಿಂದ ತನಿಖೆಗೆ ಒತ್ತಾಯಿಸಿದೆ. ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಬೇಕು. ರಾಜಕೀಯ ಪ್ರತಿಭಟನೆಗಳನ್ನು ವರದಿ ಮಾಡುವುದು ವರದಿಗಾರರು ಮತ್ತು ಫೋಟೋ ಜರ್ನಲಿಸ್ಟ್ಗಳ ಕೆಲಸ. ದೆಹಲಿ ಪೊಲೀಸರು ಫೋಟೊ ಜರ್ನಲಿಸ್ಟ್ಗಳಿಗೆ ತಮ್ಮ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದೆ, ಇದನ್ನು ಸುಪ್ರೀಂ ಕೋರ್ಟ್ ಅನೇಕ ಸಂದರ್ಭಗಳಲ್ಲಿ ಒತ್ತಿ ಹೇಳಿದೆ ಎಂದು ಹೇಳಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಎಎಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೇನ್ಸ್ ಮತ್ತು ಶಾಸಕ ಸೋಮನಾಥ್ ಭಾರ್ತಿ ಸೇರಿದಂತೆ ಹಲವು ಎಎಪಿ ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ನ್ಯಾಯಾಂಗದ ಸಮಗ್ರತೆಗೆ ಧಕ್ಕೆ: 600ಕ್ಕೂ ಹೆಚ್ಚು ವಕೀಲರಿಂದ ಸಿಜೆಐಗೆ ಪತ್ರ