ಕೋಲ್ಕತ್ತಾದಲ್ಲಿ ಪ್ರತಿಭಟನಾ ನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಟಿಎಂಸಿ ನಾಯಕ ಆರೋಪಿಸಿದ ನಂತರ ಪೊಲೀಸರು ಸಿಪಿಐ(ಎಂ) ನಾಯಕ ಕಲಾತನ್ ದಾಸ್ಗುಪ್ತ ಸೇರಿ ಇಬ್ಬರನ್ನು ಶನಿವಾರ ಬಂಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ನಾಯಕರು “ಪೊಲೀಸರು ಪ್ರತಿಭಟನೆ ನಡೆಸುವವರ ಬೇಡಿಕೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಪಿತೂರಿಯಾಗಿದ್ದು, ಆರ್ ಜಿ ಕರ್ ಪ್ರಕರಣದಲ್ಲಿ ನ್ಯಾಯ ಕೇಳುವವರಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯದ ಮಮತಾ ಬ್ಯಾನರ್ಜಿ ಸರ್ಕಾರದ ಮಾನಹಾನಿ ಮಾಡುವ ಉದ್ದೇಶದಿಂದ ಸಾಲ್ಟ್ ಲೇಕ್ನಲ್ಲಿರುವ ಸ್ವಾಸ್ಥ್ಯ ಭವನದ ಹೊರಗೆ ಪ್ರತಿಭಟನಾ ನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿ ಟಿಎಂಸಿ ನಾಯಕ ಕುನಾಲ್ ಘೋಷ್ ಅವರು ದೂರವಾಣಿ ಕರೆಯ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದರು. ಈ ಘಟನೆ ನಂತರ ಸಿಪಿಐಎಂ ನಾಯಕರನ್ನು ಬಂಧಿಸಲಾಗಿದೆ. ಆಡಿಯೋ ಕ್ಲಿಪ್ಗೆ ಸಂಬಂಧಿಸಿದಂತೆ ಬಿಧಾನನಗರ ಪೊಲೀಸ್ ಕಮಿಷನರೇಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ತನಿಖೆಯ ಸಮಯದಲ್ಲಿ, ಸಂಜಿಬ್ ದಾಸ್ ಎಂದು ಗುರುತಿಸಲಾದ ವ್ಯಕ್ತಿಯನ್ನು ನಿನ್ನೆ ರಾತ್ರಿ ದಕ್ಷಿಣ ಕೋಲ್ಕತ್ತಾದ ಕಸ್ಬಾದ ಹಲ್ತು ಪ್ರದೇಶದಿಂದ ಈ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾಯಿತು ಎಂದು ವರದಿಯಾಗಿದೆ. ಆಡಿಯೋ ಕ್ಲಿಪ್ನಲ್ಲಿ ಧ್ವನಿ ಕೇಳಿದ ಇಬ್ಬರಲ್ಲಿ ಸಂಜೀಬ್ ದಾಸ್ ಒಬ್ಬರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂಓದಿ:ಲಂಚ ಮತ್ತು ಜಾತಿ ನಿಂದನೆ | ಹಿರಿಯ ಬಿಜೆಪಿ ಶಾಸಕ ಮುನಿರತ್ನ ಬಂಧನ
ಕಲಾತನ್ ಮತ್ತು ಪಕ್ಷದ ಇನ್ನೊಬ್ಬ ಸಹೋದ್ಯೋಗಿ ಲಾಲ್ಬಜಾರ್ನಲ್ಲಿರುವ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಛೇರಿಯ ಪಕ್ಕದಲ್ಲಿರುವ ಮಧ್ಯ ಕೋಲ್ಕತ್ತಾದ ಫಿಯರ್ಸ್ ಲೇನ್ನಲ್ಲಿ ಎಡರಂಗದ ರಾತ್ರಿಯ ಧರಣಿ ಪ್ರತಿಭಟನೆಯಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಅವರನ್ನು ಮಧ್ಯದಲ್ಲಿ ತೆಡೆದು ವಶಕ್ಕೆ ಪಡೆಯಲಾಗಿತ್ತು. ಅವರನ್ನು ಆರಂಭದಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆದು, ನಂತರ ಬಂಧಿಸಲಾಯಿತು.
ಕಲಾತನ್ ಅವರನ್ನು ಬಂಧಿಸಿದ ಕೂಡಲೇ ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಸಂಜೀಬ್ ದಾಸ್ ಜೊತೆಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಆಡಿಯೊ ಕ್ಲಿಪ್ನ ತಾಂತ್ರಿಕ ಮೌಲ್ಯಮಾಪನವನ್ನು ಮಾಡಿದ್ದೇವೆ ಮತ್ತು ತಜ್ಞರಿಂದ ಅಭಿಪ್ರಾಯವನ್ನು ತೆಗೆದುಕೊಂಡಿದ್ದೇವೆ. ಆಡಿಯೋ ಕ್ಲಿಪ್ನಲ್ಲಿರುವ ಒಂದು ಧ್ವನಿ ತನಗೆ ಸೇರಿದ್ದು ಎಂದು ಸಂಜಿಬ್ ದಾಸ್ ಈಗಾಗಲೇ ಒಪ್ಪಿಕೊಂಡಿದ್ದಾರೆ. ನಾವು ಇಬ್ಬರನ್ನೂ ಕಸ್ಟಡಿಗೆ ಕೋರುತ್ತೇವೆ” ಎಂದು ಬಿಧಾನನಗರದ ಉಪ ಪೊಲೀಸ್ ಆಯುಕ್ತ ಅನೀಶ್ ಸರ್ಕಾರ್ ಹೇಳಿದ್ದಾರೆ. ಕ್ಲಿಪ್ನಲ್ಲಿ ಹೆಸರಿಸಲಾದ ‘ಬಪ್ಪಾ’, ‘ಸಾಹೇಬ್’ ಮತ್ತು ‘ದಾದು’ ಅವರನ್ನು ಗುರುತಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತ ಇಬ್ಬರನ್ನೂ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಮತ್ತು ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ಕೋರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸ್ ಠಾಣೆಯೊಳಗೆ ಕರೆದೊಯ್ಯುವಾಗ ಮಾತನಾಡಿದ ಬಂಧಿತ ಸಿಪಿಐ(ಎಂ) ಮುಖಂಡ ಕಲಾತಾನ್ ಅವರು, “ಆರ್ಜಿ ಕರ್ ಮೆಡಿಕ್ ಅತ್ಯಾಚಾರ ಮತ್ತು ಕೊಲೆಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಪೊಲೀಸರು ಬೇಡಿಕೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸತ್ತಿದ್ದಾರೆ. ಇದು ನನ್ನ ವಿರುದ್ಧದ ಪಿತೂರಿ” ಎಂದು ಆರೋಪಿಸಿದ್ದಾರೆ.
ಇದನ್ನೂಓದಿ:ಪಾವಗಡದಲ್ಲಿ ಸಿಂಹ ಎಂದು ಸುಳ್ಳು ವಿಡಿಯೊ ಪ್ರಸಾರ ಮಾಡಿದ ‘ಝೀ ಕನ್ನಡ ನ್ಯೂಸ್’
“ಇದು ಪೊಲೀಸರ ಅಪಕ್ವ ನಡೆ. ರಾಜ್ಯ ಪೊಲೀಸರು ಮೊದಲು ಟಿಎಂಸಿ ನಾಯಕ ಕುನಾಲ್ ಘೋಷ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕು. ಅವರು ಈ ಕ್ಲಿಪ್ ಹೇಗೆ ಪಡೆದರು ಎಂಬುದನ್ನು ಕಂಡುಹಿಡಿಯಬೇಕು. ಅದರ ಬದಲು ಆರ್ ಜಿ ಕರ್ ಪ್ರಕರಣದಲ್ಲಿ ನ್ಯಾಯ ಕೇಳುವವರಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದರ ಅಂತ್ಯವನ್ನು ನಾವು ನೋಡಲಿದ್ದೇವೆ” ಎಂದು ಕೋಲ್ಕತ್ತಾದ ಮಾಜಿ ಮೇಯರ್ ಮತ್ತು ಸಿಪಿಐ(ಎಂ) ರಾಜ್ಯಸಭಾ ಸಂಸದ ಬಿಕಾಶ್ ಭಟ್ಟಾಚಾರ್ಯ ಹೇಳಿದ್ದಾರೆ.
ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿದ ಅವರು, ಪಿತೂರಿ ಎಷ್ಟು ಆಳವಾಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಸಿಪಿಐ(ಎಂ) ನಾಯಕರಾದ ಸುಜನ್ ಚಕ್ರವರ್ತಿ ಮತ್ತು ಸತರುಪ್ ಘೋಷ್ ಅವರು ಕಲಾತನ್ ದಾಸ್ಗುಪ್ತಾ ಬಂಧನವನ್ನು ಟೀಕಿಸಿದ್ದು, ಆಡಿಯೊ ಕ್ಲಿಪ್ ಅನ್ನು ಎಐ ತಂತ್ರಜ್ಞಾನವನ್ನು ಬಳಸಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಭದ್ರತೆ ಮತ್ತು ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳನ್ನು ವಜಾಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ವೈದ್ಯಾಧಿಕಾರಿಗಳು ಮಂಗಳವಾರದಿಂದ ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಛೇರಿಯಾದ ಸ್ವಾಸ್ಥ್ಯ ಭವನದ ಹೊರಗೆ ಮೊಕ್ಕಾಂ ಹೂಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


