ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕಂಪನಿಯೊಂದರಿಂದ 150 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಪಡೆದ ನಂತರ ಟೆಲಿಕಾಂ ನೀತಿಯನ್ನು ಬದಲಾಯಿಸಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಮೋದಿ ಸರ್ಕಾರವು ಕಂಪನಿಯೊಂದರಿಂದ 150 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಪಡೆದುಕೊಂಡಿದೆ ಮತ್ತು ಸರ್ಕಾರ ತನ್ನ ಟೆಲಿಕಾಂ ನೀತಿಯನ್ನು ಬದಲಾಯಿಸಿದೆ. ನೀತಿಯ ಬದಲಾವಣೆಯಿಂದ ಯಾರಿಗೆ ಲಾಭವಾಯಿತು ಎಂದು ನೀವು ಅರ್ಥಮಾಡಿಕೊಳ್ಳಬಹುದು.
2G ಒಂದು ಹಗರಣವಾಗಿದ್ದರೆ, ಇದು ಏನು? ಎಂದು ಕೇಳಿದ ಅಸಾದುದ್ದೀನ್ ಓವೈಸಿ, ಭಾರ್ತಿ ಗ್ರೂಪ್ ಈ ಮೊತ್ತವನ್ನು ದೇಣಿಗೆ ನೀಡಿದೆ ಎಂದು ಸೂಚಿಸುವ ಸುದ್ದಿ ಲೇಖನದ ಚಿತ್ರವನ್ನು ಟ್ಯಾಗ್ ಮಾಡಿದ್ದಾರೆ.
ಇನ್ನೊಂದು ಪೋಸ್ಟ್ ಮಾಡಿದ ಒವೈಸಿ, ತುಳಿತಕ್ಕೊಳಗಾದ ಭಾರತೀಯರೊಂದಿಗೆ ಆಳವಾದ ಬಾಂಧವ್ಯ ಹೊಂದಿರುವ ಪ್ರಧಾನಿಯನ್ನು ಆಯ್ಕೆ ಮಾಡಬೇಕೇ ಅಥವಾ ಶ್ರೀಮಂತರಿಗೆ ಮಾತ್ರ ಸೀಮಿತವಾಗಿರುವ ಪ್ರಧಾನಿಯನ್ನು ಆಯ್ಕೆ ಮಾಡಬೇಕೆ ಎಂದು ದೇಶವು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಕಳೆದ ತಿಂಗಳು, ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ, ಚುನಾವಣಾ ಬಾಂಡ್ ಯೋಜನೆಯು ಮಾಹಿತಿ ಹಕ್ಕು ಮತ್ತು ಸಂವಿಧಾನದ ಅಡಿಯಲ್ಲಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಸುಪ್ರೀಂಕೋರ್ಟ್ ಖಡಕ್ ಸೂಚನೆ ಬಳಿಕ ಚುನಾವಣಾ ಆಯೋಗವು ಚುನಾವಣಾ ಬಾಂಡ್ಗಳ ಕುರಿತ ಮಾಹಿತಿಯನ್ನು ಸಾರ್ವಜನಿಕಗೊಳಿಸಿತ್ತು. ವೇದಾಂತ, ಭಾರ್ತಿ ಏರ್ಟೆಲ್, ಮುತ್ತೂಟ್, ಬಾಜಾ ಆಟೋ, ಜಿಂದಾಲ್ ಗ್ರೂಪ್ ಮತ್ತು ಟಿವಿಎಸ್ ಮೋಟಾರ್ನಂತಹ ದೊಡ್ಡ ಕಾರ್ಪೊರೇಟ್ ಗುಂಪುಗಳು ಖರೀದಿಸಿದ ಚುನಾವಣಾ ಬಾಂಡ್ಗಳ ಪ್ರಮುಖ ಫಲಾನುಭವಿ ಬಿಜೆಪಿಯಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ. ಒಟ್ಟು ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆಯಲ್ಲಿ 50%ಕ್ಕಿಂತ ಅಧಿಕ ದೇಣಿಗೆಯನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಅಂಕಿ-ಅಂಶಗಳ ಮೂಲಕ ಬಹಿರಂಗವಾಗಿತ್ತು.
ಜಾರಿ ನಿರ್ದೇಶನಾಲಯ, ಐಟಿ, ಸಿಬಿಐ ದಾಳಿ ಬಳಿಕ ಕೆಲವೊಂದು ಕಂಪೆನಿಗಳು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿರುವುದು ಪತ್ತೆಯಾಗಿತ್ತು. ಇದೀಗ 150 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ನ್ನು ದೇಣಿಗೆ ನೀಡಿದ ಬಳಿಕ ಟೆಲಿಕಾಂ ನೀತಿಯನ್ನು ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನು ಓದಿ: ಅರವಿಂದ್ ಕೇಜ್ರಿವಾಲ್ಗೆ ಕಸ್ಟಡಿಯಲ್ಲಿ ಕಿರುಕುಳ ನೀಡಲಾಗುತ್ತಿದೆ: ಪತ್ನಿ ಆರೋಪ