ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳ ಕುರಿತು ಲೋಕ ಸಭೆಯಲ್ಲಿ ಚರ್ಚಿಸಲು ಪ್ರತಿಪಕ್ಷಗಳು ಇಂದು (ಜೂನ್ 28) ಒತ್ತಾಯಿಸಿವೆ. ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಸರ್ಕಾರ ಪರೀಕ್ಷಾ ವಿವಾದಗಳ ಕುರಿತ ಯಾವುದೇ ಪ್ರಶ್ನೆಗೆ ಉತ್ತರಿಸಲು ಸಿದ್ಧ ಎಂದಿದೆ.
ಇಂದು ಬೆಳಿಗ್ಗೆ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಲೋಕಸಭೆಯಲ್ಲಿ ನಿರ್ಣಯ ಮಂಡಿಸಿದ ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್, ನೀಟ್-ಯುಜಿ, ಯುಜಿಸಿ-ನೆಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣಗಳ ಕುರಿತು ಚರ್ಚಿಸಿದರು. ಪ್ರತಿ ಪಕ್ಷವು ಹನ್ನೆರಡು ಸ್ಪರ್ಧಾತ್ಮಕ ರಾಷ್ಟ್ರೀಯ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯ ವೈಫಲ್ಯಗಳನ್ನು”ಎತ್ತಿ ತೋರಿಸಲಿದೆ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಓಂ ಬಿರ್ಲಾ ಅವರು, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ನನಗೆ 22 ನೋಟಿಸ್ಗಳು ಬಂದಿವೆ. ರಾಷ್ಟ್ರಪತಿ ಈಗಾಗಲೇ ತಮ್ಮ ಭಾಷಣದ ಪ್ಯಾರಾಗ್ರಾಫ್ 20ರಲ್ಲಿ ನೀಟ್ ಅಕ್ರಮಗಳ ಬಗ್ಗೆ ನ್ಯಾಯಯುತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ ಎಂದರು. ಕಲಾಪವನ್ನು 12 ಗಂಟೆಗೆ ಮುಂದೂಡಿದರು.
“ಎಲ್ಲಾ ಪಕ್ಷಗಳು ದೇಶದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತವೆ ಮತ್ತು ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಿವೆ ಎಂಬ ಸಂದೇಶವನ್ನು ನಾಯಕರು ಸಂಸತ್ತಿನಿಂದ ಕಳುಹಿಸಬೇಕು” ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
“ನಾವು ಸಮಸ್ಯೆಯನ್ನು ಶಾಂತವಾಗಿ ಚರ್ಚಿಸಬೇಕು. ವಿರೋಧ ಮತ್ತು ಆಡಳಿತ ಮೈತ್ರಿ ಎರಡೂ ಸಂಸತ್ತಿನಿಂದ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶವನ್ನು ಕಳುಹಿಸಬೇಕು” ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಕೂಡ ರಾಜ್ಯಸಭೆಯಲ್ಲಿ ನೀಟ್ ವಿಷಯವನ್ನು ಚರ್ಚಿಸುವಂತೆ ಕೇಳಿಕೊಂಡರು.
ಕಾಂಗ್ರೆಸ್ ಸಂಸದ ಸೈಯದ್ ನಸೀರ್ ಹುಸೇನ್ ಅವರು ‘ವ್ಯವಹಾರದ ಅಮಾನತು’ ಸೂಚನೆಯನ್ನು ನೀಡಿದರು. ಇದು ಸದನವು ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿ, ನೀಟ್-ಯುಜಿ ಮತ್ತು ಯುಜಿಸಿ-ನೆಟ್ ಅಕ್ರಮಗಳ ಬಗ್ಗೆ ಮಾತ್ರ ಚರ್ಚಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ಹೊಸ ಕ್ರಿಮಿನಲ್ ಕಾನೂನುಗಳಿಗೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ


