ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವಾಗಿ ಮಾರಾಟ ಮಾಡುವ ಮೂಲಕ ಅದಾನಿ ಕಂಪನಿ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ದಾಖಲೆಗಳ ಆಧಾರದಲ್ಲಿ ಫಿನಾನ್ಶಿಯಲ್ ಟೈಮ್ಸ್ ವಿಸ್ಕೃತ ಲೇಖನವನ್ನು ಪ್ರಕಟಿಸಿದೆ.
ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್ಪಿ) ಸಂಗ್ರಹಿಸಿದ ಮತ್ತು ಫಿನಾನ್ಶಿಯಲ್ ಟೈಮ್ಸ್ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಅದಾನಿ ಕಂಪನಿ ಅಥವಾ ಅದಾನಿ ಸಮೂಹ ಮಾಡಿರುವ ಆಪಾದಿತ ವಂಚನೆಯಿಂದ ದೇಶದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ ಸಂಭವವಿದೆ.
ಕಡಿಮೆ ದರ್ಜೆಯ ಕಲ್ಲಿದ್ದಲನ್ನು ವಿದ್ಯುತ್ಗಾಗಿ ಬಳಸುವ ಮೂಲಕ ಹೆಚ್ಚು ಇಂಧನವನ್ನು ಸುಡಲಾಗಿದೆ ಅಥವಾ ಸುಡಲಾಗ್ತಿದೆ. ಈ ಮೂಲಕ ಅದಾನಿ ಕಂಪನಿ ಗಾಳಿಯ ಗುಣಮಟ್ಟವನ್ನು ಕಡೆಗಣಿಸಿ ಮೋಸದಿಂದ ಬಂಪರ್ ಲಾಭವನ್ನು ಪಡೆದಿರಬಹುದು ಎಂದು ವರದಿ ಹೇಳಿದೆ.
ದಾಖಲೆಗಳ ಪ್ರಕಾರ, ಜನವರಿ 2014ರಲ್ಲಿ ಅದಾನಿ ಕಂಪನಿ ಇಂಡೋನೇಷ್ಯಾದಿಂದ ಕಲ್ಲಿದ್ದಲು ಖರೀದಿಸಿತ್ತು. ಅದು ಗುಣಮಟ್ಟದಲ್ಲಿ ಪ್ರತಿ ಕಿಲೋಗ್ರಾಮ್ಗೆ 3,500 ಕ್ಯಾಲೊರಿಗಳನ್ನು ಹೊಂದಿತ್ತು. ಆದರೆ, ಆ ಕಲ್ಲಿದ್ದಲ್ಲನ್ನು ತಮಿಳುನಾಡು ಜನರೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಕಂಪನಿಗೆ (ತಂಗೆಡ್ಕೋ) ಅತ್ಯಮೂಲ್ಯ ದರ್ಜೆಯ 6,000 ಕ್ಯಾಲೋರಿಯ ಕಲ್ಲಿದ್ದಲು ಎಂದು ಮಾರಾಟ ಮಾಡಲಾಗಿದೆ. ಈ ಮೂಲಕ ಸಾರಿಗೆ ವೆಚ್ಚ ಹೊರತುಪಡಿಸಿ ಅದಾನಿ ಎರಡು ಪಟ್ಟು ಲಾಭ ಪಡೆದಿದೆ.
ಅದಾನಿ ಕಂಪನಿಗೆ ಸಂಬಂಧಿಸಿದ 2014ರ 22 ಕಲ್ಲಿದ್ದಲು ಸಾಗಣೆಯ ದಾಖಲೆಗಳನ್ನು ಫಿನಾನ್ಶಿಯಲ್ ಟೈಮ್ಸ್ ಹೊಂದಿಸಿ ನೋಡಿದೆ. ಈ ವೇಳೆ 1.5 ಮಿಲಿಯನ್ ಟನ್ ಸರಬರಾಜಿನಲ್ಲಿ ಗ್ರೇಡ್ ವ್ಯತ್ಯಾಸ ಕಂಡು ಬಂದಿದೆ.
ಅದಾನಿ ಕಂಪನಿ ಇಂಡೋನೇಷ್ಯಾದಿಂದ ಕಡಿಮೆ ಕ್ಯಾಲೊರಿಯ ಕಲ್ಲಿದ್ದಲು ಖರೀದಿಸಿ, ಅದನ್ನು ಒಪ್ಪಂದಂತೆ ದಕ್ಷಿಣ ಭಾರತದ ವಿದ್ಯುತ್ ಕಂಪನಿಗಳಿಗೆ ಪೂರೈಕೆ ಮಾಡುತ್ತಿದೆ. ಈ ಮೂಲಕ ಅಧಿಕ ಲಾಭ ಪಡೆಯುತ್ತಿದೆ ಎಂದು ವರದಿಯಲ್ಲಿ ಆಪಾದಿಸಲಾಗಿದೆ.
ಅದಾನಿ ಕಂಪನಿಯ ಈ ಆಪಾದಿತ ವಂಚನೆಯಿಂದ ಕಂಪನಿ ದುಪ್ಪಟ್ಟು ಲಾಭ ಪಡೆಯುವುದು ಒಂದೆಡೆಯಾದರೆ, ಇದು ಪರಿಸರದ ಮೇಲೆ ದೊಡ್ಡಮಟ್ಟದ ಪರಿಣಾಮ ಬೀರುತ್ತಿದೆ. ದಿ ಲ್ಯಾನ್ಸೆಟ್ 2022ರ ಅಧ್ಯಯನದ ಪ್ರಕಾರ, ಹೊರಾಂಗಣ ವಾಯುಮಾಲಿನ್ಯದಿಂದ ಭಾರತದಲ್ಲಿ ಪ್ರತಿ ವರ್ಷ 2 ಮಿಲಿಯನ್ಗಿಂತಲೂ ಹೆಚ್ಚು ಜನರು ಸಾಯುತ್ತಿದ್ದಾರೆ. ಈ ಪೈಕಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಕ್ಕಳ ಮರಣ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ.
ದಶಕದ ಹಿಂದಿನ ಮತ್ತೊಂದು ಅಧ್ಯಯನದ ಪ್ರಕಾರ, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಭಾರತದ ಮುಕ್ಕಾಲು ಭಾಗದಷ್ಟು ವಿದ್ಯುತ್ ಪೂರೈಸುತ್ತದೆ. ಇದರ ಜೊತೆಗೆ ದೇಶದಲ್ಲಿ ಮಾನವ ನಿರ್ಮಿತ ಸೂಕ್ಷ್ಮ ಕಣಗಳ ಹೊರಸೂಸುವಿಕೆಯಲ್ಲಿ ಶೇ.15ರಷ್ಟು ಪಾಲು ಹೊಂದಿದೆ. ಈ ಪೈಕಿ ಶೇ.30ರಷ್ಟು ನೈಟ್ರೋಜನ್ ಆಕ್ಸೈಡ್ ಮತ್ತು ಶೇ. 50ರಷ್ಟು ಸಲ್ಫರ್ ಡೈಆಕ್ಸೈಡ್ ಸೇರಿದೆ.
ಕಲ್ಲಿದಲ್ಲು ಉರಿಸುವುದರ ಮೂಲಕ ವಿದ್ಯುತ್ ಉತ್ಪಾದನೆಯ ಲಾಭ ಒಂದೆಡೆಯಾದರೆ, ಮತ್ತೊಂದೆಡೆ ಇದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಭಾರತದ ಹಿಂದುಳಿದಿದೆ ಎಂದು ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ನವದೆಹಲಿ ಮೂಲದ ವಿಶ್ಲೇಷಕ ಸುನಿಲ್ ದಹಿಯಾ ಹೇಳಿದ್ದಾರೆ.
2021ಮತ್ತು 2023ರ ನಡುವೆ ಭಾರತಕ್ಕೆ ಆಮದು ಮಾಡಿಕೊಳ್ಳಲಾದ ಕಲ್ಲಿದ್ದಲು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿ, ಮಧ್ಯವರ್ತಿಗಳಿಗೆ 5 ಬಿಲಿಯನ್ ಡಾಲರ್ಗೂ ಹೆಚ್ಚು ಹಣವನ್ನು ಪಾವತಿಸಿದೆ ಎಂದು ಫಿನಾನ್ಶಿಯಲ್ ಟೈಮ್ಸ್ ವರದಿ ಮಾಡಿದ ನಂತರ ವಿರೋಧ ಪಕ್ಷದ ನಾಯಕರು ಕಳೆದ ವರ್ಷ ಅದಾನಿ ವಿರುದ್ಧ ತನಿಖೆಗೆ ಕರೆ ಆಗ್ರಹಿಸಿದ್ದರು.
