ದಲಿತ ಯುವಕನೊಬ್ಬ ತನಗೆ ಕ್ಷೌರ ಮಾಡಲು ಒತ್ತಾಯಿಸಿದ ನಂತರ, ಮಾತಿಗೆ ಮಾತು ಬೆಳೆದು ಕ್ಷೌರಿಕ ಕೊಲೆ ಮಾಡಿರುವ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ. ಯಮನೂರಪ್ಪ ಬಂಡಿಹಾಳ (23) ಕೊಲೆಯಾದ ಮೃತ ದಲಿತ ಯುವಕನಾಗಿದ್ದಾನೆ.
ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಸೆಲೂನ್ಗೆ ಹೋಗಿದ್ದ ಈ ವೇಳೆ ಸೆಲೂನ್ ಮಾಲೀಕ ಮುದುಕಪ್ಪ ಅಂದಪ್ಪ ಹಡಪದ ಅವರು, ‘ನೀನು ದಲಿತ. ಹಾಗಾಗಿ, ನಾವು ಕ್ಷೌರ ಮಾಡುವುದಿಲ್ಲ’ ಎಂದು ಹೇಳಿದ್ದಾನೆ. ಇದನ್ನ ಯುವಕ ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಮುದುಕಪ್ಪ ಹಡಪದ ಕೈಯ್ಯಲ್ಲಿದ್ದ ಕತ್ತರಿಯಿಂದ ಯಮನೂರಪ್ಪ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಯುವಕ ಧರ್ಮರಾಜ್ ಮಾಹಿತಿ ನೀಡಿದ್ದಾನೆ.
ಸಂಗನಾಳ ಗ್ರಾಮದ ಇಡೀ ದಲಿತ ಸಮುದಾಯದವರನ್ನು ಹೇರ್ ಕಟ್ಟಿಂಗ್ ಮಾಡಿಸಲು ಅವಕಾಶ ನೀಡುತ್ತಿಲ್ಲ. ಯಲಬುರ್ಗಾ ತಾಲೂಕಿಗೆ ಹೋಗಿ ಹೇರ್ ಕಟ್ ಮಾಡಿಸುತ್ತಾ ಬಂದಿದ್ದೇವೆ. ದಲಿತರೆಂಬ ಕಾರಣಕ್ಕೆ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂದು ಗ್ರಾಮದ ದಲಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ಸಮುದಾಯಗಳ ಜನರ ಕ್ಷೌರ ಮಾಡಲಾಗುತ್ತದೆ. ಆದರೆ, ದಲಿತ ಸಮುದಾಯದವರಿಗೆ ಮಾತ್ರ ಮಾಡಲ್ಲ. ಯಾವ ಕಾರಣಕ್ಕೆ ಅಂತ ಪ್ರಶ್ನಿಸಿದರೆ, ಕೊಲೆ ಮಾಡುವ ಹಂತಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗನಾಳ ಗ್ರಾಮಕ್ಕೆ ಕೊಪ್ಪಳ ಎಸ್ಪಿ ರಾಮ ಎಲ್ ಅರಸಿದ್ದಿ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಪ್ರಗತಿಪರ ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ ಮಹೇಶ್ ಚಂದ್ರಗುರು ನಿಧನ; ಸಿಎಂ ಸೇರಿದಂತೆ ಹಲವರಿಂದ ಸಂತಾಪ


