ಉದ್ಘಾಟನೆಗೊಂಡು ವರ್ಷ ತುಂಬುವುದರೊಳಗೆ ಹೊಸ ಸಂಸತ್ ಭವನ ಸೋರಲು ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ.
ಹೊಸ ಸಂಸತ್ ಭವನಕ್ಕೆ ರಾಷ್ಟ್ರಪತಿಗಳು ಪ್ರವೇಶಿಸುವ ಪಥ ಸೇರಿದಂತೆ ವಿವಿದೆಡೆ ಮಳೆ ನೀರು ಸೋರಿಕೆಯಾಗುತ್ತಿರುವುದು ಮತ್ತು ಅದಕ್ಕೆ ಬಕೆಟ್ ಇಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಮುಗಿಬಿದ್ದಿವೆ. ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಈ ವಿಷಯದ ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದರೆ, ಅಖಿಲೇಶ್ ಯಾದವ್ ಹೊಸ ಸಂಸತ್ತನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದು, ಕಲಾಪವನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಮಾಣಿಕ್ಕಂ ಟ್ಯಾಗೋರ್, “ಹೊರಗೆ ಪೇಪರ್ ಲೀಕ್, ಸಂಸತ್ನ ಒಳಗೆ ವಾಟರ್ ಲೀಕ್. ಸಂಸತ್ ಭವನದಲ್ಲಿ ಇತ್ತೀಚೆಗೆ ಆಗುತ್ತಿರವ ಸೋರಿಕೆ, ಹೊಸ ಕಟ್ಟಡ ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ. ಸಂಸತ್ ಭವನ ಪೂರ್ಣಗೊಂಡ ಒಂದೇ ವರ್ಷದಲ್ಲಿ ಈ ರೀತಿಯ ಸಮಸ್ಯೆ ಆಗಿದೆ” ಎಂದು ಬರೆದಿದುಕೊಂಡಿದ್ದಾರೆ.
Paper leakage outside,
water leakage inside. The recent water leakage in the Parliament lobby used by the President highlights urgent weather resilience issues in the new building, just a year after completion.
Moving Adjournment motion on this issue in Loksabha. #Parliament pic.twitter.com/kNFJ9Ld21d— Manickam Tagore .B🇮🇳மாணிக்கம் தாகூர்.ப (@manickamtagore) August 1, 2024
“ಈ ಸಮಸ್ಯೆಯ ಕುರಿತು ಪರಿಶೀಲಿಸಲು ಕಟ್ಟಡದ ಆಳವಾದ ಪರೀಕ್ಷೆಗಾಗಿ ಎಲ್ಲ ಪಕ್ಷಗಳ ಸಂಸದರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ನಾನು ಪ್ರಸ್ತಾಪಿಸುತ್ತಿದ್ದೇನೆ. ಈ ಸಮಿತಿಯು ಸೋರಿಕೆಯ ಕಾರಣಗಳತ್ತ ಗಮನ ಹರಿಸಿ, ವಿನ್ಯಾಸ ಮತ್ತು ಬಳಕೆಯಾಗಿರುವ ಸಾಮಗ್ರಿಗಳ ಮೌಲ್ಯಮಾಪನ ಮಾಡಲಿದೆ ಹಾಗೂ ಅಗತ್ಯ ದುರಸ್ತಿ ಕ್ರಮಗಳನ್ನು ಶಿಫಾರಸು ಮಾಡಲಿದೆ. ಇದರೊಂದಿಗೆ, ಈ ಸಮಿತಿಯು ತಾನು ಪತ್ತೆ ಹಚ್ಚಿದ ಸಂಗತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ನಿರ್ವಹಣಾ ಶಿಷ್ಟಾಚಾರವನ್ನು ಸ್ಥಾಪಿಸಿ, ಪಾರದರ್ಶಕತೆಯನ್ನು ಖಾತರಿ ಪಡಿಸಲಿದೆ” ಎಂದು ತಮಿಳುನಾಡಿನ ವಿರುಧನಗರ್ ಸಂಸದ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಮಾಣಿಕ್ಕಂ ಟ್ಯಾಗೋರ್ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮೇ 28, 2023 ರಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಿದರು. ಅಂದಾಜು 970 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸೆಪ್ಟೆಂಬರ್ 19, 2023 ರಂದು ಮೊದಲ ವಿಶೇಷ ಅಧಿವೇಶನ ಕರೆಯಲಾಗಿತ್ತು. ಬ್ರಿಟಿಷರ ಕಾಲದ ಹಳೆಯ ಸಂಸತ್ ಕಟ್ಟಡವನ್ನು ಪಾರಂಪರಿಕ ಆಸ್ತಿಯಾಗಿ ಸಂರಕ್ಷಿಸಲಾಗುತ್ತಿದೆ.
ಇದನ್ನೂ ಓದಿ : ಪರಿಶಿಷ್ಟ ಜಾತಿ, ಪಂಗಡಗಳಲ್ಲೇ ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ: ಸುಪ್ರೀಂ ಕೋರ್ಟ್ ಸಮ್ಮತಿ


