ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ, “ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿ, ದೂರು ದಾಖಲಿಸಿದ್ದ ಮಹಿಳೆಯು ಭಾನುವಾರ (ಮೇ 26) ಬೆಂಗಳೂರಿನ ಹುಳಿಮಾವು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲಗಳ ಪ್ರಕಾರ, 53 ವರ್ಷದ ಮಹಿಳೆ ಮೇ 26 ರಂದು ರಾತ್ರಿ ಉಸಿರಾಟದ ತೊಂದರೆ ಅನುಭವಿಸಿದ ನಂತರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ. ‘ಮಹಿಳೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮೃತ ಮಹಿಳೆಯ ಮಗಳು, ಆಕೆಯೊಂದಿಗೆ ಆಸ್ಪತ್ರೆಗೆ ಬಂದಿದ್ದಳು. ರಾತ್ರಿ 9.21ರ ಸುಮಾರಿಗೆ ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾರೆ ಎಂದು 17 ವರ್ಷದ ಬಾಲಕಿ ಪೋಕ್ಸೊ ಪ್ರಕರಣದ ಸಾಕ್ಷಿಯೊಬ್ಬರಿಗೆ ಸಂದೇಶ ಕಳುಹಿಸಿದ್ದಳು. ನಂತರ ಆಕೆ ತನ್ನ ತಾಯಿ ಇನ್ನಿಲ್ಲ ಎಂದು ಸಂದೇಶ ಕಳುಹಿಸಿದ್ದಳು.
ಆರೋಪ ನಿರಾಕರಿಸಿದ ಬಿಎಸ್ವೈ:
ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಜಿ ಸಿಎಂ ಯಡಿಯೂರಪ್ಪ ನಿರಾಕರಿಸಿದ್ದರು. “ತಾಯಿ-ಮಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.
ಪ್ರಕರಣದ ಬೆನ್ನತ್ತಿದ ಮಹಿಳೆಗೆ ಸಹಾಯ ಮಾಡುತ್ತಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಬಿಜೆಎಂಎಸ್) ಕಾರ್ಯಕರ್ತರು ಶವದ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಪೊಲೀಸರು ಇದನ್ನು ಸಹಜ ಸಾವು ಎಂದು ವೈದ್ಯರು ಉಲ್ಲೇಖಿಸಿದ್ದಾರೆ. ಕಾನೂನು ಮಾರ್ಗದರ್ಶನ ಪಡೆಯಲು ದೂರುದಾರರು ಇಂದು (ಮೇ 27 ರಂದು) ವಕೀಲರನ್ನು ಭೇಟಿಯಾಗಬೇಕಿತ್ತು.
ಯಡಿಯೂರಪ್ಪ ವಿರುದ್ಧ ಮಾರ್ಚ್ 14 ರಂದು 53 ವರ್ಷದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮರುದಿನ ರಾಜ್ಯ ಸರ್ಕಾರ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಿತ್ತು. ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಇದುವರೆಗೆ ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಬದುಕುಳಿದಿರುವ ಮಹಿಳೆ ಮತ್ತು ತಾಯಿಯ ಹೇಳಿಕೆಗಳನ್ನು ದಾಖಲಿಸಿದೆ.
‘ಅನುಮಾನಾಸ್ಪದ ಸಾವು..’; ಪತ್ರಕರ್ತ ನವೀನ್ ಸೂರಿಂಜೆ:
ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಇದೊಂದು ‘ದಿಡೀರ್ ಅನುಮಾನಾಸ್ಪದ ಸಾವು’ ಚರ್ಚೆಯಾಗುತ್ತೆ ಅಂದುಕೊಂಡಿದ್ದೆ. ಆದರೆ, ಚರ್ಚೆಯಾಗದ ಹಿನ್ನಲೆಯಲ್ಲಿ ಚರ್ಚೆಯನ್ನು ಹುಟ್ಟುಹಾಕಬೇಕಿದೆ. ಮಹಿಳೆಯೊಬ್ಬರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ದ ಪೋಕ್ಸೋ ಕೇಸ್ ದಾಖಲಿಸಿದ್ದರು. ಆ ಮಹಿಳೆಗೆ ಪ್ರಾರಂಭದಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರೂ ಕೊನೆಗೆ ಕಾನೂನಿನ ನೆರವು ಕೇಳಿ ಬಂದಿದ್ದು ಜನವಾದಿ ಮಹಿಳಾ ಸಂಘಟನೆಗೆ. ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಅವರು ನನಗೆ ಕರೆ ಮಾಡಿ ಈ ಮಹಿಳೆಗೆ ಕಾನೂನು ಹೋರಾಟಕ್ಕೆ ಬೆಂಬಲ ಬೇಕಾಗಿದೆ ಎಂದರು. ನಾನು ಹಿರಿಯ ವಕೀಲ ಎಸ್ ಬಾಲನ್ ಅವರ ಜೊತೆ ಮಾತನಾಡಿದ್ದೆ” ಎಂದು ಹೇಳಿದ್ದಾರೆ.