ಪಾಕಿಸ್ತಾನದ ಗಡಿಯ ಸಮೀಪವಿರುವ ಖಾವ್ಡಾದಲ್ಲಿ ವಿಶ್ವದ ಅತಿದೊಡ್ಡ ಗಾಳಿ ಮತ್ತು ಸೌರ ಪಾರ್ಕ್ ಒಂದನ್ನು ನಿರ್ಮಿಸುವ ಮೂಲಕ ಅದಾನಿಯು ತನ್ನನ್ನು ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪದಕನಾಗಿ ಮರುಬ್ರಾಂಡ್ ಮಾಡಲು ಪ್ರಯತ್ನಿಸುತ್ತಿರುವ ನಡುವೆ ವಂಚನೆಯ ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ನಿರಾಕರಿಸಿರುವ ಕಂಪನಿ, ತಾನು ಭಾರತದ ಅತಿದೊಡ್ಡ ಕಲ್ಲಿದ್ದಲು ಆಮದುದಾರರಲ್ಲಿ ಒಂದು ಎಂದು ಸಮರ್ಥಿಸಿಕೊಂಡಿದೆ.
ಅದಾನಿ ಕಂಪನಿ ಕಲ್ಲಿದ್ದಲು ಖರೀದಿಯಲ್ಲಿ ವಂಚನೆ ಎಸಗಿರುವ ಆರೋಪ ದೇಶದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ನರೇಂದ್ರ ಮೋದಿಯಯವರು ಮೂರನೇ ಬಾರಿಗೆ ಪ್ರಧಾನಿಯಾಗುವ ಉತ್ಸಾಹದಲ್ಲಿರುವ ನಡುವೆ, ಈಗಾಗಲೇ ಗೌತಮ್ ಅದಾನಿ ಸೇರಿದಂತೆ ದೇಶದ ಪ್ರಮುಖ ಕೋಟ್ಯಾಧಿಪತಿಗಳು ಅನುಭವಿಸುತ್ತಿರುವ ಅಧಿಕಾರ ಮತ್ತು ಪ್ರಭಾವದ ಕುರಿತು ಚರ್ಚೆಗಳು ಜೋರಾಗಿದೆ.
ಒಸಿಸಿಆರ್ಪಿಯಿಂದ ಪಡೆದ ಹೊಸ ದಾಖಲೆಯ ಪ್ರಕಾರ, ಡಿಸೆಂಬರ್ 2013ರಲ್ಲಿ ಎಂ.ವಿ ಕಲ್ಲಿಯೋಪಿ ಎಲ್ ಹಡಗು ಇಂಡೋನೇಷ್ಯಾದಿಂದ ಟನ್ಗೆ 28 ಡಾಲರ್ ಮೊತ್ತ ಕಲ್ಲಿದ್ದಲನ್ನು ಹೊತ್ತು ತಂದಿತ್ತು. ಹೊಸ ವರ್ಷಕ್ಕೆ (2024ಕ್ಕೆ) ಹಡಗು ಭಾರತ ತಲುಪಿದಾಗ ಅದಾನಿ ಕಂಪನಿ ಆ ಕಲ್ಲಿದ್ದಲನ್ನು ಟನ್ಗೆ 92 ಡಾಲರ್ಗೆ ತಂಗೆಡ್ಕೋ ಮಾರಾಟ ಮಾಡಿತ್ತು ಎಂದು ಫಿನಾನ್ಶಿಯಲ್ ಟೈಮ್ಸ್ ಹೇಳಿದೆ.
ಬ್ರಿಟಿಷ್ ವರ್ಜಿನ್ ದ್ವೀಪದ ಮೂಲದ ಕಂಪನಿಯ ಪಾತ್ರ
ಕಲ್ಲಿದ್ದಲನ್ನು ಮೂಲತಃ ಸೌತ್ ಕಲಿಮಂಟನ್ನ ಇಂಡೋನೇಶ್ಯಾದ ಗಣಿಗಾರಿಕೆ ಸಮೂಹ ಪಿಟಿ ಜಾನ್ಲಿನ್ ಸಪ್ಲೈಸ್ನಿಂದ ಖರೀದಿಸಲಾಗಿತ್ತು. ಅದನ್ನು ಅಲ್ಲಿಯೇ ಹಡಗಿಗೆ ತುಂಬಲಾಗಿತ್ತು. ಪಿಟಿ ಜಾನ್ಲಿನ್ನ ರಫ್ತು ಘೋಷಣೆಯಲ್ಲಿ ಅಂತಿಮ ಖರೀದಿದಾರ ತಂಗೆಡ್ಕೋ ಆಗಿದೆ ಎಂದು ತಿಳಿಸಿತ್ತು ಮತ್ತು ಮಧ್ಯವರ್ತಿಯಾಗಿ ಅದಾನಿಯನ್ನು ಹೆಸರಿಸಿತ್ತು.
