ರಾಜ್ಯದಲ್ಲಿ ಮಹಾ ಮಳೆ ಮತ್ತೆ ರೌದ್ರಾವತಾರ ತೋರಿದೆ. ಬೆಳಗಾವಿ, ಧಾರವಾಡ, ದಾವಣಗೆರೆ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ರಾಯಭಾಗ, ಚಿಕ್ಕೋಡಿ, ಅಥಣಿ, ಗೋಗಾಕ್ ಸೇರಿದಂತೆ ಬೆಳಗಾವಿಯ ಹಲವು ಪ್ರದೇಶದಲ್ಲಿ ನೆರೆ ಬಂದಿದೆ. ಮನೆಗಳಲ್ಲಿ ನೀರು ಹೊಕ್ಕಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಮದುರ್ಗದಲ್ಲಿ ಉಂಟಾದ ಪ್ರವಾಹ ಭೀತಿಯಿಂದ ಜನ ಊರು ತೊರೆಯುತ್ತಿದ್ದಾರೆ.
ಆಗಸ್ಟ್ ನಲ್ಲಿ ನೆರೆಗೆ ತತ್ತರಿಸಿದ್ದ ಉತ್ತರ ಕರ್ನಾಟಕದ ಅನೇಕ ಭಾಗಗಳು ಈಗ ಮತ್ತೆ ಜಲಾವೃತಗೊಂಡಿವೆ. ಕೃಷ್ಣಾ, ಮಲಪ್ರಭಾ, ಘಟಫ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಹುಕ್ಕೇರಿಯ ಹಿಡ್ಕಲ್ ಡ್ಯಾಂನಲ್ಲಿ ಒಳಹರಿವು ಹೆಚ್ಚಿದೆ. ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯ ತುಂಬಿದ್ದು, ಮತ್ತೆ ನೆರೆಯ ಭೀತಿ ಆವರಿಸಿದೆ. ಬೆಳಗಾವಿಯ ವಿವಿಧ ಪ್ರದೇಶಗಳಲ್ಲಿ ರಸ್ತೆ ಸಂಚಾರ ಬಂದ್ ಆಗಿ, ಜನ ಪರದಾಡುತ್ತಿದ್ದಾರೆ.
ಮಳೆಯ ಹೊಡೆತಕ್ಕೆ ಹಳ್ಳ, ಕೊಳ್ಳಗಳು ಭೋರ್ಗರೆಯುತ್ತಿವೆ. ಅನೇಕ ಗ್ರಾಮಗಳು ಮತ್ತು ನಗರಗಳ ಸಂಪರ್ಕ ಸೇತುವೆ ಬಂದ್ ಆಗಿದೆ. ಸುರಕ್ಷಿತ ಸ್ಥಳಗಳತ್ತ ಹೋಗುವಂತೆ ನೆರೆಪೀಡಿತ ಭಾಗಗಳ ಜನತೆಗೆ ಸೂಚಿಸಲಾಗಿದೆ. ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಧಾರಾಕಾರ ಮಳೆಯಿಂದ ಬೆಳಗಾವಿಯ ಹೊಸವಂಟಮೂರಿ ರಸ್ತೆ ಕುಸಿದಿದೆ. ಪರಿಣಾಮ ಪನಗುತ್ತಿ ಗ್ರಾಮಕ್ಕೆ ಬಸ್ನಲ್ಲಿ ತೆರಳುತ್ತಿದ್ದ ಜನ ಆತಂಕಕ್ಕೀಡಾಗಿದ್ದರು. ಭೂಕುಸಿತ ಹಿನ್ನೆಲೆ ಬಸ್, ರಸ್ತೆಯಲ್ಲೇ ಸಿಕ್ಕಿ ಹಾಕಿಕೊಂಡಿತ್ತು. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಕೆಲವು ದಿನಗಳವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯಬ್ಬರಕ್ಕೆ ಚರಂಡಿ ನೀರು, ಮಳೆ ನೀರಿನೊಂದಿಗೆ ಮಿಶ್ರಿತಗೊಂಡು, ಗಲೀಜು ನೀರು ಮನೆ, ಅಂಗಡಿಗಳಿಗೆ ನುಗ್ಗಿದೆ. ಮಕ್ಕಳು, ವೃದ್ಧರು ಮನೆಯಿಂದ ಹೊರಬರಲಾರದ ಸ್ಥಿತಿ ಉಂಟಾಗಿದೆ. ಶಿವಮೊಗ್ಗದಲ್ಲೂ ಮಳೆ ಸಾಕಷ್ಟು ಹಾನಿಯುಂಟು ಮಾಡಿದೆ.