“ದುರ್ಬಲರನ್ನು ಗುರಿಯಾಗಿಸಿ ನಡೆಸುವ ಇಂತಹ ದೌರ್ಜನ್ಯ ಕೊನೆಯಾಗಬೇಕು. ಫೀಸ್ ಇರಲಿ, ಇಲ್ಲದಿರಲಿ. ಇಂತಹ ಕೇಸ್ ಗಳನ್ನು ಮನುಷ್ಯರಾಗಿ ನಾವು ನಡೆಸಬೇಕು. ನನ್ನಲ್ಲಿಗೆ ಕಳುಹಿಸಿ” ಎಂದಿದ್ದರು. ಶನಿವಾರ ಸಂಜೆಯ ವೇಳೆಗೆ ಸಂತ್ರಸ್ತ ಮಹಿಳೆ ನನಗೆ ಮರಳಿ ಕರೆ ಮಾಡಿ ಸುಧೀರ್ಘವಾಗಿ ಮಾತನಾಡಿದ್ದರು. “ಕೇಸ್ ಮುಚ್ಚಿ ಹಾಕಲು ಹೇಗೆಲ್ಲಾ ಪ್ರಯತ್ನ ಮಾಡಲಾಯಿತು” ಎಂದು ನನಗೆ ವಿವರಿಸಿದ್ದರು. “ನಾನು ಎಸ್ ಬಾಲನ್ ಅವರ ಜೊತೆ ಮಾತಾಡಿದ್ದೇನೆ. ಸೋಮವಾರ ಎಸ್ ಬಾಲನ್ ಅವರನ್ನು ಭೇಟಿಯಾಗಿ. ಫೀಸೂ ತಗೊಳ್ಳಲ್ಲ. ನಿಮ್ಮ ಪ್ರಕರಣದಲ್ಲಿ ನೀವು ಪ್ರಾಮಾಣಿಕರಾಗಿದ್ದರೆ ನಾವು ನಿಮ್ಮ ಜೊತೆ ಇರ್ತೀವಿ. ಜನವಾದಿ ಗೌರಮ್ಮ ಅಂತವರು ನಿಮ್ ಜೊತೆ ಇದ್ದಾರೆ ಅಂದರೆ ಯಾರೂ ನಿಮ್ಮ ವಿಷಯಕ್ಕೆ ಬರಲ್ಲ. ಹೆದರ್ಕೋಬೇಡಿ” ಎಂದಿದ್ದೆ. ಎಸ್ ಬಾಲನ್ ಅವರ ಜೊತೆ ಮಾತನಾಡುವಾಗ “ಕಾಮ್ರೇಡ್, ನೀವು ಹೇಳಿರುವ ಮಹಿಳೆಗೆ ಇಂದು ಸಂಜೆ ಆಫೀಸ್ ಬರಲು ಹೇಳಿದ್ದೇನೆ. ಕೇಸ್ ಮಹಿಳೆ ಹೇಳಿದಂತೆಯೇ ಸರಿಯಾಗಿದ್ದರೆ ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗ್ತಾರೆ” ಎಂದು ಎಸ್ ಬಾಲನ್ ನನ್ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು” ಎಂದು ನವೀನ್ ಸೂರಿಂಜೆ ಬರೆದುಕೊಂಡಿದ್ದಾರೆ.
ಇಂದು ಸಂತ್ರಸ್ತ ಮಹಿಳೆ ಹೋರಾಟಗಾರರೂ ಆಗಿರುವ ಹಿರಿಯ ವಕೀಲ ಎಸ್ ಬಾಲನ್ ಅವರನ್ನು ಭೇಟಿಯಾಗಿ, ಯಡಿಯೂರಪ್ಪ ಪೋಕ್ಸೋ ಕೇಸ್ ಬಗೆಗೆ ಚರ್ಚೆ ನಡೆಸಿ ಕಾನೂನು ಹೋರಾಟದ ಇನ್ನೊಂದು ಹೆಜ್ಜೆ ಇಡಬೇಕಿತ್ತು. ಅಷ್ಟರಲ್ಲಿ ಆ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿದೆ. ಮಾಜಿ ಮುಖ್ಯಮಂತ್ರಿ ವಿರುದ್ದ ಪೋಕ್ಸೋ ದೂರು ಕೊಟ್ಟ ಮಹಿಳೆ ದಿಡೀರ್ ಸಾವನ್ನಪ್ಪುತ್ತಾರೆ ಎಂದರೆ ಅನುಮಾನದಿಂದ ನೋಡಬೇಕಾಗುತ್ತದೆ ಮತ್ತು ತನಿಖೆಗೆ ಆಗ್ರಹಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ಆಂಬ್ಯುಲೆನ್ಸ್ನಿಂದ ಬಿದ್ದು ದಲಿತ ಯುವತಿ ಮೃತ್ಯು: ಸಾವಿನ ಸುತ್ತ ಹಲವು ಅನುಮಾನ!