ಜಾನಲಿನ್ನ ಇನ್ವಾಯ್ಸ್ ಬ್ರಿಟಿಷ್ ವರ್ಜಿನ್ ದ್ವೀಪದ ಸುಪ್ರೀಂ ಯೂನಿಯನ್ ಇನ್ವೆಸ್ಟರ್ಸ್ಗೆ ಹೋಗಿತ್ತು. ಅದು ಪ್ರತಿ ಟನ್ಗೆ 28 ಡಾಲರ್ ಬೆಲೆ ನಿಗದಿಗೊಳಿಸಿತ್ತು. ಪ್ರಮುಖ ವಿಷಯವೆಂದರೆ, ಒಂದು ವಾರದಲ್ಲಿ ಸುಪ್ರೀಂ ಯೂನಿಯನ್ ಸಿಂಗಾಪುರದಲ್ಲಿ ಅದಾನಿಗೆ ಪ್ರತಿ ಟನ್ಗೆ 34 ಡಾಲರ್ಗಳಲ್ಲಿ ಶಿಪ್ಮೆಂಟ್ನ ಇನ್ವಾಯ್ಸ್ ಮಾಡಿತ್ತು ಮತ್ತು ಕಲ್ಲಿದ್ದಲು ಪ್ರತಿ ಕೆಜಿಗೆ 3,500 ಕ್ಯಾಲೊರಿಗಳನ್ನು ಒಳಗೊಂಡಿದೆ ಎಂದು ಹೇಳಿತ್ತು.
ಆದರೆ, ಅದೇ ಕಲ್ಲಿದ್ದಲಿಗಾಗಿ ಅದಾನಿ ಕಂಪನಿ ತಂಗೆಡ್ಕೋಗೆ ನೀಡಿದ್ದ ಇನ್ವಾಯ್ಸ್ನಲ್ಲಿ ಗುಣಮಟ್ಟವು 6,000 ಕ್ಯಾಲೊರಿಗಳಿಗೆ ಜಿಗಿದಿತ್ತು ಮತ್ತು ಬೆಲೆ ಪ್ರತಿ ಟನ್ಗೆ 92 ಡಾಲರ್ಗೆ ಏರಿಕೆಯಾಗಿತ್ತು. ತಂಗೆಡ್ಕೋಗೆ 22 ಶಿಪ್ಮೆಂಟ್ಗಳ ಮೂಲಕ ಅದಾನಿ ಕಂಪನಿ ಮತ್ತು ಅದರ ಮಧ್ಯವರ್ತಿಗಳು ಅಂದಾಜು ಏಳು ಕೋಟಿ ಡಾಲರ್ ಲಾಭಗಳಿಸಿದ್ದರು ಎಂದು ಫಿನಾನ್ಶಿಯಲ್ ಟೈಮ್ಸ್ ಹೇಳಿದೆ.
ಆರೋಪ ನಿರಾಕರಿಸಿದ ಅದಾನಿ
ಅದಾನಿ ಕಂಪನಿಯು ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಪೂರೈಕೆಯಾದ ಕಲ್ಲಿದ್ದಲು ಹಲವಾರು ಏಜೆನ್ಸಿಗಳಿಂದ ಹಲವು ಹಂತಗಳಲ್ಲಿ ವಿಸ್ತ್ರತ ಗುಣಮಟ್ಟ ಪರೀಕ್ಷೆಗೆ ಒಳಗಾಗಿತ್ತು. ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಆರೋಪ ಆಧಾರರಹಿತ ಮಾತ್ರವಲ್ಲ, ಸಂಪೂರ್ಣ ಅಸಂಬದ್ಧವಾಗಿದೆ ಎಂದು ಅದಾನಿ ಗ್ರೂಪ್ನ ವಕ್ತಾರರು ಫಿನಾನ್ಶಿಯಲ್ ಟೈಮ್ಸ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಕೇರಳ: ವಿವಿ ಸೆನೆಟ್ಗೆ ಗವರ್ನರ್ ನೇಮಿಸಿದ್ದ ನಾಲ್ವರು ಎಬಿವಿಪಿ ಸದಸ್ಯರ ನಾಮನಿರ್ದೇಶನ ರದ್ದುಗೊಳಿಸಿದ ಹೈಕೋರ್ಟ್


