ಮಣಿಪುರದ ಜಿರಿಬಾಮ್ನಲ್ಲಿ ಶಾಂತಿ ಮರುಸ್ಥಾಪನೆಗೆ ಮೈತೆಯಿ-ಹ್ಮಾರ್ ಸಮುದಾಯಗಳು ಒಪ್ಪಿಗೆ ಸೂಚಿಸಿ 24 ಗಂಟೆ ಕಳೆಯುವುದೊರೊಳಗೆ ಮತ್ತೆಯ ಹಿಂಸಾಚಾರ ಭುಗಿಲೆದ್ದಿದೆ.
ಸೆಜಾಂಗ್ ಎಂಬ ಕುಕಿ ಹಳ್ಳಿಯ ಸಮೀಪವಿರುವ ಬೆಂಗಾಲಿ ಬಹುಸಂಖ್ಯಾತ ಪ್ರದೇಶವಾದ ಜಿರಿಬಾಮ್ನ ಲಾಲ್ಪಾನಿಯಲ್ಲಿ ಮೈತೆಯಿ ಕುಟುಂಬದ ಮನೆಗೆ ಬೆಂಕಿ ಹಚ್ಚಲಾಗಿದೆ.
“ಲಾಲ್ಪಾನಿ ಮೈತೆಯಿ ಸಮುದಾಯದ ನಿವಾಸಿಗಳು ವಾಸಿಸುತ್ತಿದ್ದ ಮನೆಗಳಿದ್ದ ಕಾಲನಿಯಾಗಿದ್ದು, ಜಿಲ್ಲೆಯಲ್ಲಿ ಹಿಂಸಾಚಾರ ಸ್ಫೋಟಗೊಂಡ ನಂತರ, ಬಹುತೇಕ ಮಂದಿ ತಮ್ಮ ಮನೆಗಳನ್ನು ತೊರೆದು ಹೋಗಿದ್ದರು. ಈ ಪ್ರದೇಶದಲ್ಲಿನ ಭದ್ರತಾ ವೈಫಲ್ಯದ ಲಾಭವನ್ನು ಪಡೆದು, ಅಪರಾಧ ಕೃತ್ಯ ಎಸಗಲು ದುಷ್ಕರ್ಮಿಗಳು ಬಳಸಿಕೊಂಡಿದ್ದು, ಅವರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
“ಘಟನಾ ಸ್ಥಳಕ್ಕೆ ನಾವು ಸಿಆರ್ಪಿಎಫ್ನೊಂದಿಗೆ ಸಂಯೋಜಿತ ತಂಡವನ್ನು ಕಳುಹಿಸಿದ್ದೇವೆ” ಎಂದು ಜಿರಿಬಾಮ್ ಪೊಲೀಸ್ ವರಿಷ್ಠಾಧಿಕಾರಿ ಎಂ ಪ್ರದೀಪ್ ಸಿಂಗ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. “ಕೊಂಚ ಉದ್ವಿಗ್ನತೆ ಇತ್ತು. ಆದರೆ, ಅದು ಮತ್ತಷ್ಟು ಉಲ್ಬಣಗೊಳ್ಳದಂತೆ ನಾವು ಪರಿಸ್ಥಿತಿ ನಿಯಂತ್ರಿಸಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚಿಸಲು ಸಭೆ ನಡೆಸುತ್ತಿದ್ದೇವೆ” ಎಂದು ಪ್ರದೀಪ್ ಸಿಂಗ್ ಹೇಳಿದ್ದಾರೆ.
ಗುರುವಾರ ಅಸ್ಸಾಂನ ಕ್ಯಾಚಾರ್ನಲ್ಲಿರುವ ಸಿಆರ್ಪಿಎಫ್ ಸೌಲಭ್ಯದಲ್ಲಿ ನಡೆದ ಮೈತೆಯಿ ಮತ್ತು ಹ್ಮಾರ್ ಸಮುದಾಯಗಳ ಪ್ರತಿನಿಧಿಗಳ ಸಭೆಯಲ್ಲಿ ಶಾಂತಿ ಒಪ್ಪಂದಕ್ಕೆ ಮಾಡಿಕೊಳ್ಳಲಾಗಿತ್ತು. ಜಿರಿಬಾಮ್ ಜಿಲ್ಲಾಡಳಿತ, ಅಸ್ಸಾಂ ರೈಫಲ್ಸ್ ಮತ್ತು ಸಿಆರ್ಪಿಎಫ್ ಸಿಬ್ಬಂದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿರಿಬಾಮ್ ಜಿಲ್ಲೆಯ ಥಾಡೌ, ಪೈಟೆ ಮತ್ತು ಮಿಜೋ ಸಮುದಾಯಗಳ ಪ್ರತಿನಿಧಿಗಳೂ ಇದ್ದರು.
ಫೋಟೋ ಸಾಂದರ್ಭಿಕ
ಇದನ್ನೂ ಓದಿ : ವಯನಾಡ್ ಭೂಕುಸಿತ | ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಕೇಂದ್ರ ನಕಾರ : ವರದಿ


